1999ರ ಮ್ಯಾಂಚೆಸ್ಟರ್ ಮ್ಯಾಚ್: ಕರ್ನಾಟಕಕ್ಕೆ ಶರಣಾಗಿದ್ದ ಪಾಕ್!
Team Udayavani, Jun 17, 2019, 5:54 AM IST
ಮ್ಯಾಂಚೆಸ್ಟರ್: ಭಾರತ- ಪಾಕಿಸ್ಥಾನ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ವಿಶ್ವಕಪ್ ಪಂದ್ಯ ವನ್ನಾಡಿದ್ದು ಇದು 2ನೇ ಸಲ. ಸರಿಯಾಗಿ 20 ವರ್ಷಗಳ ಹಿಂದೆ, 1999ರ ಕೂಟದ ವೇಳೆ ಇಲ್ಲಿ ಇತ್ತಂಡಗಳು ಮುಖಾಮುಖೀ ಯಾಗಿದ್ದವು. ಅಜರುದ್ದೀನ್ ನೇತೃತ್ವದ ಭಾರತ 47 ರನ್ನುಗಳಿಂದ ಗೆದ್ದು ಬಂದಿತ್ತು. ಕರ್ನಾಟಕದ ಬೌಲರ್ಗಳು ಸೇರಿಕೊಂಡು ಪಾಕಿಸ್ಥಾನವನ್ನು ಉರುಳಿಸಿದ್ದು ಮರೆಯ ಲಾಗದ ಸಾಧನೆಯಾಗಿ ದಾಖಲಾಗಿದೆ.
ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಭಾರತ ಗಳಿಸಿದ್ದು 6 ವಿಕೆಟಿಗೆ 227 ರನ್ ಮಾತ್ರ. ಜವಾಬಿತ್ತ ಪಾಕಿಸ್ಥಾನ 45.3 ಓವರ್ಗಳಲ್ಲಿ 180ಕ್ಕೆ ಉದುರಿತ್ತು. ಪಾಕಿಸ್ಥಾನದ ಎಲ್ಲ 10 ವಿಕೆಟ್ಗಳು ಕನ್ನಡಿಗರ ಪಾಲಾಗಿದ್ದವು. ವೆಂಕಟೇಶ ಪ್ರಸಾದ್ 27ಕ್ಕೆ 5, ಜಾವಗಲ್ ಶ್ರೀನಾಥ್ 37ಕ್ಕೆ 3 ಹಾಗೂ ಅನಿಲ್ 43ಕ್ಕೆ 2 ವಿಕೆಟ್ ಉರುಳಿಸಿ ಅಕ್ರಮ್ ಪಡೆಗೆ ಆಘಾತವಿಕ್ಕಿದರು.
ಕನ್ನಡಿಗರ ಪರಾಕ್ರಮದಲ್ಲಿ ರಾಹುಲ್ ದ್ರಾವಿಡ್ ಪಾಲಿಲ್ಲದಿದ್ದರೆ ಹೇಗೆ! ಅಂದಿನ ಮುಖಾಮುಖೀಯಲ್ಲಿ ದ್ರಾವಿಡ್ ಅವರೇ ಭಾರತೀಯ ಸರದಿಯ ಟಾಪ್ ಸ್ಕೋರರ್ ಆಗಿದ್ದರು. ದ್ರಾವಿಡ್ ಗಳಿಕೆ 61 ರನ್. ಪ್ರಸಾದ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಒಟ್ಟಾರೆ ಅಂದು ಕರ್ನಾಟಕದ ಆಟಗಾರರು ಸೇರಿ ಪಾಕಿಸ್ಥಾನವನ್ನು ಉದುರಿಸಿದ್ದು ಭಾರತೀಯ ವಿಶ್ವಕಪ್ ಇತಿಹಾಸದ ಅಚ್ಚಳಿ ಯದ ವಿದ್ಯಮಾನವಾಗಿ ದಾಖಲಾಗಿದೆ.