ಪ್ರಧಾನಿಗೆ ಪತ್ರ ಬರೆದರೂ ಸುಧಾರಣೆ ಕಾಣದ ಬೆಳಾಲು ರಸ್ತೆ
Team Udayavani, Nov 18, 2019, 3:17 PM IST
ಬೆಳ್ತಂಗಡಿ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವ ಉಜಿರೆ ಪೇಟೆಯನ್ನು ಸಂಪರ್ಕಿಸುವ ಉಜಿರೆ-ಬೆಳಾಲು-ಬೈಪಾಡಿ ರಸ್ತೆ ಅಭಿವೃದ್ಧಿಗೆ ಕಳೆದ ಐದು ವರ್ಷಗಳಿಂದ ದಿನ ಕೂಡಿ ಬಂದಿಲ್ಲ. ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಾಜ್ಯ ಹೆದ್ದಾರಿಯಾಗಿ ಹಾದುಹೋಗುವಾಗ ಉಜಿರೆಯಿಂದ 1 ಕಿ.ಮೀ. ಮುಂದೆ ಬಲ ಬದಿಗೆ ತಿರುಗುವ ಬೆಳಾಲು ರಸ್ತೆಯನ್ನು ಕೇಂದ್ರ ರಸ್ತೆ ನಿಧಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. 2008ರಲ್ಲಿ ಗ್ರಾಮಸಡಕ್ ಯೋಜನೆಯಡಿ ನಿರ್ಮಾಣಗೊಂಡ ಈ ರಸ್ತೆಯನ್ನು ಈವರೆಗೆ ಮೇಲ್ದರ್ಜೆಗೇರಿಸಲು ಸಾಧ್ಯವಾಗಿಲ್ಲ. ಅಂದಿನಿಂದ ಇಂದಿನವರೆಗೆ ತೇಪೆ ಕಾರ್ಯಕ್ಕಷ್ಟೆ ಸೀಮಿತವಾಗಿದೆ. ಉಜಿರೆಯಿಂದ ಬೆಳಾಲು ತನಕದ 9 ಕಿ.ಮೀ. ರಸ್ತೆಯಲ್ಲಿ ಹೊಂಡ ಗುಂಡಿಗಳದ್ದೇ ಕಾರುಬಾರು. ತಿರುವುಗಳಲ್ಲಿ ಪ್ರತಿನಿತ್ಯ ಎಂಬಂತೆ ಅಪಘಾತಗಳಾಗುತ್ತಿವೆ.