ಕಾಲ್ನಡಿಗೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೊರಟ ವಲಸೆ ಕಾರ್ಮಿಕರಿಗೆ ಬಂಟ್ವಾಳದಲ್ಲಿ ಆಶ್ರಯ
Team Udayavani, May 13, 2020, 7:07 PM IST
ಬಂಟ್ವಾಳ: ಬೆಂಗಳೂರಿನಿಂದ ಜಾರ್ಖಂಡ್ಗೆ ರೈಲು ಇದೆ ಎಂದು ಯಾರೋ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಜಾರ್ಖಂಡ್ ಮೂಲದ ಸುಮಾರು 1200 ಕಾರ್ಮಿಕರಿಗೆ ಬಿ.ಸಿ.ರೋಡು ಬ್ರಹ್ಮರಕೂಟ್ಲು ಬಳಿಯ ಬಂಟವಾಳದ ಬಂಟರ ಭವನದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಜತೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಹೆದ್ದಾರಿಯುದ್ದಕ್ಕೂ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರ ಕುರಿತು ಮಾಹಿತಿ ಪಡೆದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರನ್ನು ಸಂಪರ್ಕಿಸಿದ್ದು, ಬಳಿಕ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಹಾಗೂ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಅವರ ಮೂಲಕ ಬಂಟರ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಶಾಸಕ ವೇದವ್ಯಾಸ ಕಾಮತ್ ಅವರು ತಡರಾತ್ರಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಶಾಸಕ ರಾಜೇಶ್ ನಾೖಕ್ ಅವರು ಬುಧವಾರದಿಂದ ಊಟೋಪಚಾರ ನೀಡುವ ಕುರಿತು ಕಾರ್ಮಿಕರಿಗೆ ಭರವಸೆ ನೀಡಿದ್ದಾರೆ. ಜತೆಗೆ 2 ದಿನಗಳೊಳಗೆ ರೈಲಿನ ವ್ಯವಸ್ಥೆ ಮಾಡುವ ಕುರಿತು ಕಾರ್ಮಿಕರಿಗೆ ಭರವಸೆ ನೀಡಲಾಗಿದೆ.