ಮಾಯಾಂಕ್ ಅಗರ್ವಾಲ್ ಬದಲಿ ಆಟಗಾರ
ಬಿಸಿಸಿಐ ಪ್ರಕಟನೆ
Team Udayavani, Jul 2, 2019, 5:56 AM IST
‘ವಿಜಯ್ ಶಂಕರ್ ಅವರ ಎಡಗಾಲಿನ ಹೆಬ್ಬೆರಳಿನ ಮೂಳೆಯಲ್ಲಿ ಸೂಕ್ಷ್ಮ ಬಿರುಕು ಕಂಡು ಬಂದಿದೆ. ಪೂರ್ತಿ ಗುಣಮುಖವಾಗಲು ಕನಿಷ್ಠ 3 ವಾರ ಬೇಕಿದೆ. ಹೀಗಾಗಿ ಅವರು ವಿಶ್ವಕಪ್ ಕೂಟದಿಂದ ಹೊರಬೀಳಲಿದ್ದಾರೆ. ಇವರ ಸ್ಥಾನಕ್ಕೆ ಮಾಯಾಂಕ್ ಅಗ ರ್ವಾಲ್ ಹೆಸರನ್ನು ಐಸಿಸಿಗೆ ಸೂಚಿಸಲಾಗಿದೆ’ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
‘ಇದೊಂದು ಹಳೆಯ ಗಾಯ. ಸೌತಾಂಪ್ಟನ್ ಅಭ್ಯಾಸದ ವೇಳೆ ಬುಮ್ರಾ ಎಸೆತವೊಂದು ಅವರ ಕಾಲಿಗೆ ಬಡಿದಿತ್ತು. ಅಫ್ಘಾನ್ ಮತ್ತು ವಿಂಡೀಸ್ ವಿರುದ್ಧ ಆಡಿದ್ದರಿಂದ ಇದು ಬಿಗಡಾಯಿಸಿದೆ’ ಎಂಬುದಾಗಿ ರವಿವಾರದ ಪಂದ್ಯದ ಬಳಿಕ ರೋಹಿತ್ ಶರ್ಮ ಹೇಳಿದ್ದರು.
‘ಎ’ ತಂಡದ ಯಶಸ್ಸು
ಆರಂಭಕಾರ ಮಾಯಾಂಕ್ ಅಗ ರ್ವಾಲ್ ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪದಾರ್ಪಣೆಗೈದು ಉತ್ತಮ ಪ್ರದರ್ಶನ ನೀಡಿದ್ದರು. ಈವರೆಗೆ ಏಕದಿನ ಪಂದ್ಯಗಳನ್ನಾಡಿಲ್ಲ. ಆದರೆ ರಾಹುಲ್ ದ್ರಾವಿಡ್ ಅವರಿಂದ ತರಬೇತು ಪಡೆದ ಭಾರತ ‘ಎ’ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ ಅಗರ್ವಾಲ್ ಉತ್ತಮ ಪ್ರದರ್ಶನ ನೀಡಿದ್ದರು.
ಇಂಗ್ಲೆಂಡ್ ಲಯನ್ಸ್ ಮತ್ತು ವೆಸ್ಟ್ ಇಂಡೀಸ್ ‘ಎ’ ತಂಡಗಳನ್ನು ಒಳಗೊಂಡ ಸರಣಿಯಲ್ಲಿ ಭಾರತ ‘ಎ’ ಚಾಂಪಿಯನ್ ಆಗಿ ಮೂಡಿಬಂದಿತ್ತು. ಮಾಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಬ್ಯಾಟಿಂಗ್ ಸಾಧಕರ ಅಗ್ರಸ್ಥಾನ ಅಲಂಕರಿಸಿದ್ದರು. ಈ ಅನುಭವದ ಹಿನ್ನೆಲೆಯಲ್ಲಿ ಅವರನ್ನು ವಿಶ್ವಕಪ್ ತಂಡಕ್ಕೆ ಆರಿಸಿರುವ ಸಾಧ್ಯತೆ ಇದೆ.
‘ಆರಂಭಕಾರನಾಗಿರುವುದರಿಂದ ತಂಡದ ಆಡಳಿತ ಮಂಡಳಿ ಅಗರ್ವಾಲ್ ಹೆಸರನ್ನು ಶಿಫಾರಸು ಮಾಡಿರಬೇಕು. ಅಕಸ್ಮಾತ್ ಮುಂದಿನ ಪಂದ್ಯಗಳಲ್ಲಿ ರಿಷಭ್ ಪಂತ್ ವಿಫಲರಾದರೆ ರಾಹುಲ್ ಅವರನ್ನು ಮತ್ತೆ 4ನೇ ಸ್ಥಾನಕ್ಕೆ ಇಳಿಸುವ ಉದ್ದೇಶವೂ ಇದೆ’ ಎಂದು ಮೂಲವೊಂದು ತಿಳಿಸಿದೆ.
ಈ ವೇಳೆ ಮೀಸಲು ಆಟಗಾರರ ಯಾದಿಯಲ್ಲಿರುವ ಅಂಬಾಟಿ ರಾಯುಡು ಅವರನ್ನು ಆಯ್ಕೆ ಮಾಡದಿದ್ದುದು ಕೂಡ ಟೀಕೆಗೆ ಕಾರಣವಾಗಿದೆ.
ವಿಜಯ್ ಶಂಕರ್ ವೈಫಲ್ಯ
ವಿಶ್ವಕಪ್ನಂಥ ಪ್ರತಿಷ್ಠಿತ ಕೂಟದಲ್ಲಿ ಅನನುಭವಿ ವಿಜಯ್ ಶಂಕರ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವ ಭಾರತದ ಕ್ರಮದ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಇಂಗ್ಲೆಂಡ್ ವಿರುದ್ಧ ಈ ಕಾರಣಕ್ಕಾಗಿಯೇ ಅವರನ್ನು ಕೈಬಿಡಲಾಗಿತ್ತೆಂದು ಭಾವಿಸ ಲಾಗಿತ್ತು. ‘ಇಂಜುರಿ’ ಕಾರಣ ನೀಡಲಾಗಿ ತ್ತಾದರೂ ಈ ಬಗ್ಗೆ ಅನುಮಾನಗಳಿದ್ದವು. ಆದರೀಗ ಎಲ್ಲವೂ ಸ್ಪಷ್ಟವಾಗಿದೆ.