ಚೆನ್ನೈ: ಮುಸ್ಲಿಮರ ಕೆಂಗಣ್ಣಿಗರ ಗುರಿಯಾಗಿ ತಮಿಳುನಾಡಿನಲ್ಲಿ ನಿಷೇಧಕ್ಕೊಳಗಾಗಿರುವ ಕಮಲ್ ಹಾಸನ್ರ 'ವಿಶ್ವರೂಪಂ' ಚಿತ್ರ ಬಿಡುಗಡೆಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ಶನಿವಾರ ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದರು. ನ್ಯಾಯಾಧೀಶರು ಚಿತ್ರ ಬಿಡುಗಡೆಯ ಕುರಿತು ಸೋಮವಾರ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ನ್ಯಾ| ಕೆ. ವೆಂಕಟನಾರಾಯಣ್ ಅವರು ಖಾಸಗಿ ಸ್ಟುಡಿಯೋವೊಂದರಲ್ಲಿ ವಿಶ್ವರೂಪಂ ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದರು. ಕೇರಳ, ಆಂಧ್ರದಲ್ಲಿ ಪ್ರದರ್ಶನ: ಈ ನಡುವೆ ಕೇರಳದ ವಿವಿಧೆಡೆ ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯ ನಡುವೆಯೂ 'ವಿಶ್ವರೂಪಂ' ಚಿತ್ರ ಪ್ರದರ್ಶನ ಮುಂದುವರಿದಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿತ್ರ ಪ್ರದರ್ಶನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ವಿಶ್ವರೂಪಂ ಚಿತ್ರ ವೀಕ್ಷಿಸುವವರ ಸಂಖ್ಯೆಯೂ ಹೆಚ್ಚಿದೆ. ಇನ್ನು ಒಂದು ದಿನದ ನಿಷೇಧದ ಬಳಿಕ ವಿಶ್ವರೂಪಂ ಚಿತ್ರದ ತೆಲುಗು ಅವತರಣಿಕೆ ಪ್ರದರ್ಶನಕ್ಕೆ ಹೈದರಾಬಾದ್ನಲ್ಲಿ ಅನುಮತಿ ನೀಡಲಾಗಿದೆ. ಮಲೇಶಿಯಾದಲ್ಲೂ ನಿಷೇಧ: ವಿವಾದಿತ ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಮಲೇಶಿಯಾದಲ್ಲೂ ನಿಷೇಧ ಹೇರಲಾಗಿದೆ. ದೇಶದ ಗೃಹ ಸಚಿವಾಲಯದ ಸೂಚನೆಯ ಹಿನ್ನಲೆಯಲ್ಲಿ ಚಿತ್ರ ತೆರೆಕಂಡ ಒಂದು ದಿನದಲ್ಲಿಯೇ ಸ್ಥಳೀಯ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.