ಇದು ಯುಗದ ಆದಿ ಸಂಭ್ರಮಕ್ಕೆ ಹಾದಿ
Team Udayavani, Apr 1, 2019, 2:46 PM IST
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ಆಧರಿಸಿಯೇ ಹಬ್ಬ-ಹರಿದಿನಗಳು ಬರುವವು. ಪ್ರಪಂಚಕ್ಕೆಲ್ಲ ಸಂಸ್ಕಾರಗಳ ಹಿರಿಮೆಯನ್ನು ತೋರಿಸಿಕೊಟ್ಟ ಕೀರ್ತಿ ನಮ್ಮ ಭಾರತೀಯ ಸಂಸ್ಕಾರವೆಂದು ಹೆಮ್ಮೆಯಿಂದ ಹೇಳಬಹುದು. ಹೊಸ ಸಂವತ್ಸರದ ಆದಿಯೇ “ಯುಗಾದಿ’. ಮುಂದೆ ವರ್ಷಪೂರ್ತಿ ಹಬ್ಬಗಳು ಆಯಾ ಮಾಸದಲ್ಲಿ ಬಂದು, ಮನುಜನಿಗೆ ಬಾಳಿನಲ್ಲಿ ಹೊಸ ಚೈತನ್ಯವನ್ನು ತರುವವು.
ಋತುಗಳ ರಾಜ ವಸಂತನ ಆಗಮನ
ಪ್ರಕೃತಿಯಲ್ಲಿ ನಮಗರಿಯದಂತೆ ಆಗುವ ಅನಂತ ಬದಲಾವಣೆ,ಹೊಸ ಹೂವಿನ ಘಮಘಮ, ದಾರಿಯುದ್ದಕ್ಕೂ ನಿಂತಿರುವ ಗಗನ ಮಲ್ಲಿಗೆ, ಗುಲಮೊಹರ ಮುಂತಾದ ಹೂವಿನ ಗೊಂಚಲುಗಳಿಂದ ತುಂಬಿದ ಗಿಡಮರಗಳು, ಹೂಗಳಿಂದ ಬಿರಿದ ಹೊಂಗೆಮರಗಳ ಸಾಲು, ಭೂದೇವಿಯ ಪಾದಕ್ಕೆ ಮುತ್ತಿನಂತಹ ಹೂಗಳನ್ನು ಉದುರಿಸಿ, ಕೃತಜ್ಞತೆಯನ್ನು ತೋರಿಸುತ್ತಿವೆಯೇನೋ ಎಂದು ಅನಿಸುವುದು.
ಹೂವಿನ ಮಕರಂದವನ್ನು ಹೀರುವ ಭ್ರಮರಗಳ ಝೇಂಕಾರ,ಮಾಮರದ ಚಿಗುರೆಲೆಗಳ ನಡುವೆ ಅಡಗಿ ಕುಳಿತ ಕೋಗಿಲೆಯ “ಕುಹೂ ಕುಹೂ’ ಇಂಪಾದ ಧ್ವನಿಯ ಇಂಚರ, ಆಹಾ! ಈ ಮನಮೋಹಕ ದೃಶ್ಯವು ಸಹಜವಾಗಿಯೇ ನಮ್ಮ ಮೈಮನ ನವಿರೇಳಿಸಿ, ನಮ್ಮನ್ನು ಗಂಧರ್ವಲೋಕಕ್ಕೆ ಕರೆದೊಯ್ಯುವವು. ಪ್ರಕೃತಿಮಾತೆಯು ಹಸಿರು ಬಣ್ಣದ ಸೀರೆಯನ್ನುಟ್ಟು ಬಣ್ಣ ಬಣ್ಣದ ಹೂಗಳ ಮಾಲೆಯನ್ನು
ಮುಡಿದು, ಸೃಷ್ಟಿಯ ಸೊಬಗಿನ ರಂಗಮಂಚವನ್ನು ಸಿದ್ಧಪಡಿಸಿ, ನಸುನಾಚುತ್ತ ನಿಂತ ಮುನ್ನ ಸೂಚನೆ ತೋರಿತೆಂದರೆ, ಋತುಗಳ ರಾಜ ವಸಂತನ ಆಗಮನ ಆಯಿತೆಂದೇ ಅರ್ಥ. ಹಣ್ಣೆಲೆಗಳು ಮರದಿಂದ ಉರುಳಿ, ಕೆಂದೂಳಿಯಿಂದ ತರಗೆಲೆಗಳು ಹಾರಾಡಿ, ಕಾಡಿನ
ದಾರಿಯುದ್ದಕ್ಕೂ ಹರಡಿದರೆ, ಹೌದು, ಆಗಾಗ್ಗೆ ನಾವು ಚೈತ್ರದ ಆಗಮನ ಆಯಿತೆಂದುಕೊಳ್ಳಲೇಬೇಕು. ಈ ಹೊಸ ಹೊರಳಿನ (ಬದಲಾವಣೆಯ) ಮೊದಲ ದಿನ, ಹೊಸ ವರ್ಷದ ಆರಂಭದ ಯುಗಾದಿ ಮರಳಿ ಬಂತೆಂದು ತಿಳಿದು ನಾವು ಸಂತಸ ಪಡುತ್ತೇವೆ. ವಸಂತನು ಬಂದು ಸಸ್ಯಶ್ಯಾಮಲೆಯನ್ನು ಸ್ಪರ್ಶಿಸಿ, ಚಿಗುರು ಮೂಡಿಸುವ, ಸೃಷ್ಟಿಯ ಹೊಸ
ಹುಟ್ಟನ್ನು ಸಂಭ್ರಮಿಸುವ ಹೊತ್ತನ್ನೇ ವರ್ಷಾರಂಭ, ಚೈತ್ರಮಾಸದ ಮೊದಲ ಶುಭದಿನವೆಂದು ಆಚರಿಸುವ ಸಂಪ್ರದಾಯವು ನಮ್ಮದಾಗಿದೆ.ವಸಂತಕಾಲವೆಂದರೆ ಪ್ರಕೃತಿಯಲ್ಲಿ ನವಚೈತನ್ಯ ತುಂಬಿ, ಹೊಸ ವರ್ಷದ ಆರಂಭ, ಯುಗಾದಿಯ ಪರ್ವದಿನದ ಶುಭ ಸಂಕೇತವೆಂದು ಹೇಳಬಹುದು.
*ಉಷಾ ವ್ಹಿ. ಅಗರಖೇಡಿ