BJP ಶಾಸಕರು ಮಂತ್ರಿಗಿರಿಯ ಕಚ್ಚಾಟದಲ್ಲಿದ್ದಾರೆ: ಸಲೀಂ ಅಹ್ಮದ್
Team Udayavani, May 29, 2020, 6:58 PM IST
ಮಂಗಳೂರು: ರಾಜ್ಯದಲ್ಲಿ ವಿಪಕ್ಷವಾಗಿ ಕಾಂಗ್ರೆಸ್ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಬಿಜೆಪಿಯ ಶಾಸಕರು ಅಧಿಕಾರ, ಮಂತ್ರಿಗಿರಿಯ ಕಚ್ಚಾಟದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯ ಸಂದರ್ಭ ಬಿಜೆಪಿ ಶಾಸಕರು ಪತ್ಯೇಕ ಸಭೆ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಆರೋಗ್ಯ, ಶಿಕ್ಷಣ ಸಚಿವರ ನಡುವೆ ಕಚ್ಚಾಟ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಈ ಬಗ್ಗೆ ತನಿಖೆಗೆ ಅವಕಾಶ ನೀಡುವಂತೆ ಸರಕಾರವನ್ನು ಕೇಳಿಕೊಂಡರೂ ಅದಕ್ಕೆ ನಿರಾಕರಿಸುವ ಮೂಲಕ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಲೀಂ ಅಹ್ಮದ್ ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಸಿದ್ಧತೆಗಳು ನಡೆದಿವೆ ಎಂದರು.