ಕಾಸರಗೋಡು ಪ್ರವಾಸಗೈವವರು ಮಧೂರಿನ ಅತೀ ಪುರಾತನ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡದೆ ಮರಳುವುದಿಲ್ಲ ಎನ್ನುವುದಕ್ಕೆ ಹಲವಾರು ಕಾರಣಗಳಿವೆ.
ಮಧೂರು ದೇವಸ್ಥಾನಕ್ಕೆ ಟಿಪ್ಪು ಸುಲ್ತಾನ್ ದಾಳಿ ಮಾಡಿದ್ದ ಎಂದು ಇತಿಹಾಸದ ಕಥೆಗಳು ಹೇಳುತಿವೆ. ಇಲ್ಲಿನ ಸಂಪತ್ತನ್ನು ಸೂರೆ ಮಾಡುವ ಉದ್ದೇಶದೊಂದಿಗೆ ದಾಳಿ ಮಾಡಿದ್ದ ಆತ, ದಣಿವಾದಾಗ ದೇವಸ್ಥಾನದ ಹೊರಾವರಣದಲ್ಲಿರುವ ಬಾವಿಯ ನೀರನ್ನು ಕುಡಿದನಂತೆ.

ಬಳಿಕ ಅವನಿಗೇನಾಯಿತೋ ಗೊತ್ತಿಲ್ಲ. ದೇವಸ್ಥಾನ ಧ್ವಂಸ ಮಾಡಿ. ಅಲ್ಲಿನ ಸಂಪತ್ತನ್ನು ಸೂರೆ ಮಾಡುವ ನಿರ್ಧಾರದಿಂದ ಹಿಂದೆ ಸರಿದ. ತಾನು ಬಂದಿರುವುದರ ನೆನಪಿಗಾಗಿ ದೇವಾಲಯದ ಚಂದ್ರಶಾಲೆಯ ಮಾಡಿಗೆ ಕತ್ತಿಯಿಂದ ಕಡಿದು ಗಾಯ ಮಾಡಿ ಹೊರಟು ಹೋದ ಎಂದು ಹೇಳುತ್ತವೆ ಕಥೆಗಳು.
ದೇವಸ್ಥಾನದ ಜೀರ್ಣೋದ್ದಾರದ ಸಂದರ್ಭದಲ್ಲೂ ಟಿಪ್ಪುವಿನ ಖಡ್ಗದ ಗುರುತು ಎಂದು ಹೇಳಲಾಗುವ ಭಾಗವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಅದನ್ನು ಈಗ ಭಕ್ತರಿಗೆ ತೋರುವಂತೆ ಮಾರ್ಕ್ ಮಾಡಿ, "ಟಿಪ್ಪುವಿನ ಖಡ್ಗದ ಗುರುತು ಇರುವ ಸ್ಥಳ' ಎಂದು ಬರೆಯಲಾಗಿದೆ.
ಈ ಬಾವಿಯ ನೀರು ಕುಡಿಯುವುದರಿಂದ ನಮ್ಮ ಮನಸ್ಸಿನಲ್ಲಿರುವ ಕೆಡುಕುಗಳೆಲ್ಲವೂ ಮಾಯವಾಗುತ್ತದೆ ಎಂಬ ನಂಬಿಕೆ ಈಗಲೂ ಉಳಿದುಕೊಂಡಿದೆ. ಈಗಲೂ ದೇವಸ್ಥಾನಕ್ಕೆ ಹೋದವರು ಒಂದು ಲೋಟ ನೀರು ಕುಡಿಯದೆ ಬರುವುದಿಲ್ಲ.

ಮಧೂರಿಗೆ ಬರಲು ಕಾಸರಗೋಡಿನಿಂದ ಯಥೇತ್ಛ ಬಸ್ಸುಗಳಿವೆ. ಕಾಸರಗೋಡಿಗೆ ಬಂದವರು ನೋಡಲೇ ಬೇಕಾದ ಒಂದು ಪ್ರವಾಸಿ, ಧಾರ್ಮಿಕ ಸ್ಥಳವಾಗಿದೆ ಇದು. ಅಂದ ಹಾಗೆ ನೆನಪಿಡಿ, ಈ ದೇವಸ್ಥಾನಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ.

ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಕುಂಬಳೆ ಸೀಮೆಯ ಮತ್ತೂಂದು ಪ್ರಧಾನ ದೇವಸ್ಥಾನ ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯ. ಇದು ಕಾಸರಗೋಡಿನಿಂದ 45 ಕಿ.ಮೀ. ಪೂರ್ವದಲ್ಲಿದೆ. ಪಯಸ್ವಿನಿ ನದೀ ತಟದಲ್ಲಿರುವ ಇದು ವಿನ್ಯಾಸದಲ್ಲಿ ಮಧೂರು ದೇವಸ್ಥಾನವನ್ನೇ ಹೋಲುತ್ತದೆ. ಗಾತ್ರದಲ್ಲಿ ಮಧೂರಿಗಿಂತ ಸ್ವಲ್ಪ ದೊಡ್ಡದು.

ಅದಕ್ಕೂ ಒಂದು ಕಾರಣವಿದೆ. ದೇವಾಲಯ ನಿರ್ಮಾಣ ಶಿಲ್ಪಿಗಳು ಅಡೂರಿನಲ್ಲಿ ಅಳತೆ ತೆಗೆದು ಕಾಲ್ನಡಿಗೆಯಲ್ಲೇ ಮಧೂರಿಗೆ ಬಂದರು. ಹಾಗೆ ಬರುವಾಗ ಅಳತೆಗೋಲನ್ನೇ ಊರುಗೋಲಾಗಿ ಮಾಡಿಕೊಂಡರು. ಪರಿಣಾಮವಾಗಿ ಅದು ಸವೆದು ಸಣ್ಣದಾಯಿತು. ಸವೆದ ಭಾಗವನ್ನು ಕತ್ತರಿಸಿ ಅದನ್ನೇ ಒಂದು ಪ್ರತ್ಯೇಕ ಮಾಪಕವಾಗಿಸಿದರು.

ಈಗ ಅದು "ಮಧೂರು ಕೋಲು' ಎಂದು ಜನಪ್ರಿಯವಾಗಿದೆ. ಅದರ ಅಳತೆಯಲ್ಲೇ ಮಧೂರು ದೇವಸ್ಥಾನ ರಚನೆಯಾಗಿರುವುದರಿಂದ ಅಡೂರು ದೇವಾಲಯ ವಿಸ್ತೀರ್ಣದಲ್ಲಿ ಸ್ವಲ್ಪ ದೊಡ್ಡದು ಎಂದು ಹೇಳಲಾಗುತ್ತಿದೆ. ಅಡೂರಿನಲ್ಲಿ ಮಕರ ಸಂಕ್ರಾಂತಿ ವಿಶೇಷ ಜಾತ್ರೆ.