Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಕೀಳರಿಮೆಯಿಂದ ಹೊರಬನ್ನಿ: ಡಾ|ಕಂಬಾರ ಕರೆ
  • ಡಾ|ಚಂದ್ರಶೇಖರ ಕಂಬಾರರನ್ನು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿನಂದಿಸಿದರು.

    • Udayavani | Feb 18, 2012


      ಉಡುಪಿ: ವೇದಕಾಲದಿಂದ ಇರುವ ಸಂಸ್ಕೃತಿಯ ಬಗೆಗೆ ಕೀಳರಿಮೆ ಹುಟ್ಟಿಸುವ ಶಿಕ್ಷಣವನ್ನು ಬ್ರಿಟಿಷರು ತಂದರು. ಅದರ ಪರಿಣಾಮ ಸಂಸ್ಕೃತಿಯ ವಿಸ್ಮತಿ. ಇದರಿಂದ ಹೊರಬರುವ ಶಿಕ್ಷಣದ ಅಗತ್ಯ ಇಂದು ಇದೆ. ಯುವಕರು ಕೀಳರಿಮೆ ಬಿಟ್ಟು ಸೃಜನಶೀಲತೆ ಬೆಳೆಸಬೇಕಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|ಚಂದ್ರಶೇಖರ ಕಂಬಾರ ಕರೆ ನೀಡಿದ್ದಾರೆ.

      ಪೂರ್ಣಪ್ರಜ್ಞ ಕಾಲೇಜಿನಲ್ಲಿ 1968ರಲ್ಲಿ ಒಂದು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರನ್ನು ಫೆ.18ರಂದು ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಸಮ್ಮಾನಿಸಿದ ಸಂದರ್ಭ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಅಮೆರಿಕದಲ್ಲಿ ಪಿಎಚ್‌ಡಿ ಕಲಿಯುವವರು ನೆಲ ಒರೆಸಿದರೆ ನಮ್ಮಲ್ಲಿ ಎಸೆಸೆಲ್ಸಿ ಅನುತ್ತೀರ್ಣರಾದವರು ಈ ಕೆಲಸಕ್ಕೆ ತಯಾರಿಲ್ಲ. ನಾವು ಎಂಥ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

      ನಮ್ಮಲ್ಲಿರುವ ಬಾಲ್ಯವಿವಾಹದಂತಹ ದೋಷಗಳನ್ನೇ ಪಟ್ಟಿ ಮಾಡಿ ನಮ್ಮ ಬಗ್ಗೆ ನಾವೇ ನಾಚಿಕೊಳ್ಳುವಂತಹ ವಾತಾವರಣವನ್ನು ಬ್ರಿಟಿಷರು ಸೃಷ್ಟಿಸಿದರು. ರಾಜಾರಾಮಮೋಹನ ರಾಯ್‌ ಅಂತಹ ಏಳು ಮಂದಿ ಭಾರತೀಯರಿದ್ದರೂ ಅವರೂ ಬ್ರಿಟಿಷ್‌ ಮಾದರಿ ಶಿಕ್ಷಣ ಬೇಕೆಂದರು. ಅಂತಿಮವಾಗಿ ಮೆಕಾಲೆ ಬ್ರಿಟಿಷ್‌ ಶಿಕ್ಷಣವನ್ನು ಜಾರಿಗೆ ತಂದರು ಎಂದು ಕಂಬಾರ ಹೇಳಿದರು.

      ಡಾ|ಚಂದ್ರಶೇಖರ ಕಂಬಾರ ಮಾತನಾಡಿದರು.

      1.4 ಲಕ್ಷ ಶ್ಲೋಕಗಳಿರುವ ಮಹಾಭಾರತದ 8,000 ಶ್ಲೋಕ ಮಾತ್ರ ಮೂಲ ಎನ್ನುತ್ತಾರೆ. ಉಳಿದದ್ದು ಪ್ರಕ್ಷಿಪ್ತ ಎಂದು ಬ್ರಿಟಿಷರು ಹೇಳಿದಾಗ ಸುಪ್ತಂಕರ್‌ ಅಂತವರೂ ತಲೆಯಾಡಿಸಿದರು. ಮೂಲ ಶ್ಲೋಕದಲ್ಲಿ ಕೌರವ ಗೆಲ್ಲುತ್ತಾನೆ. ಹೆಚ್ಚುವರಿ ಭಾಗದಲ್ಲಿ ಹಾವು ಕಡಿದರೆ ಔಷಧಿ ವಿವರವೂ ಇದೆ. ಹೀಗೆ ನಾಡಿನ ಜನಪದೀಯರು ನಮ್ಮ ನೆಲಕ್ಕೆ, ದೇಶಕ್ಕೆ ತಕ್ಕುದಾದ ಇಷ್ಟು ದೊಡ್ಡ ಕೃತಿಯನ್ನು ರಚಿಸಿದ್ದು ಪವಾಡವಲ್ಲವೆ ಎಂದು ಕಂಬಾರ ಪ್ರಶ್ನಿಸಿದರು.

      ನಮ್ಮ ಯುವಕರು ನೌಕರಿಯನ್ನೇ ನಂಬಿಕೊಂಡು ಕುಳಿತಿದ್ದಾರೆ. ಅವರಿಗೆ ಸ್ವಂತ ಜಾಗವಿದ್ದರೂ ಕೃಷಿ ಮಾಡುವುದಿಲ್ಲ. ಸರಕಾರವೂ ನೌಕರಿ ಸೃಷ್ಟಿಯ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಿರಿಯರು ಇಂಥವರನ್ನು ನಂಬಿ ಕುಳಿತರೆ ಪ್ರಯೋಜನವಿಲ್ಲ. ನಮ್ಮಲ್ಲಿ ವೇದಕಾಲದಿಂದ ನೆನಪಿನ ನಿಧಿಗಳಿವೆ. ಅವುಗಳನ್ನು ಸೃಜನಶೀಲತೆ ಮೂಲಕ ಪುನಃಸ್ಥಾಪಿಸಬೇಕು ಎಂದರು.

      ಕಂಬಾರರನ್ನು ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಸಮ್ಮಾನಿಸಿ ಕಂಬಾರರ ಇನ್ನಷ್ಟು ಏಳಿಗೆ, ಸಾಹಿತ್ಯ ಸೇವೆಗೆ ಶುಭ ಹಾರೈಸಿದರು. ಕಾಲೇಜು ಆಡಳಿತ ಸಮಿತಿ ಗೌ.ಕಾರ್ಯದರ್ಶಿ ಡಾ|ಜಿ.ಎಸ್‌.ಚಂದ್ರಶೇಖರ್‌ ಸ್ವಾಗತಿಸಿ, ಪ್ರಾಂಶುಪಾಲ ಕೆ.ಸದಾಶಿವ ರಾವ್‌ ವರದಿ ವಾಚಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆ ಡಾ|ಮಾಧವಿ ಭಂಡಾರಿ ವಂದಿಸಿದರು. ಅಕ್ಷಯ ಆಚಾರ್ಯ, ಅನುಷಾ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ|ನಟರಾಜ ದೀಕ್ಷಿತ್‌ ಸಮ್ಮಾನಪತ್ರ ವಾಚಿಸಿದರು. ವಿದ್ಯಾರ್ಥಿ ಸಂಘದ ಪ್ರಮುಖರಾದ ಕ್ರಿಸಿಲ್‌, ತ್ರೇತಾ ಶೆಣೈ, ಮಧುಸೂದನ ಗಾಂವ್ಕರ್‌, ವಿಘ್ನೇಶ ಐತಾಳ್‌ ಉಪಸ್ಥಿತರಿದ್ದರು.

      ಕಂಬಾರರ ತಿರುವಿನ ಘಟ್ಟ

      ಆರಂಭದಲ್ಲಿ ಶಾಲೆಯನ್ನು ಬಿಟ್ಟಾಗ ಕೃಷ್ಣಮೂರ್ತಿ ಪುರಾಣಿಕರು ಎಲ್ಲ ಸೌಲಭ್ಯವನ್ನು ಕೊಟ್ಟು ಕರೆದರು. ಆಗ ಗೋಕಾಕಕ್ಕೆ ಹೋದೆ. ಎರಡನೆಯ ತಿರುವು ಉಡುಪಿ. ಸಾಗರ ಕಾಲೇಜಿನಿಂದ ಪೂರ್ಣಪ್ರಜ್ಞ ಕಾಲೇಜಿಗೆ ಬಂದಾಗ ಜಗತ್ತಿನ ಎರಡನೆಯ ಅತಿ ದೊಡ್ಡ ವಿ.ವಿ. ಶಿಕಾಗೋದಿಂದ ಕರೆ ಬಂತು. ಆಗ ಶ್ರೀಅದಮಾರು ಮಠದ ಶ್ರೀವಿಬುಧೇಶತೀರ್ಥ ಶ್ರೀಪಾದರು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದರು ಎಂದು ಡಾ|ಚಂದ್ರಶೇಖರ ಕಂಬಾರ ಹೇಳಿದರು.

      ಅಮೆರಿಕ ಎಷ್ಟೇ ಒಳ್ಳೆಯದಾದರೂ ಅಲ್ಲಿನ ಸಂಸ್ಕೃತಿ ಇಲ್ಲಿನ ಸಂಸ್ಕೃತಿ ಬೇರೆ ಬೇರೆ ಎಂದ ಕಂಬಾರ ಅವರು ಪೂರ್ಣಪ್ರಜ್ಞ ಕಾಲೇಜು ನನಗೆ ತಿರುವು ಕೊಟ್ಟ ಮಾತೃಸಂಸ್ಥೆ ಎನ್ನಲು ಅಭಿಮಾನಪಡುತ್ತೇನೆ ಎಂದರು.

      ಹಾಡಿದ ಕಂಬಾರ

      ಸ್ವಾಮೀಜಿಯವರ ಆಶಯದಂತೆ ಗ್ರಾಮೀಣ ಸೊಗಡು ಹೊಂದಿದ ಹಾಡುಗಳನ್ನು ಡಾ|ಕಂಬಾರ ಹಾಡಿ ಜನಮನ ರಂಜಿಸಿದರು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus