ಕಾಪು : ಮೀನುಗಾರರ ಬಲೆಗೆ ಬಿತ್ತು ಬಂಗುಡೆ ಮೀನು | Udayavani
Team Udayavani, May 4, 2020, 12:51 PM IST
ಕಾಪು : ಲಾಕ್ ಡೌನ್ ನ ಆರಂಭದ ದಿನದಿಂದಲೂ ಮೀನಿಲ್ಲದೇ ಆತಂಕಕ್ಕೊಳಗಾಗಿದ್ದ ಮೀನುಗಾರರು ಸೋಮವಾರ ಕೊಂಚ ನಿರಾಳರಾಗಿದ್ದಾರೆ. ಕಾಪು, ಉಚ್ಚಿಲ, ಎರ್ಮಾಳು ಮೊದಲಾದೆಡೆಗಳಲ್ಲಿ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದವರಿಗೆ ಸೋಮವಾರ ಬಂಗುಡೆ ಮೀನು ದೊರಕಿದ್ದು ಖುಷಿ ಪಡುವಂತಾಗಿದೆ. ಬಂಗುಡೆ ಮೀನಿನ ರುಚಿ ಕಾಣದೇ ಕೇವಲ ಬಾಯಿ ಚಪ್ಪರಿಸುತ್ತಿದ್ದ ಜನರು ಹೇರಳವಾಗಿ ಮಾರುಕಟ್ಟೆಗೆ ಬಂದಿರುವ ಬಂಗುಡೆ ರಾಶಿಯನ್ನು ಕಂಡು ಸಂಭ್ರಮ ಪಟ್ಟರು. ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಹಾಗೂ ಅದರಿಂದಾಗಿ ನಿರ್ಬಂಧವೂ ಇದ್ದ ಪರಿಣಾಮ ಜನರು ಮೀನು ಖರೀದಿಗೆ ಸಮುದ್ರ ತಟಕ್ಕೇ ಆಗಮಿಸುತ್ತಿದ್ದರು. ಆದರೆ ಸೋಮವಾರ ಲಾಕ್ ಡೌನ್ ನ ಕೆಲವೊಂದು ನಿರ್ಬಂದಗಳು ತೆರವಾದ ಹಿನ್ನೆಲೆಯಲ್ಲಿ ಸಮುದ್ರ ತಟದಲ್ಲಿ ಮೀನು ಖರೀದಿಗೆ ಮುಗಿ ಬೀಳುವ ಜನರ ಸಂಖ್ಯೆ ಕಡಿಮೆಯಾಗಿತ್ತು. ಇದೇ ವೇಳೆ ಹೇರಳ ಮೀನು ಬಂದಿದ್ದು, ಮೀನು ಖರೀದಿಗೆ ಜನರಿಲ್ಲದೇ ಅಗ್ಗದ ದರದಲ್ಲಿ ಮೀನು ಮಾರಾಟ ಮಾಡುವಂತಾಗಿದೆ ಎಂದು ಮೀನುಗಾರ ಶಿವಾಜಿ ಕೋಟ್ಯಾನ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.