ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಭೀತಿ ಇದ್ದರೂ ಪೂರ್ಣಪ್ರಮಾಣದಲ್ಲಿ ಲಾಕ್ಡೌನ್ ಇಲ್ಲ!
Team Udayavani, Jul 1, 2020, 5:24 PM IST
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಇದ್ದರೂ ಪೂರ್ಣಪ್ರಮಾಣದಲ್ಲಿ ಜಿಲ್ಲೆಯನ್ನು ಲಾಕ್ಡೌನ್ ಮಾಡುವ ಪ್ರಮೇಯ ಸದ್ಯಕ್ಕೆ ಇಲ್ಲ. ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಜತೆ ಚರ್ಚೆ ಮಾಡಲಾಗಿದ್ದು ಈ ಹಂತದಲ್ಲಿ ಸೋಂಕು ಹರಡದಂತೆ ಹೇಗೆ ನಿಯಂತ್ರಿಸಬಹುದು, ಬೆಡ್ಗಳನ್ನು ಕಾಯ್ದಿರಿಸುವುದು, ಸೀಲ್ಡೌನ್ ಕುರಿತು ಚರ್ಚಿಸಲಾಗುತ್ತಿದೆ. ಎರಡು ದಿನಗಳಲ್ಲಿ ಮತ್ತೆ ಸಭೆ ನಡೆಸಲಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಬುಧವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಲಾಕ್ಡೌನ್ ಪುನರಪಿ ಹೇರಬೇಕೆ ಎಂಬ ಕುರಿತು ಚರ್ಚೆಗಳಿವೆ. ಆರೋಗ್ಯ ಇಲಾಖೆಯಿಂದಲೂ ಸಲಹೆ ಇದೆ. ಜನರಿಂದಲೂ ಸಲಹೆಗಳು ಬಂದಿವೆ. ಆದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಿರ್ಣಯ ಆಗಲಿದೆ. ರಾತ್ರಿ ಕರ್ಫ್ಯೂ, ರವಿವಾರ ಲಾಕ್ಡೌನ್ ಮುಂದುವರಿಯಲಿದೆ ಎಂದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಎಂಬ ಪ್ರಶ್ನೆಗೆ, ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮೀಟಿಂಗ್ ನಡೆಸುತ್ತಿದ್ದು ಇಲ್ಲಿ ಹಾಜರಾತಿ ಅಗತ್ಯ ಇರುವ ಕಡೆ ನಾನೇ ಹೋಗುತ್ತಿದ್ದೇನೆ ಎಂದರು.