ಹೊಸದಿಲ್ಲಿ : ಆರ್ಥಿಕ ತಜ್ಞರೂ ಐಎಂಎಫ್ನ ಮಾಜಿ ವರಿಷ್ಠರೂ ಆಗಿರುವ ರಘುರಾಮ್ ಜಿ. ರಾಜನ್ ಅರ್ಥ ಖಾತೆಯ ಪ್ರಮುಖ ಆರ್ಥಿಕ ಸಲಹೆಗಾರರಾಗಿ (ಸಿಇಎ) ನೇಮಕಗೊಂಡಿದ್ದಾರೆ.ಹೊಸ ಸಿಇಎಯಾಗಿ ರಾಜನ್ ಅವರು ನೇಮಕಗೊಂಡಿರುವುದನ್ನು ನೇಮಕಾತಿ ಕುರಿತ ಸಂಪುಟ ಸಮಿತಿ ಶುಕ್ರವಾರ ಅಂಗೀಕರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ತನ್ನ ಪ್ರಾಮಾಣಿಕ ಅಭಿಪ್ರಾಯಗಳಿಗೆ ಹೆಸರಾಗಿರುವ ರಾಜನ್ , ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವ ಆರ್ಥಿಕ ಸಲಹೆಗಾರರೂ ಹೌದು. ಪ್ರಸ್ತುತ ಅವರು ಶಿಕಾಗೋ ಯುನಿವರ್ಸಿಟಿಯ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2008ರಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತದ ಬಗ್ಗೆ ರಾಜನ್ ಮುಂದಾಗಿಯೇ ಸಂಕೇತ ನೀಡಿದ್ದರು.ಕೌಶಿಕ್ ಬಸು ಅವರ ಅವಧಿ ಮುಗಿದು ತೆರವಾಗಿರುವ ಸ್ಥಾನವನ್ನು ಇದೀಗ ರಾಜನ್ ತುಂಬಿದ್ದಾರೆ.