Wednesday, May 22, 2013
Last Updated: 12:42:24 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೈಕೋಳ ತೊಡಿಸಿದರೂ ತೊಡಿಸದಿದ್ದರೂ ತಪ್ಪುಗಾರರು ಪೊಲೀಸರು!
      • ಬಿ.ಟಿ. ರಂಜನ್‌ | Aug 05, 2012

        ಪುತ್ತೂರು: ಆರೋಪಿಗಳಿಗೆ ಕೈಕೋಳ ತೊಡಿಸಿ ರಸ್ತೆಯಲ್ಲಿ ಕೊಂಡೊಯ್ಯುವುದು, ಕೈಕೋಳ ತೊಡಿಸಿ ಪೊಲೀಸ್‌ ವಾಹನದಲ್ಲಿ ಕುಳ್ಳಿರಿಸುವುದು ಮೊದಲಾದ ಕ್ರಮಗಳನ್ನು ಪೊಲೀಸರು ಕೈಗೊಂಡರೆ ಅದು ಮಾನವ ಹಕ್ಕಿಗೆ ವಿರುದ್ಧ ವಾಗುತ್ತದೆ ಇಂತಹ ಘಟನೆಗಳಿಗೆ ಮಾನವ ಹಕ್ಕು ಆಯೋಗ ಆಕ್ಷೇಪ ವ್ಯಕ್ತಪಡಿಸುತ್ತದೆ. ಗಂಭೀರ ಪ್ರಕರಣಗಳಲ್ಲಿ ಪಾಲ್ಗೊಂಡ ಕುಖ್ಯಾತ ಆರೋಪಿಗಳನ್ನು ಕೈಕೋಳ ತೊಡಿಸದೆ ವಾಹನದಲ್ಲಿ ಕರೆತಂದು ಅವರು ಪರಾರಿಯಾದರೆ ಅದನ್ನು ಕರ್ತವ್ಯ ನಿರತ ಪೊಲೀಸರ ನಿರ್ಲಕ್ಷ್ಯ ಎಂದು ಇಲಾಖೆ ಪರಿಗಣಿಸಿ ಪೊಲೀಸರ ವಿರುದ್ದ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುತ್ತದೆ.

        ಈ ಎರಡೂ ವಿಚಾರಗಳನ್ನು ಗಮನಿಸಿದರೆ ಕೈಕೋಳ ತೊಡಿಸಿದರೂ , ತೊಡಿಸದೇ ಇದ್ದರೂ ಕಾನೂನಿನ ಮುಂದೆ ಪೊಲೀಸರೇ ಅಪರಾಧಿಗಳು. ಯಾವ ಹಕ್ಕುಗಳೂ ಕೂಡಾ ಇವರಿಗೆ ರಕ್ಷಣೆ ನೀಡುವುದಿಲ್ಲ. ಕೈಕೋಳ ತೊಡಿಸಿದರೆ ಮಾನವ ಹಕ್ಕು ಆಯೋಗದ ಆಕ್ಷೇಪ , ಕೈಕೋಳ ತೊಡಿಸದೆ ಆರೋಪಿ ಪರಾರಿಯಾದರೆ ಇಲಾಖಾ ತನಿಖೆ ಮತ್ತು ಅಮಾನತು ಶಿಕ್ಷೆ.

        6 ತಿಂಗಳ ಹಿಂದೆ ಕುಖ್ಯಾತ ಕ್ರಿಮಿನಲ್‌ ಆರೋಪಿ ನಾಗರಾಜ ಬಳೆಗಾರ್‌ ಎಂಬಾತನನ್ನು ಬೆಳಗಾವಿ ಕಾರಾಗೃಹದಿಂದ ಪುತ್ತೂರು ನ್ಯಾಯಾಲಯಕ್ಕೆ ಕರೆತಂದು ಬಸ್ಸಿನಲ್ಲಿ ಮರಳಿ ಕರೆದೊಯ್ಯುವಾಗ ಹುಬ್ಬಳ್ಳಿಯಲ್ಲಿ ಆರೋಪಿ ನಾಗರಾಜ ಪುತ್ತೂರು ಪೊಲೀಸ್‌ ಠಾಣಾ ಎ ಎಸ್‌ ಐ ರಾಮ ನಾಯ್ಕ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದನು. ಸಾರ್ವಜನಿಕರು ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಮತ್ತೆ ಬಂಧಿಸಲಾಯಿತು. ಆ. 1 ರಂದು ಪುತ್ತೂರು ನ್ಯಾಯಾಲಯದ ಬಳಿ ನಿಲ್ಲಿಸಿದ್ದ ಪೊಲೀಸ್‌ ವ್ಯಾನ್‌ನಿಂದ ನೆಲ್ಯಾಡಿ ದರೋಡೆ ಪ್ರಕರಣದ ಆರೋಪಿ ಮಸೂದ್‌ ಕೈಕೋಳ ಜಾರಿಸಿ ವ್ಯಾನ್‌ನ ಕಿಟಿಕಿಯಿಂದ ಹಾರಿ ಪರಾರಿಯಾಗಿದ್ದನು.

        ಪೊಲೀಸ್‌ ಠಾಣೆಯಲ್ಲಿ ಲಾಕಪ್‌ ಡೆತ್‌ ಸಂಭವಿಸಿದರೆ , ಪೊಲೀಸ್‌ ದೌರ್ಜನ್ಯದಿಂದ ಯಾವುದೇ ಆರೋಪಿ ಗಂಭೀರವಾಗಿ ಗಾಯಗೊಂಡರೆ , ವಿನ: ಕಾರಣ ಪೊಲೀಸರು ಯಾವುದೇ ವ್ಯಕ್ತಿಯನ್ನು ಹಿಂಸಿಸಿದರೆ ಇಂತಹ ಪ್ರಕರಣಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂಬ ವಾದವನ್ನು ಒಪ್ಪಬಹುದು . ಗುರುತರವಾದ ಪ್ರಕರಣದಲ್ಲಿ ಪಾಲ್ಗೊಂಡು ಆತ ದಾರಿ ಮಧ್ಯೆ ತಪ್ಪಿ$ಸದಂತೆ ಆರೋಪಿಯ ಕೈಗೆ ಕೈಕೋಳ ತೊಡಿಸಿದರೆ ಅದು ಮಾನವ ಹಕ್ಕುಗಳ ಉಲ್ಲಂಘನೆ ಹೇಗಾಗುತ್ತದೆ ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯಬೇಕಾಗಿದೆ.

        ಕಳವು ಪ್ರಕರಣದ ಸಂದರ್ಭಗಳಲ್ಲಿ ಕಳ್ಳತನದ ಆರೋಪಿಯನ್ನು ಸತ್ಯ ಬಾಯಿ ಬಿಡಿಸಲು ಪೊಲೀಸರು ಕಠಿನ ತನಿಖೆ ನಡೆಸಿದರೆ ಆರೋಪಿಯ ಮನೆಯ ವರು ಮಾನವಹಕ್ಕು ಆಯೋಗಕ್ಕೆ ದೂರು ನೀಡುತ್ತಾರೆ. ಆಯೋಗ ಕೂಡಾ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಪೊಲೀಸರಿಗೆ ಎಚ್ಚರಿಕೆಯ ನೊಟೀಸು ಜಾರಿಗೊಳಿಸುತ್ತದೆ ಆದರೆ ಕಳ್ಳನಿಂದ ಮನೆಯಲ್ಲಿದ್ದ ನಗನಗದು ಕಳೆದುಕೊಂಡ ಮನೆ ಮಾಲಕನಿಗೆ ತನ್ನ ನೋವು ಹೇಳಿಕೊಳ್ಳಲು ಸದ್ಯಕ್ಕೆ ಯಾವ ಕಾನೂನು ಕೂಡ ಇಲ್ಲ.  ಆರೋಪಿಗಳನ್ನು ಪತ್ತೆ ಹಚ್ಚದಿದ್ದರೆ ಸಾರ್ವಜನಿಕರ ನಿಂದನೆಗೆ ಪೊಲೀಸರು ಗುರಿಯಾಗುತ್ತಾರೆ. ಆರೋಪಿಗಳನ್ನು ಪತ್ತೆ ಮಾಡಿ ಅವರ ಕೃತ್ಯವನ್ನು ಬಯಲುಗೊಳಿಸಿದ ಬೆನ್ನಲ್ಲೇ ಆರೋಪಿಯ ಮನೆಯವರ ಕಾನೂನು ಸಮರದ ಗುರಿ ಕೂಡಾ ಪೊಲೀಸರೇ ಆಗುತ್ತಾರೆ. ಕೆಲಸ ಮಾಡಿದರೂ , ಮಾಡದಿದ್ದರೂ ಸಮಾಜದಲ್ಲಿ ಪೊಲೀಸರು ಸದಾ ಜನದೂಷಣೆಗೆ ಗುರಿಯಾಗುತ್ತಿರುವುದು ಮಾತ್ರ ವಿಪರ್ಯಾಸ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus