ಅಹಮದಾಬಾದ್ : ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಧನುರ್ಮಾಸ ಮುಗಿದ ಬಳಿಕ 'ಪಂಚಾಮೃತ' ಎಂಬ ಹೊಸ ಕಚೇರಿಗೆ ಸ್ಥಳಾಂತರಗೊಳ್ಳಲಿದ್ದಾರೆ. 150 ಕೋಟಿ ರೂ. ವ್ಯಯಿಸಿ ಮೋದಿ ಕಟ್ಟಿಸಿರುವ ಈ ಕಚೇರಿ ಗುಂಡು ನಿರೋಧಕ ಸೌಲಭ್ಯ ಹೊಂದಿದೆ.ದೆಹಲಿಯ ರೈಸಿನಾ ಹಿಲ್ ಪ್ರದೇಶದಲ್ಲಿರುವ ನಾರ್ತ್ ಬ್ಲಾಕ್ ಹಾಗೂ ಸೌತ್ ಬ್ಲಾಕ್ನಂತೆ 'ಪಂಚಾಮೃತ'ದಲ್ಲೂ ವಿಭಾಗಗಳಿವೆ. ದೆಹಲಿಯಲ್ಲಿ ಸೌತ್ ಬ್ಲಾಕ್ನಲ್ಲಿ ಪ್ರಧಾನಿ ಕಚೇರಿ ಇದ್ದರೆ, 'ಪಂಚಾಮೃತ'ದ ನಾರ್ತ್ ಬ್ಲಾಕ್ನಲ್ಲಿ ಮೋದಿ ಕಚೇರಿ ಇದೆ. 'ಸೌತ್ ಬ್ಲಾಕ್'ನಲ್ಲಿ ಸಚಿವರ ಕೊಠಡಿಗಳಿವೆ.ನಾಲ್ಕು ಅಂತಸ್ತುಗಳ ಈ ಕಟ್ಟಡ 35,000 ಚದರಡಿ ವಿಸ್ತೀರ್ಣ ಹೊಂದಿದ್ದು ಕಿಟಕಿ, ಬಾಗಿಲುಗಳಿಗೆ ಗುಂಡು ನಿರೋಧಕ ವ್ಯವಸ್ಥೆ ಇದೆ.ಮೋದಿಗೆ ಅಮೆರಿಕ ವೀಸಾ ಇಲ್ಲ:ಈ ಮಧ್ಯೆ, ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಅಮೆರಿಕ, ಇದೊಂದು ಭಾರತದ ಆಂತರಿಕ ರಾಜಕೀಯ ವಿಚಾರ ಎಂದು ಪ್ರತಿಪಾದಿಸಿದೆ. ಅಲ್ಲದೆ, ಮೋದಿಗೆ ವೀಸಾ ನೀಡುವ ಕುರಿತ ಪ್ರಶ್ನೆಗೆ ಈಗ ಅನುಸರಿಸಲಾಗುತ್ತಿರುವ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.