ಲಾಕ್ ಡೌನ್ ನಡುವೆಯೇ ಮನೆ ರಿಪೇರಿ ಮಾಡಿ ಮಾದರಿಯಾದ ಸತ್ಯದ ತುಳುವೆರೆ ಜವನೆರ್
Team Udayavani, Jul 19, 2020, 4:29 PM IST
ಕಾಪು: ಕೋವಿಡ್-19 ವೈರಸ್ ರೋಗಾಣು ಹರಡುವಿಕೆಯ ಆತಂಕಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಉಡುಪಿ- ಮಂಗಳೂರಿನ ಕುಟುಂಬಗಳ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿರುವ ಸತ್ಯದ ತುಳುವೆರ್ ತಂಡದ ಸದಸ್ಯರು ಜು.19ರ ರವಿವಾರದ ಲಾಕ್ ಡೌನ್ ಪ್ರಯುಕ್ತ ಇನ್ನಂಜೆ ಗ್ರಾಮದ ಮಡುಂಬುವಿನಲ್ಲಿ ಶ್ರಮದಾನ ನಡೆಸಿ, ಮಾದರಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಇನ್ನಂಜೆ ಗ್ರಾಮದ ಮಡುಂಬುವಿನ ವಿಶ್ವನಾಥ ಆಚಾರ್ಯ ಅವರ ಮನೆಯ ಒಂದು ಪಾರ್ಶ್ವ ಕುಸಿದಿತ್ತು. ಇದರಿಂದಾಗಿ ಅವರ ಮನೆಗೂ ಅಪಾಯದ ಭೀತಿ ಉಂಟಾಗಿತ್ತು. ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿರುವ ವಿಶ್ವನಾಥ ಆಚಾರ್ಯ ಅವರು ಕೋವಿಡ್-19 ಕಾರಣದಿಂದಾಗಿ ಮೂರುವರೆ ತಿಂಗಳಿನಿಂದ ಸರಿಯಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಅವಧಿಯಲ್ಲೇ ಮನೆಯೂ ಕುಸಿತಕ್ಕೊಳಗಾದ ಕಾರಣ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಈ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಬಂದ ಸತ್ಯದ ತುಳುವೆರ್ ಉಡುಪಿ-ಮಂಗಳೂರು ತಂಡವು ರವಿವಾರದ ಲಾಕ್ ಡೌನ್ ಪ್ರಯುಕ್ತದ ತಮ್ಮ ಬಿಡುವಿನ ದಿನವನ್ನು ಇವರ ಮನೆ ರಿಪೇರಿಗೆಂದು ಮೀಸಲಿಟ್ಟು ಮಾದರಿಯಾಗಿದ್ದಾರೆ.