Udayavani | Jul 20, 2012
ನೀವು "ದಂಡುಪಾಳ್ಯ' ಸಿನಿಮಾ ನೋಡಿದ್ದೀರಾ? ಅದರಲ್ಲಿನ ಕೋತಿ ರಾಮ ಅಲಿಯಾಸ್ ತಿಮ್ಮನ ಪಾತ್ರ ನೆನಪಿದೆಯೇ? ನೆನಪಿದ್ದರೆ ನಿಮಗೆ ಇವರ ಮುಖಪರಿಚಯ, ಪಾತ್ರ ಪರಿಚಯ ಬೇಗನೇ ಆಗುತ್ತದೆ. ಎಲ್ಲರೂ ಒಳಗೆ ಕಳ್ಳತನ, ಕೊಲೆ ಮಾಡುತ್ತಿದ್ದರೆ ಹೊರಗೆ ಮಾನಸಿಕ ಅಸ್ವಸ್ಥನಂತೆ ನಟಿಸುತ್ತಾ ಕಾವಲು ಕಾಯುತ್ತಾ, ಯಾರಾದರೂ ಬಂದಾಗ "ಶಿಳ್ಳೆ' ಹಾಕಿ ಎಚ್ಚರಿಸುತ್ತಿದ್ದ ದೃಶ್ಯ ಎಲ್ಲರಿಗೂ ಇಷ್ಟವಾಗಿರುತ್ತದೆ. "ದಂಡುಪಾಳ್ಯ'ದಂತಹ ಗುಂಪು ಕಲಾವಿದರಿರುವ ಸಿನಿಮಾದಲ್ಲೂ ತಮ್ಮ ಪಾತ್ರ ಪೋಷಣೆ, ಅದ್ಭುತ ಮ್ಯಾನರೀಸಂ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು ಜಯದೇವ್ ಮೋಹನ್.

"ದಂಡುಪಾಳ್ಯ' ಚಿತ್ರದ ಕೋತಿ ರಾಮ ಅಲಿಯಾಸ್ ತಿಮ್ಮ ಪಾತ್ರ ಒಂಥರಾ ವಿಚಿತ್ರ ಮ್ಯಾನರೀಸಂನ ಪಾತ್ರ. ಅರೆ ಮೆಂಟಲ್, ಆರೆಕೋರೆ ಕಣ್ಣು. ಹಾಗೆ ಸುಮ್ಮನೆ ಮಾಡಿ ಬಿಡುವಂಥ ಪಾತ್ರವಲ್ಲ ಅದು. ಒಂದಷ್ಟು ತಯಾರಿ ಬೇಕು, ಅದಕ್ಕಿಂತ ಹೆಚ್ಚಾಗಿ ಆ ಪಾತ್ರಕ್ಕೆ ಒಗ್ಗಿಕೊಳ್ಳಬೇಕು. ಜಯದೇವ್ ಈ ಎಲ್ಲ ವಿಷಯದಲ್ಲೂ ಸಕ್ಸಸ್ ಆಗಿದ್ದಾರೆ. ವಿಭಿನ್ನ ನಟನೆಯ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇದೇ ಕಾರಣದಿಂದ ಆರಂಭದಿಂದ ಅಂತ್ಯದವರೆಗೂ ಜಯದೇವ್ ಅವರ ಪಾತ್ರ ಇಷ್ಟವಾಗುತ್ತಲೇ ಹೋಗುತ್ತದೆ. ಪ್ರತಿಯೊಬ್ಬರು ಜಯದೇವ್ ಅವರನ್ನು ಮೆಚ್ಚಿದ್ದಾರೆ. ಹಾಗೆ ನೋಡಿದರೆ ಜಯದೇವ್ಗೆ ಮೊದಲ ಸಿನಿಮಾವೇನಲ್ಲ. ಈ ಹಿಂದೆ "ಜಂಗ್ಲಿ'ಯಲ್ಲಿ ಜುಮ್ಕಿ ಎಂಬ ಪಾತ್ರ ಮಾಡಿದ್ದರು. ಆದರೆ ಈಗ ಒಂದೇ ಒಂದು "ದಂಡುಪಾಳ್ಯ' ಚಿತ್ರ ಜಯದೇವ್ಗೆ ಹೆಸರು ತಂದುಕೊಡುತ್ತಿದೆ ಎಂದರೆ ತಪ್ಪಲ್ಲ. ಸದ್ಯ "ಛತ್ರಪತಿ' ಸಿನಿಮಾದಲ್ಲೂ ಜಯದೇವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನೋಡಿದವರೆಲ್ಲ ಫೋನ್ ಮಾಡಿ ವಿಶ್ ಮಾಡುತ್ತಿದ್ದಾರಂತೆ. ಚಿತ್ರರಂಗದ ಅನೇಕ ಮಂದಿ ಕೂಡಾ ಜಯದೇವ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಜಯದೇವ್ ಅವರಿಗೆ ಮೊದಲು ಈ ಪಾತ್ರ ಕೊಟ್ಟಾಗ ಹೇಗೆ ಮಾಡಬೇಕೆಂಬ ಐಡಿಯಾ ಇರಲಿಲ್ಲವಂತೆ. ಆದರೆ ಬೆಳಗಾಂ ಜೈಲಿನಲ್ಲಿರುವ ಕೋತಿರಾಮ ಅಲಿಯಾಸ್ ತಿಮ್ಮನನ್ನು ನೋಡಿದ ನಂತರ ಆ ಪಾತ್ರವನ್ನು ಹೀಗೆಯೇ ಮಾಡಬೇಕೆಂದುಕೊಂಡು ಪ್ರಾಕ್ಟೀಸ್ ಮಾಡಿದರಂತೆ. ಅದಕ್ಕೀಗ ಪ್ರತಿಫಲ ಸಿಕ್ಕಿದೆ.
ಮೂಲತಃ ರಂಗಭೂಮಿಯಿಂದ ಬಂದ ಜಯದೇವ್ ಈಗಾಗಲೇ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಧಾರಾವಾಹಿಗೆ ಎಪಿಸೋಡ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮುಂದೊಂದು ದಿನ ಒಳ್ಳೆಯ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಕೂಡಾ ಜಯದೇವ್ಗಿದೆ. "ನನಗೆ ಅಂತಹುದೇ ಪಾತ್ರ ಆಗಬೇಕೆಂದು ನಾನು ಹೇಳುವುದಿಲ್ಲ. ಆದರೆ ಪಾತ್ರ ಮಾತ್ರ ಭಿನ್ನವಾಗಿರಬೇಕು. ಜನರಿಗೆ ಇಷ್ಟವಾಗುವಂತಿರಬೇಕು ಮತ್ತು ಇಷ್ಟಪಡಿಸಲು ಅಲ್ಲಿ ಅವಕಾಶ ವಿರಬೇಕು' ಎಂಬುದು ಜಯದೇವ್ ಅವರ ಮನದ ಮಾತು.