ತರಲೆ ತಲೆಗಳ ನಡುವೆ
Team Udayavani, Mar 21, 2017, 3:45 AM IST
“ಈ ಸಲ ಫೈನಲ್ ಗೆ ಅಟೆಂಡ್ ಆಗಬೇಕು ಅಂದ್ರೆ ಅಟೆಂಡೆನ್ಸ್ ಮಿನಿಮಮ್ ಇರಲೇಬೇಕು. ಹಾಗೊಮ್ಮೆ ಕಡಿಮೆ ಇದ್ದಲ್ಲಿ ನಿಮ್ಮ ಅಪ್ಪ- ಅಮ್ಮ ಯಾರಾದರೂ ಒಬ್ಬರು ಬಂದು ಕಾರಣ ತಿಳಿಸಿ ಸೈನ್ ಮಾಡಬೇಕು. ಇಲ್ಲದಿದ್ದರೆ ಎಕ್ಸಾಂಗೆ ಬರಲೇಬೇಡಿ. ಇನ್ನು ಹದಿನೈದು ದಿನ ಟೈಂ ಕೊಟ್ಟಿದ್ದೇವೆ…’ ಪಿ.ಯು ಕಾಲೇಜಿನ ಲೆಕ್ಚರರ್ ಬೆಳ್ಳಂಬೆಳಿಗ್ಗೆ ಮೊದಲ ಪೀರಿಯಡ್ನಲ್ಲಿ ಹೀಗೆಂದಾಗ ತರಗತಿಯಲ್ಲಿ ಬಾಂಬ್ ಸಿಡಿಸಿದಂತಾಗಿದ್ದು ನಿಜ. ಮೊದಲೇ ಪರೀಕ್ಷೆ ಹತ್ತಿರ ಬರುತ್ತಿದೆ ಎಂಬ ಹೆದರಿಕೆಯ ಜತೆಗೆ ಈ ರೀತಿ ಬೆದರಿಕೆ ಬಂದರೆ? ಭಯಭಕ್ತಿಯಿಂದ ಯಾವಾಗಲೂ ಕಾಲೇಜಿಗೆ ಬಂದು ಮೊದಲ ಬೆಂಚಿನಲ್ಲಿ ಕುಳಿತು, ತಲೆ ತಗ್ಗಿಸಿ, ಸರ ಸರ ನೋಟ್ಸು ಬರೆಯುತ್ತಿದ್ದ ನಮಗೆ, ಅಂದರೆ ಹುಡುಗಿಯರಿಗೆ, ಅರ್ಥಾತ್ ಕುಡುಮಿಯರಿಗೆ, ಯಾವ ತೊಂದರೆಯೂ ಇರಲಿಲ್ಲ. ಆದರೆ, ತಿಂಗಳಿಗೊಮ್ಮೆ ಮುಖ ತೋರಿಸಿ ಕಡೇ ಬೆಂಚಿನಲ್ಲಿ ಕುಳಿತು ರಾಕೆಟ್ ಹಾರಿಸುವ, ಕಡೆಗೆ ನಿದ್ದೆ ಗೆಟ್ಟು ಓದಿ ಪಾಸಾಗುವ ತರಲೆ ತಲೆಗಳಿಗೆ ನಿಜಕ್ಕೂ ಆಘಾತವಾಗಿತ್ತು.
ಈಗ ಕಾಲೇಜಿನಲ್ಲಿ ಹೇಗಿದೆಯೋ ಗೊತ್ತಿಲ್ಲ. ನಾವು ಓದುವಾಗ-ಅಂದರೆ, ಎರಡೂವರೆ ದಶಕಗಳ ಹಿಂದೆ ಕಾಲೇಜಿನಲ್ಲಿ ಪರೀಕ್ಷೆಗೆ ಕೂರಲು ಶೇಕಡಾ ಅರವತ್ತರಷ್ಟು ಹಾಜರಾತಿ ಕಡ್ಡಾಯವಾಗಿತ್ತು. ಹಾಗೆಂದು ಮೊದಲೇ ತಿಳಿಸಿದ್ದರೂ ಹುಡುಗರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಏಕೆಂದರೆ ವರ್ಷದ ಕೊನೆಯಲ್ಲಿ ಅಧ್ಯಾಪಕರು, ಕನಿಕರದಿಂದ ಹೇಗೋ ಅಡ್ಜÓr… ಮಾಡಿ ಪರೀಕ್ಷೆಗೆ ಕೂರಿಸುತ್ತಿದ್ದರು. ಆದರೆ ಆ ಸಲ ಮಾತ್ರ ನಮ್ಮ ತರಗತಿಯ ಹುಡುಗರು ಸಿಕ್ಕಾಪಟ್ಟೆ ಬುದ್ಧಿವಂತರೂ, ಅಸಾಧ್ಯ ಹುಡುಗಾಟದವರೂ ಆಗಿದ್ದರು. ಲೆಕ್ಚರರ್ಗಳಿಗೆ ಏನೇನೋ ಕೇಳಿ ತಬ್ಬಿಬ್ಬು ಮಾಡುವುದು, ಕ್ಲಾಸಿನಲ್ಲಿ ಪಟಾಕಿ ಹಚ್ಚುವುದು, ಲೇಡಿ ಲೆಕ್ಚರರ್ಗೆ ಪ್ರೇಮಗೀತೆ ಹಾಡುವುದು… ಇಂಥವೇ ತರಲೆ ಕೆಲಸಗಳಿಗೆ ನಮ್ಮ ಕ್ಲಾಸು ಒಂದು ರೀತಿಯಲ್ಲಿ ವರ್ಲ್ಡ್ ಫೇಮಸ್ ಆಗಿತ್ತು ಎಂದರೆ ತಪ್ಪಾಗಲಾರದು. ಈ ತರಲೆ ಹುಡುಗರು ಕಾಲೇಜಿಗೆ ಬರುತ್ತಿದ್ದದ್ದು ಕೆಲವೇ ದಿನಗಳಾದರೂ, ಕೊಡುತ್ತಿದ್ದ ಕಾಟ ಹೇಳತೀರದು. ಅವರು ಓದಿನಲ್ಲೂ ಜಾಣರಿದ್ದರು, ಹಾಗಾಗಿ ಏನೂ ಮಾಡುವಂತಿರಲಿಲ್ಲ. ಕಡೆಗೆ, ತರಲೆ ಬುದ್ಧಿಯ ಜಾಣರಿಗೆ ಬುದ್ಧಿ ಕಲಿಸಲು ನಮ್ಮ ಲೆಕ್ಚರರ್ ಎಲ್ಲಾ ಸೇರಿ ಈ ರೀತಿ ಅಟೆಂಡೆನ್ಸ್ ಕಡ್ಡಾಯ ಮಾಡಿಸಿ ಶಾಕ್ ನೀಡಿದ್ದರು.
ಹುಡುಗರೊಂದಿಗೆ ನಾವು ಮಾತನಾಡುತ್ತಿರಲಿಲ್ಲ. ಏಕೆಂದರೆ ಆ ಕಾಲದಲ್ಲಿ ಅದು ಅಪರಾಧವೇ. ಆದರೂ ದಿಕ್ಕೇ ತೋಚದೇ ಸುಮ್ಮನೇ ಚಿಂತಿಸುತ್ತಿದ್ದವರನ್ನು ಕಂಡು ಪಾಪ ಅನ್ನಿಸಿದ್ದು ಸುಳ್ಳಲ್ಲ. ಆ ದಿನ ಲೈಬ್ರರಿ, ಸೈಕಲ…ಸ್ಟಾÂಂಡ್, ಕ್ಯಾಂಟೀನ್ ಎಲ್ಲಾ ಕಡೆ ಇದೇ ಚರ್ಚೆ. “ಲೋ ಅಪ್ಪ- ಅಮ್ಮನಿಗೆ ಹೇಗೋ ಹೇಳ್ಳೋದು? ಮುಖಕ್ಕೆ ಮಂಗಳಾರತಿ ಗ್ಯಾರಂಟಿ’ ಎಂದು ಒಬ್ಬನೆಂದರೆ ಮತ್ತೂಬ್ಬ “ಬಯ್ಯೋದಿರಲಿ, ಚರ್ಮ ಸುಲೀತಾರೆ’ ಎಂದು ಕಂಗಾಲು. ಅಂತೂ ಹತ್ತು ಹನ್ನೆರಡು ಹುಡುಗರ ತಂಡ ಗುಂಪು ಕಟ್ಟಿಕೊಂಡು ಮುಂದೇನು ಎಂದು ಸಮಾಲೋಚನೆ ನಡೆಸಿದ್ದರು.
ಇದಾಗಿ ಎರಡು ದಿನಗಳಲ್ಲಿ ಆಫೀಸ್ ರೂಮಿನ ಬಳಿ ಎಲ್ಲಾ ಹುಡುಗರು ತಂತಮ್ಮ ಅಪ್ಪಅಥವಾ ಅಮ್ಮಂದಿರೊಂದಿಗೆ ಹಾಜರು. ಯಾರಿಗೂ ಮಕ್ಕಳ ಮೇಲೆ ಸಿಟ್ಟಿದ್ದಂತೆ ಏನೂ ಕಾಣಲಿಲ್ಲ. ಬದಲಿಗೆ ಖುಷಿಯಾಗಿ ನಮ್ಮನ್ನು ನೋಡಿ ಗೊತ್ತಿದ್ದವರಂತೆ ನಗುತ್ತಾ ಇದ್ದರು. ಮಕ್ಕಳೊಡನೆ ಸ್ನೇಹಿತರಂತೆ ಮಾತನಾಡುತ್ತಾ ಇದ್ದ ಅವರನ್ನು ಕಂಡು ನಮಗೆ ಒಂದು ಕ್ಷಣ ಆಶ್ಚರ್ಯದ ಜತೆ ಅಸೂಯೆಯೂ ಆಗಿತ್ತು. ಅಂತೂ ಎಲ್ಲರೂ, ಒಳಗೆ ಹೋಗಿ ಕಾರಣ ಬರೆದ ಪತ್ರ ಕೊಟ್ಟು, ಇನ್ನು ಹೀಗಾಗುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದರು. ಅಲ್ಲಿಗೆ ಎಲ್ಲವೂ ಸರಿಯಾಯಿತು. ಮರುದಿನ ಲೆಕ್ಚರರ್ ತರಗತಿಗೆ ಬಂದು “ಅಪ್ಪ, ಅಮ್ಮ, ಅಜ್ಜಿ, ಅಜ್ಜ ಎಲ್ಲರಿಗೆ ಪೂಸಿ ಹೊಡೆದು ಟಿಬಿ, ನ್ಯುಮೋನಿಯಾ ಹೀಗೆ ಕಾಲೇಜಿಗೆ ಬಂದರೆ ಸತ್ತೇ ಹೋಗುತ್ತಿದ್ದಿರೇನೋ ಎನ್ನುವ ಕಾರಣ ನೀಡಿದ್ದೀರಿ. ದೊಡ್ಡವರಿಗೂ, ಮಕ್ಕಳ ಓದಿನ ಬಗ್ಗೆ ಚಿಂತೆ ಇದ್ದ ಹಾಗೆ ಕಾಣಲೇ ಇಲ್ಲ. ಪದೇ ಪದೇ ಈ ಸಲ ಪರೀಕ್ಷೆ ಬರೀಲಿ ಬಿಡಿ, ತುಂಬಾ ಒಳ್ಳೆ ಹುಡುಗರು ಅನ್ನುವ ರಾಗ ಬೇರೆ. ಹೋಗ್ಲಿ ಇನ್ನಾದರೂ ಸರಿಯಾದ ಶಿಸ್ತು ಕಲಿತು ಉದ್ಧಾರವಾಗಿ’ ಎಂದು ಫುಲ… ಫೀಲಿಂಗ್ ತುಂಬಿ ಹೇಳಿದ್ದರು.
ಅಂತೂ ಎಲ್ಲರಿಗೂ ಅಟೆಂಡೆ… ಸಿಕ್ಕಿತು. ಪರೀಕ್ಷೆ ಬರೆದದ್ದೂ ಆಯಿತು. ಕಾಲೇಜಿನ ಸೆಂಡ್ಆಫ್ ದಿನ ಹುಡುಗರೆಲ್ಲಾ ಫುಲ… ಶರ್ಟು- ಪ್ಯಾಂಟು- ಟೈಗಳಲ್ಲಿ ಮಿಂಚುತ್ತಿದ್ದರು. ಗುಂಪಾಗಿ ನಿಂತು ಮಾತನಾಡುತ್ತಿದ್ದ ನಮ್ಮ ಬಳಿ ಬಂದ ಲೆಕ್ಚರರ್ “ಏನÅಯ್ನಾ, ಅಸಾಧ್ಯರಪ್ಪಾ ನೀವು!’ ಎಂದು ಹುಡುಗರನ್ನು ಉದ್ದೇಶಿಸಿ ನುಡಿದಾಗ ನಮಗೆ ಆಶ್ಚರ್ಯ. ಅವರಂದರು: “ಅಲ್ಲ, ಮೊನ್ನೆ ಭಾನುವಾರ ಗಾಂಧಿ ಪಾರ್ಕಿಗೆ ಹೆಂಡತಿ- ಮಕ್ಕಳೊಂದಿಗೆ ಹೋಗಿದ್ದೆ. ಮಗ ಬಲೂನು ಬೇಕು ಅಂತ ಗಲಾಟೆ ಮಾಡಿದ. ಬಲೂನು ಮಾರುವವನನ್ನು ಎಲ್ಲೋ ನೋಡಿದಂತೆ ಅನ್ನಿಸಿತು. ವಿಚಾರಿಸಿದಾಗ ಗೊತ್ತಾಯಿತು, ಆತ ನಿಮ್ಮ ಬಾಡಿಗೆ ಅಪ್ಪ ಅಂತ! ಅವನಷ್ಟೇ ಅಲ್ಲ; ಅಲ್ಲಿ ಕಡ್ಲೆಪುರಿ ಮಾರುವವಳು, ಕವಡೆ ಶಾಸ್ತ್ರ ಹೇಳುವವ, ಮಾಲಿ, ನೆಲ್ಲಿಕಾಯಿ ಅಜ್ಜಿ ಹೀಗೆ ಎಲ್ಲರನ್ನೂ ದುಡ್ಡು ಕೊಟ್ಟು ಕಾಲೇಜಿಗೆ ಕರೆತಂದಿದ್ದೀರಾ!! ಹೋಗ್ಲಿ ಬಿಡಿ, ಆಗಿದ್ದಾಯ್ತು. ಖತರ್ನಾಕ್ ತಲೆ ನಿಮ್ಮದು, ಸರಿಯಾಗಿ ಉಪಯೋಗಿಸಿ ಅಷ್ಟೇ!’ ಅಂದರು.
ತಮ್ಮ ಗುಟ್ಟು ಬಯಲಾಗಿದ್ದಕ್ಕೆ ಪೆಚ್ಚಾದರೂ “ಬೇರೆ ದಾರಿ ಕಾಣದೆ ಹಂಗೆ ಮಾಡಿದ್ವಿ ಸಾರ್. ಆದ್ರೂ ಇನ್ಮುಂದೆ ನಾವಿಲ್ಲದೇ ಕಾಲೇಜಿನಲ್ಲಿ ಮಜಾ ಇರಲ್ಲ, ಅಲ್ವಾ ಸರ್?’ ಎನ್ನುತ್ತಾ ತಮ್ಮನ್ನು ಸಮರ್ಥಿಸಿಕೊಂಡರು ತರಲೆ ತಲೆಗಳು. ಟ್ಯೂಬ… ಲೈಟಿನಂತಿದ್ದ ನಮಗೆ ಆ ದಿನ ಈ ಹುಡುಗರ ತಂದೆ- ತಾಯಿಯರು ಪರಿಚಿತ ಅನ್ನಿಸಿದ್ದರ ಕಾರಣ ಆಗ ಹೊಳೆದಿತ್ತು!!
– ಡಾ. ಕೆ. ಎಸ್. ಚೈತ್ರಾ