ಕ್ರಿಸ್ಮಸ್: ದೇವಪುತ್ರ ಯೇಸುಕ್ರಿಸ್ತರ ನಡೆ ನಮ್ಮ ಕಡೆ
Team Udayavani, Dec 25, 2021, 10:10 AM IST
ಬೆತ್ಲೆಹೆಮ್ ಪ್ಯಾಲೆಸ್ತೀನ್ ದೇಶದ ಪುಟ್ಟ ಹಳ್ಳಿ. ಎಲ್ಲೆಲ್ಲೂ ಕೊರೆಯುವ ಚಳಿ. ತುಂಬು ಗರ್ಭಿಣಿ ಮರಿಯ ಅವರು ಜೋಸೆಫ್ ಜತೆ ಪ್ರಯಾಣದಲ್ಲಿರುವಾಗಲೇ ಪ್ರಸವ ಕಾಲ ಸಮೀಪಿಸಿತ್ತು. ಆಕೆ ತನ್ನ ಚೊಚ್ಚಲ ಮಗನಿಗೆ ಜನ್ಮವಿತ್ತು ಇದ್ದ ಹರಕು ಬಟ್ಟೆಯಲ್ಲಿಯೇ ಕಂದನನ್ನು ಸುತ್ತಿ ದನಗಳ ಕೊಟ್ಟಿಗೆಯ ಗೋದಲಿಯಲ್ಲಿ ಮಲಗಿಸಿದಳು. ಕಾರಣ, ಯಾವುದೇ ಛತ್ರದಲ್ಲಿ ಅವರಿಗೆ ಸ್ಥಳಾವಕಾಶ ಲಭಿಸಿರಲಿಲ್ಲ.
ಮಗು ಹುಟ್ಟಿದ ಕೂಡಲೇ ಸ್ವರ್ಗದಿಂದ ದೇವ ದೂತರ ಹಾಡೊಂದು ಕೇಳಿಸಿತು: “ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ’. ಹಾಡನ್ನು ಕೇಳಿದ, ಪಕ್ಕದಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದ ಕುರುಬರ ತಂಡವೊಂದು ಕಂದನನ್ನು ನಮಿಸಲು ಬಂತು ಹಾಗೂ ಸಂತೋಷದಿಂದ ಕುಣಿದು ಕುಪ್ಪಳಿಸಿತು. ಯೇಸು ಹುಟ್ಟಿದ್ದನ್ನು ಸೂಚಿಸುವ ನಕ್ಷತ್ರವೊಂದು ಪೂರ್ವ ದಿಕ್ಕಿನಲ್ಲಿ ಉದಯಿಸುವುದನ್ನು ಮೂವರು ಮೇಧಾವಿಗಳು ಕಂಡರು. ಆ ನಕ್ಷತ್ರವು ತೋರಿಸಿದ ದಾರಿಯಲ್ಲಿ ಸಾಗಿ ಯೇಸುವನ್ನು ನಮಿಸಲು ಬಂದರು ಹಾಗೂ ತಾವು ತಂದ ಅಮೂಲ್ಯ ಕಾಣಿಕೆಗಳನ್ನು ಅರ್ಪಿಸಿ ಉಲ್ಲಾಸಪಟ್ಟರು. ಕೊಟ್ಟಿಗೆಯಲ್ಲಿದ್ದ ಮುಗ್ಧ ಪ್ರಾಣಿಗಳು ಪ್ರೀತಿಯಿಂದ ಕಂದನ ಕಡೆಗೇ ದೃಷ್ಟಿ ನೆಟ್ಟಿದ್ದವು. ನಿಜವಾಗಿಯೂ ಆ ಕಿರಿದಾದ ಜಾಗದಲ್ಲಿ ಇಹ ಪರಗಳ ಸಂಗಮವಾಯಿತು. ವಿಶ್ವದೊಡೆಯ ದೇವ ಕುಮಾರ ಸಕಲ ಸೃಷ್ಟಿಯನ್ನು ಒಗ್ಗೂಡಿಸಲು ಬಂದಿದ್ದಾರೆ ಎನ್ನುವುದು ವಿಶ್ವಾಸಿಸಿದವರಿಗೆ ಭಾಸವಾಯಿತು.
ಏನಿದು ವಿಪರ್ಯಾಸ? ಇಹಪರಗಳ ಒಡೆಯನಿಗೆ ಜನಿಸಲು ಯೋಗ್ಯ ಸ್ಥಳ ಈ ಭೂಮಿಯಲ್ಲಿ ಸಿಗಲಿಲ್ಲವೇ? ಬಡವರ ಜತೆ ಒಂದಾಗಿ ಬಾಳಲು ಬಡತನವನ್ನು ಸ್ವೀಕರಿಸಿ ಇಡೀ ಮನು ಕುಲದ ನಿಜವಾದ ಘನತೆ ಮತ್ತು ಗೌರವ ಯಾವುದೆಂದು ತೋರಿಸಿ ಕೊಡಲು ತನ್ನನ್ನೇ ತಾನು ಬರಿದು ಮಾಡಿ ಮನುಜನಾಗಿ ಜನಿಸಿದರು. ಯೇಸು ಹುಟ್ಟಿದಾಗ ಕಂಡು ಬಂದ ಎಲ್ಲ ಸಂಕೇತಗಳು ದೇವಾನುಗ್ರಹಿತ ಹಾಗೂ ಅರ್ಥಪೂರ್ಣ. ನಾವು ಕ್ಷುಲ್ಲಕ ವ್ಯಕ್ತಿಗಳಲ್ಲ. ಬದಲಾಗಿ ದೇವರ ಮಕ್ಕಳು. ಸಕಲರನ್ನೂ ಸಮಾನವಾಗಿ ಗೌರವಿಸಿ ಮಾನವೀಯತೆಯನ್ನು ಮೆರೆಯುವುದೇ ನಮ್ಮ ಬಾಳಿನ ಗುರಿ. ದೇವರ ಮುಗುಳ್ನಗು ಈ ಭೂಮಿಯಲ್ಲಿ ಪಸರಿಸಲು ನಮಗೆ ಕರೆ ಬಂದಿದೆ.
ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು
ನಿಜವಾದ ಸಂತೋಷ ಹಾಗೂ ತೃಪ್ತಿ ಯಾವುದರಲ್ಲಿ ಸಿಗುವುದು? ನಮ್ಮನ್ನು ಸೃಷ್ಟಿಸಿದ ದೇವರ ಇಚ್ಛೆಯನ್ನು ಅರಿತು, ಗುರುತಿಸಿ ಅದನ್ನು ಪೂರೈಸುವುದರಲ್ಲಿ! ನಾವು ಭಾಗ್ಯವಂತರು ಎಂದು ಭಾವಿಸಿ ಆ ರೀತಿಯಲ್ಲಿ ಜೀವಿಸಿದರೆ ನಮ್ಮಲ್ಲಿ ಸಂತೋಷ ಹಾಗೂ ತೃಪ್ತಿ ಉಕ್ಕಿ ಬರುತ್ತದೆ. ಸಿರಿವಂತಿಕೆಯಲ್ಲಿ ಕಾಣಲಾಗದ ದೇವರನ್ನು ಬಡತನದಲ್ಲಿ ಕಂಡು ಕೊಳ್ಳಬಹುದೆಂದು ಯೇಸು ಸ್ವಾಮಿ ತಮ್ಮ ಜೀವನ ಶೈಲಿಯ ಮುಖಾಂತರ ತೋರಿಸಿಕೊಟ್ಟಿದ್ದಾರೆ. ಯೇಸು ಹುಟ್ಟಿದ ಸ್ಥಳದಲ್ಲಿನ ಪ್ರಾಣಿಗಳ ಮುಗ್ಧತೆ, ಕುರುಬರ ಸರಳತೆ, ಮೇಧಾವಿಗಳ ವಿಧೇಯತೆ- ಇವೆಲ್ಲವೂ ದೇವರನ್ನು ಅರಿಯುವ ಪರಿಯನ್ನು ತೋರಿಸುತ್ತದೆ.
ಬೆತ್ಲೆಹೆಮ್ನ ಪುಟ್ಟ ಗೋದಲಿಯಲ್ಲಿ ಭೂಮ್ಯಾಕಾಶಗಳು ಒಟ್ಟಾಗಿವೆ; ನಿಜವಾದ ದೇವಾನುಭವ ಇಲ್ಲಿ ಅಡಗಿದೆ. ಇಲ್ಲಿ ಸ್ವರ್ಗವು ಭೂಮಿಗಿಳಿದು ಬಂದಿದೆ. ತಲೆ ಬಾಗಿ ಒಳ ಹೋಗುವವರು ನಿಜ ವಾಗಿ ಧನ್ಯರು. ಬೆತ್ಲೆಹೆಮ್ನಲ್ಲಿರುವ ದೇವಾಲಯದ ಒಳ ಹೋಗಲು ಈಗಲೂ ತಲೆಬಾಗಿಯೇ ಹೋಗಬೇಕಾಗಿದೆ. ದೈನ್ಯತೆ ಹಾಗೂ ವಿನಯಶೀಲತೆಯಲ್ಲಿ ಸ್ವರ್ಗೀಯ ಅನುಭವವಾಗುತ್ತದೆ.
ಗೋದಲಿಯಲ್ಲಿ ಮಲಗಿರುವ ಕಂದ ಯೇಸು ಸಂತೋಷ, ಪ್ರೀತಿ ಮತ್ತು ಶಾಂತಿಯ ಚಿಲುಮೆಯ ಬುಗ್ಗೆಯಾಗಿ ದ್ದಾರೆ. ಶಾಂತಿ ಕುವರ ತನ °ಕರಗಳನ್ನು ಚಾಚಿ ಎಲ್ಲರನ್ನೂ ತನ್ನ ಬಳಿಗೆ ಕರೆಯುತ್ತಾರೆ. ಪರಸ್ಪರ ಅರಿತೂ ಅರಿಯದಂತೆ ಬಾಳುವ ಉದಾಸೀನತೆಗೆ, ತಾತ್ಸಾರದ ಸಂಬಂಧಗಳಿಗೆ ಇದೊಂದು ಸೂಕ್ತ ಪಂಥಾಹ್ವಾನ. ಪ್ರೀತಿ ಇಲ್ಲದ ಬಾಳು ಬರೀ ಗೋಳು. ಪ್ರೀತಿಯೇ ಎಲ್ಲವನ್ನೂ ಗುಣ ಪಡಿಸುತ್ತದೆ. ಪ್ರೀತಿ ಮಾತ್ರ ವಿಶ್ವಾಸಕ್ಕೆ ಯೋಗ್ಯವೆಂದು ಯೇಸು ಕ್ರಿಸ್ತರು ತೋರಿಸಿಕೊಟ್ಟಿದ್ದಾರೆ. ಕಾರಣ, ದೇವರು ಪ್ರೀತಿ ಸ್ವರೂಪಿ. ಪ್ರೀತಿಯ ವಿರುದ್ಧ ಇರುವ ಎಲ್ಲ ನಡೆ- ನುಡಿಗಳು ನಮ್ಮನ್ನು ಕುರೂಪಿಗಳನ್ನಾಗಿ ಮಾರ್ಪಡಿಸುತ್ತವೆ; ದೇವಾನುಗ್ರಹವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.
ಯೇಸು ಹುಟ್ಟಿದ ಸಮಯದಲ್ಲಿ ಪ್ಯಾಲೆಸ್ತೀನಿನ ಯಹೂದ್ಯರು ರೋಮ್ ಆಧಿಪತ್ಯದ ದಬ್ಟಾಳಿಕೆಗೆ ಹಾಗೂ ಅವರ ವಿವಿಧ ಹಿಂಸೆಗಳಿಗೆ ಒಳಗಾಗಿದ್ದರು. ಇವೆಲ್ಲವುಗಳಿಂದ ಬಿಡುಗಡೆ ಹೊಂದಲು ಹಾತೊರೆ ಯುತ್ತಿದ್ದರು. ಅಂತಹ ಕತ್ತಲೆಯಲ್ಲಿ, ಮುಸುಕಿದ ಮಬ್ಬಿನಲಿ ಬೆಳಕಾಗಿ ಯೇಸು ಬಂದರು.
“ಯೇಸು’ ಎಂದರೆ “ದೇವರು ರಕ್ಷಿಸುತ್ತಾನೆ’ ಎಂದರ್ಥ. ಪಾಪಗಳನ್ನು ಕ್ಷಮಿಸಿ, ರೋಗಿಗಳನ್ನು ಗುಣಪಡಿಸಿ, ಸತ್ತವರನ್ನು ಎಬ್ಬಿಸಿದ ಪವಾಡ ಪುರುಷ ಯೇಸು ಲೋಕ ರಕ್ಷಕನಾಗಿ ಬಂದರು. ಪ್ರಸ್ತುತ ಜಗತ್ತಿನಲ್ಲೂ ದಬ್ಟಾಳಿಕೆ, ಅಜ್ಞಾನ, ಅಧರ್ಮ ಮತ್ತು ಅಮಾನವೀಯತೆ ತಾಂಡವ ವಾಡುತ್ತಿದೆ. ಹಿಂಸೆಯನ್ನು, ಅಧರ್ಮವನ್ನು ಪ್ರಚೋದಿ ಸುವ ಕೆಲವೇ ಮುಖಗಳು ಇಡೀ ಸಮಾಜವನ್ನು ಕಲುಷಿತ ಮಾಡುತ್ತಿವೆ. ಇವೆಲ್ಲವುಗಳನ್ನು ಹೋಗಲಾಡಿಸಲು, ಮನುಜನನ್ನು ದೇವತ್ವದೆಡೆಗೆ ಸೆಳೆಯಲು ಯೇಸು ಸ್ವಾಮಿ ಭೂಮಿಗಿಳಿದು ಬಂದಿದ್ದಾರೆ.
ಯೇಸು ಹುಟ್ಟಿದಾಗ ದೇವದೂತರು ಹಾಡಿದ ಸಂದೇಶ ಮತ್ತೆ ಅನುರಣಿಸುತ್ತದೆ. “ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವನಿಗೆ ಶಾಂತಿ’. ದೇವರ ವಾಕ್ಯವನ್ನನುಸರಿಸಿ ನಡೆದರೆ ದೇವರು ಮಾನವರಿಗೆ ಒಲಿಯುತ್ತಾರೆ. ದೇವರೊಡನೆ ಬಲಪಡಿಸಿದ ಸಂಬಂಧ ಮಾನವರೆಲ್ಲರೊಂದಿಗೂ ದೃಢ ಸಂಬಂಧವನ್ನು ಬೆಳೆಸಲು ಅನುವು ಮಾಡಿ ಕೊಡುತ್ತದೆ. ದೇವ ಕರುಣೆಯ ರುಚಿ ಉಣಿಸಿ, ನಾವು ಇತರರ ಕಡೆಗೆ ಅನುಕಂಪ ಉಳ್ಳವರಾಗಿ ಬಾಳಲು ಕರೆ ನೀಡುತ್ತದೆ. ಸ್ವಾರ್ಥವನ್ನು ಮೆಟ್ಟಿ ಬಾಳುವುದೇ ನಿಜವಾದ ದೇವ ಭಕ್ತಿ. ಎಂದೆಂದಿಗೂ ಭಯ ಪಡದೆ, ಉತ್ಸಾಹದಿಂದ ಮುಂದೆ ಸಾಗಲು ಭರವಸೆಯ ತಾರೆಯನ್ನು ಮೂಡಿ
ಸುತ್ತದೆ. ಲೋಕದ ದುಃಖ-ದುಗುಡಗಳ ನಡುವೆಯೂ ಸತ್ಯವನ್ನು ಅರಸಿ ನಮ್ಮ ಅಸ್ತಿತ್ವದ ಬೆಳಕನ್ನು ಪಡೆದು ಕೊಂಡಾಗಲೇ ನಿಜವಾದ ಸಂತೃಪ್ತಿ ಸಿಗುವುದೆಂದು ಸಾಬೀತು ಪಡಿಸುತ್ತದೆ.
ದೇವರು ಪ್ರೀತಿ ಸ್ವರೂಪಿಯಾಗಿದ್ದಾರೆ. ಆ ಪ್ರೀತಿಯನ್ನು ಪಡೆದ ನಾವು ದ್ವೇಷವನ್ನು, ಉದಾಸೀನತೆಯನ್ನು ತ್ಯಜಿಸಿ, ಧ್ವನಿ ಇಲ್ಲದವರ ಧ್ವನಿಯಾಗೋಣ. ನಿರ್ಗತಿಕರಿಗೆ, ಅನಾಥರಿಗೆ, ಜೀವನ ಸೌಲಭ್ಯಗಳಿಂದ ವಂಚಿತರಾದವರಿಗೆ ನೆರವಿನ ಹಸ್ತ ನೀಡಿದಾಗಲೇ ನಾವು ದೇವರ ಮಕ್ಕಳೆಂದು ಜಗಜ್ಜಾಹೀರು ಮಾಡುತ್ತೇವೆ. ಬನ್ನಿರಿ ಸಂಭ್ರಮಿಸೋಣ, ಕೈ ಕೈ ಹಿಡಿದು ಬಾಳ್ಳೋಣ, ಕ್ರಿಸ್ಮಸ್ ಸಂದೇಶ ಸಾರಿ ಬಾಳ್ಳೋಣ. ಕ್ರಿಸ್ತನಲ್ಲಿ ಧನ್ಯರಾಗೋಣ.
ನಿಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು. ಸರ್ವೇ ಜನಾಃ ಸುಖಿನೋ ಭವಂತು!
– ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಪ್ರಾಂತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ