ಸುವಸ್ತುಗಳ ಕಣಿ ನೋಡುವುದೇ ವಿಶೇಷ
ಎಲ್ಲರಿಗೂ ವಿಷು ಹಬ್ಬದ ಹಾರ್ದಿಕ ಶುಭಾಶಯಗಳು...
Team Udayavani, Apr 15, 2019, 7:00 PM IST
ವಿಷು ಹಬ್ಬದ ದಿನದಂದು ಸುವಸ್ತುಗಳ ಕಣಿ ನೋಡುವುದಕ್ಕೆ ಹೆಚ್ಚಿನ ಪ್ರಾಮುಖ್ಯವಿದೆ. ಯಾಕೆಂದರೆ ಅದು ಸೌರಮಾನ ಆಚರಿಸುವ ತುಳುನಾಡಿಗರಿಗೆ ಹೊಸ ವರ್ಷದ ಮೊದಲ ದಿನವಾದ ಇಂದು ಸಮೃದ್ಧಿಯ ಸಂಕೇತವಾದ ಕಣಿ ನೋಡುವುದರಿಂದ ಆರಂಭವಾಗಲಿ.ವರ್ಷ ಪೂರ್ತಿ,ಬೆಳೆ, ಸಂಪತ್ತು ಸಮೃದ್ಧವಾಗಲಿ ಎಂಬ ಆಶಯ ಇದರಲ್ಲಿ ಅಡಗಿದೆ.
ಸೌರ ಯುಗಾದಿ ಅಥವಾ ಕರಾವಳಿ ಭಾಗದ ಜನರಿಗೆ ಹೊಸ ವರ್ಷ ಆರಂಭವಾಗುವ ದಿನವೇ ವಿಷು. ಸೂರ್ಯನ ಚಲನೆಯನ್ನಾಧರಿಸಿ ಸೌರಮಾನ ಯುಗಾದಿ ಯನ್ನು ಆಚರಿಸುತ್ತಾರೆ.ವಿಷು ಅಥವಾ ಬಿಸು ಎಂದೇ ಪ್ರಚಲಿತವಾಗಿರುವ ಈ ಹಬ್ಬದಂದು ದೇವರಿಗೆೆ ಕಣಿ ಇಡುವುದು ವಿಶೇಷ.ಸುಗ್ಗಿಯ ಕಾಲ ಮುಗಿದು ತುಳು ತಿಂಗಳಿನ ಪಗ್ಗು ಆರಂಭವಾಗುವ ದಿನವನ್ನು ವಿಷುವಾಗಿ ಆಚರಿಸುತ್ತಾರೆ. ಕುಟುಂಬದವರೆಲ್ಲ ಒಗ್ಗಟ್ಟಾಗಿ ಕೂಡಿ ಒಟ್ಟಿಗೆ ಹಬ್ಬವನ್ನು ಆಚರಿಸುವುದು ವಿಷುವಿನ ವಿಶೇಷತೆ. ವಿಷು ಎಂಬ ಶಬ್ದ ಸಂಸ್ಕೃತ ಪದವಾಗಿದೆ. ವಿಶ್ವದ್ ಎಂಬ ಶಬ್ದದಿಂದ ವಿಷು ಹುಟ್ಟಿಕೊಂಡಿದೆ. ವಿಶ್ವದ್ ಎಂದರೆ ರಾತ್ರಿ ಮತ್ತು ಹಗಲು ಸಮಾನವಾಗಿರುವ ದಿನ ಎಂದರ್ಥ. ವಿಷುವಿನ ದಿನ ಮಾತ್ರ ಈ ವಿಶೇಷತೆ ಸಂಭವಿಸುತ್ತದೆ. ಅದು ಸಮಾನತೆಯ ಸಂಕೇತ. ಆದುದರಿಂದಲೇ ವಿಷು ಸಮಾನತೆಯ ಹಬ್ಬ ಎಂದು ಕರೆಯಲ್ಪಡುತ್ತದೆ.
ವಿಷು ಕೇವಲ ಕರಾವಳಿ ಭಾಗದ ಜನರಿಗೆ ಮಾತ್ರ ಹಬ್ಬವಲ್ಲ. ಬದಲಾಗಿ ಕೇರಳ ರಾಜ್ಯಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ. ಪಂಜಾಬ್ನಲ್ಲಿ ಬೈಸಾಕ್ ಎಂಬ ಹೆಸರಿನಲ್ಲಿ ವಿಷುವನ್ನು ಆಚರಿಸಲಾಗುತ್ತದೆ.
ಕೇರಳದ ವಿಷು ಮತ್ತು ತುಳುನಾಡಿನ ಬಿಸು ಆಚರಣೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಕೆಲವು ಆಚಾರಗಳಲ್ಲಿ ಭಿನ್ನತೆಯಿದ್ದರೂ ಮೂಲ ಸಂಪ್ರದಾಯ ಹಾಗೆ ಇದೆ. ವಿಷುವಿನ ಮತ್ತೂಂದು ವಿಶೇಷತೆ ಊಟ. ಸಿಹಿತಿಂಡಿಗಳ ಜತೆ ಹಲವಾರು ಬಗೆಯ ತರಕಾರಿ ಖಾದ್ಯಗಳಿಂದ ತಯಾರಿಸಲ್ಪಡುವ ವಿಷು ಊಟ “ಓಣಂ ಸದ್ಯದ’ ರೀತಿ ಇರುತ್ತದೆ. ಇತ್ತೀಚೆಗೆ ತರಕಾರಿ ಖಾದ್ಯಗಳ ಜಾಗವನ್ನು ಮಾಂಸಹಾರಿ ಖಾದ್ಯಗಳು ಆಕ್ರಮಿಸಿಕೊಂಡಿವೆ. ಈ ದಿನ ಹಳ್ಳಿಗಳಲ್ಲಿ ಜಾತಿ, ಮತ, ಭೇದವನ್ನು ಮರೆತು ಎಲ್ಲರ ಮನೆಗಳಿಗೆ ತೆರಳಿ ವಿಷು ಕಣಿ ನೋಡಿ, ಆಹಾರ ಸೇವಿಸಿ ಬರುವ ಪದ್ಧತಿಯಿದೆ. ಯಾವುದೇ ಕೋಪ, ಜಗಳಗಳಿಗೆ ಈ ದಿನ ಅವಕಾಶವಿಲ್ಲ.
ಕಣಿ ಇಡುವ ವಸ್ತುಗಳು
ದೇವರ ಕೋಣೆ ಅಥವಾ ನಡುಮನೆಯಲ್ಲಿ ಮಣೆಯ ಮೇಲೆ ಮಡಿ ಹಾಕಿ ಕಣಿಯ ನ್ನಿಡುತ್ತಾರೆ. ದೀಪ ಹಚ್ಚಿಟ್ಟು 2 ತುದಿ ಬಾಳೆ ಎಲೆಯ ಮೇಲೆ 1ಸೇರು ಅಕ್ಕಿ, 5 ವೀಳ್ಯದೆಲೆ, ಒಂದು ಅಡಿಕೆ, ಒಂದು ತೆಂಗಿನಕಾಯಿ, ತೇದ ಗಂಧ, ಗಂಧದ ಕಡ್ಡಿಯನ್ನು ಉರಿಸಿಡಬೇಕು. ಇದರ ಮುಂಭಾಗದಲ್ಲಿ ಮನೆಯಲ್ಲಿ ಬೆಳೆದ ಹಣ್ಣು ತರಕಾರಿ, ಚಿನ್ನದ ಆಭರಣ, ಕನ್ನಡಿಯನ್ನಿಡಬೇಕು. ವಿಷುವಿನಂದು ಬೆಳಗ್ಗೆದ್ದು ಎಲ್ಲ ಕೆಲಸಕ್ಕಿಂತ ಮೊದಲು ಕಣಿಯನ್ನು ನೋಡಬೇಕೆನ್ನುವುದು ಸಂಪ್ರದಾಯ.
ಕೊನ್ನೆ ಹೂ ವಿಶೇಷ
ಕಣಿ ಇಡುವುದು ವಿಷು ಹಬ್ಬದ ಪ್ರಮುಖ ಆಚರಣೆ. ಹಲವಾರು ಬಗೆಯ ಹಣ್ಣು, ತರಕಾರಿಗಳನ್ನು ಸಮೃದ್ಧಿಯ ಸಂಕೇತವಾಗಿ ಇಡುವ ಜತೆಗೆ ಹಳದಿ ಬಣ್ಣದ ತುಳುವಿನಲ್ಲಿ ಕೊನ್ನೆಹೂ ಎಂದು ಕರೆಯುವ ಹೂ ಇಡುವುದು ವಿಶೇಷ. ವಿಷು ಹಬ್ಬದ ಹಿಂದಿನ ದಿನ ಮನೆಯ ಹಿರಿಯ ಮಹಿಳೆ ಈ ಹೂವಿನೊಂದಿಗೆ ಹಣ್ಣು, ತರಕಾರಿ, ಚಿನ್ನಗಳನ್ನು ಒಪ್ಪ ಓರಣವಾಗಿ ಸಿಂಗರಿಸುವುದು ಪದ್ಧತಿ. ಹೀಗೆ ಸಿಂಗರಿಸಿದ ಕಣಿಯನ್ನು ಮರುದಿವಸ ಬೆಳಗ್ಗೆ ಮನೆಯವರೆಲ್ಲ ಮೊದಲು ನೋಡುತ್ತಾರೆ. ಕೊನ್ನೆ ಹೂ ಇಲ್ಲದೆ ವಿಷು ಆಚರಣೆಯು ಅಪೂರ್ಣ.
ವಿಷು ಕಣಿ: ಗಣಪತಿ ಅಥವಾ ಕೃಷ್ಣ ದೇವರಿಗೆ ಕಣಿ ಇಡುವುದು ವಿಷುವಿನ ದೊಡ್ಡ ವಿಶೇಷತೆಗಳಲ್ಲಿ ಒಂದಾಗಿದೆ. ಸುಗ್ಗಿ ಕಾಲವಾದುದರಿಂದ ಎಲ್ಲ ಫಲ ವಸ್ತುಗಳ ಕೊಯ್ಲಿನ ಸಮಯ. ಕೃಷಿಯೇ ಪ್ರಧಾನ ಕಾಯಕವಾಗಿರುವ ಕರಾವಳಿ ಭಾಗದ ಜನರಿಗೆ ತಮ್ಮ ಫಸಲನ್ನು ಮೊದಲು ದೇವರಿಗೆ ಅರ್ಪಿಸುವುದರಲ್ಲಿ ಏನೋ ಖುಷಿ. ಹಾಗೇ ತಮ್ಮ ಭೂಮಿಯಲ್ಲಿ ಬೆಳೆದ ಫಲ ವಸ್ತುಗಳನ್ನು ವಿಷುವಿನಂದು ಕಣಿ ಇಡುತ್ತಾರೆ.
ಹಿರಿಯರ ಆಶೀರ್ವಾದ ಮತ್ತು ಉಡುಗೊರೆ
ವಿಷುವಿನಂದು ಮನೆಯ ಕಿರಿಯರೆಲ್ಲ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಹೊಸ ವರ್ಷದಂದು ಎಲ್ಲ ತೊಂದರೆಗಳು ದೂರ ವಾಗಿ ಖುಷಿಖುಷಿಯಾಗಿರುವಂತೆ ಆಶೀರ್ವಾದ ಮಾಡು ತ್ತಾರೆ. ಜತೆಗೆ ವಿಷು ಕಾಣಿಕೆ ಅಥವಾ ಉಡುಗೊರೆಗಳನ್ನು ನೀಡುತ್ತಾರೆ. ಹಿರಿಯರು ತಮ್ಮ ಕಾಲಿಗೆರಗಿದ ಕಿರಿಯರನ್ನು ಹಣ ಅಥವಾ ಉಡುಗೊರೆ ನೀಡಿ ಮುದಗೊಳಿಸುತ್ತಾರೆ. ಎಪ್ರಿಲ್ ನಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಜಾತ್ರೆ, ಹಬ್ಬ, ನೆಂಟರ ಮನೆಗಳಿಗೆ ತೆರಳಲು ಸಹಾಯ ವಾಗಲೆಂದು ಈ ಹಣವನ್ನು ಹಿಂದೆ ನೀಡುತ್ತಿದ್ದರು. ಆದರೆ ಇಂದು ಅದು ಕೇವಲ ಆಚರಣೆಯಾಗಿ ಉಳಿದಿದೆ.
ಬಿಸುತಾನಿ ಬರೆ ಒಯಿಪುನೆ
ವಿಷು ಹಬ್ಬದ ದಿನವನ್ನು ಶುಭ ದಿನವೆಂದೇ ಪರಿಗಣಿಸಲಾ ಗುತ್ತದೆ. ಆದುದರಿಂದ ಕೃಷಿ ಕಾರ್ಯಗಳಿಗೆ ಹೆಚ್ಚಾಗಿ ಈ ದಿನದಂದು ಚಾಲನೆ ನೀಡುತ್ತಾರೆ. ಎತ್ತು ಅಥವಾ ಕೋಣಗಳಿಂದ ಭೂಮಿಯನ್ನು ಉಳುತ್ತಿದ್ದ ಹಿಂದಿನ ಕಾಲದಲ್ಲಿ ಶಾಸ್ತ್ರಕ್ಕಾಗಿ ಈ ದಿನದಂದು ಮನೆಯ ಹಿರಿಯರು ಕೋಣಗಳನ್ನು ನೊಗ ನೇಗಿಲು ಸಮೇತ ಗದ್ದೆಗೆ ಇಳಿಸಿ 3 ಗೆರೆಗಳನ್ನು ಹಾಕುತ್ತಾರೆ. ಅನಂತರ ಅಲ್ಲಿಗೆ ಗೊಬ್ಬರಗಳನ್ನಿಟ್ಟು ಹೋಗುವ ಪದ್ಧತಿಯಿದೆ. ಮುಂದೆ ಕೃಷಿ ಚಟುವಟಿಕೆಗಳನ್ನು ಮಳೆಗಾಲದಲ್ಲಿ ಆರಂಭಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ ಈ ದಿನ ಬಿತ್ತನೆಯ ಕೆಲಸವನ್ನು ಆರಂಭಿಸುತ್ತಾರೆ.
– ಸುಶ್ಮಿತಾ ಶೆಟ್ಟಿ ,ರಂಜಿನಿ ಮಿತ್ತಡ್ಕ
ವಿನ್ಯಾಸ: ರಾಕೇಶ್ ಸುವರ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!