ಮಂಗಳೂರು: ರಾಜ್ಯ ಸರಕಾರದ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ರಚನೆ ಪ್ರಕ್ರಿಯೆ ಬಗ್ಗೆ ಕೆಲವರು ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ವೈಯಕ್ತಿಕ ನಿಂದನೆ ಮಾಡುತ್ತಿರುವುದನ್ನು ಬಿಜೆಪಿ ಯುವ ಮೋರ್ಚಾ ಖಂಡಿಸುತ್ತದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಅವರು ತಿಳಿಸಿದ್ದಾರೆ.ಸಚಿವ ಸಂಪುಟ ರಚನೆ ಸಂಪೂರ್ಣವಾಗಿ ಮುಖ್ಯಮಂತ್ರಿ ವಿವೇಚನೆ ಹಾಗೂ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದ್ದು, ಈ ಬಗ್ಗೆ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು ಯಾವುದೇ ಶಿಫಾರಸನ್ನು ಮಾಡಿರುವುದಿಲ್ಲ . ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸಂಪರ್ಕ ಪ್ರಮುಖರಾಗಿರುವ ಡಾ| ಭಟ್ ಅವರು ಸಂಪೂರ್ಣವಾಗಿ ಹಿಂದೂ ಸಮಾಜದ ಏಳಿಗೆಗಾಗಿ ಕಳೆದ ಹಲವು ದಶಕಗಳಿಂದ ಪೂರ್ಣಾವಧಿ ಕಾರ್ಯಕರ್ತರಾಗಿ ಶ್ರಮಿಸುತ್ತಿರುವವರೇ ಹೊರತು ಪಕ್ಷದ ಯಾವುದೇ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿಲ್ಲ. ಇದನ್ನು ಅರಿಯದ ಕೆಲವು ಸ್ವಹಿತಾಸಕ್ತ ಮತ್ತು ಪಕ್ಷ ವಿರೋಧಿ ಶಕ್ತಿಗಳು ಚಿತ್ರಣದಲ್ಲಿಯೇ ಇಲ್ಲದ ರಾ.ಸ್ವ.ಸೇ. ಸಂಘದ ಮೇಲೆ ಅಪ ಪ್ರಚಾರ ಮಾಡುತ್ತಿವೆ ಎಂದು ಅವರು ಟೀಕಿಸಿದ್ದಾರೆ.ಇಂತಹ ವ್ಯಕ್ತಿ ನಿಂದೆ ಮತ್ತು ಪಕ್ಷದ ವಿರುದ್ಧ ಕ್ಷುಲ್ಲಕವಾಗಿ ಮಾತನಾಡುವುದನ್ನು ಯುವ ಮೋರ್ಚಾ ಗಂಭೀರವಾಗಿ ಪರಿಗಣಿಸಿ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.