ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…
Team Udayavani, Apr 6, 2019, 6:00 AM IST
ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿ ಶ್ರೇಷ್ಠ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುತ್ತಾರೆ. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚೆÂತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದೂಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ.
ಚೈತ್ರ ಮಾಸದ ಮೊದಲ ದಿನವೇ ಯುಗಾದಿ. ಹೊಸ ಯುಗದ ಆರಂಭ ಎಂಬುದೇ ಯುಗಾದಿ ಪದದ ಅರ್ಥ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು- ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡ, ಪುರಾಣಗಳಲ್ಲೂ ಉಲ್ಲೇಖವಿದೆ.
ಹಿಂದೂ ಧರ್ಮದ ವೇದಾಂಗ ಜೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ 0 – 13:20 ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧ ಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ.
ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ.
ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದೂ ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ. ಹಿಂದೂಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದೆಯಿಂದ ಆರಂಭಿಸುವರು. ಯುಗಾದಿಯು ಚಾಂದ್ರಮಾನದ ಸಂವತ್ಸರದ ಆರಂಭದ ದಿನ. ವರಾಹುರಾಚಾರ್ಯನು ವರ್ಷಾರಂಭವನ್ನು ಚೈತ್ರ ಮಾಸವೆಂದು ಹೇಳಿರುವನು. ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮುಹೂರ್ತದ ಮೂರುವರೆ ದಿನಗಳೆಂದರೆ ಯುಗಾದಿ, ಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲಿ ಯುಗಾದಿ ಅತಿ ಶ್ರೇಷ್ಠ ಮುಹೂರ್ತ ಎಂದು ಭಾರತೀಯರು ನಂಬುತ್ತಾರೆ. ವರ್ಷದ ಶುಭ ದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳಲಾಗುತ್ತದೆ.
ಸಿಹಿ ಕಹಿಗಳ ನಿರ್ವಹಣೆಯೇ ಯುಗಾದಿಯ ಗುಟ್ಟು
ಸುತ್ತಲೆಲ್ಲಾ ಫಲ ಬಿಟ್ಟ ಮರ ಗಿಡಗಳು. ಪ್ರಕೃತಿ ನವ ಯೌವನದೊಂದಿಗೆ ಕಂಗೊಳಿಸುತ್ತಾ ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರುಷ ಇಂದಿನಿಂದ ಆರಂಭವಾಗಿದೆ. ಬೇವು ಬೆಲ್ಲ ಅಂದರೆ ಸಿಹಿ ಮತ್ತು ಕಹಿಗಳ ಸಮ್ಮಿಲನವೇ ಜೀವನ ಎನ್ನುವ ಅರ್ಥಪೂರ್ಣ ಸಂದೇಶದ ಜತೆಗೆ ಎಲ್ಲ ವರ್ಷದಂತೆ ಈ ವರ್ಷವೂ ಯುಗದ ಆದಿಯನ್ನು ಸಂಭ್ರಮದಿಂದ ಎದುರುಗೊಂಡಿದ್ದೇವೆ. ಪ್ರಕೃತಿಗೆ ಹೊಸ ಚೈತನ, ಹುರುಪು ಬಂದಂತೆಯೇ ನಮ್ಮ ಬದುಕೂ ಹಸನಾಗಬೇಕು ಎಂದು ಬಯಸಿ ಹಿರಿಯರ ಆಶೀರ್ವಾದ ಪಡೆಯುವ ನಾವು, ಈ ಆಶಾಭಾವವನ್ನು ಮುಂದಿನ ಯುಗಾದಿಯವರೆಗೂ ಉಳಿಸಿಕೊಂಡು ಜೀವನ ನಡೆಸುವತ್ತ ಒಂದು ಹೆಜ್ಜೆ ಮುಂದಿಟ್ಟಲ್ಲಿ ನೋವು ನಲಿವನ್ನು ಸಮಾನ ದೃಷ್ಟಿಯಿಂದ ಸ್ವೀಕರಿಸುವುದು ಸಾಧ್ಯ.
ಬೆಲ್ಲದ ಸವಿಯ ಜತೆಗೆ ಬದುಕಿನಲ್ಲಿ ಬರುವ ಎಲ್ಲ ದುಃಖಗಳೆಂಬ ಕಹಿಯನ್ನು ಆಸ್ವಾದಿಸುವುದಕ್ಕಾಗಿ, ಅದನ್ನು ಒಪ್ಪಿಕೊಂಡು ಕುಗ್ಗದೆ ಜೀವನ ನಡೆಸುವುದಕ್ಕೆ ಬೇಕಾದ ಜೀವನ ಸಂಪ್ರೀತಿಯ ಸಂದೇಶ ಸಾರುವ ಹಬ್ಬವೇ ಯುಗಾದಿ. ಕೇವಲ ಕರುನಾಡಿನಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ವಿವಿಧ ಭಾಗಗಳ ಜನರು ಈ ದಿನವನ್ನು ಹೊಸ ಮನ್ವಂತರದ ಆರಂಭ ಎಂಬುದಾಗಿ ಅಚರಿಸುತ್ತಾರೆ. ಹಬ್ಬಕ್ಕೆ ಮುನ್ಸೂಚನೆಯನ್ನು ನೀಡುವುದು ಪ್ರಕೃತಿಯೇ ಎಂದರೆ ಅತಿಶಯೋಕ್ತಿಯಲ್ಲ. ಹಚ್ಚ ಹಸುರಿನ ಪ್ರಕೃತಿ ಹೂ ಹಣ್ಣುಗಳನ್ನು ಬಿಟ್ಟು ಹೊಸ ಅಧ್ಯಾಯದ ಜತೆಗೆ ಹೊಸ ವರ್ಷಾರಂಭಕ್ಕೆ ತೆರೆದುಕೊಂಡಿದೆ. ಅದರಂತೆಯೇ ಮನುಷ್ಯನ ಬದುಕು, ಎಲ್ಲ É ನೋವು ನಲಿವಿನ ನಡುವೆಯೂ ಬದುಕಿನ ಹೊಸ ಅಧ್ಯಾಯ ಬರೆಯಬೇಕು ಎನ್ನುವ ಸಾರವನ್ನು ಜನಮನಸಕ್ಕೆ ತಿಳಿಸಿಕೊಡುವ ಔಚಿತ್ಯಪೂರ್ಣ ಹಬ್ಬವೇ ಯುಗಾದಿ.
ಯುಗಗಳು ಉರುಳಿದರೂ ಯುಗಾದಿಯ ಹರುಷ ಮತ್ತೆ ನಮ್ಮ ಬಳಿ ಬಂದಿದೆ. ಸರ್ವ ಜನ ಹಿತಾಯ ಎಂಬಂತೆ ಯುಗಾರಂಭದ ಆದಿಗೆ ಹೊಸ ಭಾಷ್ಯ ಬರೆಯುವ ಶಕ್ತಿ ಚೈತನ್ಯ ನಮ್ಮದಾಗಲಿ. ಎಲ್ಲರ ಸಂತೋಷದಲ್ಲಿ ಭಾಗಿಗಳಾಗುವ, ದುಃಖಗಳಿಗೆ ಹೆಗಲಾಗುವ ನವ ಸಮಾಜ ನಿರ್ಮಾಣ ಈ ಯುಗಾದಿಯ ಆಶಯವಾಗಲಿ ಎಂಬ ಆಶಯದೊಂದಿಗೆ…
ಬೇವು ಬೆಲ್ಲ- ಸುಖ ದುಃಖಗಳ ಸಂಕೇತ
ಯುಗಾದಿ ಹಿಂದೂಗಳಿಗೆ ಹೊಸ ವರ್ಷ. ಈ ದಿನ ಮನೆ ಮಂದಿ, ಸಂಬಂಧಿಕರಿಗೆಲ್ಲ ಬೇವು ಬೆಲ್ಲ ಹಂಚುವುದು ವಿಶೇಷ. ಜೀವನದಲ್ಲಿ ಸುಖ ದುಃಖವನ್ನು ಒಂದೇ ರೀತಿಯಲ್ಲಿ ತೆಗೆದುಕೊಳ್ಳಬೇಕು. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ನಡೆಯಬೇಕು. ಸುಖ ದುಃಖವನ್ನು ಸಮಾನವಾಗಿ ಬೇವು ಬೆಲ್ಲದಂತೆ ಸ್ವೀಕರಿಸಬೇಕು ಎಂಬ ಸಂದೇಶದೊಂದಿಗೆ ಹಂಚುತ್ತಾರೆ.
ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ತಿನ್ನುವುದರ ಮೂಲಕ ಆಚರಿಸುತ್ತಾರೆ. ಇನ್ನೂ ಕೆಲವೆಡೆ ಬೇವು ಬೆಲ್ಲವನ್ನು ಆರು ರಸಗಳನ್ನು ಸೇರಿಸಿ ತಯಾರಿಸುತ್ತಾರೆ. ಬೇವಿನ ಮೊಗ್ಗುಗಳು ಅಥವಾ ಕಹಿ ಹೂಗಳು ದುಃಖದ ಸಂಕೇತವಾಗಿದೆ. ಬೆಲ್ಲ ಮತ್ತು ಮಾಗಿದ ಬಾಳೆ ಸಂತೋಷದ ಸಂಕೇತ. ಹಸಿರು ಮೆಣಸಿನ ಕಾಯಿ ಅಥವಾ ಮೆಣಸು ಖಾರದ ರುಚಿಯನ್ನು ಹೊಂದಿದ್ದು ಕೋಪದ ಸಂಕೇತ. ಉಪ್ಪು ಭಯದ ಸಂಕೇತ, ಹುಣಿಸೆಹಣ್ಣು ವಾಕರಿಕೆ ತರಿಸುವಂತಹ ಸಂದರ್ಭದ ಸಂಕೇತ. ಬಲಿಯದ ಮಾವಿನ ಕಾಯಿ ಒಗರಿನ ಗುಣ ಹೊಂದಿದ್ದು ಇದು ಅಹಿತಕರ ಸಂದರ್ಭದ ಸಂಕೇತವಾಗಿದೆ. ಜೀವನದಲ್ಲಿ ಬರುವ ಎಲ್ಲ ಘಟನೆಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದು ಇತರ ತಾತ್ಪರ್ಯ ವೈಜ್ಞಾನಿಕ ಮಹತ್ವ ಪ್ರತಿಯೊಂದು ಆಚರಣೆಗಳ ಹಿಂದೆ ಒಂದು ಕಾರಣ, ಸಂದೇಶ ಇದ್ದೇ ಇರುತ್ತದೆ. ಯುಗಾದಿಯ ಬೇವು ಬೆಲ್ಲ ಆಚರಣೆಯು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಔಷಧೀಯ ಸಸ್ಯವಾಗಿದ್ದು, ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದೆ. ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವು ಪ್ರೋಟಿನ್ ಮತ್ತು ಖನಿಜಾಂಶವನ್ನು ಹೊಂದಿದೆ.
ಎಳೆತಾದ ಬೇವಿನ ಹೂವುಗಳನ್ನು ಬೆಲ್ಲದ ಪುಡಿಯೊಂದಿಗೆ ಸೇರಿಸಿ ಸವಿಯುವುದು ಪದ್ಧತಿ. ಬೇವಿನ ಹೂವಿನ ಚಿಗುರು, ಬೆಲ್ಲದ ಪುಡಿ, ಹಸಿ ಹುಣಸೆಹಣ್ಣು, ಮಾವಿನ ಕಾಯಿಯ ತುರಿ ಮಿಶ್ರ ಮಾಡಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಮತ್ತು ಕೋಪ ಕಡಿಮೆ ಮಾಡಲು ಇದು ಸಹಕಾರಿ. ಮನಸ್ಸಿಗೆ ಹರ್ಷ ನೀಡಿ ಚಟುವಟಿಕೆಯಿಂದಿರಲು, ದೇಹಕ್ಕೆ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವು ಬೆಲ್ಲವನ್ನು ಊಟದ ಮೊದಲು ಸವಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಪಂಚಾಂಗ ಶ್ರವಣದ ಮಹತ್ವ
ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಹಬ್ಬದ ವೈಶಿಷ್ಟé ಹಾಗೂ ಸಂಪ್ರದಾಯ. ಅಂದು ಮಧ್ಯಾಹ್ನ ಅಥವಾ ಸಂಜೆ ಹಳ್ಳಿಗಳಲ್ಲಿ ಆಲದ ಮರದ ಕೆಳಗೆ, ದೇವಸ್ಥಾನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಂಗ ಪಠಣ, ಸಾಮೂಹಿಕ ಶ್ರವಣ ನಡೆಯುತ್ತದೆ. ಇದು ಮಹಾಭಾರತದ ಕಾಲದಿಂದಲೂ ನಡೆದು ಕೊಂಡು ಬಂದಿದೆ.
ಚಂದ್ರನ ಸ್ಥಾನ, ವಿವಿಧ ರಾಶಿ, ಗೃಹಗಳ ಸ್ಥಿತಿಗತಿ ಮುಂತಾದ ವಿಷಯಗಳ ಜತೆಗೆ ಧರ್ಮ, ಭಗವದ್ಗೀತೆ, ಪುರಾಣಗಳ ಸಾರವನ್ನು ತಿಳಿಸುವ ಅದ್ಭುತ ಕಾರ್ಯವೇ ಈ ಪಂಚಾಂಗ ಶ್ರವಣ. ಇದು ಹನುಮನ ದೇಗುಲದಲ್ಲಿ ಹೆಚ್ಚಾಗಿ ನಡೆಯುತ್ತದೆ. ಈ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವಾಗ ಸಂಪತ್ತು, ಆಯುಷ್ಯ ವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ನಾಶ, ಕರಣದಿಂದ ಚಿಂತಿಸುವ ಕಾರ್ಯದಲ್ಲಿ ಸಿದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಇದರಲ್ಲಿ ರಾಶಿ ಭವಿಷ್ಯದಿಂದ ಹಿಡಿದು ಮಳೆ ಬೆಳೆ, ಆಯವ್ಯಯ, ಭವಿಷ್ಯ, ಯುದ್ಧ, ಶಾಂತಿ, ಹೀಗೆ ಮನುಕುಲದ ಒಳಿತು ಅಡಗಿರುವ ವಿಚಾರಗಳೇ ಪ್ರಮುಖವಾಗಿರುತ್ತದೆ.
ಬೇವಿನ ಎಲೆಗಳ ಆಯ್ಕೆ
ಬೇವಿನಲ್ಲಿ ನಾನಾ ಬಗೆಗಳಿವೆ. ಕಾಡುಬೇವು, ಸಿಹಿಬೇವು ಇತ್ಯಾದಿ. ಕಾಡುಬೇವು ಒರಟಾದ ಎಲೆಯಾಗಿದ್ದು, ಕಹಿಯೊಂದಿಗೆ ಸ್ವಲ್ಪ ಒಗರಾಗಿರುತ್ತದೆ. ಸಿಹಿಬೇವು ರುಚಿಯಾಗಿರುತ್ತದೆ ಮತ್ತು ಎಲೆಗಳು ತೆಳುವಾಗಿ ತಿಳಿ ಹಸಿರಾಗಿರುತ್ತದೆ. ಸಾಮಾನ್ಯವಾಗಿ ಸಿಹಿಬೇವು ಸವಿಯಲು ಉತ್ತಮ.
ಬೆಲ್ಲ ಹೀಗಿರಲಿ
ಕೆಂಪಾದ ಬಂಗಾರದ ಬಣ್ಣದ ಆಕರ್ಷಕ ಬೆಲ್ಲದ ಅಚ್ಚುಗಳು ಹೆಚ್ಚಾಗಿ ಆಕರ್ಷಕವಾಗಿ ಕಾಣುತ್ತದೆ. ಆದರೆ ಇವುಗಳು ಹೆಚ್ಚು ಸುಣ್ಣದ ಅಂಶವನ್ನು ಹೊಂದಿದ್ದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ. ಕಪ್ಪಾದ ಕಡು ಕೆಂಪು ಬಣ್ಣದ ಆರ್ಗಾನಿಕ್ ಬೆಲ್ಲ ಉತ್ತಮವಾದುದು.
– ಮಾಹಿತಿ: ಜಯಾನಂದ ಅಮೀನ್, ಪ್ರಸನ್ನ ಹೆಗಡೆ ಊರಕೇರಿ, ರಂಜಿನಿ ಮಿತ್ತಡ್ಕ, ಭುವನ ಬಾಬು ಪುತ್ತೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್