200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ
Team Udayavani, Jul 11, 2019, 11:40 AM IST
ಔರಂಗಬಾದ್ನ ದಿನಸಿ ವ್ಯಾಪಾರಿ, 80 ವರ್ಷ ವಯಸ್ಸಿನ ಕಾಶಿನಾಥ್ ಗೌಲಿ ಎದುರು ಕೀನ್ಯಾದ ಸಂಸದ ರಿಚರ್ಡ್ ತಾಂಗಿ ಬಂದು ನಿಂತಾಗ ಅವರ ಕಣ್ಣಾಲಿಗಳಲ್ಲಿ ನೀರು ಹನಿಗಟ್ಟಿತ್ತು. ಏಕೆಂದರೆ ತಾಂಗಿ ವಯೋವೃದ್ಧರನ್ನು ಭೇಟಿ ಮಾಡಲು ಅಲ್ಲಿಂದ ಇಲ್ಲಿಗೆ ಬಂದಿದ್ದರು. ಅದು ಏಕೆ ಗೊತ್ತಾ? ತಾವು 30 ವರ್ಷಗಳ ಹಿಂದೆ ಉಳಿಸಿಕೊಂಡಿದ್ದ 200 ರೂ. ಸಾಲವನ್ನು ಮರುಪಾವತಿಸಲು!
ತಾಂಗಿ ಔರಂಗಬಾದ್ನ ಕಾಲೇಜೊಂದರಲ್ಲಿ 1985-89ರಲ್ಲಿ
ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿದ್ದರು. ಕೀನ್ಯಾಕ್ಕೆ ಮರಳಿದಾಗ ಅವರು 200 ರೂ. ಸಾಲ ಹೊಂದಿದ್ದರು. ಈಗ ರಿಚರ್ಡ್ ಕೀನ್ಯಾದ ನೈಯಾರಿಬರಿಯ ಸಂಸದ. ಇತ್ತೀಚೆಗೆ ಇದ್ದಕ್ಕಿದ್ದ ಹಾಗೆ ಅವರಿಗೆ ಗೌಲಿಗೆ ನೀಡಬೇಕಾದ ಸಾಲ ನೆನಪಿಗೆ ಬಂದಿತ್ತು. ಕೂಡಲೇ ಅವರು ತಮ್ಮ ಪತ್ನಿಯನ್ನು ಕರೆದುಕೊಂಡು ಸೀದಾ ಔರಂಗಬಾದ್ಗೆ ಬಂದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ನನ್ನ ಆರ್ಥಿಕ ಸ್ಥಿತಿ ತೀರಾ ಕೆಟ್ಟದಾಗಿತ್ತು. ಗೌಲಿ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದಿದ್ದಾರೆ. ಜತೆಗೆ ಗೌಲಿ ಮತ್ತು ಕುಟುಂಬ ಸಂತೋಷದಿಂದಿರಲಿ ಎಂದೂ ಹಾರೈಸಿದ್ದಾರೆ. ಜೊತೆಗೆ ಗೌಲಿ ಮನೆಯಲ್ಲೇ ಊಟ ಮಾಡಿದ್ದಾರೆ.