ಬೇವು-ಬೆಲ್ಲದ ಸೇವನೆಯ ಯುಗಾದಿಯ ಮಹತ್ವ
Team Udayavani, Apr 1, 2019, 2:55 PM IST
ಭಾರತೀಯರಲ್ಲಿ ಹೊಸ ವರ್ಷದ ಆರಂಭದ ದಿನಗಳನ್ನು ಎರಡು ರೀತಿಯಲ್ಲಿ ನಿರ್ಧರಿಸಲಾಗುತ್ತದೆ. ಸೌರಮಾನ ಯುಗಾದಿ ಮತ್ತು ಚಾಂದ್ರಮಾನ ಯುಗಾದಿ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಾಂದ್ರಮಾನ ಯುಗಾದಿಯೆಂದೂ ಹಾಗೂ ಸೂರ್ಯ ಗತಿ ಆಧರಿಸಿ ಎಣಿಕೆ ಮಾಡುವ ಪದ್ಧತಿಯನ್ನು ಸೌರಮಾನ ಯುಗಾದಿಯೆಂದು ಹೇಳುವರು. ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಗೆ ಚಾಂದ್ರಮಾನ ಯುಗಾದಿಯೆಂದು ಆಚರಿಸಲಾಗುವುದು. ತಮಿಳುನಾಡು, ಕೇರಳದಲ್ಲಿ ಸೌರಮಾನ “ಬಿಸು’ವಿನ ಆಚರಣೆ ಇರುವುದು. ಒಟ್ಟಿನಲ್ಲಿ ಹಬ್ಬದ ಹೆಸರು,ಪದ್ಧತಿಯು ಬೇರೆ ಬೇರೆ ಇದ್ದರೂ, ಭಾರತದ ಎಲ್ಲ ಕಡೆಗೂ “ಯುಗಾದಿ’ ಹಬ್ಬವನ್ನು ಸಂಭ್ರಮದಿಂದ ಆಚರಿಸುವರು.
ಯುಗವೆಂದರೆ ಸೃಷ್ಟಿಯ ಕಾಲಮಾನ. ಬ್ರಹ್ಮದೇವರು ಈ ವಿಶ್ವವನ್ನು ಚೈತ್ರ ಶುದ್ಧ ಪಾಡ್ಯದಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನೆಂದು “ಬ್ರಹ್ಮಾಂಡ ಪುರಾಣ’ದಲ್ಲಿ ಹೇಳಿದೆ. ಅಂದಿನಿಂದಲೇ ಬ್ರಹ್ಮನ ಲೆಕ್ಕಚಾರದ ಸಂವತ್ಸರ, ತಿಥಿ, ಕಾಲಗಣನೆ, ನಕ್ಷತ್ರ, ಋತು, ವರ್ಷ ಪ್ರಾರಂಭವಾಯಿತೆಂದು ತಿಳಿದುಬರುವುದು. ನಮ್ಮ ” ಪಂಚಾಂಗ’ಗಳು ನಿಖರವಾಗಿ ಇದನ್ನೇ ಹೇಳುವವು. ಶ್ರೀರಾಮನು ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಬಂದು ರಾಜ್ಯವಾಳಲು ಪ್ರಾರಂಭಿಸಿದ್ದು ಯುಗಾದಿಯಂದೇ ಎಂದು ಹೇಳುವರು. ಶಾಲಿವಾಹನ ರಾಜನು ಈ ದಿನ ಸಿಂಹಾಸನಾರೂಢನಾದನೆಂದು, ಆಗಿನಿಂದ ಶಾಲಿವಾನ ಶಕೆಯು ಪ್ರಾರಂಭವಾಯಿತೆಂದು ಹೇಳಿಕೆ ಇದೆ. ವೇದಗಳ ಕಾಲದಿಂದಲೂ ಯುಗಾದಿಯ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಅಥರ್ವಣವೇದ, ಧರ್ಮಸಿಂಧು ಮುಂತಾದ ಶಾಸ್ತ್ರಗ್ರಂಥಗಳಲ್ಲಿ ಈ ಹಬ್ಬದ ಬಗ್ಗೆ ಸಾಕಷ್ಟು ವಿವರಣೆ ಇದೆ.
ಯುಗಾದಿ ಆಚರಣೆ
ಚೈತ್ರಶುದ್ಧ ಪ್ರತಿಪದೆಯಂದು ವರ್ಷಾರಂಭದ ಸಂಕೇತವಾದ ಯುಗಾದಿ ಹಬ್ಬವು ಶುಭ ದಿನವಾಗಿರುವುದು. ಆ ದಿನ ಶಾಸ್ತ್ರದ ಮತ್ತು ಪಂಚಾಂಗದ ಪ್ರಕಾರ ಅತ್ಯಂತ ಶುಭದಿನ, ಶುಭ ಮೂಹೂರ್ತ. ಮೂರೂವರೆ ಮುಹೂರ್ತದ ನಾಲ್ಕು ತಿಥಿಗಳಲ್ಲಿಯೇ ಯುಗಾದಿಯು ಅತೀ ಶ್ರೇಷ್ಠವೆನಿಸಿದೆ. (ವಿಜಯದಶಮಿ, ಬಲಿಪಾಡ್ಯ, ಅಕ್ಷಯ ತೃತೀಯಾ) ಪೌರ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೋ ಅದನ್ನು ಅನುಸರಿಸಿ ಆ ತಿಂಗಳ ಹೆಸರು ಬರುವುದು.
ಚಿತ್ರಾ ನಕ್ಷತ್ರದಿಂದ ಚೈತ್ರಮಾಸದ ಹೆಸರು ಬಂದಿದೆ. ಇನ್ನು ಯುಗಾದಿ ಹಬ್ಬದ ಆಚರಣೆಯ ಬಗ್ಗೆ ಹೇಳಬೇಕೆಂದರೆ, ಮನೆ ಬಾಗಿಲಿಗೆ ಮಾವಿನ ತಳಿರುತೋರಣ, ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ, ಬೇವಿನ ಎಲೆಗಳನ್ನು ಬಿಸಿನೀರಿನಲ್ಲಿ ಬೇಯಿಸಿ ಅಭ್ಯಂಗಸ್ನಾನ, ನಂತರ ಮನೆಯವರೆಲ್ಲರೂ ಸೇರಿ, ದೇವರನ್ನುಪೂಜಿಸಿ, ಹೊಸವರ್ಷ ಸುಖ-ಸಮೃದ್ಧಿ ನೀಡಲೆಂದು ಪ್ರಾರ್ಥಿಸಿ ಭಗವಂತನಿಗೆ ನಮಿಸುವುದು. ಗುರು-ಹಿರಿಯರಿಗೆ, ಹೆತ್ತವರಿಗೆ ನಮಸ್ಕರಿಸಿ, ಆಶೀರ್ವಾದವನ್ನು ಪಡೆಯುವುದು. ನಂತರ ಗುರುಗಳಿಂದ (ಆಚಾರ್ಯರಿಂದ) ಪಂಚಾಂಗ ಶ್ರವಣ-ಮುಂದಿನ ಆಗುಹೋಗುಗಳು, ಹಬ್ಬ-ಹರಿದಿನಗಳ ಮಾಹಿತಿ, ಮಳೆ-ಬೆಳೆಗಳ ಬಗ್ಗೆ, ಗ್ರಹಗತಿಗಳ ಬಗ್ಗೆ ತಿಳಿದುಕೊಳ್ಳುವುದು. ಇನ್ನೊಂದು ಯುಗಾದಿಯ ಮಹತ್ವದ ವೈಶಿಷ್ಟವೆಂದರೆ, ಬೇವು-ಬೆಲ್ಲದ ಸೇವನೆ.
ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
ನೂರು ವರ್ಷಗಳ ಆಯುಷ್ಯ, ಆರೋಗ್ಯ, ಸದೃಢ ಶರೀರ, ಸಕಲ ಸಂಪತ್ತಿನ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲವನ್ನು ಸ್ವೀಕರಿಸಬೇಕೆಂದು ಹೇಳಿದೆ. ಹೊಸವರ್ಷದಲ್ಲಿ ಬರುವ ಸುಖ-ದುಃಖದ ಏರಿಳಿತವನ್ನು ಸಮವಾಗಿ ಸ್ವೀಕರಿಸಬೇಕೆಂದು, ಅಲ್ಲದೇ ಖಗೋಳ ಶಾಸ್ತ್ರದ ಪ್ರಕಾರ ಭೂಮಿ ಸೂರ್ಯನಿಗೆ ಅತೀ ಸಮೀಪ ಹೋಗುವುದರಿಂದ ಬಿಸಿಲಿನ ಬೇಗೆಗೆ ಕೆಲವು ಸಾಂಕ್ರಾಮಿಕ ರೋಗಗಳು ಬರುವವೆಂದು ಗ್ರಹಿಸಿ, ರಾಮಬಾಣದಂತಿದ್ದ ಬೇವು-ಬೆಲ್ಲದ ಸೇವನೆಯ ಸಂಪ್ರದಾಯವನ್ನು ನಮ್ಮ ಪೂರ್ವಿಕರು ಹಾಕಿಕೊಟ್ಟಿದ್ದಾರೆ. ಇನ್ನು ಮನೆಯಲ್ಲಿ ಮಾವಿನಕಾಯಿ ಗೊಜ್ಜು , ಚಿತ್ರಾನ್ನ ಹೋಳಿಗೆ, ಪಾಯಸ ಮುಂತಾದ ಬಗೆಬಗೆಯ ವ್ಯಂಜನಗಳ ಮೃಷ್ಟಾನ್ನ ಭೋಜನ.
ಎಲ್ಲರೂ ಒಟ್ಟಾಗಿ ಕುಳಿತು ಬಾಳೆಎಲೆಯಲ್ಲಿ ಭೋಜನವನ್ನು ಮಾಡುವ ಸಡಗರವಂತೂ ಹೇಳತೀರದು. ಈ ಹಬ್ಬದ ಆಚರಣೆಯು ಕುಟುಂಬದ ಹಿರಿಯರು-ಚಿಕ್ಕವರೊಡನೆ ಉತ್ತಮ ಬಾಂಧವ್ಯವನ್ನು ಹೆಚ್ಚಿಸುತ್ತದೆ. ನಮ್ಮ ಸಂಸ್ಕಾರ-ಸಂಪ್ರದಾಯಗಳನ್ನು ಮುಂದಿನ ತಲೆಮಾರಿನವರೊಂದಿಗೆ ಬೆಸುಗೆಯನ್ನು ಹಾಕುವುದೇ ಈ ಹಬ್ಬದ ವೈಶಿಷ್ಟವಾಗಿದೆ.
ಪಟ್ಟಣದವರಲ್ಲದೇ ಹಳ್ಳಿಗಳಲ್ಲಿ ರೈತಾಪಿ ಜನರೂ, ಸಡಗರದಿಂದ ಈ ಹಬ್ಬವನ್ನು ಆಚರಿಸುವರು. ಎತ್ತುಗಳಿಗೆ ಸಿಂಗರಿಸಿ, ಊರಲ್ಲಿ ಮೆರವಣಿಗೆಯನ್ನು ಮತ್ತು ಹಳ್ಳಿಯ ಕ್ರೀಡೆಗಳಾದ ಕುಸ್ತಿ, ಕಸರತ್ತು ಮುಂತಾದ ಕ್ರೀಡೆಗಳು ನಡೆಯುವವು. ಕೃಷಿಕರು ಯುಗಾದಿಯ ನಂತರವೇ ಕೃಷಿ ಕೆಲಸವನ್ನು ಉತ್ಸಾಹದಿಂದ ಆರಂಭಿಸುವರು. ಜಾನಪದದ ಹಾಡಿನ ಸೊಗಡಿನಲ್ಲಿ ಚೈತ್ರದ ಮಾಧುರ್ಯವು
ಹೀಗಿದೆ-
ಚೈತ್ರಾದ ಚೆಂದಾನ ಏನ್ ಹೇಳಲೇ ಗೆಳೆತೆವ್ವಾ!
ಬನ-ಬನದಾಗೆಲ್ಲಾ ಹೂ-ತೇರು ಹರಿದಾವೋ, ಬಿರಿದಾವೋ
ಗೊಂಡೆ-ಗೊಂಡೆ ಟೊಂಗೆಯಾಗೆ ತುಂಬ್ಯಾವೋ
ಗೊನೆ-ಗೊನೆಯೆಲ್ಲಾನು ತೂಗ್ಯಾವೋ, ಮಾವಿನ ತೋಪಿನಾಗು ಗಿಣಿರಾಯ-ಕೋಗಿಲೆ ಕುಂತು ಪಂಚಾಯತಿ ನಡಿಸ್ಯಾರ ಪ್ರತಿ ವರುಷವು ಯುಗಾದಿಯು ಮತ್ತೆ ಮತ್ತೆ ಮರಳಿ ಬರುವುದು. ಮನುಜನಿಗೆ ಹೊಸ ಚೈತನ್ಯವನ್ನು ಹೊತ್ತು ತರುವುದು.
ವರಕವಿ ಬೇಂದ್ರೆಯವರ “ಯುಗಾದಿ’ ಕವನವನ್ನು ಮನವು ಮೆಲುಕು ಹಾಕುತ್ತಲೇ ಇರುವುದು.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ವರುಷಕ್ಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖೀಲಜೀವ ಜಾತಕೆ, ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೆ ಏತಕೆ?
ಸೃಷ್ಟಿಗಿರುವ ಸೌಕರ್ಯವನ್ನು ಭಗವಂತನು ಜೀವ-ಚೇತನಕೆ
ಏಕೆ ಕರುಣಿಸಿಲ್ಲ? ಎಂಬ ಪ್ರಶ್ನೆ ಕವಿಗಳಂತೆ ನಮಗೂ ಮನದಲ್ಲಿ ಉದ್ಭವಿಸುವುದು. ಆದರೆ ಪ್ರಕೃತಿಯಂತೆ ನಮ್ಮ ಬಾಳೆಂದು, ನಾವು ಈ ತಿರುಳನ್ನು ಅರಿತುಕೊಳ್ಳಬೇಕೆಂದು ಪ್ರಕೃತಿ ಮುಖಾಂತರ ದೇವರು ನಮಗೆ ತೋರಿಸಿಕೊಟ್ಟಿದ್ದಾನೆ. ಮರದ ಹಣ್ಣೆಲೆಗಳು ಉದುರಿ, ಹೊಸದು ಚಿಗಿಯುವುದು, ಹುಟ್ಟು-ಸಾವಿನ ಸಹಜ ಸಂಕೇತವನ್ನು ತೋರಿಸುವುವು. ಹೂಗಳು ಅಲ್ಪಾಯುಷಿಗಳಾದರೂ, ಸುಗಂಧವನ್ನು ಬೀರಿ, ಮಣ್ಣಲ್ಲಿ ಒಂದಾಗುವವು. ಗಿಡ-ಮರಗಳು ಯಾವ ಫಲಾಪೇಕ್ಷೆಯಿಲ್ಲದೇ ದೇಹವನ್ನು , ಹಣ್ಣನ್ನು ನಮಗೆ ಕೊಟ್ಟು ತಮ್ಮ ಬಾಳಿನ ಸಾರ್ಥಕತೆಯನ್ನು ಪಡೆಯುವವು. ಸಕಲ ಜೀವರಾಶಿಗಳಿಗೆ ದೇವರು ಒಂದೇ ಬಾಲ್ಯ, ಒಂದೇ ಜನ್ಮವನ್ನು ಕೊಟ್ಟಿದ್ದಾನೆ. ಜಗದೀಶನು ಕರುಣಿಸಿದ ಮಾನವ ಜನ್ಮವನ್ನು ಅವನೇ ಕೊಟ್ಟ ಬುದ್ಧಿಶಕ್ತಿಯಿಂದ ಅದನ್ನು ಸದುಪಯೋಗಪಡಿಸಿಕೊಂಡು, ಜೀವನದ ಸಾರ್ಥಕತೆಯನ್ನು ಪಡೆಯುವ ಗುರಿ ನಮ್ಮದಾಗಬೇಕು.
ಈಗ ಮನ್ಮಥನಾಮ ಸಂವತ್ಸರವು ನೇಪಥ್ಯಕ್ಕೆ ಸರಿದು “ದುರ್ಮುಖಿ’ ನಾಮದ ಹೊಸ ಸಂವತ್ಸರವು ಅಡಿಯಿರಿಸಿದೆ. ಯುಗಾದಿಯಂದು ಹೊಸ ಸಂಕಲ್ಪದ ತೋರಣವನ್ನು ಕಟ್ಟಿ, ಮಾನವೀಯತೆ, ಶ್ರದ್ಧೆ ಸಾಧನೆಯೆಂಬ ಬಣ್ಣಗಳ ಚಿತ್ತಾರದ ರಂಗೋಲೆಯನ್ನು ಬಿಡಿಸಿ “ದುರ್ಮುಖೀ’ ನಾಮ ಸಂವತ್ಸರವನ್ನು ಸಂಭ್ರಮದಿಂದ ಬರಮಾಡಿಕೊಳ್ಳೋಣ. ಚೈತ್ರ ಮಾಸದ ಯುಗಾದಿಯ ಪ್ರತಿಪದೆಯ ಈ ಶುಭದಿನವು ಎಲ್ಲರ ಬದುಕಿಗೆ ಶುಭವನ್ನು ತರಲಿ.
ಉಷಾ ವ್ಹಿ. ಅಗರಖೇಡಿ