ದೇಶ ಸೇವೆಯೇ ಈಶ ಸೇವೆ
Team Udayavani, Aug 16, 2020, 5:16 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಒಂದೇ ದೇಶದ ಸೂರಿನಡಿ ಹಲವು ಭಾಷೆಗಳು, ಜನ- ಜನಾಂಗಗಳು, ವೈವಿಧ್ಯ ಸಂಸ್ಕೃತಿ, ಆಚಾರ-ವಿಚಾರಗಳ ಸಮ್ಮಿಲನದ ಗೂಡಿದು.
ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನತೆಯ ನಡುವೆಯೂ ಏಕತೆಯನ್ನು ಸಾರುತ್ತಿದೆ. ಭಾರತ ದರ್ಶನ ಇಡೀ ಧರೆಯಲ್ಲಿನ ಅಚ್ಚರಿಗಳ ಅನಾವರಣವಿದ್ದಂತೆ.
ಅಮೂಲ್ಯ ಸಂಪತ್ತುಗಳನ್ನೊಳಗೊಂಡಂತೆ ಅಪಾರ ಅರಣ್ಯ ಸಂಪತ್ತು ಹೊಂದಿರುವ ರಾಷ್ಟ್ರ ನಮ್ಮದು.
ಸಾಂಸ್ಕೃತಿಕವಾಗಿ, ಭೌತಿಕವಾಗಿ, ನೈಸರ್ಗಿಕವಾಗಿ ಸಮೃದ್ಧಿಯಾಗಿರೋ ನನ್ನೀ ರಾಷ್ಟ್ರದಲ್ಲಿ ಇನ್ನೂ ಬಡತನ, ಹಸಿವು, ಶಿಕ್ಷಣ, ಉದ್ಯೋಗ ಇನ್ನೂ ಅನೇಕ ವಿಚಾರಗಳು ವಿಮರ್ಶೆಯತ್ತ ದೂಡಿದೆ.
ದೇಶ ಪ್ರೇಮದ ಸಂಕೀರ್ಣತೆ ಕ್ರೀಡೆಯಲ್ಲಿ ನಮ್ಮ ದೇಶವನ್ನು ಪ್ರೋತ್ಸಾಹಿಸುವುದು, ಅನ್ಯ ದೇಶಗಳ ವಿರುದ್ಧ ಯುದ್ಧದ ಸಂದರ್ಭಗಳಿಗೆ ಸೀಮಿತವಾಗಿಬಿಟ್ಟಿದೆಯೋ? ದೇಶ ನಮ್ಮದೆಂದರೆ ದೇಶದೊಳಗಿನ ಕಾನೂನುಗಳ ಪಾಲನೆ, ದೇಶದ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯದ ಪರಿಮಿತಿಯಲ್ಲಿಲ್ಲವೇನೋ! ದೊಡ್ಡ ಯೋಜನೆಗಳಿಗೆ ಸಣ್ಣ ಸಣ್ಣ ಯೋಚನೆಗಳೇ ಆಧಾರ.
ಹಲವು ರಾಷ್ಟ್ರಗಳಲ್ಲಿ ಸೈನ್ಯ ಸೇರುವುದು ಕಡ್ಡಾಯ ವಾದರೂ ನಮ್ಮ ದೇಶದಲ್ಲಿ ಹಾಗಿಲ್ಲ. ಸೈನ್ಯ ಸೇರಿಯೇ ದೇಶಸೇವೆ ಮಾಡ ಬೇಕೆಂದೇನಿಲ್ಲ. ಬದಲಾಗಿ ದೇಶ ಸೇವಾ ಮನೋ ಭಾವ ಹೊಂದಿಕೊಂಡು ದೇಶ ಹಿತ ಚಿಂತನೆ ಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಕಾನೂನು ಗಳು ದಾಖಲೆಯ ವಸ್ತುಗಳಾಗದೆ ದಾಖಲೆ ಸೃಷ್ಟಿಸು ವಂತಿರಬೇಕು. “ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬಳ್ಳ’ ಎಂಬಂತೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿದರೆ ದೇಶದ ಅಭಿವೃದ್ಧಿ ಸಾಧ್ಯ.
ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ಪ್ರಜೆಗಳಿಗೆ ತಮ್ಮ ಮಹತ್ವದ ಬಗ್ಗೆ ತಿಳಿಸಿಕೊಡುವ ಸನ್ನಿವೇಶ ಬಂದಿರುವುದು ವಿಷಾದನೀಯ. ಸ್ವಾತಂತ್ರ್ಯ ದೊರಕಿ 74 ವರ್ಷ ಕಳೆದರೂ ದೇಶದ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಲ್ಲಿ ಎಡವಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಸೇತುವೆ ಹಾಗೂ ಕಟ್ಟಡಗಳ ಸಾಮರ್ಥ್ಯ ಈಗಿನ ಕಾಲದವುಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಬ್ರಿಟಿಷರ ಕಾಲದವು ಎಂದು ಹೇಳಲು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಭಾರತ ಸ್ವತಂತ್ರವಾಗಲು ಹಲವರ ತ್ಯಾಗ-ಬಲಿದಾನ, ಶ್ರಮ ಇದೆ. ಇವು ವ್ಯರ್ಥವಾಗಬಾರದು.
ಇದರ ಹೊರತಾಗಿಯೂ ಭಾರತ ನನ್ನದು, ನನ್ನ ಪ್ರೀತಿಯ ದೇಶ. ಸಮಾಜದಲ್ಲಿನ ಅನೇಕ ಭೇದಗಳ ಹೊರತಾಗಿಯೂ ಭಾರತದ ತ್ರಿವರ್ಣ ಧ್ವಜ ಎಲ್ಲ ರನ್ನೂ ಒಂದುಗೂಡಿಸುವ ತಾಕತ್ತು ಹೊಂದಿದೆ. ನವ ಭಾರತ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ. ಸ್ವತಂತ್ರ ಭಾರತ ಸಶಕ್ತ ಭಾರತವಾಗಬೇಕು. ಸಮೃದ್ಧ ಭಾರತ ಸ್ವಾವಲಂಬಿ ಭಾರತ ವಾಗಬೇಕು. ಹೌದು ಆತ್ಮ ನಿರ್ಭರ ಭಾರತವಾಗಬೇಕು.
ನೈಜ ದೇಶ ಪ್ರೇಮ ಪ್ರದರ್ಶಿಸೋಣ. ದೇಶ ಸೇವೆಯೇ ಈಶ ಸೇವೆ ಎನ್ನುವ ಸಂಕಲ್ಪ ಹೊಂದೋಣ…
ಕೌಶಿಕ್ ಶೆಟ್ಟಿ , ಕರಾವಳಿ ಕಾಲೇಜು ಉಡುಪಿ