ಡಾ| ಅಂಟಿನಿ ಸಿಲ್ವನ್ ಡಿಸೋಜಾ, ವಿಭಾಗ ಮುಖ್ಯಸ್ಥರು, ಅನಾಟಮಿ ವಿಭಾಗ. | Aug 05, 2012
ಪ್ರಪಂಚದ ಸೃಷ್ಟಿಯಲ್ಲಿ ಎಲ್ಲಾ ಜೀವ ರಾಶಿಗಳಲ್ಲಿ ಮನುಷ್ಯನ ಜನ್ಮ ಅತೀ ಶ್ರೇಷ್ಠವಾದುದು. ಮನುಷ್ಯನಿಗೆ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ, ತಿಳಿವಳಿಕೆ, ಪರೋಪಕಾರದ ಮನೋಭಾವ -ಎಲ್ಲವೂ ಇವೆ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಪರೋಪಕಾರ, ದಾನ ಧರ್ಮಗಳನ್ನು ಮಾಡಿ ಪುನೀತರಾಗಬೇಕಾಗಿದೆ. ಮಾನವನಿಗೆ ಹುಟ್ಟು ಮತ್ತು ಸಾವು ಎರಡೂ ಸಮಾನವಾಗಿವೆ. ಕಟುಸತ್ಯದ ವಾಡಿಕೆಯ ಮಾತೆಂದರೆ.
ಮಾನವನ ಹುಟ್ಟು ಅನಿರೀಕ್ಷಿತ; ಸಾವು ನಿಶ್ಚಿತ. ದಾನಗಳಲ್ಲಿ ಮಹಾದಾನ ದೇಹದಾನ. ನಾವು ಹುಟ್ಟಿ ನಮ್ಮ ಜೀವನದಲ್ಲಿ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ, ಕೊನೆಗೆ ಒಂದು ದಿನ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಇಹಲೋಕ ತ್ಯಜಿಸುತ್ತೇವೆ. ಆದರೆ ಭೂಮಿಯಲ್ಲಿ ಶಾಶ್ವತವಾಗಿ, ಅವಿಸ್ಮರಣೀಯವಾಗಿ ಉಳಿಯುವುದು ನಾವು ಮಾಡಿದ ದಾನ, ಧರ್ಮ, ಪಾಪ, ಪುಣ್ಯ ಮಾತ್ರ. ನಮ್ಮ ಮೃತ ಶರೀರವು ಮಣ್ಣಲ್ಲಿ ಕೊಳೆತು ಅಥವಾ ಆಗ್ನಿಯಲ್ಲಿ ಸುಟ್ಟು ಭಸ್ಮವಾಗಿ, ಯಾರಿಗೂ ಉಪಯೋಗವಾಗದೆ ಹೋಗುತ್ತದೆ. ನಾವು ಜೀವಿತ ಅವಧಿಯಲ್ಲಿ ಮಾಡಿದ ಸಾಧನೆ, ತ್ಯಾಗ, ಪರೋಪಕಾರ, ಸಜ್ಜನಿಕೆ, ಮಾನವೀಯತೆಯ ಮೌಲ್ಯಗಳು ಶಾಶÌತ. ನಾವು ಇಂದು ವೈಜ್ಞಾನಿಕ ಯುಗದಲ್ಲಿದ್ದೇವೆ. ಇಂದಿನ ಈ ವೈಜ್ಞಾನಿಕ ಯುಗದಲ್ಲಿ ವೈದಕೀಯ ವಿಜ್ಞಾನ ಎಷ್ಟು ಮುಂದುವರಿದಿದೆಯೋ, ಅದೇ ರೀತಿ ದಿನಕ್ಕೊಂದರಂತೆ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಇಂತಹ ಹೊಸ ಹೊಸ ಕಾಯಿಲೆಗಳ ಬಗ್ಗೆ ಸಂಶೋಧನೆ ಮಾಡಿ, ಕಾಯಿಲೆಗಳನ್ನು ಗುಣಪಡಿಸುವುದು ವೈದ್ಯರ ಆದ್ಯ ಕರ್ತವ್ಯವಾಗಿರುತ್ತದೆ. ಮನುಷ್ಯನಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ , ಪ್ರಥಮಥವಾಗಿ ನಾವು ನೀವೆಲ್ಲರೂ ಮೊರೆ ಹೋಗುವುದು ಉತ್ತಮ ವೈದ್ಯರಲ್ಲಿ. ಅವರು ಸೂಕ್ತ ರೀತಿಯ ಸಲಹೆ, ಮಾರ್ಗದರ್ಶನ ಹಾಗೂ ಚಿಕಿತ್ಸೆಗಳನ್ನು ನೀಡಿ, ನಮಗೆ ಕಾಯಿಲೆ ಗುಣಮಾಡಿ ಕಳುಹಿಸುತ್ತಾರೆ. ಆ ಕಾರಣದಿಂದಲೆ ಪುರಾಣದಲ್ಲಿ ವೈದ್ಯರನ್ನು ದೇವರೆಂದು ಉಲ್ಲೇಖೀಸಲಾಗಿದೆ. ನಾವು ನಮ್ಮ ಜೀವಿತಾವಧಿಯಲ್ಲಿ ಯಾವುದಾದರೂ ಒಂದು ಸಾಧನೆ ಮಾಡಬೇಕೆಂಬ ದೃಢ ನಿರ್ಧಾರವನ್ನು ಮಾಡಬೇಕು. ನಮ್ಮ ಜೀವಿತದ ನಂತರ ಪ್ರಮುಖವಾಗಿ ದಾನ ಮಾಡಲು ಸಾಧ್ಯವಾಗುವುದು, ಒಂದು ನೇತ್ರದಾನ ಇನ್ನೊಂದು ದೇಹದಾನ. ಇವೆರಡೂ ಕೂಡ ಅತ್ಯುನ್ನತ ದಾನಗಳಾಗಿವೆ. ನಮಗೆ ಸಮಾಜ ಏನು ಕೊಟ್ಟಿದೆ ಎನ್ನುವ ಬದಲು, ನಾವು ಸಮಾಜಕ್ಕೆ ಏನು ಕೊಡಬಹುದು ಎಂಬ ಬಗ್ಗೆ ನಾವು ಯೋಚಿಸಬೇಕು. ನಾವು ಮೃತಪಟ್ಟ ಮೇಲೆ, ನಮ್ಮ ನೇತ್ರವನ್ನು ದಾನ ಮಾಡಿದಲ್ಲಿ, ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಬಹುದಾಗಿದೆ. ಹಾಗೆಯೇ, ನಾವು ಮೃತಪಟ್ಟ ಮೇಲೆ ನಮ್ಮ ಮೃತ ಶರೀರವನ್ನು ವೈದ್ಯಕೀಯ ವಿದ್ಯಾರ್ಜನೆಯ ಸದುದ್ದೇಶಕ್ಕೆ ದಾನ ಮಾಡಿದಲ್ಲಿ, ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿ, ಅವರು ಉತ್ತಮ ವೈದ್ಯರಾಗಲು ಸಾಧ್ಯವಾಗುತ್ತದೆ. ಒಒº ಒಳ್ಳೆಯ ವೈದ್ಯನಾಗಬೇಕಾದರೆ, ಮೊದಲಿಗೆ ಆ ವಿದ್ಯಾರ್ಥಿಯು ಅಂಗರಚನಾ ಶಾಸ್ತ್ರದ ಬಗ್ಗೆ ವ್ಯಾಸಂಗ ಮಾಡಬೇಕು. ವೈದ್ಯಕೀಯ ವಿದ್ಯಾರ್ಥಿಗಳ ಪ್ರಥಮ ಹಂತದ ವಿದ್ಯಾಭ್ಯಾಸ ಮುಗಿದಾಕ್ಷಣ, ಅವರು ಉತ್ತಮ ವೈದ್ಯರಾಗಲು ಸಾಧ್ಯವಿಲ್ಲ . ಮುಂದಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಮಾನವ ಅಂಗರಚನಾ ಶಾಸ್ತ್ರವಿಭಾಗ ಹಾಗೂ ಇತರ ವಿಷಯಗಳ ಬಗ್ಗೆ ವ್ಯಾಸಂಗ ಮಾಡಲೂ ಕೂಡ ಮೃತ ಶರೀರ ಅತ್ಯಾವಶ್ಯಕವಾಗಿದೆ. ಅಂಗರಚನಾ ಶಾಸ್ತ್ರದ ಬಗ್ಗೆ ತಿಳಿಯಲು ಮಾನವನ ಮೃತ ಶರೀರ ಬಹಳ ಪ್ರಮುಖವಾಗಿರುತ್ತದೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವ ನಾವು || ದೇಹದಾನಂ ಮಹಾದಾನಂ || ಎಂದು ಅರಿತು, ದೇಹದಾನ ಮಾಡಲು ಮುಂದಾಗಬೇಕಾಗಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲಾ ಸಂಘಸಂಸ್ಥೆಗಳು, ಸಮಾಜಸೇವಕರು ಹಾಗೂ ಜನಪ್ರತಿನಿಧಿಗಳು ದೇಹದಾನದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ.
ಮೃತ ಶರೀರವನ್ನು ವೈದ್ಯಕೀಯ
ಸಂಸ್ಥೆಗೆ ನೀಡುವ ವಿಧಾನ :
ನಮ್ಮ ಸಂಸ್ಥೆಯ ವಿಭಾಗ ಮುಖ್ಯಸ್ಥರ ಕಚೇರಿಯಿಂದ ದೇಹದಾನ ಮಾಡುವ ಎರಡು ಅರ್ಜಿ ನಮೂನೆಗಳನ್ನು ಪಡೆದುಕೊಳ್ಳಬೇಕು. ಆ ಅರ್ಜಿಯನ್ನು ಪೂರ್ತಿಯಾಗಿ ಭರ್ತಿಮಾಡಬೇಕು. ತಾವು ದೇಹ ದಾನ ಮಾಡುವ ಮೊದಲು ತಮ್ಮ ಬಂಧು-ಮಿತ್ರರಲ್ಲಿ, ಕುಟುಂಬದ ಪ್ರಮುಖರಲ್ಲಿ ಈ ವಿಷಯದ ಬಗ್ಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಈ ಎರಡು ಆರ್ಜಿಗಳಲ್ಲಿ ತಮ್ಮ ಕುಟುಂಬದ ಒಬ್ಬ ಸದಸ್ಯರ ಹಾಗೂ ನಿಮ್ಮ ಆತ್ಮೀಯ ಮಿತ್ರ ಸಾಕ್ಷಿದಾರರ ವಿಳಾಸ ಮತ್ತು ಸಹಿಗಳನ್ನು ಪಡೆದುಕೊಳ್ಳಬೇಕು. ಈ 2 ಭರ್ತಿ ಮಾಡಿದ ಅರ್ಜಿಗಳಲ್ಲಿ ಒಂದು ಅರ್ಜಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು, ಇನ್ನೊಂದು ಭರ್ತಿ ಮಾಡಿದ ಅರ್ಜಿಯನ್ನು ಮುಖತ: ಅಥವಾ ಅಂಚೆ ಮೂಲಕ ನಮಗೆ ತಲುಪಿಸಬಹುದು. ದೇಹದಾನ ಮಾಡಲು ಇಚಿ#ಸಿದ ವ್ಯಕ್ತಿ ಮೃತ ಪಟ್ಟ ಕನಿಷ್ಠ ಒಂದು ಅಥವಾ ಗರಿಷ್ಠ ಆರು ಘಂಟೆಗಳ ಒಳಗಾಗಿ ತಾವು ಈ ಕೆಳಗೆ ನೀಡಿದ ವಿಳಾಸ ಯಾ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ, ಯಾವುದೇ ಖರ್ಚು ವೆಚ್ಚಗಳಿಲ್ಲದಂತೆ ನಾವು ದೇಹ ದಾನ ಪಡೆಯುವೆವು. ದೇಹದಾನ ಮಾಡಿದ ವ್ಯಕ್ತಿಯ ಶವವು ಕೆಡದಂತೆ ಸಂಸ್ಕರಿಸಿ ಇಡಲಾಗುವುದು. ಇದು ವರೆಗೆ ಹಲವಾರು ಜಿಲ್ಲೆಗಳಿಂದ ಹಲವಾರು ವ್ಯಕ್ತಿಗಳು ದೇಹದಾನ ಮಾಡುವುದಾಗಿ ನಮ್ಮ ಸಂಸ್ಥೆಗೆ ಆರ್ಜಿಯನ್ನು ಭರ್ತಿ ಮಾಡಿ ನೀಡಿರುತ್ತಾರೆ. ಈ ಸತ್ಕಾರ್ಯದಲ್ಲಿ ಹಲವಾರು ಸಮಾಜ ಸೇವಕರು, ಸಂಘ ಸಂಸ್ಥೆಯವರು ಈಗಾಗಲೆ ನಮ್ಮ ಸಂಸ್ಥೆಗೆ ಬಂದು ಮೌಖೀಕವಾಗಿ ವಿಚಾರಿಸಿರುತ್ತಾರೆ . ತಾವು ಕೂಡ ದೇಹದಾನ ಮಹಾದಾನ ಎಂಬ ನಾಣ್ಣುಡಿಗೆ ಭಾಜನರಾಗಲು ಇದು ಸುವರ್ಣಾವಕಾಶ.