ಮಳೆ: ಆರಂಭದಲ್ಲೇ ಬಾಕಿಯಾದ ಶಾಸ್ತ್ರೀ ವೃತ್ತ
Team Udayavani, Jul 15, 2022, 11:05 AM IST
ಕುಂದಾಪುರ: ವಿನೂತನ ಮಾದರಿಯಲ್ಲಿ ರಚನೆಯಾಗಲಿರುವ ಇಲ್ಲಿನ ಶಾಸ್ತ್ರೀ ಸರ್ಕಲ್ ಕಾಮಗಾರಿ ಮಳೆಯಿಂದಾಗಿ ಆರಂಭದಲ್ಲೇ ಬಾಕಿಯಾಗಿದೆ.
ನೂತನ ವೃತ್ತ ಮೈಸೂರು ಜಯಚಾಮರಾಜೇಂದ್ರ ವೃತ್ತದ ಮಾದರಿಯಲ್ಲಿ ವಿನ್ಯಾಸವಾಗಲಿದೆ ಎಂದು ತಿಳಿಸಲಾಗಿತ್ತು. ಕುಂದಾಪುರ ಶಾಸ್ತ್ರೀ ಸರ್ಕಲ್, ಶಾಸ್ತ್ರೀ ಪಾರ್ಕ್ ಹೆಸರುವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್ಸಿನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರೀ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ದಾನಿಯೊಬ್ಬರು ನೀಡಿದ ಲಾಲ್ಬಹದ್ದೂರ್ ಶಾಸ್ತ್ರೀಗಳ ಸುಂದರ ಪ್ರತಿಮೆಯಿದೆ.
ಬೀಡಾಡಿ ತಾಣ
ಹಸುರು ಹುಲ್ಲಿನ ನಡುವೆ ಶಿಲೆಯ ಮೇಲೆ ಕೂರಿಸಲ್ಪಟ್ಟ ಶಾಸ್ತ್ರೀ ವಿಗ್ರಹವುಳ್ಳ ಸರ್ಕಲ್ ಈಚಿನ ದಿನಗಳಲ್ಲಿ ಬೀಡಾಡಿಗಳ ತಾಣವಾಗಿದೆ. ಆಶ್ರಯ ರಹಿತರು, ಮನೆಗೆ ಹೋಗದ ಸೋಮಾರಿಗಳು, ಕೂಲಿ ಕಾರ್ಮಿಕರು, ಕುಡಿತದ ಅಮಲಿನಲ್ಲಿ ಚಲಿಸಲಾರದವರು ವಿಶ್ರಾಂತಿ ತೆಗೆದುಕೊಳ್ಳುವ ಪ್ರದೇಶವಾಗಿದೆ. ರಾತ್ರಿ ವೇಳೆ ಮಲಗುವವರೂ ಇದ್ದಾರೆ. ಬೀಡಾಡಿ ದನಗಳಿಗೂ ಇದೇ ವಿಶ್ರಾಂತಿ ಧಾಮವಾಗಿದೆ. ಪ್ರತಿಮೆಗೂ ಸೂಕ್ತ ಭದ್ರತೆ ಇಲ್ಲ. ಶಾಸ್ತ್ರೀ ಸರ್ಕಲ್ನ ಸೌಂದರ್ಯ ಹೆಚ್ಚಿಸಬೇಕೆಂದು ಅನೇಕ ಸಮಯದಿಂದ ಬೇಡಿಕೆ ಇದೆ. ನಗರಕ್ಕೆ ಪ್ರವೇಶ ಮಾಡುವಾಗಲೇ ದೊರೆಯುವ ವೃತ್ತ ಇದಾದ ಕಾರಣ ಇದರ ಸೌಂದರ್ಯ ಕಂಡೇ ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾತಿದೆ. ಈ ನಿಟ್ಟಿನಲ್ಲಿ ಪುರಸಭೆ ವೃತ್ತ ನಿರ್ಮಾಣಕ್ಕೆ ಮುಂದಾಗಿದೆ.
ಬಾಕಿ
ಶಾಸ್ತ್ರೀ ಸರ್ಕಲ್ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಅದರ ಉಸ್ತುವಾರಿ, ನಿರ್ವಹಣೆ, ನವೀಕರಣ ಎಲ್ಲವೂ ಪುರಸಭೆ ಪಾಲಿಗೆ. ಆದರೆ ಈವರೆಗೆ ಸರ್ಕಲ್ ಯಾಕೆ ನವೀಕರಣ ಕಾರ್ಯ ನಡೆದಿಲ್ಲ ಎನ್ನುವ ಪ್ರಶ್ನೆಗೆ ಉತ್ತರರೂಪದಲ್ಲಿ ಬೆರಳು ಹೋಗುವುದು ಹೆದ್ದಾರಿ ಪ್ರಾಧಿಕಾರದ ಕಡೆಗೆ. 10 ವರ್ಷಗಳ ಕಾಲ ಇಲ್ಲಿ ಹೆದ್ದಾರಿ ಕಾಮಗಾರಿ ಎಂದು ದಿನದೂಡಿದ್ದು, ಇದಕ್ಕೆ ವಸ್ತುಗಳನ್ನು ತಂದು ಹಾಕಲಾಗಿತ್ತು. ರಸ್ತೆ ಅಗೆದು ಹೊಸ ರಸ್ತೆ ಮಾಡದೇ ಬಾಕಿಯಾಗಿರುವುದರಿಂದ ವೃತ್ತದ ಆಧುನೀಕರಣ ಮಾಡಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಎಪ್ರಿಲ್ವರೆಗೆ ಅಂದರೆ ಫ್ಲೈಓವರ್ ಕಾಮಗಾರಿ ಪೂರ್ಣವಾಗುವವರೆಗೆ ಈ ವೃತ್ತದ ಸಮೀಪ ಹಾದು ಹೋದ ರಸ್ತೆಯೇ ರಾಷ್ಟ್ರೀಯ ಹೆದ್ದಾರಿಯಾಗಿತ್ತು. ಈಗಲೂ ವೃತ್ತದ ಸಮೀಪ ಹೋದ ರಸ್ತೆ ಸರ್ವಿಸ್ ರಸ್ತೆಯಾದರೂ ಕಾಮಗಾರಿ ಪೂರ್ಣಗೊಂಡು ಪ್ರಾಧಿಕಾರಕ್ಕೆ ಹಸ್ತಾಂತರವಾಗದ ಕಾರಣ ತಾಂತ್ರಿಕವಾಗಿ ಇದು ಹೆದ್ದಾರಿಯೇ ಆಗಿದೆ.
ಆಕ್ಷೇಪ
ನೂತನವಾಗಿ ನಿರ್ಮಾಣವಾಗುತ್ತಿರುವ ಕಾಮಗಾರಿ ಕುರಿತು ಆಕ್ಷೇಪ ಇದೆ. ಈಗ ನಿರ್ಮಾಣವಾಗುತ್ತಿರುವ ಸ್ಥಳದ ಬದಲು ತುಸು ಆಚೆಗೆ ವಿಶಾಲವಾಗಿ ಮಾಡಬೇಕಿತ್ತು, ಗುತ್ತಿಗೆ ನೀಡುವಲ್ಲೂ ಪ್ರಾದೇಶಿಕ ಅಸಮಾನತೆ ತೋರಲಾಗಿದೆ ಇತ್ಯಾದಿ ಆಕ್ಷೇಪಗಳಿವೆ. ಆದರೆ ಆಚೀಚೆ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಜಾಗ ಇರುವ ಕಾರಣ ಅಲ್ಲಿ ಪುರಸಭೆ ಕಾಮಗಾರಿ ನಿರ್ವಹಿಸುವಂತಿಲ್ಲ. ಮಳೆ ಬಂದ ಕಾರಣ ಮಳೆಯಲ್ಲಿ ಕಾಮಗಾರಿ ಮಾಡುವಂತಿಲ್ಲ. ಗುಂಡಿ ತೆಗೆದು ನೀರು ನಿಂತಿರುವುದರಿಂದ ಜನ, ಜಾನುವಾರಿಗೆ ಅಪಾಯಕಾರಿಯಾಗಿದೆ. ಇಷ್ಟಲ್ಲದೇ ಉದ್ದೇಶಿತ ಸ್ಥಳದಲ್ಲಿ ಎರಡು ಹೈಮಾಸ್ಟ್ ದೀಪಗಳಿವೆ. ಇವುಗಳ ಪೈಕಿ ಒಂದನ್ನಾದರೂ ತೆರವುಗೊಳಿಸಬೇಕಾಗುತ್ತದೆ. ವೃತ್ತವನ್ನು ಫ್ಲೈಓವರ್ನ ಅಂಡರ್ಪಾಸ್ ಸಮೀಪ ಮಾಡಿದರೆ ವಾಹನಗಳು ಬೇರೆ ಬೇರೆ ಕಡೆಯಿಂದ ಬರುವ ಕಾರಣ ಅನಗತ್ಯ ಗೊಂದಲ ಉಂಟಾಗುತ್ತದೆ. ಸಂಚಾರ ದಟ್ಟನೆ ಉಂಟಾಗುತ್ತದೆ. ಅಪಘಾತ ಸಾಧ್ಯತೆಗಳೂ ಇಲ್ಲದಿಲ್ಲ. ಈ ಎಲ್ಲ ಕಾರಣದಿಂದ ಪರಿಶೀಲನೆ ನಡೆಸಿಯೇ ಈಗ ಇರುವ ಜಾಗದಲ್ಲೇ ನೂತನ ವೃತ್ತ ನಿರ್ಮಾಣ ಮಾಡಲಾಗುತ್ತಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
ಮಳೆ ಬಿಟ್ಟ ಬಳಿಕ ಕಾಮಗಾರಿ: ವೃತ್ತಕ್ಕೆ ಸೂಕ್ತವಾದ ಜಾಗ ಯಾವುದು ಎಂದು ಮಂಗಳೂರಿನಿಂದ ಪರಿಣತರನ್ನು ಕರೆಸಿ ಅವರಿಂದ ಸರ್ವೆ ನಡೆಸಿ ವರದಿ ಪಡೆಯಲಾಗಿದೆ. ಮಳೆಯಲ್ಲಿ ಕಾಮಗಾರಿ ಬೇಡ ಎಂದು ನಿಲ್ಲಿಸಲಾಗಿದೆ. ಮಳೆ ಬಿಟ್ಟ ಬಳಿಕ ಕಾಮಗಾರಿ ನಡೆಯಲಿದೆ. ಉದ್ದೇಶಿತ ನೀಲ ನಕಾಶೆಯಂತೆಯೇ ವೃತ್ತ ರಚನೆಯಾಗಲಿದೆ. ಸಾಮಾನ್ಯಸಭೆಯಲ್ಲಿ ಚರ್ಚಿಸಿ ಪುರಸಭೆ ಆಡಳಿತ ನಿರ್ಣಯ ಕೈಗೊಂಡಂತೆಯೇ ವೃತ್ತದ ನಿರ್ಮಾಣ ನಡೆಯುತ್ತಿದ್ದು ಇ ಟೆಂಡರ್ ಮೂಲಕವೇ ಗುತ್ತಿಗೆ ನೀಡಲಾಗಿದೆ. –ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddapura ಹೆಂಗವಳ್ಳಿ: ಮರದಿಂದ ಬಿದ್ದು ಆಸ್ಪತ್ರೆ ಸೇರಿದ್ದ ಕೃಷಿಕ ಚಿಕಿತ್ಸೆ ಫಲಿಸದೆ ಸಾವು
Byndoor ಪೊಲೀಸರನ್ನು ಸತಾಯಿಸಿದವನ ಬಂಧನ
Kundapura ಕಣ್ತಪ್ಪಿನಿಂದ ಹಣ ಕಳೆದುಕೊಂಡು ದೂರು ನೀಡಿ ವಂಚನೆಗೀಡಾದ!
Fraud Case; ಕೋಟ, ಬ್ರಹ್ಮಾವರ: ಆನ್ಲೈನ್ ವ್ಯವಹಾರದ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ
Kundapura; ಕ್ರೆಡಿಟ್ ಕಾರ್ಡ್ ವಿವರ ಪಡೆದು ಲಕ್ಷಾಂತರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ