ಇಚ್ಲಂಪಾಡಿ: ಇಚ್ಲಂಪಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ 3 ಕಾಡಾನೆಗಳು ನಡೆಸಿದ ಅಬ್ಬರಕ್ಕೆ ಭತ್ತದ ಗದ್ದೆ, ಬಾಳೆ ತೋಟ ಮತ್ತು ಅಡಿಕೆ ತೋಟಗಳು ಹಾನಿಗೊಂಡಿವೆ.ಕಾಡಾನೆಗಳು ಗ್ರಾಮದ ಕೃಷಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ರಾತ್ರಿ 9 ಗಂಟೆ ವೇಳೆಗೆ ಒಂದು ಕಡೆಯಿಂದ ಒಂಟಿ ಸಲಗ ಹಾಗೂ ಇನ್ನೊಂದು ಕಡೆಯಿಂದ ಎರಡು ಸಲಗಗಳು ಏಕ ಕಾಲಕ್ಕೆ ಕೃಷಿ ತೋಟಗಳಿಗೆ ದಾಳಿ ನಡೆಸಿವೆ. ಒಂಟಿ ಸಲಗ ಮೊದಲು ಕಡೆಂಬೆಲಿ ನಿವಾಸಿ ಜಾನ್ ಅವರ ಬಾಳೆ ತೋಟಕ್ಕೆ ಹಾನಿ ನಡೆಸಿ ನಂತರ ಗಾಣದಕೊಟ್ಯದ ನಿವಾಸಿ ಡೊಂಬಯ್ಯ ಅವರ ಗದ್ದೆಗೆ ಇಳಿದು ಪೈರು ನಾಶ ಮಾಡಿದೆ. ಅಲ್ಲಿಂದ ಒಡ್ಯತ್ತಡ್ಕ ಲಕ್ಷ್ಮಣ ಗೌಡರ ಬಾಳೆತೋಟಕ್ಕೆ ದಾಳಿ ಮಾಡಿ ಪಕ್ಕದ ಕಲ್ಲರ್ಪ ಓನಚ್ಚನ್ ಅವರ ನೇಂದ್ರ ಬಾಳೆ ತೋಟದಲ್ಲಿ ಬಾಳೆಗಿಡಗಳನ್ನು ಕಿತ್ತು ನಾಶ ಪಡಿಸಿತು.2 ಕಾಡಾನೆಗಳ ತಂಡ ಇಚ್ಲಂಪಾಡಿ ಗ್ರಾಮದ ಹೊಸಮನೆ ಮಾಯಿಲಪ್ಪ ಶೆಟ್ಟಿ ಅವರ ಬಾಳೆ ತೋಟವನ್ನು ಹಾನಿಗೊಳಿಸಿ ಪಕ್ಕದ ಸಂಪೂರ್ಣ ಅವರ ಗದ್ದೆಗೆ ಇಳಿದು ಪೈರು ನಾಶ ಮಾಡಿವೆ. ಮಾನಡ್ಕ ರಾಮಣ್ಣ ಶೆಟ್ಟಿ ಅವರ ಬಾಳೆ ತೋಟ ಮತ್ತು ಗದ್ದೆಗೆ ನುಗ್ಗಿ ಪೈರನ್ನು ಎಳೆದಾಡಿವೆ.ಬರಮೇಲು ನಾರಾಯಣ ಪೂಜಾರಿ ಅವರ ಬಾಳೆತೋಟವನ್ನು ಹಾನಿಮಾಡಿ, ಮುನ್ನುಗ್ಗಿದ ಕಾಡಾನೆಗಳು ಬೀಡು ಬಯಲು ರಾಮಕೃಷ್ಣ ಶೆಟ್ಟಿ ಅವರ ಮನೆಯಂಗಳಕ್ಕೆ ಬಂದು ಬಟ್ಟೆ ತೊಳೆಯುವ ಕಲ್ಲನ್ನು ದೂಡಿ ಹಾಕಿ ಮನೆಯ ವಿದ್ಯುತ್ ಸಂಪರ್ಕದ ವಯರುಗಳನ್ನು ಕಿತ್ತು ಎಸೆದಿವೆ.ಬೆನ್ನಟ್ಟಿದ ಕಾಡಾನೆಗಳುಇಚ್ಲಂಪಾಡಿ ಗ್ರಾಮದ 50ಕ್ಕೂ ಹೆಚ್ಚು ಕೃಷಿಕರ ತಂಡ ದೊಂದಿ ಉರಿಸಿ, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಯತ್ನಿಸಿದಾಗ ಕಾಡಿನತ್ತ ತೆರಳಿದ ಆನೆಗಳು ಮರಳಿ ಜನರನ್ನು ಬೆನ್ನಟ್ಟಿಕೊಂಡು ಬಂದವು.ಪ್ರಯತ್ನ ಬಿಡದ ಕೃಷಿಕರ ತಂಡ ಆನೆಗಳನ್ನು ಮತ್ತೆ ಪಟಾಕಿ ಸಿಡಿಸಿ ಓಡಿಸಿದಾಗ ಹೊಳೆಗೆ ಇಳಿದು 3 ಕಾಡಾನೆಗಳು ರಕ್ಷಿತಾರಣ್ಯದತ್ತ ತೆರಳಿದವು. ಆನೆಗಳ ದಾಂಧಲೆಯಿಂದ ಇಚ್ಲಂಪಾಡಿ ಗ್ರಾಮದ ಕೃಷಿಕರು ಭಯಗ್ರಸ್ತರಾಗಿದ್ದಾರೆ. ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರೂ ಅವರು ರವಿವಾರ ಮಧ್ಯಾಹ್ನದ ತನಕ ಸ್ಥಳಕ್ಕೆ ಬಂದಿಲ್ಲ ಎಂದು ಕೃಷಿಕರು ದೂರಿದ್ದಾರೆ.