ಬೌಬೌನಿಂದ ಬೇಸತ್ತು ಮಾಲೀಕನಿಗೆ ಥಳಿಸಿದ!
Team Udayavani, Jan 22, 2017, 5:41 AM IST
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ನಾಯಿ ಸಾಕಿದರವ ರಿಗೆ ತಮ್ಮ ನಾಯಿ ಏನು ಮಾಡಿದರೂ ಮುದ್ದು. ಅದ ರಲ್ಲೂ ನಾಯಿ ಬೊಗಳುತ್ತ ಇದ್ದರೆ ಹುಲಿ ಗರ್ಜಿಸುತ್ತಿದೆ ಎಂಬಂತೆ ನಾಯಿ ಮಾಲೀಕರಿಗೆ ಭಾಸವಾಗುತ್ತಿರುತ್ತದೆ. ಆದರೆ ಅಕ್ಕಪಕ್ಕದವರ ಮನೆಯವರಿಗೆ ನಾಯಿಯನ್ನು ಕೊಲ್ಲುವಷ್ಟು ಕೋಪ ಉಕ್ಕುತ್ತದೆ.
ಕೋಲ್ಕತಾದಲ್ಲಿ ನಾಯಿ ಮಾಲೀಕನ ಮೇಲೆ ನೆರೆಮನೆಯವನೊಬ್ಬ ದಾಳಿ ನಡೆಸಿದ ಘಟನೆಯೊಂದು ನಡೆದಿದೆ. ನೆರೆಮನೆಯ ಸಾಕುನಾಯಿ ನಿರಂತರವಾಗಿ ಬೊಗಳುವುದನ್ನು ಕೇಳಿ ಕೇಳಿ ಬೇಸತ್ತ ಅಭಿಜಿತ್ ಸೇನ್ ಎಂಬಾತ, ನೆರೆಮನೆಗೆ ಕಬ್ಬಿಣದ ಸರಳಿನ ಜೊತೆ ನುಗ್ಗಿ ನಾಯಿ ಮಾಲೀಕ ಮುಕುಂದ್ ಖೇತಾನ್ನನ್ನು ಚೆನ್ನಾಗಿ ಥಳಿಸಿದ್ದಾನೆ. ಬಳಿಕ ಆತನ ಕತ್ತು ಹಿಸುಕುವ ಪ್ರಯತ್ನ ಮಾಡಿದ್ದಾನೆ. ಈಗ ಸೇನ್ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ಪ್ರಯತ್ನ ಕೇಸಿನಡಿ ಅಡಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರತಿ ದಿನ ನಾಯಿ ಬೊಗಳುವಿಕೆಯಿಂದ ತಾನು ಮಾನಸಿಕ ಹಿಂಸೆಗೊಳಗಾಗುತ್ತಿದ್ದೆ. ಶುಕ್ರವಾರ ರಾತ್ರಿ ನಾನು ನನ್ನ ತಾಳ್ಮೆ ಕಳೆದುಕೊಂಡೆ ಎಂದು ಹೇಳಿದ್ದಾನೆ.