ಭೀಮೇಶ್ವರ ಜಲಧಾರೆಯ ಸೊಗಸು
Team Udayavani, Mar 12, 2021, 3:24 PM IST
ಸುತ್ತಲೂ ಹಸುರು ಹೊದಿಕೆಯನ್ನೇ ಚಾಚಿ ಮಲಗಿರುವ ಪಶ್ಚಿಮ ಘಟ್ಟ.
ಬಂಡೆಗಳ ಮಧ್ಯೆ ಬಳ್ಳಿಯಂತೆ ಬಳುಕಿ ಬಂದು 50 ಅಡಿ ಎತ್ತರದಿಂದ ಧುಮ್ಮಿಕ್ಕಿ ಹಾಲ್ನೊರೆಯಂತೆ ಮನಮೋಹಕವಾಗಿ ಹರಿಯುತ್ತಿರುವ ಜಲಧಾರೆಯ ಸೊಗಸು. ಪಕ್ಕದಲ್ಲೇ ಇರುವ ಪುರಾಣ ಪ್ರಸಿದ್ಧ ಭೀಮೇಶ್ವರ ದೇವಾಲಯ.
ಇಂತಹ ಸಹಜ ಸುಂದರ ಪ್ರಕೃತಿ ಸೌಂದರ್ಯದ ಆಸ್ವಾದನೆಯೊಂದಿಗೆ ದೈವಿಕ ಅನುಭೂತಿ ನಿಮಗೂ ಸಿಗಬೇಕೇ ? ಹಾಗಾದರೆ ನೀವು ಒಮ್ಮೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮೇಶ್ವರಕ್ಕೆ ಭೇಟಿ ನೀಡಲೇಬೇಕು.
ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೋರ್ವರಿಗೂ ಭೀಮೇಶ್ವರ ದೇವಸ್ಥಾನ, ತಪ್ಪಲಿನಲ್ಲೇ ಹರಿಯುತ್ತಿರುವ ಭೀಮೇಶ್ವರ ಜಲಪಾತ, ಸುತ್ತಲಿರುವ ಬೆಟ್ಟ, ಗುಡ್ಡಗಳ ಹಸುರಿನ ಪರಿಸರವು ಸ್ವರ್ಗ ಲೋಕದಂತೆ ಭಾಸವಾಗುವುದರಲ್ಲಿ ಅತಿಶಯೋಕ್ತಿಯೇ ಇಲ್ಲ.
ಪುರಾಣ ಹಿನ್ನೆಲೆಯೇನು?
ಪುರಾಣ ಕಥೆಗಳ ಪ್ರಕಾರ, ಮಹಾಭಾರತ ಕಾಲದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಭೀಮೇಶ್ವರ ದೇವಸ್ಥಾನ ನಿರ್ಮಾಣವಾಯಿತೆಂದು ಹೇಳಲಾಗುತ್ತಿದೆ. ಭೀಮನು ಶಿವಲಿಂಗ ಮತ್ತು ದೇವಸ್ಥಾನವನ್ನು ನಿರ್ಮಿಸಿದ್ದರಿಂದ ಭೀಮೇಶ್ವರ ದೇವಸ್ಥಾನ ಎಂದು ಹೆಸರಾಯಿತು. ಲಿಂಗದ ಅಭಿಷೇಕಕ್ಕೆ ಬೇಕಾದ ನೀರಿಗಾಗಿ ಅರ್ಜುನ ತನ್ನ ಬಾಣವನ್ನು ಹೂಡಿ ಸರಳ ಹೊಳೆಯಿಂದ ಈ ಭೀಮೇಶ್ವರ ಜಲಪಾತ ಹುಟ್ಟಿಕೊಂಡಿತು ಎನ್ನುವ ಕಥೆಯೂ ಇದೆ. ದೇವಸ್ಥಾನದ ಪಕ್ಕದಲ್ಲೇ ಈ ಸುಂದರ ಜಲಪಾತ ಹರಿಯುವುದರಿಂದಲೇ ಇದು ಅತ್ಯಾಕರ್ಷವಾಗಿ ಸಹಸ್ರಾರು ಪ್ರವಾಸಿಗರನ್ನು ಸೆಳೆಯುತ್ತಿದೆ.
ನಿಸರ್ಗ – ಸ್ವರ್ಗ
ಹಚ್ಚಹಸುರಿನ ಕಾಡುಗಳು, ನೀಲಿ ಆಕಾಶಗಳು, ನಿಮ್ಮ ಉಸುರಿನ ಸದ್ದನ್ನು ನೀವೇ ಕೇಳುವಷ್ಟು ಮೌನ. ಸ್ವರ್ಗ ಧರೆಗಿಳಿದಂತೆ, ನಿಸರ್ಗವೇ ಸ್ವರ್ಗದಂತೆ ಭಾಸವಾದರೂ ಅಚ್ಚರಿಯಿಲ್ಲ. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಯಸುವ ಯಾರಿಗಾದರೂ ಖುಷಿಯನ್ನು ಇಮ್ಮಡಿಗೊಳಿಸುವುದು ಮಾತ್ರವಲ್ಲದೆ ಮನಸ್ಸು ಆಹ್ಲಾದದೊಂದಿಗೆ ಪ್ರಶಾಂತ ಭಾವ ಮೂಡಿಸುತ್ತದೆ.
ಬತ್ತದ ಜಲಧಾರೆ
ಭೀಮೇಶ್ವರ ಜಲಪಾತದ ವಿಶೇಷವೆಂದರೆ ಇಲ್ಲಿನ ನೀರು ವರ್ಷವಿಡೀ ಎಂದಿಗೂ ಬತ್ತುವುದಿಲ್ಲ. ಮಹಾಶಿವರಾತ್ರಿಯಂದು, ಸ್ಥಳೀಯ ಜನರು ಪ್ರತಿವರ್ಷ ಭಗವಂತನಿಗೆ ಪೂಜೆಯನ್ನು ಮಾಡುತ್ತಾರೆ. ಭೀಮೇಶ್ವರ ಜಲಪಾತವು ಕಾಲ್ಪನಿಕ ಕಥೆಗಳಲ್ಲಿರುವಂತೆ ಕಾಣುತ್ತದೆ.
ಭೀಮೇಶ್ವರ ದೇವಸ್ಥಾನ ಹಾಗೂ ಜಲಪಾತಕ್ಕೆ ಹೋಗಲು ನೇರವಾದ ಮಾರ್ಗಗಳಿಲ್ಲ. ಇದು ಇಲ್ಲಿಗೆ ಬರುವ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ತುಸು ಕಷ್ಟವಾಗಬಹುದು. ಆದರೆ ಸಾಗರದಿಂದ ಹೊನ್ನಾವರ ರಸ್ತೆಯ ಕಡೆಗೆ ಸಂಚರಿಸಿ, 29 ಕಿ.ಮೀ. ದೂರದಲ್ಲಿರುವ ಜೋಗ್ ವೃತ್ತವನ್ನು ತಲುಪಿ ಕಾರ್ಗಲ್ – ಭಟ್ಕಳ ರಸ್ತೆಯ ಕಡೆಗೆ ಎಡಕ್ಕೆ ತಿರುಗಿ ಕಾರ್ಗಲ್, ಮುಪ್ಪಾನೆ ದಾಟಿ, ಕೊರ್ಗ ಘಾಟ್ನಿಂದ 3 ಕಿ.ಮೀ. ವರೆಗೆ ವಾಹನದಲ್ಲಿ ತೆರಳಿ, ಅಲ್ಲಿಂದ ಚಾರಣ ಮಾಡಬಹುದು. ವೈಶಾಖದಲ್ಲಿ ವಾಹನಗಳು ಅಲ್ಲಿಯವರೆಗೂ ತೆರಳಬಹುದು. ಆದರೆ ಮಳೆಗಾಲದಲ್ಲಿ ವಾಹನಗಳು ದೇವಸ್ಥಾನದವರೆಗೂ ತಲುಪಲು ಸಾಧ್ಯವಿಲ್ಲ.
ಸಂಚಾರ ಹೇಗೆ?
ಭೀಮೇಶ್ವರ ಜಲಪಾತಕ್ಕೆ ರಸ್ತೆಯ ಮೂಲಕ ಪ್ರಯಾಣಿಸಲು ಬಯಸಿದರೆ, ಜಲಪಾತಕ್ಕೆ ನೇರ ಮಾರ್ಗಗಳಿಲ್ಲ. ಹತ್ತಿರದ ಪಟ್ಟಣವೆಂದರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು. ಇದು ಜಲಪಾತದಿಂದ 65 ಕಿ.ಮೀ. ದೂರದಲ್ಲಿದೆ. ಪ್ರವಾಸಿಗರು ಟ್ಯಾಕ್ಸಿ ತೆಗೆದುಕೊಳ್ಳಬೇಕು ಅಥವಾ ಸಾಗರದಿಂದ ಭಟ್ಕಳಕ್ಕೆ ಹೋಗುವ ಬಸ್ ಹತ್ತಬೇಕು. ಸಾಗರದಿಂದ ಭಟ್ಕಳಕ್ಕೆ ಹೋಗುವ ಬಸ್ಗಳು ಕೋರ್ಗ ಘಾಟ್ನಲ್ಲಿ ಕೋರಿಕೆಯ ಮೇರೆಗೆ ನಿಲ್ಲುತ್ತವೆ ಮತ್ತು ಅಲ್ಲಿಂದ ಭೀಮೇಶ್ವರ ದೇವಸ್ಥಾನದವರೆಗೆ ನಡೆಯಬೇಕು. ಕೊನೆಯ 8 ಕಿ.ಮೀ. ಚಾರಣವು ಕಾಡಿನಲ್ಲಿ ಮಾಡಿದ ಹಾದಿಗಳನ್ನು ಹೊಂದಿದೆ, ಇದು ಮಳೆಗಾಲದಲ್ಲಿ ಲೀಚ್ಗಳಿಂದಾಗಿ ಕಷ್ಟಕರವಾಗಬಹುದು.
ಎಲ್ಲಿಂದ ಎಷ್ಟು ಅಂತರ?
ಉಡುಪಿಯಿಂದ ಭೀಮೇಶ್ವರಕ್ಕೆ
ಭಟ್ಕಳ- ಸಿದ್ಧಾಪುರ – ಸೊರಬ ಮಾರ್ಗವಾಗಿ -122 ಕಿ.ಮೀ.
ಮಂಗಳೂರಿನಿಂದ ಭೀಮೇಶ್ವರಕ್ಕೆ -176 ಕಿ.ಮೀ.
ಭೀಮೇಶ್ವರದಿಂದ ಜೋಗಕ್ಕೆ -44 ಕಿ.ಮೀ.
-ಸಿಂಚನಾ ಎಂ.ಆರ್., ಆಗುಂಬೆ