ಪದ್ಯ ವಾಚನ, ಗದ್ಯವಾಚನ


Team Udayavani, Mar 19, 2017, 3:50 AM IST

19-SAMPADA-6.jpg

ಕೆಲವು ಸಮಯ ಹಿಂದೆ ನಾನೊಂದು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯುತ್ತಿದ್ದ ಸಭೆಗೆ ಹೋಗಿದ್ದಾಗ ಅಲ್ಲಿನ ಮುಖ್ಯಸ್ಥರ ಮುಂದೆ ಒಂದು ಸಲಹೆಯನ್ನಿರಿಸಿದೆ: ಪ್ರತಿ ಸಭೆ ಆರಂಭವಾಗುವಾಗಲು ಮೊದಲಿಗೆ ಒಬ್ಬ ವಿದ್ಯಾರ್ಥಿಯಿಂದ ಹಳೆಗನ್ನಡ ಅಥವಾ ನಡುಗನ್ನಡದ ಯಾವುದಾದರೂ ಕಾವ್ಯಭಾಗವನ್ನು ಓದಿಸಿರಿ, ಎಂಬುದಾಗಿ. ಇದಕ್ಕೆ ಹೆಚ್ಚೆಂದರೆ ಒಂದೆರಡು ಮಿನಿಟು ತೆಗೆದುಕೊಳ್ಳಬಹುದು, ಅವಕಾಶವಿದ್ದರೆ ಸ್ವಲ್ಪ ಹೆಚ್ಚು ವೇಳೆಯನ್ನು ಯೋಜಿಸಬಹುದು, ಅತಿಥಿ ಅಭ್ಯಾಗತರ ಪರಿಚಯವನ್ನು (ಹೊಗಳಿಕೆಯನ್ನು!) ಚಿಕ್ಕದಾಗಿ ಹೇಳುವ ಮೂಲಕ. ಯಾಕೆಂದರೆ ನಮ್ಮ ಜನ ಹಳೆಗನ್ನಡ, ನಡುಗನ್ನಡ ಕಾವ್ಯಭಾಗಗಳನ್ನು ಕೇಳುವ ಸಂದರ್ಭವೇ ಈಗ ಇಲ್ಲ. ಕನ್ನಡ ಹೀಗಿತ್ತು, ಅದರಲ್ಲಿ ಇಂತಿಂಥಾದ್ದು ಇದೆ ಎಂದು ಅವರಿಗೆ ಗೊತ್ತಾದರೆ ಒಳ್ಳೆಯದಲ್ಲವೇ? ಅಥವಾ ಗೊತ್ತಿದ್ದರೆ ನೆನಪಿಗೆ ತಂದಂತಾಯಿತು. ಸಾಧ್ಯವಿದ್ದರೆ ವಾಚಕನು ಇಂಥ ಕಾವ್ಯಭಾಗಗಳ ಅರ್ಥವಿವರಣೆಯನ್ನೂ ನೀಡಬಹುದು; ಕೇವಲ ಕಾವ್ಯವೇ ಆಗಬೇಕೆಂದಿಲ್ಲ, ಗದ್ಯವನ್ನೂ ಓದಬಹುದು. ಅಥವಾ ಜನಪದ ಹಾಡುಗಳನ್ನೋ ಆಧುನಿಕ ಸಾಹಿತ್ಯ ಭಾಗಗಳನ್ನೋ ಅಳವಡಿಸಿಕೊಳ್ಳಬಹುದು. ಸಭೆಯ ವಿಷಯ ಏನೇ ಇರಲಿ, ಅದಕ್ಕೂ ಈ ಸಾಹಿತ್ಯದ ಓದಿಗೂ ನೇರ ಸಂಬಂಧ ಇರಬೇಕೆಂದಿಲ್ಲ. ವಿಭಾಗದ ಮುಖ್ಯಸ್ಥರಿಗೆ ನನ್ನ ಈ ಸಲಹೆ ಹಿಡಿಸಿತು. ಆದರೆ, ಅವರು ಇದನ್ನು ಮುಂದೆ ಕಾರ್ಯರೂಪಕ್ಕೆ ತಂದರೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಈ ಸಲಹೆಯನ್ನು ತತ್ವಶಃ ಒಪ್ಪದವರು ವಿರಳ ಎಂದುಕೊಳ್ಳುತ್ತೇನೆ; ಅಲ್ಲದೆ ಇದನ್ನು ಕಾರ್ಯರೂಪಕ್ಕೆ ತರುವುದೂ ಕಷ್ಟದ ಸಂಗತಿಯಲ್ಲ. 

ನಮ್ಮ ಹಳೆಯ ಸಾಹಿತ್ಯವನ್ನು ನೆನಪಿಗೆ ತರುವುದೊಂದೇ ಈ ಸಾರ್ವಜನಿಕ ಓದಿನ ಉದ್ದೇಶವಲ್ಲ; ಇದರಿಂದ ಇತರ ಹಲವು ಉಪಯೋಗಗಳಿವೆ: ನಮ್ಮದೇ ನಾಲಿಗೆಯನ್ನು ತಿದ್ದಿಕೊಳ್ಳುವುದು ಕೂಡ ಒಂದು. ಅಲ್ಲದೆ ಇಂದು ನಮ್ಮ ಓದು ಹೆಚ್ಚಾಗಿ ಏಕಾಂತದಲ್ಲಿ ಹಾಗೂ ಮೌನವಾಗಿ ಸಾಗುವಂಥದು. ಅಂಥ ಓದು ಬೇಡವೆಂದಲ್ಲ; ಆದರೆ ಜನರೆದುರು ಗಟ್ಟಿಯಾಗಿ ಓದುವುದರಲ್ಲೂ ಒಂದು ಸೊಗಸಿದೆ, ಅದರಲ್ಲಿ ಸಮೂಹದ ಒಳಗೊಳ್ಳುವಿಕೆಯಿದೆ. ಹಿಂದೆ ಮಳೆಗಾಲದಲ್ಲಿ ವಿದ್ಯಾವಂತರ ಮನೆ ಮನೆಗಳಲ್ಲಿ ಪುರಾಣವಾಚನ ಎಂಬ ಪಠಣ ನಡೆಯುತ್ತಿತ್ತು. ತಿಳಿದವರೊಬ್ಬರು ಓದಿ ಅರ್ಥ ಹೇಳುವುದು, ಉಳಿದವರು ಆಲಿಸುವುದು. ಹೆಚ್ಚಾಗಿ ಜೈಮಿನಿ ಭಾರತ ಅಥವಾ ಕುಮಾರವ್ಯಾಸ ಭಾರತವನ್ನು. ಈಗ ಅದು ನಿಂತುಹೋಗಿದೆ. ನಾವಿದರ ತುಣುಕನ್ನಾದರೂ ಶಾಲೆ-ಕಾಲೇಜುಗಳಲ್ಲಿ ಚಾಲನೆಗೆ ತರುವುದು ಸರಿಯಾದ ಕ್ರಮ ಎನ್ನುವುದು ನನ್ನ ವಿಚಾರ. ನಾನಿಲ್ಲಿ ಗಮಕ ಕಲೆ ಬಗ್ಗೆ ಹೇಳುತ್ತಿಲ್ಲ; ಅಷ್ಟೊಂದು ಮಹತ್ವಾಕಾಂಕ್ಷೆ ದೊಡ್ಡ ಮಾತಾಯಿತು. ಇಲ್ಲಿನ ಸಲಹೆ ಸಣ್ಣ ಪ್ರಮಾಣದ್ದು, ಯಾವುದೇ ಸದ್ದುಗದ್ದಲವಿಲ್ಲದೆ ಸಾಧ್ಯವಾಗುವಂಥದು. 

ಈ ವಿಷಯ ನನ್ನ ಮನಸ್ಸಿಗೆ ಬರುವುದಕ್ಕೆ ಕಾರಣ ನನ್ನ ಪ್ರೌಢ ಶಾಲೆಯಲ್ಲಿನ ಇಂಥದ್ದೊಂದು ಪದ್ಧತಿಯ ನೆನಪು. ನಾನು ಓದಿದ ಶಾಲೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಮಹತ್ವ ಕೊಡುತ್ತಿತ್ತು. ಆಗಾಗ ಸಭೆಗಳು, ನಾಟಕಗಳು, ಸಂಗೀತ ಕಚೇರಿಗಳು ನಡೆಯುತ್ತಿದ್ದುವು. ವಿದ್ಯಾರ್ಥಿಗಳದ್ದೇ ಆದ ಸಭಾಕಾರ್ಯಕ್ರಮಗಳೂ ತಿಂಗಳಿಗೊಮ್ಮೆ ಜರುಗುತ್ತಿದ್ದುವು. ವಿದ್ಯಾರ್ಥಿಗಳ ಸಭೆಗಳಲ್ಲಿ ಒಂದು ಪದ್ಧತಿಯಿತ್ತು. ಪ್ರಾರ್ಥನೆ ಮುಗಿದ ಕೂಡಲೇ ಒಬ್ಬ ವಿದ್ಯಾರ್ಥಿ ವೇದಿಕೆಗೆ ಬಂದು ಯಾವುದಾದರೊಂದು ಕನ್ನಡ ಗದ್ಯಭಾಗವನ್ನು ಓದುತ್ತಿದ್ದ. ಈ ಓದುವಿಕೆಗೂ ಅಂದಿನ ಸಭಾವಿಷಯಕ್ಕೂ ಯಾವ ಸಂಬಂಧವೂ ಇರಲಿಲ್ಲ. ಗದ್ಯದ ಓದು ಅದಕ್ಕಾಗಿಯೇ ಇತ್ತು. ಪಠ್ಯದ  ಆಯ್ಕೆ ಆಯಾ ವಿದ್ಯಾರ್ಥಿಗಳಿಗೆ ಬಿಟ್ಟ ಸಂಗತಿಯಾಗಿತ್ತು. ಇದು ಶಾಲೆ ಗದ್ಯಕ್ಕೆ ಕೊಡುವ ಮನ್ನಣೆ ಅನಿಸುತ್ತದೆ. ಬಹುಶಃ ಗದ್ಯದ ಉಚ್ಚಾರಣೆಯ ಅಭ್ಯಾಸ, ಮಕ್ಕಳಿಂದ ಸಭಾ ಕಂಪನ ತೊಡೆದುಹಾಕುವ ಉದ್ದೇಶ ಕೂಡ ಇದರ ಹಿಂದೆ ಇರಬಹುದು. ಹೀಗೆ ಓದುವ ಅವಕಾಶಕ್ಕೆ ವಿದ್ಯಾರ್ಥಿಗಳು ಸಭೆಗೆ ಒಂದೆರಡು ದಿನ ಮೊದಲೇ ಕಾರ್ಯದರ್ಶಿಗೆ ಹೆಸರು ಕೊಟ್ಟರೆ ಸಾಕಿತ್ತು. ನಾನಿದರಲ್ಲಿ ಕೆಲವು ಬಾರಿ ಭಾಗವಹಿಸಿದ್ದು ನೆನಪಿದೆ. ಇಂಥಾದ್ದೊಂದು ಪದ್ಧತಿಯನ್ನು ಯಾವ ಪುಣ್ಯಾತ್ಮರು ಸುರುಮಾಡಿದರೋ ಗೊತ್ತಿಲ್ಲ; ಇದನ್ನು ಬೇರೆ ಯಾವ ಶಾಲೆಯೂ ಚಾಲ್ತಿಗೆ ತಂದ ಹಾಗೂ ಇಲ್ಲ. ಅಲ್ಲದೆ ಇದೇ ಶಾಲೆಯಲ್ಲಿ ಈ ಸಂಪ್ರದಾಯ ಈಗಲೂ ಮುಂದುವರಿದಿದೆಯೋ ಎನ್ನುವುದೂ ನನಗೆ ತಿಳಿಯದು. ಆದರೆ ಇದೊಂದು ಉತ್ತಮ ಸಾಂಸ್ಕೃತಿಕ ಸಂಪ್ರದಾಯ ಎಂದು ನನಗನಿಸುತ್ತದೆ. ನಾನು ನನ್ನ ಸಲಹೆಯಲ್ಲಿ ಪದ್ಯವನ್ನೂ ಸೇರಿಸಿಕೊಂಡಿದ್ದೇನೆ ಅಷ್ಟೆ. ಗದ್ಯ , ಪದ್ಯ ಎರಡಿದ್ದರೆ ಹೆಚ್ಚು ಸಂತೋಷ. 

ಹಳೆಗನ್ನಡದಿಂದಲೇ ಆರಂಭ ಮಾಡೋಣ. ನಾನೇನೂ ಕನ್ನಡ ಮೂಲಭೂತವಾದಿಯಲ್ಲ ; ಹಳೆಗನ್ನಡ ತಿಳಿಯದೇ ಇದ್ದರೆ ಮೋಕ್ಷ ದೊರಕದು ಎನ್ನುವವನೂ ಅಲ್ಲ. ಆದರೆ ನಮ್ಮ ಭಾಷೆ ಹಿಂದೆ ಹೇಗಿತ್ತು ಎಂದು ತಿಳಿದುಕೊಳ್ಳುವುದು ಒಳ್ಳೆಯದು ಎನ್ನುವವನು. ವಾಸ್ತವದಲ್ಲಿ ಹಳೆಗನ್ನಡ ನಮಗೆ ತೀರಾ ಅರ್ಥವಾಗದ ಭಾಷೆ ಎನ್ನುವಂತಿಲ್ಲ. ಹಾಗೆ ನೋಡಿದರೆ ಹಳೆ ಇಂಗ್ಲಿಷ್‌ ಮತ್ತು ಹೊಸ ಇಂಗ್ಲಿಷ್‌ಗೆ ಇರುವಷ್ಟು ಅಂತರ ಹಳೆಗನ್ನಡ ಮತ್ತು ಹೊಸಗನ್ನಡಕ್ಕೆ ಇಲ್ಲ. ಹಲವು ಪದಗಳು ಇಂದು ರೂಢಿಯಲ್ಲಿಲ್ಲ ಎನ್ನುವುದು ನಿಜ; ಇನ್ನು ಕೆಲವು ಎಲ್ಲೋ ಕೇಳಿದ ಹಾಗಿದೆ ಎನ್ನುವ ಭಾವ ತರಿಸುವಂಥವು. ಏನೇ ಇದ್ದರೂ ವಿದ್ಯಾರ್ಥಿಯೊಬ್ಬ ಅಧ್ಯಾಪಕರ ಸಹಾಯದಿಂದ ಒಂದೆರಡು ಹಳೆಗನ್ನಡ ಪದ್ಯಗಳನ್ನು ಓದಿ ಅರ್ಥ ತಿಳಿದು ಅಭ್ಯಾಸ ಮಾಡಿಕೊಂಡು ಸಭೆಯ ಮುಂದೆ ಪ್ರಸ್ತುತ ಪಡಿಸುವುದೇನೂ ಕಷ್ಟದ ಸಂಗತಿಯಾಗಲಾರದು. ಶಕಟರೇಫ‌ ಮತ್ತು ರಳ ಎಂಬ ಒಂದೆರಡು ಅಕ್ಷರಗಳ ಸಮಸ್ಯೆಯಿದೆ, ಆದರೆ ಅದೇನೂ ಅಷ್ಟು ಮಹತ್ವದ್ದಲ್ಲ. ಶಕಟರೇಫ‌ವನ್ನು ರಕಾರದಂತೆಯೂ, ರಳವನ್ನು ಳಕಾರವಾಗಿಯೂ ಉಚ್ಚರಿಸಿದರೆ ಸರಿ. ಜನ್ನನ ಯಶೋಧರ ಚರಿತೆಯ ಈ ಪ್ರಸಿದ್ಧ ಕಂದ ಪದ್ಯವನ್ನು ನೋಡಿ:

ಅಮೃತಮತಿಯೆಂಬ ಪಾತಕಿ
ಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ
ತೆಮಗೆ ಬಲೆಯಾಯ್ತು ಹಿಂಸನ
ಮಮೋಘ ಶರಮಾಯ್ತು ಕಡೆದುದಾತ್ಮಕುರಂಗಂ
                                      (ಯಶೋಧರ ಚರಿತೆ, ಮೂರನೆಯ ಅವತಾರ)
ಯಶೋಧರನ ಆತ್ಮಗ್ಲಾನಿಯನ್ನು ತೋರಿಸುವ ಈ ಪದ್ಯ ಇಡೀ ಕನ್ನಡ ಕಾವ್ಯ ಸಾಹಿತ್ಯದಲ್ಲಿ ಅತಿ ಮನೋಹರವಾದುದು. ಇದನ್ನು ನಮ್ಮ ನೆನಪಿನಲ್ಲಿರಿಸಿಕೊಳ್ಳುವುದು ನಮಗೆ ಬೇಡವೇ? ಇಂಥ ಅನಘ ರತ್ನಗಳು ಕನ್ನಡದಲ್ಲಿ ಸಾಕಷ್ಟಿವೆ. ಉದಾಹರಣೆಗೆ, ಪಂಪನ ಬನವಾಸಿ ವರ್ಣನೆ: 
          ಸೊಗಯಿಸಿ ಬಂದ ಮಾಮರನೆ ತಳೆ¤ಲೆವಳ್ಳಿಯೆ ಪೂತ ಜಾತಿ ಸಂ-
          ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೋಗಂ
          ನಗೆಮೊಗದೊಳ್‌ ಪಳಂಚಲೆಯೆ ಕೂಡುವ ನಲ್ಲರೆ ನೋಳೊ³ಡಾವ ಬೆ-
          ಟ್ಟುಗಳೊಳಮಾವ ನಂದನವನಂಗಳೊಳಂ ವನವಾಸಿ ದೇಶದೊಳ್‌
          (ವಿಕ್ರಮಾರ್ಜುನ ವಿಜಯಂ, ಚತುರ್ಥಾಶ್ವಾಸ)

ಎಲ್ಲ ಹಳೆಗನ್ನಡ ಪದ್ಯಗಳೂ ಇಷ್ಟು ಸರಳವಾಗಿ ಇಲ್ಲ ನಿಜ; ಆದರೇನಾಯಿತು, ಕಠಿಣ ಪದ್ಯಗಳನ್ನೂ ಅರಿತುಕೊಳ್ಳೋಣ. ಅರಿತಾಗಲೇ ಅವು ನಮ್ಮವಾಗುವುದು, ಇಲ್ಲದಿದ್ದರೆ ಅಲ್ಲ. ಈಗ ಜೈಮಿನಿ ಭಾರತದ ಒಂದು ಪದ್ಯವನ್ನು ನೋಡಿ:
ಕೊಡೆಯೆಂಬರಾತಪತ್ರವನುದರದೇಶಮಂ 
                   ಪೊಡೆಯೆಂಬರೊಲಿದು ಮಂಥನವನೆಸಗೆಂಬುದಂ
ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು
ಮಡಿಯೆಂಬರಂಬರದ ಧೌತಮಂ ಕಬರಿಯಂ
ಮುಡಿಯೆಂಬರೆಡೆವಿಡದೆ ಮುಸುಕಿದ್ದ ಮೇಘಮಂ
ಜಡಿಯೆಂಬರುರುಶಿಲೆಯನರೆಯೆಂಬರಲ್ಲದಿವ ನುಡಿಯರವನಾಳ್ವಿಕೆಯೊಳು
            (ಜೈಮಿನಿ ಭಾರತ, ಎರಡನೆಯ ಸಂಧಿ)
            ಯುಧಿಷ್ಠಿರನ ರಾಜ್ಯದ ವರ್ಣನೆಯಿದು; ಲಕ್ಷ್ಮೀಶ ಎಂಥ ಕವಿತ್ವ ತೋರಿಸಿದ್ದಾನೆ ಇಲ್ಲಿ! ಶ್ಲೇಷೆಗಳನ್ನು ಬಳಸಿದ್ದು                           ಮಾತ್ರವಲ್ಲ, ಬಳಸಿಯೂ ಬಳಸದ ಹಾಗೆ ಮಾಡಿದ್ದಾನೆ! ಶ್ಲೇಷೆಯನ್ನು ಈ ರೀತಿ ಉಪಯೋಗಿಸಿದವರು ಇನ್ನು ಯಾರೂ               ಇರಲಾರರು. ಅಂತೆಯೇ ಯುಧಿಷ್ಠಿರನ ರಾಜ್ಯವನ್ನು ಈ ಕರ್ಣಾಟ ಕವಿ ಚೂತವನ ಚೈತ್ರ ಕನ್ನಡೀಕರಿಸಿದ ಬಗೆಗೆ                         ತಲೆದೂಗಲೇಬೇಕು. ಈಗ ಕುಮಾರವ್ಯಾಸನ ಈ ಪದ್ಯ ನೋಡಿ:
            ಆರನೈ ನೀ ಕೊಲುವೆ ನಿನ್ನಿಂ-
            ದಾರು ಸಾವರು ದೇಹವನೊ ನಿಜ
            ಧೀರನಾತ್ಮನ ಕೊಲುವೆಯೋ ದಿಟ ನಿನ್ನ ಬಗೆಯೇನು?
            ಚಾರು ದೇಹಕೆ ಭೂತ ನಿಕರಕೆ
            ವೈರವಿಲ್ಲುಳಿದಂತೆ ವಿಗತವಿ
            ಕಾರನಚಲನಗಮ್ಯನದ್ವಯನಾತ್ಮ ನೋಡೆಂದ
            (ಕರ್ಣಾಟ ಭಾರತ ಕಥಾಮಂಜರಿ, ಭೀಷ್ಮಪರ್ವ)
ಕುರುಕ್ಷೇತ್ರ ಯುದ್ಧದಲ್ಲಿ ಎದುರಾಳಿಗಳಾದ ತನ್ನ ಬಂಧುಗಳನ್ನು ಕಂಡು ಅರ್ಜುನ ವೈರಾಗ್ಯ ತಳೆದಾಗ, ಕೃಷ್ಣ ಅವನಿಗೆ ಹೇಳುವ ಮಾತುಗಳು ಇವು. ಭಗವದ್ಗೀತೆಯ ನೆನಪಾಗುತ್ತದೆ ಅಲ್ಲವೇ? ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ  ಇತ್ಯಾದಿ. ಕುಮಾರವ್ಯಾಸನಿಗೆ ಗೀತೆಯೂ ಗೊತ್ತಿರಲೇಬೇಕು ಎನ್ನುವುದು ಭೀಷ್ಮಪರ್ವದ ಈ ಭಾಗದಿಂದ ಸ್ಪಷ್ಟವಾಗುತ್ತದೆ.  

ನಾನು ಸೂಚಿಸುವ ಕಾರ್ಯಕ್ರಮದಲ್ಲಿ ಯಾವುದೇ ಪದ್ಯ-ಗದ್ಯ ಭಾಗಗಳನ್ನು ಬೇಕಾದರೂ ಅಳವಡಿಸಿಕೊಳ್ಳಬಹುದು. ಆಧುನಿಕ ಕವಿತೆ, ಕತೆ, ಕಾದಂಬರಿಗಳ ಭಾಗಗಳನ್ನು ಕೂಡ. ಮುಖ್ಯ, ಸಭೆ-ಸಮಾರಂಭಗಳಲ್ಲಿ ಅನಗತ್ಯ ಪ್ರಶಂಸೆಗೆ ಕಾಲ ವ್ಯಯ ಮಾಡುವುದಕ್ಕಿಂತ ಅರ್ಥಪೂರ್ಣ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಇದನ್ನು ಪ್ರಾಯೋಗಿಕವಾಗಿಯಾದರೂ ಯಾರಾದರೂ ಮಾಡುತ್ತಾರೆ ಎಂದು ಆಶಿಸುತ್ತೇನೆ.

ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.