ಚಳಿಗಾಲದ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುತ್ತಿದ್ದೀರಾ? ರಾಜ್ಯದ ಅತ್ಯುನ್ನತ ಸ್ಥಳಗಳು ಇಲ್ಲಿವೆ
Team Udayavani, Sep 27, 2020, 4:26 PM IST
ಇಂದು ವಿಶ್ವ ಪ್ರವಾಸೋದ್ಯಮ ದಿನ. ದೇಶ ಸುತ್ತುಕೋಶ ಓದು ಎನ್ನುವ ಮಾತನ್ನು ಈ ದಿನ ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ಪುಸ್ತಕ ಓದುವುದಕ್ಕಿಂತಲು ಹೆಚ್ಚಿನದು ಎಂದರೆ ಅತಿಶಯೋಕ್ತಿಯಲ್ಲ. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಲಕ್ಷಾಂತರ ಮಂದಿಗೆ ಉದ್ಯೋಗವನ್ನು ನೀಡಲು ಸಫಲವಾಗಿದೆ.
ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಸ್ಥಿತಿ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಖುಷಿಯ ವಿಚಾರ. ಆದರೆ ಸದ್ಯ ಕೋವಿಡ್ 19ರಿಂದಾಗಿ ಇದು ಸ್ಥಗಿತಗೊಂಡಿದೆ. ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ.
ಕರ್ನಾಟಕ ಮತ್ತು ಪ್ರವಾಸೋದ್ಯಮ
ಕಲೆ, ಸಾಹಿತ್ಯ- ಸಂಸ್ಕೃತಿಯ ತವರಾದ ಕರ್ನಾಟಕ ಸಮೃದ್ಧವಾದ ನಾಡು. ಸಂಪದ್ಭರಿತ ಕಾಡು, ಧುಮ್ಮಿಕ್ಕಿ ಹರಿವ ಜಲಪಾತ, ಮನಸೆಳೆವ ಕರಾವಳಿ ತೀರ, ಮನಸ್ಸಿಗೆ ಮುದ ನೀಡುವ ಪಕ್ಷಿಧಾಮ, ಕಲಾಶ್ರೀಮಂತಿಕೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪೆ, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳ ನಡುವೆ ಸಾವಿರಾರು ದುರ್ಗಗಳು- ಗುಡಿ ಗೋಪುರಗಳು ಹತ್ತು ಹಲವು. ಹೀಗೆ ಹವಾಮಾನ ಅಥವ ಋತುಗಳ ಆಧಾರದಲ್ಲಿ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುವುದು ಸಾಮಾನ್ಯರು ಅನುಸರಿಸುವ ಕ್ರಮ. ಈ ಬಾರಿಯ ಪ್ರವಾಸೋದ್ಯದಲ್ಲಿ ಜಗತ್ತಿನಾದ್ಯಂತ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ದೊರೆಯುವ ಸಾಧ್ಯತೆ ಇದೆ. ಕಾರಣ ಏನೆಂದರೆ ಕೋವಿಡ್ ಹಿನ್ನೆಲೆಯಲ್ಲಿ ಹೊರ ರಾಜ್ಯ ಅಥವ ಹೊರ ದೇಶಗಳಿಗೆ ಪ್ರವಾಸ ಹೋಗುವ ಸಾಧ್ಯತೆಗಳು ತೀರಾ ಕಡಿಮೆ ಇರಲಿದೆ.
ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ನೂರಾರು ಸುಪ್ರಸಿದ್ಧ ತಾಣಗಳ ಪೈಕಿ ಕೆಲವು ರಮ್ಯತೆಯ ತಾಣದ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಇಲ್ಲಿ ಚಳಿಗಾಲದ ಅವಧಿಯಲ್ಲಿ ನಾವು ಭೇಟಿ ನೀಡಲೇಬೇಕಾದ 10 ಖ್ಯಾತ ಪ್ರವಾಸಿ ಕೇಂದ್ರಗಳನ್ನು ಇಲ್ಲಿ ನೀಡಲಾಗಿದೆ. ನೀವು ಇವುಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ.
ದಕ್ಷಿಣ ಭಾರತದ ಚಿರಾಂಪುಜಿ ಆಗುಂಬೆ
ಆಗುಂಬೆ, ಮಲೆನಾಡಿನ ಮಡಿಲಿನಲ್ಲಿರುವ ಒಂದು ಪುಟ್ಟಊರು. ಮಳೆಗಾಲದಲ್ಲಿ ಸೂರ್ಯನ ಅಸ್ತಿತ್ವವನ್ನೂ ಮರೆಯಿಸುವಂತೆ ಗಾಢವಾದ ಮೋಡಗಳಿಂದ ಆವೃತವಾಗಿ ಭೋರ್ಗರೆವ ಮಳೆಯಲ್ಲಿ ತೊಯ್ಯುವ ಊರು ಮಳೆಗಾಲ ಮುಗಿಯುತ್ತಿದ್ದಂತೆಯೇ ಸೂರ್ಯಾಸ್ತಮಾನದ ಭವ್ಯ ನೋಟಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ.
ಹೊರಜಗತ್ತಿಗೆ ದಕ್ಷಿಣ ಭಾರತದ ಚಿರಾಪುಂಜಿ ಎಂದು ಪರಿಚಿತವಾಗಿರುವುದರಿಂದ ಆಗುಂಬೆಯ ಹೆಸರನ್ನು ಕೇಳದೇ ಇರುವವರ ಸಂಖ್ಯೆ ವಿರಳಾತಿವಿರಳ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕಂತೆ ಭೂ ವಿಸ್ತೀರ್ಣದಲ್ಲಿ ಚಿಕ್ಕ ಊರಾದರೂ ತನ್ನ ವಿಶಿಷ್ಟತೆಗಳ ಕಾರಣದಿಂದ ಪ್ರಸಿದ್ಧಿಯಾಗಿದೆ. ಆಗುಂಬೆಯ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಘಾಟಿಯ ತಿರುವುಗಳಂತೆಯೇ ಹಲವು ಕತೆಗಳು ಒಂದರ ಹಿಂದೆ ಮತ್ತೂಂದರಂತೆ ತೆರೆದುಕೊಳ್ಳುತ್ತವೆ.
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯಕೊಂಡಿಯಾಗಿರುವ ಹದಿನಾಲ್ಕು ಸುತ್ತಿನ ಆಗುಂಬೆ ಘಾಟಿಯ ಕಡಿದಾದ ತಿರುವುಗಳು, ಘಾಟಿಯುದ್ದಕ್ಕೂ ಕಾಣಸಿಗುವ ಹಸುರುಹೊದ್ದ ಪರಿಸರ, ಮೇಲಿನ ಸುತ್ತುಗಳಲ್ಲಿ ಕಿವಿ ಹೊಕ್ಕುವ ತಂಪು ಗಾಳಿ, ಕೆಳಗಿನ ಸುತ್ತುಗಳಲ್ಲಿ ಆಗುವ ಬೆಚ್ಚನೆಯ ಅನುಭವ, ಎರಡು ಜಿಲ್ಲೆಗಳ ಮಧ್ಯೆ ಹಂಚಿಕೆಯಾಗಿರುವ ಘಾಟಿ, ಮೇಲ್ಭಾಗದಲ್ಲಿನ ಘಾಟಿ ಚೌಡಮ್ಮನ ಕೆರೆ, ಮಳೆಕಾಡು, ಸಿಂಹಬಾಲದ ಕೋತಿ, ಮುಸಿಯಗಳ ಕೂಗು, ಕಾಳಿಂಗ ಸರ್ಪಗಳ ಅಧ್ಯಯನ ಕೇಂದ್ರ, ಸಸ್ಯ ವೈವಿಧ್ಯತೆ, ಇವೆಲ್ಲದರ ಮಧ್ಯೆ ಸದ್ದುಗದ್ದಲವಿಲ್ಲದೇ ತಣ್ಣಗೆ ನಿಂತಿರುವ ಆಗುಂಬೆಯ ಸಣ್ಣಪೇಟೆ ನೋಡುಗರನ್ನು ವಿಸ್ಮಯಗೊಳಿಸುತ್ತದೆ.
ಇನ್ನು ಆಗುಂಬೆಯಿಂದ ಕೊಂಚ ಆಚೀಚೆ ಹೆಜ್ಜೆಯಿಟ್ಟರೆ ಇನ್ನೊಂದು ಮಾಯಾಲೋಕ ತೆರೆದುಕೊಳ್ಳುತ್ತದೆ. ಆಗುಂಬೆಯ ಸುತ್ತಮುತ್ತಲು ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ಒನಕೆ ಅಬ್ಬಿ, ಜೋಗಿಗುಂಡಿ, ಬರ್ಕಣ ಎಂಬ ಹೆಸರಿನ ಜಲಪಾತಗಳು ಹಸುರು ಲೋಕದ ಮಧ್ಯದಲ್ಲಿ ಧುಮ್ಮಿಕ್ಕುತ್ತಾ ಬೆಳ್ಳಿಗೆರೆಗಳಂತೆ ಕಂಗೊಳಿಸುತ್ತವೆ. ಜಲಪಾತಗಳನ್ನು ತಲುಪುವ ಹಾದಿ ದಟ್ಟಕಾನನವನ್ನು ಸೀಳಿಕೊಂಡು ಹೋಗುವುದರಿಂದ ಅಲ್ಲಿ ಹೆಜ್ಜೆ ಹೆಜ್ಜೆಗೂ ಮಲೆನಾಡಿನ ಚಿಕ್ಕಪುಟ್ಟಸಂಗತಿಗಳನ್ನು, ಅವ್ಯಕ್ತ ಕತೆಗಳನ್ನು, ಕಾಡಿನ ಮೌನವನ್ನು ಅನುಭವಿಸಬಹುದು. ಆಗುಂಬೆಯ ಸಂಜೆ ಸೂರ್ಯ ಕರಗುವುದಕ್ಕೆ ಸಾಕ್ಷಿಯಾದರೆ ಆಗುಂಬೆಯಿಂದ ಹದಿನೆಂಟು ದೂರದಲ್ಲಿರುವ ಕುಂದಾದ್ರಿ ಸೂರ್ಯೋದಯದ ಸೊಬಗನ್ನು ಕಟ್ಟಿಕೊಡುತ್ತದೆ.
ರೋಮಾಂಚನಗೊಳಿಸುವ ಗಿರಿಶ್ರೇಣಿ ಬಿಳಿಗಿರಿ ರಂಗನ ಬೆಟ್ಟ
ಒಂದರಾಚೆ ಇನ್ನೊಂದು, ಅದರಾಚೆ ಮತ್ತೂಂದು ಎಂಬಂತೆ ಸಾಲು ಸಾಲು ಬೆಟ್ಟಗಳ ಶ್ರೇಣಿ. ಯಾವ ದಿಕ್ಕಿಗೆ ನೋಡಿದರೂ ಪರ್ವತ, ಎತ್ತ ಕಣ್ಣು ಆಯಿಸಿದರೂ ಹಸುರು ಕಾನನ ಮತ್ತು ಕಣಿವೆಗಳು. ಬಿಳಿಗಿರಿರಂಗನ ಬೆಟ್ಟವೆಂಬ 540 ಚದರ ಕಿ.ಮೀ. ವಿಸ್ತಾರವುಳ್ಳ ವನ್ಯಜೀವಿ ಸಂರಕ್ಷಿತ ಪ್ರದೇಶ ನಿಜಕ್ಕೂ ಸಾವಿರ ಅಚ್ಚರಿಗಳ ತವರು. ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳ ನಡುವಿನ ಕೊಂಡಿಯಂತಿರುವ ಇದು ಮುಂದೆ ಸತ್ಯಮಂಗಲ ರಕ್ಷಿತಾರಣ್ಯದೊಂದಿಗೆ ಬೆಸೆಯುತ್ತದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕುಗಳಲ್ಲಿ ಹರಡಿಕೊಂಡಿರುವ ಈ ವನಪ್ರದೇಶದ ಮುಕುಟ ಮಣಿಯೇ ಬಿ.ಆರ್. ಹಿಲ್ಸ್ ಎಂಬ ಊರು. ಅದರ ಕಾವಲಿಗಿದ್ದಾನೆ. ಬಿಳಿಗಿರಿ ರಂಗನಾಥ ದೇವರು. ಕೇವಲ ಏಳೆಂಟು ಎಕರೆಯಷ್ಟು ವಿಸ್ತಾರದ ನೆಲ. ಸಮುದ್ರ ಮಟ್ಟದಿಂದ 5091 ಅಡಿ ಎತ್ತರ. ಆ ನೆಲದ ಯಾವ ದಿಕ್ಕಿಗೆ ಹೋಗಿ ನೋಡಿದರೂ ಪ್ರಪಾತ, ಇಳಿಜಾರಿನ ತುಂಬಾ ದೊಡ್ಡ ಕಾನನ. ಅದನ್ನು ದಾಟಿ ಕಣ್ಣು ಹಾಯಿಸಿದರೆ ನೋಡಿದಷ್ಟೂ ಮುಗಿಯದ ಕಾಡು, ಬೆಟ್ಟ ಮತ್ತು ನೀಲಿ ಅಂಬರ.
ವೇಗವಾಗಿ ಬೀಸೋ ಗಾಳಿ, ಮುತ್ತಿಕೊಳ್ಳುವ ಹಿಮ, ಅಲ್ಲಲ್ಲಿ ಹೆಪ್ಪುಗಟ್ಟಿ ತೇಲುತ್ತಿರುವ ಮಂಜುಗುಡ್ಡೆ, ನೀಲಾಕಾಶದ ಹಿನ್ನೆಲೆಯಲ್ಲಿ ಕಣ್ಣಿಗೆ ಹಬ್ಬ ಮಾಡುವ ಮೋಹಕ ಮಾಯಾಜಾಲ. ಕಾವ್ಯಮಯವಾಗಿ ಹೇಳಿದರೆ ಇದು ಶ್ವೇತಾದ್ರಿ. ನಿಂತ ನಿಲುವಿನ ಐದಡಿ ಎತ್ತರದ ರಂಗನಾಥ ಪ್ರತಿಮೆ ಇಲ್ಲಿನ ಪ್ರಧಾನ ದೇವರು. ನವರಂಗ, ಮುಖ ಮಂಟಪದಿಂದ ಕೂಡಿದ ಈ ದೇವಳ ದ್ರಾವಿಡ ಶೈಲಿಯಲ್ಲಿದೆ.
ವರ್ಷದ ಬಹುಕಾಲ ಹಿಮಾಚ್ಛಾದಿತ ಶಿಖರದ ಮೇಲೆ ಕುಳಿತವನು ಬಿಳಿಗಿರಿ ರಂಗ. ಕೆಳಗಿನಿಂದ ನಿಂತು ನೋಡಿದರೆ ಎತ್ತರಕ್ಕೆ ತಲೆ ಎತ್ತಿ ನಿಂತ ಶಿಲೆಯಂತೆ ಕಾಣುವ ಜಾಗವಿದು. ಬಿಳಿ ಕಲ್ಲುಗಳೇ ಇಲ್ಲಿ ಹೆಚ್ಚು. ಹಾಗಾಗಿಯೇ ಇದು ಬಿಳಿಗಿರಿ. ಇನ್ನು ಬ್ರಹ್ಮರ್ಷಿ ವಸಿಷ್ಠ ಪ್ರತಿಷ್ಠಾಪಿತ ಮೂರ್ತಿ ಎಂಬ ನಂಬಿಕೆ. ಲಕ್ಷ್ಮೀ ಇಲ್ಲಿ ರಂಗನಾಯಕಿ. ಜತೆಗೆ ಹನುಮಂತ ಮಹಾಮುನಿ, ರಾಮಾನುಜಾಚಾರ್ಯ, ವೇದಾಂತಾಚಾರ್ಯರ ಮೂರ್ತಿಗಳೂ ಇವೆ. ಇದಕ್ಕೆ ದಕ್ಷಿಣದ ತಿರುಪತಿ ಎಂಬ ಅಭಿದಾನವೂ ಇದೆ. ಇಲ್ಲಿನ ರಂಗನಾಥ ಶ್ರೀರಂಗಪಟ್ಟಣದ ರಂಗನಾಥನ ಸೋದರನಂತೆ. ಇತಿಹಾಸದ ಪ್ರಕಾರ ಈ ದೇಗುಲ ನಿರ್ಮಾಣವಾಗಿರುವುದು ಚೋಳರ ಕಾಲದಲ್ಲಿ. ವಿಶೇಷವೆಂದರೆ, 40 ವರ್ಷದ ಹಿಂದಿನವರೆಗೆ ಇಲ್ಲಿಗೆ ಸರಿಯಾದ ದಾರಿಯೂ ಇರಲಿಲ್ಲ. ಆದರೂ ಇಲ್ಲೊಂದು ಭವ್ಯವಾದ ದೇವಳ ಕಟ್ಟಿರುವುದು ವಿಶೇಷ.
ಒಟ್ಟಾರೆ ತಲೆ ಎತ್ತಿ ನಿಂತ ಶಿಲೆಯಂತೆ ಕಾಣುವ ಪರ್ವತವೊಂದರ ಮೇಲೆ ಕಟ್ಟಿದ ದೇಗುಲ, ಅಲ್ಲಿ ನಿಂತಾಗ ರೋಮಾಂಚನಗೊಳಿಸುವ ಗಿರಿಶ್ರೇಣಿ, ಕಣಿವೆಗಳು, ಸಾಗುವ ಕಾನನ ದಾರಿಯಲ್ಲಿ ಸಿಗುವ ಕಾಡು ಪ್ರಾಣಿಗಳು, ಸರಿದು ಹೋಗುವ ಸರಿಸೃಪಗಳು ಬಿಳಿಗಿರಿ ರಂಗನ ಬೆಟ್ಟದ ಪಯಣವೇ ರೋಚಕ.
ಹೋಗುವುದು ಹೇಗೆ?
- ಬಿಳಿಗಿರಿ ರಂಗನ ಬೆಟ್ಟಕ್ಕೆ ಮೈಸೂರಿನಿಂದ 90 ಕಿ.ಮೀ. ದೂರ. ಮೈಸೂರಿನಿಂದ ತಿರುಮಕೂಡಲು ನರಸೀಪುರ, ಅಲ್ಲಿಂದ ಸಂತೆಮಾರನಹಳ್ಳಿ ಬಳಿಕ ಯಳಂದೂರಿಗೆ ಹೋಗಬೇಕು. ಅಲ್ಲಿಂದ ಬಿ.ಆರ್. ಹಿಲ್ಸ್ಗೆ 24 ಕಿ.ಮೀ.
- ಮೈಸೂರಿನಿಂದ ನಂಜನಗೂಡಿಗೆ ಹೋಗಿ ಅಲ್ಲಿಂದ ಸಂತೆಮಾರನಹಳ್ಳಿಗೆ ಹೋಗಿಯೂ ಯಳಂದೂರು ತಲುಪಬಹುದು.
- ಬೆಂಗಳೂರಿನಿಂದ ಬಿ.ಆರ್. ಹಿಲ್ಸ್ಗೆ ಸುಮಾರು 220 ಕಿ.ಮೀ. ದೂರ. ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮದ್ದೂರು, ಅಲ್ಲಿಂದ ಎಡಕ್ಕೆ ಸಾಗಿ ಮಳವಳ್ಳಿ ಮೂಲಕ ಕೊಳ್ಳೇಗಾಲಕ್ಕೆ ಹೋಗಿ ಯಳಂದೂರಿಗೆ ಹೋಗಬಹುದು.
- ಮೈಸೂರಿನಿಂದ ಯಳಂದೂರಿಗೆ ಬೇಕಾದಷ್ಟು ಬಸ್ಗಳಿವೆ. ಬಿ.ಆರ್. ಹಿಲ್ಸ್ಗೆ ಹೆಚ್ಚು ಬಸ್ಗಳಿಲ್ಲ. ಮಧ್ಯಾಹ್ನ 12 ಗಂಟೆಗೆ ತಲುಪಿ 2 ಗಂಟೆಗೆ ಮರಳುವ ಬಸ್ ಇದೆ.
- ಇಲ್ಲಿಗೆ ಭೇಟಿ ನೀಡಲು ನವೆಂಬರ್ನಿಂದ ಮಾರ್ಚ್ ನಡುವೆ ಸೂಕ್ತ ಸಮಯ.
- ಬೈಕ್ನಲ್ಲಿ ಹೋಗುವಾಗ ಎಲ್ಲೂ ನಿಲ್ಲಿಸದೆ ಇರುವುದು ಸುರಕ್ಷಿತ. ಯಾಕೆಂದರೆ, ಕಾಡು ಪ್ರಾಣಿಗಳು ನಿರಂತರವಾಗಿ ಓಡಾಡಿಕೊಂಡಿರುತ್ತವೆ.
ವನ-ವನ್ಯಜೀವಿಗಳ ರಮ್ಯ ತಾಣ ದಾಂಡೇಲಿ
ಮೆಲ್ಲನೆ ಉಸುರುವ ಬಿದಿರ ಮೆಳೆ, ಹುಡುಕಿದಷ್ಟೂ ಸಿಗುವ ಚಾರಣ ದಾರಿಗಳು, ವನ್ಯಜೀವಿಗಳು, ಪಕ್ಷಿಗಳು ಹೀಗೆ ಪ್ರಕೃತಿ ಸದೃಶಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ದಾಂಡೇಲಿ ವನ್ಯಧಾಮ ಚಳಿಗಾಲದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಫೋಟೋಗ್ರಫಿಯ ಸ್ವರ್ಗ
ಉತ್ತರಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಅಭಯಾರಣ್ಯ 475.02 ಚದರ ಕಿ.ಮೀ. ಹರಡಿದೆ. ಸಾಹಸೀ ಕ್ರೀಡೆಗಳನ್ನು ಕೈಗೊಳ್ಳಲು ಸೂಕ್ತ ಸ್ಥಳ. ಪಕ್ಷಿಗಳನ್ನು ನೋಡಲು ಮತ್ತು ವನ್ಯಜೀವಿ ಫೋಟೋಗ್ರಫಿಗೆ ಇದು ಹೇಳಿ ಮಾಡಿಸಿದ ತಾಣ. ಹುಲಿ, ಚಿರತೆ, ಆನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ನರಿಗಳು, ಲಂಗೂರ್, ಬ್ಲ್ಯಾಕ್ ಪ್ಯಾಂಥರ್ಸ್, ಚುಕ್ಕಿ ಜಿಂಕೆ ಮೊದಲಾದ ಪ್ರಾಣಿಗಳು ಇವೆ. ಜತೆಗೆ 196ಕ್ಕೂ ಹೆಚ್ಚು ಜಾತಿಗೆ ಸೇರಿದ ಪಕ್ಷಿಗಳು, ಉಭಯಚರ ಹಾಗೂ ಸರೀಸೃಪಗಳಿಗೆ ಇದು ಆವಾಸಸ್ಥಾನ. ಕರ್ನಾಟಕದ ಎರಡನೇ ದೊಡ್ಡ ವನ್ಯಧಾಮ ಎನಿಸಿಕೊಂಡಿರೋ ದಾಂಡೇಲಿಯನ್ನು 2007ರಲ್ಲಿ ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ.
ಪ್ರಕೃತಿ ಸೌಂದರ್ಯದ ಹಸಿರು ವನದ ತಾಣವಾಗಿರುವ ದಾಂಡೇಲಿ ವನ್ಯಮೃಗಗಳ ಅವಾಸಸ್ಥಾನವೂ ಹೌದು. ಅಪರೂಪದ ಪ್ರಾಣಿಗಳಿಗೆ ಆಶ್ರಯ ತಾಣವಾಗಿರುವ ದಾಂಡೇಲಿಯ ಆಳವಾದ ಕಣಿವೆಗಳು ಮತ್ತು ಬೆಟ್ಟ ಪ್ರದೇಶಗಳಲ್ಲಿ ಪಕ್ಷಿಗಳು ಸ್ವತಂತ್ರವಾಗಿ ಹಾರಾಡುತ್ತಿರುತ್ತವೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಜತೆಗೆ ಇಲ್ಲಿ ಹಲವು ಟ್ರಕ್ಕಿಂಗ್ ತಾಣಗಳಿವೆ. ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡಬಹುದು.
ಇನ್ನು ಪರಿಸರ ಪ್ರೇಮಿಗಳಿಗೆ ದಾಂಡೇಲಿ ಹೇಳಿ ಮಾಡಿಸಿದ ತಾಣವಾಗಿದ್ದು, ಪ್ರಕೃತಿ ನಡಿಗೆ, ರಾತ್ರಿ ಕ್ಯಾಂಪ್, ಮೂನ್ಲೈಟ್ ಬೋಟ್ ರೈಡ್, ಜಂಗಲ್ ಸಫಾರಿ, ಬೋಟಿಂಗ್, ಪಕ್ಷಿ ವೀಕ್ಷಣೆ ಮಾಡಬಹುದು. ಅದರ ಜತೆಗೆ ಪಿಕ್ನಿಕ್, ಪರಿಸರ ಟೂರ್, ಹತ್ತಿರದಲ್ಲೇ ಇರುವ ಗುಹೆಗಳು, ದೇವಸ್ಥಾನಗಳಿಗೆ ಭೇಟಿ ಕೊಡಬಹುದು. ವನ್ಯಜೀವಿಗಳ ವೀಕ್ಷಣೆಗೆ ದಾಂಡೇಲಿಯಲ್ಲಿ ಜೀಫ್ ಸಫಾರಿಯನ್ನು ಕೈಗೊಳ್ಳಬಹುದು. ಇದು ಪಕ್ಷಿವಿಜ್ಞಾನಿಗಳಿಗೆ ಸ್ವರ್ಗ. ಬಣ್ಣ ಬಣ್ಣದ ಹಾರ್ನ್ಬಿಲ್ಗಳನ್ನು ನೋಡಬಹುದು. ಪಕ್ಷಿಗಳ ಇಂಪಾದ ಇಂಚರವನ್ನು ಕೇಳಬಹುದು.
ಹೋಗುವುದು ಹೇಗೆ?
ಧಾರವಾಡದಿಂದ 57 ಕಿ.ಮೀ. ಹುಬ್ಬಳ್ಳಿಯಿಂದ 75ಕಿ.ಮೀ., ಬೆಳಗಾವಿಯಿಂದ 110 ಕಿ.ಮೀ., ಬೆಂಗಳೂರಿನಿಂದ 48 ಕಿ.ಮೀ., ಗೋವಾದಿಂದ 150 ಕಿ.ಮೀ. ಹತ್ತಿರದ ವಿಮಾನ ನಿಲ್ದಾಣ 110ಕಿ.ಮೀ., ಹುಬ್ಬಳ್ಳಿ 75 ಕಿ.ಮೀ., ಗೋವಾ 150 ಕಿ.ಮೀ. ರೈಲು ಸಾರಿಗೆ ವ್ಯವಸ್ಥೆ ಇದೆ. ಅಲ್ಲದೆ ದಾಂಡೇಲಿಗೆ ಬೆಂಗಳೂರಿನಿಂದ ಸಾಕಷ್ಟು ಸರಕಾರಿ ಹಾಗೂ ಖಾಸಗಿ ಬಸ್ ಸೌಲಭ್ಯಗಳಿವೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ದಾಂಡೇಲಿಗೆ ಉತ್ತಮ ಸಂಪರ್ಕವಿದೆ.
ಪ್ರಕೃತಿ ಆರಾಧಕರ ನೆಚ್ಚಿನ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಕಣ್ಣು ಹಾಯಿಸಿದುದ್ದಕ್ಕೂ ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿಕಂದರಗಳು. ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿಗೆ ಮೈಯೊಡ್ಡಲು ಅದೇನೋ ಪುಳಕ. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದಕ್ಕೆ ಕಿವಿಯಾಗುವ ತವಕ. ಮಂಜುಮುಸುಕಿನ ಆಹ್ಲಾದಕರ ವಾತಾವರಣ. ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ.
ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ. ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ ಶ್ರೀಗೋಪಾಲಸ್ವಾಮಿ ನೆಲೆನಿಂತಿದ್ದು, ಎಂಥವರನ್ನು ಮಂತ್ರ ಮುಗªರನ್ನಾಗಿಸುವ ಶಕ್ತಿ ಈ ತಾಣಕ್ಕಿದೆ. ಚಾರಣ ಪ್ರಿಯರಿಗೆ ಹುರುಪನ್ನು, ನಿಸರ್ಗ ಪ್ರೇಮಿಗಳಿಗೆ ಮುದವನ್ನು ನೀಡುವ ತಾಣವಾಗಿ ಹಾಗೂ ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿಯೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಗಮನಸೆಳೆಯುತ್ತಿದೆ.
ನೋಡ ನೋಡುತ್ತಲೇ ಹಿಮದಿಂದ ಆವೃತ್ತವಾಗುತ್ತಾ ರವಿಕಿರಣದಲ್ಲಿ ತನ್ನ ಸ್ನಿಗ್ಧಸೌಂದರ್ಯವನ್ನು ತೆರೆದಿಡುವುದು ಈ ಬೆಟ್ಟದ ಮತ್ತೂಂದು ವಿಶೇಷತೆ. ಹೀಗಾಗಿಯೇ ಇಲ್ಲಿಗೆ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುತ್ತಾರೆ. ಗುಂಡ್ಲುಪೇಟೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿ ಈ ಬೆಟ್ಟವಿದ್ದು, ಕಡಿದಾದ ಅಂಕುಡೊಂಕು ರಸ್ತೆಯಲ್ಲಿ ತೆರಳವುದೇ ಒಂದು ರೋಮಾಂಚನಕಾರಿ ಅನುಭವ. ರಸ್ತೆಯು ಕಿರಿದಾಗಿರುವ ಕಾರಣ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಚಲಾವಣೆ ಕಷ್ಟ ಸಾಧ್ಯ.
ಹೋಗುವುದು ಹೇಗೆ?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಬೃಹದಾಕಾರದಲ್ಲಿ ಹರಡಿ ನಿಂತಿರುವ ಶ್ರೀಗೋಪಾಲಸ್ವಾಮಿ ಬೆಟ್ಟ ಎದುರಾಗುತ್ತದೆ.