ಸವದತ್ತಿಯ ಸುಂದರ ಐತಿಹಾಸಿಕ ಕೋಟೆ
Team Udayavani, May 3, 2021, 8:45 AM IST
ಸವದತ್ತಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಇದೊಂದು ಪುಟ್ಟ ತಾಲೂಕಾದರೂ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಮೊದಲು ಇದನ್ನು ಸೌಗಂಧಿಪುರ, ಸೌಗಂಧವತಿ, ಸುಗಂಧವರ್ತಿ ಎಂತಲೂ ಕರೆಯುತ್ತಿದ್ದರು. ಚಾಲುಕ್ಯರ ಕಾಲದಲ್ಲಿ ಈ ನಗರವು ಹೆಚ್ಚು ಶ್ರೀಮಂತ ಸ್ಥಿತಿಯಲ್ಲಿತ್ತು ಎನ್ನಲಾಗುತ್ತದೆ.
ರಟ್ಟರ ಆಳ್ವಿಕೆಯ ಅವಧಿಯಲ್ಲಿ ಇದು ಅವರ ರಾಜಧಾನಿಯಾಗಿತ್ತು. ಇಲ್ಲಿರುವ ರೇಣುಕಾ ಎಲ್ಲಮ್ಮ ದೇವಿಯ ದೇಗುಲ, ರೇಣುಕಾ ಜಲಾಶಯ ಹಾಗೂ ಸವದತ್ತಿ ಕೋಟೆಯು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಧಾರವಾಡದಿಂದ 35 ಕಿ.ಮೀ. ಹಾಗೂ ಬೆಂಗಳೂರಿನಿಂದ 469 ಕಿ.ಮೀ. ದೂರದಲ್ಲಿದೆ. ರಸ್ತೆ ಮಾರ್ಗವು ಉತ್ತಮ ಸ್ಥಿತಿಯಲ್ಲಿರುವುದರಿಂದ ದಣಿವಿಲ್ಲದೆಯೇ ಇಲ್ಲಿಗೆ ಬರಬಹುದು.
18ನೇ ಶತಮಾನದ ಇತಿಹಾಸವನ್ನು ಹೊಂದಿರುವ ಈ ಕೋಟೆ ಒಂದು ಪುಟ್ಟ ಬೆಟ್ಟದ ಮೇಲಿದೆ. ಅಲ್ಲಿಯೇ ಒಂದು ಕಾಡಸಿದ್ಧೇಶ್ವರ ದೇಗುಲ ಇರುವುದನ್ನು ಕಾಣಬಹುದು. ಈ ಕೋಟೆಯು ದಟ್ಟ ಅರಣ್ಯ ಸಂಪತ್ತಿನಿಂದ ಸುತ್ತುವರಿದಿದೆ. ಬೆಳಗಾವಿ ಜಿಲ್ಲೆಯಿಂದ 83 ಕಿ.ಮೀ. ದೂರದಲ್ಲಿದೆ.
ಕರ್ನಾಟಕವನ್ನು ಆಳಿದ ರಾಜಮನೆತನದವರಲ್ಲಿ ರಟ್ಟರು ಒಬ್ಬರು. ಮೊದಲು ಮಾಂಡಲೀಕರಾಗಿ, ನಂತರ ಆಳುವ ಅರಸರಾಗಿ, 9 ರಿಂದ 13 ಶತಮಾನಗಳ ಕಾಲ ರಾಜ್ಯವಾಳಿದರು. ಆ ಕಾಲದಲ್ಲಿ ನಿರ್ಮಿಸಲಾದ ಕೋಟೆ, ಇಂದು ಪ್ರವಾಸ ತಾಣದಲ್ಲಿ ಒಂದಾಗಿದೆ.
ಪೂರ್ವ ದಿಕ್ಕಿಗೆ ಪ್ರಧಾನ ಬಾಗಿಲನ್ನು ಹೊಂದಿರುವ ಈ ಕೋಟೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಂಬತ್ತು ತಿರುವುಗಳು ಹಾಗೂ 30 ಮೆಟ್ಟಿಲುಗಳ ಸಾಲಿವೆ. 120 ಅಡಿ ಎತ್ತರ ಇರುವ ಈ ಕೋಟೆ ಹೆಚ್ಚು ಸುಭದ್ರವಾಗಿದೆ .ಹತ್ತಿರದ ಆಕರ್ಷಣೆಮಲಪ್ರಭಾ ನದಿಯ ಅಣೆಕಟ್ಟು, ಯಲ್ಲಮ್ಮ ಗುಡ್ಡ, ರೇಣುಕಾ ಸಾಗರ, ಪುರದೇಶ್ವರ ದೇಗುಲ ಹಾಗೂ ಅಂಕೇಶ್ವರ ದೇಗುಲಗಳಿಗೂ ಭೇಟಿ ನೀಡಬಹುದು.
ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಸವದತ್ತಿಯ ಕೋಟೆಯಲ್ಲಿ ಹಲವು ಸಿನಿಮಾಗಳ ಶೂಟಿಂಗ್ ಕೂಡ ನಡೆದಿವೆ. ಕನ್ನಡದ ಅಯ್ಯ ಸೇರಿದಂತೆ ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಸವದತ್ತಿ ಕೋಟೆ ಕಾಣಿಸಿಕೊಂಡಿದೆ.
ವರ್ಷದಲ್ಲಿ ಎರಡ್ಮೂರು ಸಾರಿ ಇಲ್ಲಿಯ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರು ಕೋಟೆಗೆ ಭೇಟಿ ನೀಡದೆ ತೆರಳುವುದಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಕೋವಿಡ್ ಕಾರಣವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ಗುಲ್ ಮಾರ್ಗ್, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…
ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?
Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ
Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?
Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು