“ನಾನು ಸತ್ತಿದ್ದೇನೆ’ ಎಂದು ರಜೆ ಕೇಳಿದ ಬಾಲಕ; ಒಪ್ಪಿಗೆ ಕೊಟ್ಟ ಪ್ರಾಂಶುಪಾಲ
Team Udayavani, Sep 3, 2019, 10:55 AM IST
ಬಾಲ್ಯದಲ್ಲಿ ಹೆಚ್ಚಿನವರು ರಜೆ ಗಿಟ್ಟಿಸಿಕೊಳ್ಳುವ ಸಲುವಾಗಿ, “ಅಜ್ಜಿ ಸತ್ತರು, ಅಜ್ಜ ಸತ್ತರು, ದೊಡ್ಡಪ್ಪನಿಗೆ ಹುಷಾರಿಲ್ಲ, ಚಿಕ್ಕಮ್ಮ ಆಸ್ಪತ್ರೆಯಲ್ಲಿದ್ದಾರೆ’ ಎಂದೆಲ್ಲ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕಿರುತ್ತಾರೆ. ಈಗಿನ ಮಕ್ಕಳೂ ಈ ರೀತಿ “ಸುಳ್ಳು ನೆಪ’ ಹೇಳಿ ರಜೆ ಹಾಕುವುದರಲ್ಲಿ ಹಿಂದೆಬಿದ್ದಿಲ್ಲ. ಆದರೆ, ಉತ್ತರಪ್ರದೇಶದ ಕಾನ್ಪುರದಲ್ಲಿ ವಿದ್ಯಾರ್ಥಿಯೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾನೇ ಸ್ವತಃ ಸತ್ತಿರುವುದಾಗಿ ಹೇಳಿ ಶಾಲೆಗೆ ಅರ್ಧದಿನ ರಜೆ ಹಾಕಿದ್ದಾನೆ.
ಮತ್ತೂಂದು ಅಚ್ಚರಿಯ ಸಂಗತಿಯೆಂದರೆ, ಶಾಲೆಯ ಪ್ರಾಂಶುಪಾಲರೂ ಮರುಮಾತನಾಡದೇ ಆತನಿಗೆ ರಜೆ ನೀಡಿ ಕಳುಹಿಸಿದ್ದಾರೆ. 8ನೇ ತರಗತಿಯ ವಿದ್ಯಾರ್ಥಿಯೇ ಇಂಥದ್ದೊಂದು ಕೃತ್ಯ ಎಸಗಿದಾತ. “ನಾನು ಇಂದು ಬೆಳಗ್ಗೆ 10 ಗಂಟೆಗೆ ಮೃತಪಟ್ಟಿದ್ದು, ಮನೆಗೆ ಬೇಗನೆ ಹೋಗಬೇಕಾಗಿದೆ. ದಯವಿಟ್ಟು ಅರ್ಧದಿನ ರಜೆ ನೀಡಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ಬರೆದು ಪ್ರಾಂಶುಪಾಲರ ಕೈಗಿಟ್ಟಿದ್ದ.
ಅವರು ಅದನ್ನು ನೋಡಿ, ರಜೆ ನೀಡಿದ್ದಾರೆ. ಮಾರನೇ ದಿನ ಶಾಲೆಗೆ ಬಂದಾಗ, ಸಹಪಾಠಿಗಳೊಂದಿಗೆ ಈ ಕುರಿತು ಹೇಳಿ, ನಕ್ಕಾಗಲೇ ವಿಚಾರ ಬೆಳಕಿಗೆ ಬಂದಿದ್ದು.