ಕನಸಿನಲ್ಲಿ ಕತ್ತಿ ಝಳಪಿಸಿದಾಗ ಏನಾಯಿತು?
Team Udayavani, Jul 27, 2020, 11:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ರಾತ್ರಿಯ ನಿದ್ದೆ ನನ್ನನ್ನು ವಿಪರೀತವಾಗಿ ಆವರಿಸಿತ್ತು. ಬೆಳಗ್ಗೆ 6.30 ಕಳೆದಿರಬಹುದೆನೋ. ನಾನು ಲೋಕವೇ ಮರೆತಂತೆ ನಿದ್ರೆಯಲ್ಲಿ ಫುಲ್ ಬ್ಯುಸಿ.
ಬಾಗಿಲ ಬಳಿ ಅದೇನೋ ಸದ್ದು ಕೇಳಿಸಿತ್ತು. ಕೈಯ್ಯಲ್ಲಿ ಮೂರಡಿ ಉದ್ದದ ಕತ್ತಿ ಹಿಡಿದು ಬಾಗಿಲು ತೆರೆದೆ. ಕತ್ತಿ ಬೀಸಿ ಎದುರಿನಲ್ಲಿ ನಿಂತಿರೋ ವ್ಯಕ್ತಿಯನ್ನು ಸಾಯಿಸಿ ಬಿಡೋಣ ಎಂಬ ನಿರ್ಧಾರ ನನ್ನಲಿತ್ತು.
ಆದರೆ ಆ ಸಮಯದಲ್ಲಿ ನನ್ನೆದುರು ನಿಂತಿರೋ ವ್ಯಕ್ತಿಯೇ ಬೇರೆ. ಆತ ನನ್ನ ಸ್ನೇಹಿತ ಪ್ರಶಾಂತ. ಏನೆಂದು ಕೇಳಿದರೆ ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಒಳಗೆ ಕರೆದರೂ ಬರದೇ ಕೈ ಸನ್ನೆಯಲ್ಲಿ ಅದೇನೋ ಹೇಳಿ, ನನ್ನ ಕೈ ಹಿಡಿದು ಆತನ ಮನೆಗೆ ಕರೆದುಕೊಂಡು ಹೋದ.
ದಾರಿಯುದ್ದಕ್ಕೂ ಯೋಚಿ ಸುತ್ತಾ ಹೋದರೂ ಸ್ಪಷ್ಟ ಉತ್ತರಗಳು ಸಿಗಲಿಲ್ಲ. ಆತನ ಮನೆ ತಲುಪಿ ಕೊಂಡಾಗ ಬೆಳಕು ಹರಿದು ಎಲ್ಲವೂ ನನ್ನ ಕಣ್ಣಿಗೆ ಸರಿಯಾಗಿ ಕಾಣುತಿತ್ತು. ಬಾಗಿಲು ಸರಿಸಿ ಒಳನಡೆದೆ. ಅಲ್ಲಿ ನೋಡಿದ ದೃಶ್ಯವೇ ಆತನ ಮೌನಕ್ಕೆ ಉತ್ತರವಾಗಿತ್ತು. ಪ್ರಶಾಂತನ ತಾಯಿ ಜಗದ ಗೊಂದಲಗಳಿಗೆ ತೆರೆ ಎಳೆದು ನೇಣಿಗೆ ಶರಣಾಗಿದ್ದಳು.
ನಾನು ಪ್ರಶಾಂತನಿಗೆ ಸಮಾ ಧಾನ ಹೇಳತೊಡಗಿದೆ. ಆತನ ತಾಯಿಯ ಸಾವಿಗೆ ಕಾರಣ ತಿಳಿಯಲು ಪ್ರಯತ್ನಿಸಿದೆ. ಆದರೆ ಪ್ರಶಾಂತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಪಕ್ಕದ ಮನೆ ಚಿಕ್ಕಮ್ಮ ನಿಧಾನವಾಗಿ ಇಳಿದು ಬಂದು ನನ್ನ ಬಳಿ ಆ ತಾಯಿಯ ಸಾವಿಗೆ ಕಾರಣ ಹೇಳಿಕೊಂಡರು.
ಪ್ರಶಾಂತನಿಗೆ ಪಕ್ಕದ ಕೇರಿಯಲ್ಲಿರೋ ಸ್ಮಿತಾ ಎಂಬ ಹುಡುಗಿಯ ಜತೆ ಅದ್ಯಾವುದೋ ಸಮಯದಲ್ಲಿ ಪ್ರೀತಿ ಆಗಿದೆಯಂತೆ. ನಿನ್ನೆ ಆ ಹುಡುಗಿ ಬೇರೆ ಹುಡುಗನ ಜತೆ ಓಡಿ ಹೋದಳಂತೆ. ಈ ಕೋಪದಲ್ಲಿ ಪ್ರಶಾಂತನು ಹುಡುಗಿಯ ಮನೆಯವರೊಂದಿಗೆ ಜಗಳಕ್ಕಿಳಿದು, ಸ್ಟೇಷನ್ ಹೋಗಿ ಬಂದನಂತೆ. ಪ್ರಶಾಂತನ ಈ ನಡವಳಿಕೆ ಬಗ್ಗೆ ತಾಯಿ ಬುದ್ಧಿ ಹೇಳಿದಾಗ ಆತ ಮತ್ತೆ ಕುಪಿತ ಗೊಂಡನಂತೆ. ಸಂಜೆ ಕುಡಿದು ಬಂದು ರಾತ್ರಿ ಇಡೀ ತಾಯಿಯೊಂದಿಗೆ ಜಗಳ ಮಾಡಿ ಮನೆ ಹೊರಗಡೆ ಜಗುಲಿಯಲ್ಲಿ ಮಲಗಿದ್ದನಂತೆ. ಪ್ರಶಾಂತನ ಈ ವರ್ತನೆಯಿಂದ ನೊಂದಿದ್ದ ಆಕೆಯು ಪ್ರಾಣ ಕಳೆದುಕೊಂಡಳಂತೆ.
ನಾನು ಮೌನವಾಗಿ ಕುಳಿತಿದ್ದ. ಪ್ರಶಾಂತ ನಿಧಾನವಾಗಿ ಎದ್ದು ಒಳ ನಡೆದ. ನಾನು ಆತನ ಪಾದಗಳನ್ನು ನೋಡುತ್ತಾ ನಿಂತೆ. ಒಳ ಹೋದ ಪ್ರಶಾಂತ ಅಬ್ಬರಿಸುತ್ತ ಕತ್ತಿ ಹಿಡಿದು ಹೊರ ಬಂದ. ನಾನು ದಿಗಿಲುಗೊಂಡೆ, ಆ ಆಸಾಮಿ ಏನು ಹೇಳಿದ ಗೊತ್ತೇ. ಹೇ ಲೋಪರ್ ನನಗೆ ಕುಡಿತ ಅನ್ನೋ ಪೀಡೆನ ಕಲಿಸಿದವನೆ ನೀನು. ಸುಂದರವಾಗಿದ್ದ ನನ್ನ ಬದುಕನ್ನು ಅನ್ಯಾಯವಾಗಿ ಹಾಳು ಮಾಡಿದ ರಾಕ್ಷಸ ನೀನು. ನೀನು ಇನ್ನು ಮುಂದೆ ಬದುಕಿರಬಾರದು ಎಂದು ಕತ್ತಿಯನ್ನು ಬೀಸಿ ನನ್ನ ಮೇಲೆ ಹಾರಿದ.
ಕತ್ತಿಯ ಏಟು ನನ್ನ ಬಲಗೈಯನ್ನು ಗಾಯ ಗೊಳಿಸಿತು. ಅಮ್ಮ ಎಂದು ಚೀರಿಕೊಂಡೆ. ತಟ್ಟನೆ ಅದೇನೋ ಮತ್ತೂಂದು ಏಟು ಬಿದ್ದ ಹಾಗಾಯಿತು. ತಿರುಗಿ ಎದ್ದು ಕುಳಿತೆ. ಅಮ್ಮ ಕೈಯ್ಯಲ್ಲಿ ಬೆತ್ತವನ್ನು ಹಿಡಿದು ನಿಂತಿದ್ದಳು. ರಾತ್ರಿಯೆಲ್ಲ ಟಿ.ವಿ. ನೋಡು ಬೆಳಗ್ಗೆ ಕನಸು ಕಾಣು ಎನ್ನುತ್ತಾ ನನ್ನನ್ನು ಬೈದಳು. ಏನೋ ಕಾಲೇಜ್ ಕಡೆಗೆ ಹೋಗುವ ಲಕ್ಷಣ ಕಾಣಿಸ್ತಿಲ್ಲ ಎಂದು ಅಂದಾಗ ವಾಸ್ತವ ಅರಿವಾಯಿತು. ಈ ಪ್ರಶಾಂತನ ಅವಾಂತರ, ಈ ಮೂರಡಿ ಕತ್ತಿ, ಪ್ರಶಾಂತನ ಕತ್ತಿ ಕಾಳಗ ಎಲ್ಲ ರಾತ್ರಿಯ ಕನಸಿನ ಮಹಿಮೆ ಎಂದರಿವಾಯಿತು.
ಬೇಗ ಬೇಗ ಎದ್ದು ಮಂಕಾಗಿದ್ದ ಹಲ್ಲಿಗೆ ಬ್ರಶ್ನಿಂದ ತಿಕ್ಕಿ, ಶುಭ್ರವಾಗಿ, ತಿಂಡಿ ತಿಂದು ಅಮ್ಮನಿಗೆ ಬಾಯ್ ಹೇಳಿ ಕಾಲೇಜಿಗೆ ಹೊರಟೆ. ಆ ಪುಣ್ಯಾತ್ಮ ಪ್ರಶಾಂತನ ಮೊಬೈಲ್ ಕರೆ ಮಾಡಿದಾಗ ಆತ ಇನ್ನು ಬೆಚ್ಚಗೆ ಮಲಗಿದ್ದಾನೆ. ಕುಂಭಕರ್ಣ ಎಂದು ಆತನ ತಾಯಿ ಹೇಳಿದಾಗ ಮುಗುಳು ನಗೆಯೊಂದು ನನ್ನ ಮುಖದಲ್ಲಿ ಸುಳಿದುಹೋಯಿತು.
ನವೀನ್ ಗೌಡ, ಉದ್ಯೋಗಿ, ಬೆಂಗಳೂರು