Udayavani | Aug 18, 2012
ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ (ಜಿಎಸ್ಬಿ) ಸಮಾಜದ ಬಾಲಾಜಿ ಸೇವಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿಪೂಜೆಯು ಆ. 12 ರಂದು ಜಯ ಅಮ್ಮ ಅನ್ನಪೂರ್ಣ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಸುಶೀಲಾ ಎಸ್. ಪೈ, ಶಾಲಿನಿ ಎಲ್. ಪೈ ಅವರ ನೇತೃತ್ವದಲ್ಲಿ ಮತ್ತು ವೇದಮೂರ್ತಿ ಗಿರಿಧರ ಭಟ್, ಶ್ರೀಪತಿ ಭಟ್ ಅವರ ಮಾರ್ಗದರ್ಶನದಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ನೆರವೇರಿತು. ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ತಬಲದಲ್ಲಿ ಗಣೇಶ್ ಪೈ ಅವರು ಸಹಕರಿಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯ ಬಾಂಧವರು ಮತ್ತು ಸಮಾಜದ ನೂರಾರು ಮಂದಿ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.