ಕೇಸರದೇವಿ “ನಾಸಾಗೆ ಅಚ್ಚರಿ ತಂದ ಶಕ್ತಿದೇವತೆಯ ನೆಲೆ”

ಯೋಗಾನಂದರಂತಹ ದಾರ್ಶನಿಕರ ಪ್ರಭಾವಕ್ಕೊಳಗಾಗಿ ಭಾರತದಲ್ಲೇ ಸುಮಾರು 47 ವರ್ಷ ವಾಸಿಸಿದನು

Team Udayavani, Jan 17, 2021, 12:25 PM IST

ಕೇಸರದೇವಿ “ನಾಸಾಗೆ ಅಚ್ಚರಿ ತಂದ ಶಕ್ತಿದೇವತೆಯ ನೆಲೆ”

ಉತ್ತರಾಖಂಡ ಜಿಲ್ಲೆಯ ಅಲ್ಮೋರಾ ಸಮೀಪದಲ್ಲಿರುವ ಕೇಸರದೇವಿ ಶಕ್ತಿಪೀಠಕ್ಕೆ ನಾನು ಹೋಗಿದ್ದು 2011ರಲ್ಲಿ. ಅಲ್ಲಿಯ ಒಂದೆರಡು ಪೋಟೋಗಳನ್ನು ಫೇಸ್‌ಬುಕ್‌ ಗೆ ಅಪ್ಲೋಡು ಮಾಡಿದ್ದು ಬಿಟ್ಟರೆ ಅದರ ಬಗ್ಗೆ ಏನನ್ನೂ ಬರೆಯಲಿಲ್ಲ. ಅದೂ ಕೂಡ ವಿವೇಕಾನಂದರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಜಾಗವನ್ನು ನೆನಪಿಸಿಕೊಂಡು ಬರೆದಿದ್ದೆ. ಯಾಕೆಂದರೆ, ಅವರು ಇಲ್ಲಿ ಧ್ಯಾನಮಗ್ನರಾಗಿದ್ದರು. ಶಾಶ್ವತವಾಗಿ ಸಮಾಧಿ ಸ್ಥಿತಿಗೆ ಹೋಗುವವರಿದ್ದರು. ಆಗ ಅವರ ಗುರು ರಾಮಕೃಷ್ಣ ಪರಮಹಂಸರು ಎಚ್ಚರಿಸಿ ಜಾಗೃತ ಸ್ಥಿತಿಗೆ ಕರೆತಂದರು ಎಂದೇನೋ ಬರೆದಿದ್ದೆ.

ಪುರಾಣದ ಹಿನ್ನೆಲೆಯಿಂದ ನೋಡಿದರೆ ಶುಂಭ-ನಿಶುಂಭರನ್ನು ವಧಿಸಿದ ನಂತರ ಜಗನ್ಮಾತೆ ಇಲ್ಲಿ ಬಂದು ವಿಶ್ರಾಂತಿಯನ್ನು ಪಡೆದ ಜಾಗ ಎಂಬುದಕ್ಕಷ್ಟೇ ನನ್ನ ಜ್ಞಾನ ಸೀಮಿತವಾಗಿತ್ತು. ಆದರೆ, 2012ರಲ್ಲಿ ನಾಸಾದ ವಿಜ್ಞಾನಿಗಳು ಇಲ್ಲಿಗೆ ಬಂದು ಕೇಸರದೇವಿ ನೆಲೆನಿಂತ ಬೆಟ್ಟವನ್ನು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಿ, “ಇದು ಪ್ರಪಂಚದಲ್ಲಿಯೇ ಅತ್ಯಪೂರ್ವವಾದ ಮೂರು ಜಾಗಗಳಲ್ಲಿ ಒಂದು’ ಎಂದು ಹೇಳಿದಾಗ, ಅಲ್ಲಿ ತೆಗೆದ ಪೋಟೋ ಮತ್ತು ವಿಡಿಯೋ ಪೂಟೇಜ್‌ಗಳನ್ನು ಇನ್ನೊಮ್ಮೆ ಕುತೂಹದಿಂದ ನೋಡಿದ್ದೆ. ನಾಸಾ ವಿಜ್ಞಾನಿಗಳ ಪ್ರಕಾರ ಈ ಬೆಟ್ಟಕ್ಕೆ ಅಸಾಧಾರಣವಾದ ಚುಂಬಕ ಶಕ್ತಿಯಿದೆ. ಇಲ್ಲಿ ಹೊರಹೊಮ್ಮುವ ಮ್ಯಾಗ್ನಟಿಕ್‌ ಎನರ್ಜಿ ಜಗತ್ತಿನಲ್ಲಿ ಇನ್ನು ಎರಡು ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತದಂತೆ. ಒಂದು, ದಕ್ಷಿಣ ಅಮೆರಿಕದ ಪೆರುವಿನಲ್ಲಿರುವ ಯಾವ ಸುಳಿವೂ ಸಿಗದೆ ಇದ್ದಕ್ಕಿದ್ದಂತೆ ಕಣ್ಮರೆಯಾದ ಇಂಕಾ ನಾಗರೀಕತೆ ಅರಳಿದ್ದ ಪರಿಸರದ ಮಾಚುಪೀಚುವಿನಲ್ಲಿ. ಇನ್ನೊಂದು, ಇಂಗ್ಲೆಂಡಿನಲ್ಲಿರುವ ಕ್ರಿ.ಪೂ. ಕಾಲದ ಶಿಲಾನಿರ್ಮಿತಿ ಇರುವ ಸ್ಟೋನ್‌ ಹೆಂಜ್‌ ಪರಿಸರದಲ್ಲಿ. ಈ ಸ್ಥಳಗಳಿಗೆ ಹೋದಾಗ ಮನಸು ಯಾವುದೋ ಒಂದು ಆತೀತವಾದ ಅನುಭವಕ್ಕೆ ಒಳಗಾಗುತ್ತದೆ.

ಅಧ್ಯಾತ್ಮಿಕ ಸೆಳೆತಕ್ಕೆ ಸಿಗುತ್ತದೆ. ಮನದಲ್ಲಿ ಅವರ್ಣನೀಯವಾದ ಶಾಂತಿ ಮತ್ತು ಸಮಾಧಾನಗಳು ದೊರೆಯುತ್ತವೆ ಎಂದು ಕೂಡಾ ವಿಜ್ಞಾನಿಗಳು ಹೇಳಿದ್ದಾರೆ. ಈ
ಜಾಗಗಳಲ್ಲಿರುವ ವಿಶೇಷತೆಯನ್ನು ವೈಜ್ಞಾನಿಕ ಭಾಷೆಯಲ್ಲಿ Van Allen Belt ಎಂದು ಕರೆಯುತ್ತಾರೆ. ಅಂದರೆ ಭೂಮಿಯ ಸುತ್ತಲಿನ ಒಂದು ಶಕ್ತಿಯುತವಾದ ವಿದ್ಯುದಾವೇಶಪೂರಿತ particlesಗಳ ವೃತ್ತಾಕಾರದ ವಲಯ. ಇವು ಸೌರ ಮಾರುತಗಳಿಂದಾಗಿ ಹುಟ್ಟಿಕೊಳ್ಳುತ್ತವೆ. ಇದು ಭೂಮಿಯ ಅಯಸ್ಕಾಂತೀಯ ಕ್ಷೇತ್ರದಿಂದ ಬಂಧಿಸಲ್ಪಟ್ಟಿದೆ. ಭೂಮಿಯ ವಿದ್ಯುತ್‌ ಕಾಂತಕ್ಷೇತ್ರವು ಭೂಮಿಯ ಸುತ್ತ ಸಮನಾಗಿ ಆವರಿಸಿಲ್ಲ. ಸೌರ ಮಾರುತಗಳಿಂದ ಸೃಷ್ಟಿಯಾಗುವ ಆ ವಿದ್ಯುದಾವೇಶ ಪೂರಿತ ಕಣಗಳನ್ನು ಹಿಡಿದಿಟ್ಟುಕೊಳ್ಳುವ ಆಯಸ್ಕಾಂತೀಯ ಶಕ್ತಿ ಮೇಲೆ ಹೇಳಿದ ಮೂರು ಜಾಗಗಳಲ್ಲಿ ಅತ್ಯಧಿಕವಾಗಿದೆ ಎಂದು ನಾಸಾದ ವಿಜ್ಞಾನಿಗಳು ಈಗ ಕಂಡು ಹಿಡಿದಿದ್ದಾರೆ.

ಸ್ಥಳದಲ್ಲೇನೋ ವೈಬ್ರೇಶನ್‌ ಇದೆ !
ಕೇಸರದೇವಿ ನೆಲೆನಿಂತಿರುವುದು ದೊಡ್ಡ ಬೆಟ್ಟದಲ್ಲಿರುವ ಸಿಂಹದ ಬಾಯಿಯಂತಿರುವ ಪುಟ್ಟ ನೈಸರ್ಗಿಕ ಗುಹೆಯಲ್ಲಿ. ಒಬ್ಬ ಪೂಜಾರಿ ಕುಳಿತುಕೊಂಡು ಪೂಜೆ ಮಾಡಲಷ್ಟೇ ಅಲ್ಲಿ ಜಾಗವಿದೆ. ದೇವಿಯ ಮೂರ್ತಿಯ ಹಿಂದಿನ ಗುಹೆಯ ವಿನ್ಯಾಸವನ್ನು ಗಮನಿಸಿದರೆ ಅದು ಸಿಂಹದ ಕುತ್ತಿಗೆಯ ಸುತ್ತ ಹರಡಿಕೊಂಡಿರುವ ಕೇಸರವನ್ನು ನೆನಪಿಸುತ್ತದೆ. ಅದು ದೇವಿಯ ಬಿಂಬಕ್ಕೆ ಪ್ರಭಾವಳಿಯಂತೆ ಹರಡಿ ಕೊಂಡಿದೆ. ಆಸ್ತಿಕರ ಪಾಲಿಗೆ ಆ ಬೆಟ್ಟವೇ ದೇವಿಯ ವಾಹನವಾದ ಸಿಂಹ. ಈಗ ಬೆಟ್ಟದಿಂದ ಅತ್ಯಂತ ಪ್ರಬಲವಾದ ಮ್ಯಾಗ್ನಟಿಕ್‌ ಕಿರಣಗಳು ಹೊರಹೊಮ್ಮುತ್ತಿರುವುದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಅಧ್ಯಾತ್ಮದ ಹುಡುಕಾಟದಲ್ಲಿರುವವರಿಗೆ ಈ ಬೆಟ್ಟದ ಮಹಿಮೆ ಬಹಳ ಮೊದಲೇ ಗೊತ್ತಿತ್ತೆ? ಸಾಹಿತ್ಯ, ತಣ್ತೀಜ್ಞಾನ, ಮನಃಶಾಸ್ತ್ರ ಮುಂತಾದ ಮಾನವಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ ಸ್ವದೇಶಿ ಮತ್ತು ವಿದೇಶಿ ಮಹನೀಯರು ಆಗಾಗ ಇಲ್ಲಿಗೆ ಭೇಟಿಕೊಟ್ಟ ಸಂಗತಿಗಳನ್ನು ಓದುತ್ತಿದ್ದರೆ ಈ ಸ್ಥಳಲ್ಲೇನೋ ವೈಬ್ರೇಷನ್‌ ಇರುವುದು ಅವರಿಗೆ ತಿಳಿದಿತ್ತೆಂದು ಭಾಸವಾಗುತ್ತದೆ.

ಬೌದ್ಧಗುರು ಪದ್ಮಸಂಭವನಿಂದ ರಚನೆಯಾಯಿತೆನ್ನಲಾದ, ಪ್ರಪಂಚದ ಕಣ್ಣಿಗೆ ಬೀಳದ, ನಮ್ಮ ಗರುಡಪುರಾಣವನ್ನು ನೆನಪಿಸುವ ಟಿಬೇಟಿಯನ್ನರ ಬೈಬಲ್‌ನಂತಿರುವ ದಿ ಟಿಬೇಟಿಯನ್‌ ಬುಕ್‌ ಅಫ್ ದ ಡೆಡ್‌ ಪುಸ್ತಕವನ್ನು ಅಗ್ನಿ ಶ್ರೀಧರ್‌ ಟಿಬೇಟಿಯನ್ನರ ಸತ್ತವರ ಪುಸ್ತಕ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಮೊತ್ತಮೊದಲ ಬಾರಿಗೆ ಇಂಗ್ಲಿಶ್‌ ಗೆ ಅನುವಾದಿಸಿದ ಅಮೆರಿಕದ ಬರಹಗಾರನೂ ಅಂಥ್ರಾಪಲಾಜಿಸ್ಟ್‌ನೂ ಆಗಿದ್ದ ವಾಲ್ಟರ್‌ ಇವಾನ್ಸ್‌ 1927ರಲ್ಲಿ ಇಲ್ಲಿಯೇ ಹಲವು ಕಾಲ ನೆಲೆಸಿದ್ದನು. ಜಿಡ್ಡು ಕೃಷ್ಣಮೂರ್ತಿ, ರಮಣರು, ಯೋಗಾನಂದರಂತಹ ದಾರ್ಶನಿಕರ ಪ್ರಭಾವಕ್ಕೊಳಗಾಗಿ ಭಾರತದಲ್ಲೇ ಸುಮಾರು 47 ವರ್ಷ ವಾಸಿಸಿದನು. ಇವನಂತೆಯೇ ಈ ಪರ್ವತದ ಮತ್ತು ಮೇಲಿನ ದಾರ್ಶನಿಕರ ಮೋಡಿಗೆ ಒಳಗಾದವನು ಡೆನ್ಮಾರ್ಕಿನ ಆಲ್ಫೆಡ್‌ ಸೊರೆನ್ಸನ್‌. ಈತನಂತೂ ತನ್ನ ಹೆಸರನ್ನು ಶೂನ್ಯತಾ ಎಂದು ಬದಲಾಯಿಸಿಕೊಂಡು, ಪರ್ವತದಂಚಿನಲ್ಲೇ ಗುಡಿಸಲು ಕಟ್ಟಿಕೊಂಡು ತರಕಾರಿ ಹಣ್ಣುಹಂಪಲುಗಳನ್ನು ಬೆಳೆದುಕೊಂಡು 44ವರ್ಷ ಇಲ್ಲಿ ವಾಸವಾಗಿದ್ದನು. ಕವಿ ಹಾಗೂ ಚಿತ್ರಕಾರನಾಗಿದ್ದ ಜರ್ಮನಿಯ ಅರ್ನೆಸ್ಟ್‌ ಲೂಥರ್‌ ಬುದ್ಧಿಸಂನಲ್ಲಿ ವಿಶೇಷ ಅಧ್ಯಯನದಲ್ಲಿ ತೊಡಗಿಕೊಂಡಿದ್ದವನು.

ಟಿಬೇಟ್‌, ಶ್ರೀಲಂಕಾ ಸುತ್ತಾಡುತ್ತ ರವೀಂದ್ರರ ಶಾಂತಿನಿಕೇತನದಲ್ಲಿ ಜರ್ಮನ್‌ ಮತ್ತು ಫ್ರೆಂಚ್‌ ಕಲಿಸುತ್ತಿದ್ದವನು ಬಾಂಬೆಯ ಪಾರ್ಸಿ ಹುಡುಗಿಯನ್ನು ಮದುವೆಯಾಗಿ, ಕೇಸರದೇವಿ ಬೆಟ್ಟಕ್ಕೆ ಬಂದು ವಾಲ್ಟರ್‌ ಇವಾನ್ಸ್‌ ವಾಸಿಸುತ್ತಿದ್ದ ಪಕ್ಕದಲ್ಲಿ ಇವನೂ ಕುಟೀರವನ್ನು ಕಟ್ಟಿಕೊಳ್ಳುತ್ತಾನೆ. ಈ ಮೂರೂ ಜನರು ಭಾರತದ ಪೌರತ್ವವನ್ನೂ ಪಡೆದುಕೊಂಡರೆಂಬುದು ಗಮನಿಸತಕ್ಕ ಅಂಶ. ಸುಪ್ರಸಿದ್ಧ ಬರಹಗಾರ ಡಿ.ಎಚ್‌.ಲಾರೆನ್ಸ್‌ ಇಲ್ಲಿಗೆ ಸತತ ಎರಡು ವರ್ಷ ಭೇಟಿ ಕೊಟ್ಟಿದ್ದ. ಒಟ್ಟಿನಲ್ಲಿ ಪ್ರಪಂಚದಾದ್ಯಂತ ಬರಹಗಾರರು, ಕಲಾವಿದರನ್ನು ಸೇರಿದಂತೆ ಆಧ್ಯಾತ್ಮದ ಹುಡುಕಾಟದಲ್ಲಿರುವ ವಿಶಿಷ್ಟ ವ್ಯಕ್ತಿಗಳನ್ನು ಈ ಕೇಸರದೇವಿ ಬೆಟ್ಟ ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು. 1960ರ ಅಸುಪಾಸು ಈ ಪ್ರದೇಶವೂ ಬದಲಿ ಸಂಸ್ಕೃತಿಯ ಕೌಂಟರ್‌ ಕಲ್ಚರ್‌ ಕೇಂದ್ರವಾಗಿತ್ತು. ಇದು ಹಿಪ್ಪಿಗಳ ಸ್ವರ್ಗವೂ ಆಗಿತ್ತು ಎಂದು ಹೇಳಲಾಗುತ್ತಿದೆ. ಇಷ್ಟು ಪ್ರಸಿದ್ಧಿ ಪಡೆದಿರುವ ಈ ಬೆಟ್ಟವನ್ನು ನಾನು ಹತ್ತಿದ್ದು , ಆ ದೇವಿಯನ್ನು ಕಂಡದ್ದು ಎಲ್ಲವೂ ಆಕಸ್ಮಿಕ.

ಐವತ್ತೆರಡು ಶಕ್ತಿ ಪೀಠಗಳಲ್ಲೊಂದು
ನನ್ನ ಹಿರಿಯ ಗೆಳತಿಯೊಬ್ಬರಿಗೆ ಭಾರತದಲ್ಲಿರುವ ಎಲ್ಲಾ ಐವತ್ತೆರಡು ಶಕ್ತಿ ಪೀಠಗಳನ್ನು ನೋಡಿ ಪುನೀತಗೊಳ್ಳುವ ಬಯಕೆಯಿತ್ತು. ಅವರು ಹಿಮಾಲಯ ಸುತ್ತುವ ತಮ್ಮ ಪುಟ್ಟ ತಂಡಕ್ಕೆ ನನ್ನನ್ನೂ ಸೇರಿಸಿಕೊಂಡಿದ್ದರು. ಪ್ರತಿವರ್ಷ ಒಂದೆರಡು ಬಾರಿಯಾದರೂ ಹಿಮಾಲಯದ ಗಿರಿಶ್ರೇಣಿಗಳಲ್ಲಿ ಸಣ್ಣಪುಟ್ಟ ಚಾರಣಗಳನ್ನು ಇಟ್ಟುಕೊಳ್ಳುವ ಆ ತಂಡದೊಡನೆ ಸೇರಿಕೊಂಡ ಮೇಲೆ ನಾನೂ ಹಿಮಾಲಯದ ಮೋಹಕ್ಕೆ ಬಿದ್ದೆ. ಹೀಗೆ, ಒಂದು ಬಾರಿ ಉತ್ತರಾಖಂಡ್‌ನ‌ ಕುಮಾವು
ವಲಯದ ಮುನಿಷ್ಯಾರಿ, ಲೋಹಘಾಟ್‌, ಪೂರಣಗಿರಿ, ಮಹಾಕಾಳಿ ನದಿ, ಕೌಸಾನಿ, ನೈನಿತಾಲ್‌ ಸುತ್ತಮುತ್ತ ಪ್ರದೇಶಗಳಿಗೆ ಪ್ರವಾಸ ಹೊರಟಿದ್ದೆವು. ಆ ನಮ್ಮ ಲಿಸ್ಟ್‌ನಲ್ಲಿ ಕೇಸರದೇವಿಬೆಟ್ಟ ಮತ್ತು ಅದರ ಇನ್ನೊಂದು ಬದಿಯಲ್ಲಿರುವ ಶಾರದಾ ಮಠವೂ ಇತ್ತು. ಕೇಸರದೇವಿ ಬೆಟ್ಟವೊಂದು ಶಕ್ತಿಪೀಠ ಎಂದು ಆ ನನ್ನ ಹಿರಿಯ ಗೆಳತಿ ಹೇಳಿದ್ದರು. ನಾನು ಆ ಬಗ್ಗೆ ವಿಶೇಷ ಆಸಕ್ತಿಯೇನೂ ವಹಿಸಲಿಲ್ಲ.

ಅದರೆ, ಕೇಸರ ದೇವಿಯ ಪರಿಸರಕ್ಕೆ ಹೋದ ಒಡನೆಯೇ ಏನೋ ಒಂದು ರೀತಿಯ ಕಂಪನ, ಸೆಳೆತ ಇಲ್ಲಿ ಇದೆ ಎನಿಸಿತು. ಸ್ವಾಮಿ ವಿವೇಕಾನಂದರು ಅಧ್ಯಾತ್ಮಿಕ ಸೆಳೆತಕ್ಕೆ ಒಳಗಾದ ಜಾಗವಿದು. ಅದರ ಬಗ್ಗೆ ಸ್ಥಳೀಯರೊಬ್ಬರು ಹೇಳಿದ ಕಥೆಯನ್ನು ಲೇಖನದ ಆರಂಭದಲ್ಲಿಯೇ ಹೇಳಿದ್ದೇನೆ. ಅಲ್ಲದೆ 1890ರಲ್ಲಿ ವಿವೇಕಾನಂದರು ಇಲ್ಲಿ ಧ್ಯಾನಾಸಕ್ತರಾಗಿದ್ದರು ಎಂಬುದಾಗಿ ಫ‌ಲಕವನ್ನೂ ಹಾಕಿದ್ದರು.

ಸಾಮಾನ್ಯವಾದ ಬೆಟ್ಟವದು. ಏರಲು ಅಷ್ಟೇನೂ ಕಷ್ಟವಿಲ್ಲ. ಆದರೆ, ನಾವು ಬೆಟ್ಟದ ತುದಿ ತಲುಪಿದಾಗ ಸೂರ್ಯೋದಯವಾಗಿದ್ದರೂ ಮಂಜಿನ ತೆರೆಯಿನ್ನೂ
ಹರಿದಿರಲ್ಲಿಲ್ಲ. ಇಡೀ ಅಲ್ಮೋರಾ ಪಟ್ಟಣ ಒಂದು ಕುರುಹು ಕಾಣದಂತೆ ಪದರುಪದರಾಗಿ ಮೋಡ ಆವರಿಸಿಕೊಂಡಿತ್ತು. ಆ ಗಳಿಗೆಗೆ ಮೋಡದ ಮೇಲೆ ತೇಲಾಡುತ್ತಿರುವ ದೇವತೆಗಳೇ ನಾವು ಎಂದು ಸಂಭ್ರಮಿಸಿದ್ದು ಮಾತ್ರ ಸುಳ್ಳಲ್ಲ. ಸೂರ್ಯನ ಪ್ರಖರ ಕಿರಣ ತಾಗಿದಂತೆಲ್ಲ ಮೋಡ ಸರಿಯುತ್ತ ಬಂದು
ಅಲ್ಮೋರಾ ಪಟ್ಟಣ ಗೋಚರವಾಗತೊಡಗಿತು. ನಾವು ನಿಂತ ಜಾಗ ಪೈನ್‌ ಮರಗಳಿಂದ ಸುತ್ತುವರಿದು ಅರಣ್ಯದಂತೆ ಭಾಸವಾಗುವ ಬೆಟ್ಟವದು. ಅಲ್ಲಿ ನಿಂತು ಕಣ್ಣು ಹಾಯಿಸಿದರೆ ಹಿಮಾಲಯದ ಗಿರಿಶೃಂಗಗಳ ಅದ್ಭುತ ನೋಟ ಸಿಗುತ್ತದೆ. ಅದರಲ್ಲೂ ಬಂಡಾರಪೂಂಚ್‌ ಶಿಖರದ ದರ್ಶನವಾಗುತ್ತದೆ. ಆಕೆಯ ದರ್ಶನವನ್ನು ಪಡೆದು ಸುಮಾರು ಐವತ್ತು ಮೆಟ್ಟಲು ಗಳಷ್ಟು ಏರಿ ಹೋದರೆ ಅಲ್ಲಿ ಶಿವಮಂದಿರ ಸಿಗುತ್ತದೆ. ಅಲ್ಲಿ ಒಂದು ಧ್ಯಾನಮಂದಿರವೂ ಇದೆ. ಅಲ್ಲಿ ಬಂದ ಪ್ರವಾಸಿಗರು,
ಯಾತ್ರಾರ್ಥಿಗಳು ಅಲ್ಲಿ ಒಂದು ಗಳಿಗೆ ಮೌನವಾಗಿ ಕುಳಿತು ಅಲೌಕಿಕದ ಆನಂದ ಪಡೆದುಕೊಳ್ಳುತ್ತಾರೆ. ಅಲ್ಲಿ ತಂಗಿರುವ ಒಂದಷ್ಟು ವಿದೇಶಿ ವ್ಯಕ್ತಿಗಳನ್ನು ನಾನಲ್ಲಿ ಕಂಡಿದ್ದೆ.

ಹಿಮಾಲಯವನ್ನು ನನಗೆ ಪರಿಚಯಿಸಿದ ಆ ನನ್ನ ಗೆಳತಿ ಈಗ ಐವತ್ತೂಂದು ಶಕ್ತಿ ಪೀಠಗಳನ್ನೂ ನೋಡಿ ಪುನೀತರಾಗಿದ್ದಾ ರೆ. ಅವರ ಜೊತೆ ಸೇರಿ ನಾನೂ ಹತ್ತಾರು ಪೀಠಗಳನ್ನು ಕಂಡಿದ್ದೇನೆ. ಆದರೆ ಒಂದು ಶಕ್ತಿಪೀಠವನ್ನು  ನೋಡಲು ಅವರಿಂದಾಗಲಿಲ್ಲ ! ಅದಕ್ಕಾಗಿ ಇನ್ನಿಲ್ಲದ ರೀತಿ ಯಲ್ಲಿ ಪ್ರಯತ್ನಿಸಿದ್ದರು. ಆದರದು ಸಾಧ್ಯವಾಗಲಿಲ್ಲ. ಯಾಕೆಂದರೆ, ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದೆ. ಅದುವೇ ಶಂಕರಾಚಾರ್ಯರು ಸ್ಥಾಪಿಸಿದರೆನ್ನಲಾದ ಸರ್ವಜ್ಞ ಪೀಠ. ದೇವಿ ಶಾರದಾಂಬೆ ಪೀಠಸ್ಥೆಯಾದ ಆ ಶಕ್ತಿಪೀಠವನ್ನು ಗೂಗಲ್‌ ನಲ್ಲಾದರೂ ನೋಡೋಣವೆಂದು ಹುಡುಕಿದಾಗ ಕಂಡದ್ದು ನಾಲ್ಕು ಪಾಳುಬಿದ್ದ ಕಂಬಗಳ ಜರಿದ ಗೋಡೆಗಳ
ಅವಶೇಷ ಮಾತ್ರ. ಅಲ್ಲಿಗೆ ಪ್ರಪಂಚದ ಯಾವ ರಾಷ್ಟ್ರದ ಪ್ರಜೆ ಬೇಕಾದರೂ ಭೇಟಿ ನೀಡಬಹುದು ಆದರೆ ಭಾರತಿಯರಿಗೆ ಪ್ರವೇಶವಿಲ್ಲ ! ಕೆಲವು ವರ್ಷಗಳ ಹಿಂದೆ ಕೇಸರದೇವಿ ನೆಲೆನಿಂತಿರುವ ಪರ್ವತಕ್ಕೆ ಯಾವುದೇ ಪೂರ್ವಾಲೋಚನೆಯಿಲ್ಲದೆ ಹೋಗಿದ್ದೆ. ಇನ್ನೊಮ್ಮೆ ಅಲ್ಲಿಗೆ ಹೋದಲ್ಲಿ ಅದನ್ನು ನೋಡುವ ನೋಟ, ಗ್ರಹಿಸುವ ರೀತಿ ಬೇರೆಯದೇ ಆಗಿರುತ್ತೆ !

*ಉಷಾ ಕಟ್ಟೆಮನೆ

(ಡಿಸೆಂಬರ್ 10, 2017ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ ಲೇಖನ)

ಟಾಪ್ ನ್ಯೂಸ್

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.