Udayavani | Jan 28, 2013
ಅವತ್ತಿಂದ ನಮ್ ಜೊತೆ ಪುಟ್ಟ ಗಣಪನಿದ್ದಾನೆ!
ಏನಾಯ್ತು ಏನಾಯ್ತು ಅನ್ನುತ್ತಾ ಹತ್ತಿರ ಹೋದೆವು. ಎದೆಬಡಿತ ಹೆಚ್ಚಾಗಿತ್ತು. ಭಯಗೊಂಡಿದ್ದವಳು ಕೈ ಜೋರಾಗಿ ಒದರ್ತಾ ಇದ್ದಳು. ಏನೂ ಹೇಳುತ್ತಲೇ ಇಲ್ಲ. ಧೈರ್ಯ ಮಾಡಿ ಎದುರು ಹೋದೆ. ಅಬ್ಟಾ!
ಡಿಪ್ಲೊಮಾ ಮುಗಿಸಿ ಇಂಜಿನಿಯರಿಂಗ್ಗೆ ಸೇರಿದಾಗ ಮೊದಲ ತೊಂದರೆ ಎದುರಾದದ್ದು ಕಾಲೇಜ್ ಹಾಸ್ಟೇಲ್ನದ್ದು. ನಮ್ಮ ವಿದ್ಯಾಸಂಸ್ಥೆಯದೇ ಮೆಡಿಕಲ್ ಕಾಲೇಜ್ ಹಾಸ್ಟೇಲ್ನಲ್ಲಿ ನಾವು ನಾಲ್ಕು ಜನಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು. ಅಲ್ಲೂ ರೂಮ್ಗಳೆಲ್ಲಾ ಭರ್ತಿಯಾಗಿದ್ದರಿಂದ ಮೂರ್ನಾಲ್ಕು ತಿಂಗಳಿಂದ ಬೀಗ ಜಡಿದಿದ್ದ ರೂಮೊಂದರ ಬೀಗ ಮುರಿಸಿ ಸ್ವತ್ಛ ಮಾಡಿಸಿ ನಮಗೆ ಇರಲು ಅವಕಾಶ ಮಾಡಿಕೊಟ್ಟರು.
ಗಡಿಬಿಡಿಯಲ್ಲಿ ಜಾಗ ಸಿಕ್ಕಿದರೆ ಸಾಕೆಂದು ಮೂರು ಕಾಟ್ಗಳ ಆ ರೂಮಲ್ಲಿ ನಾಲ್ಕು ಜನ ಅಡೆjಸ್ಟ್ ಮಾಡಿಕೊಂಡೆವು. ಎರಡೇ ಕಬೋರ್ಡುಗಳನ್ನು ಶೇರ್ ಮಾಡಿಕೊಂಡೆವು. ಆಗಲೇ ಪಿಯುಸಿ ನಂತರ ಇಂಜಿನಿಯರಿಂಗ್ ಸೇರಿದ್ದ ವಿದ್ಯಾರ್ಥಿಗಳಿಗೆ ಪಾಠ ಶುರುವಾಗಿತ್ತು. ನಾವು ಲೇಟಾಗಾದರೂ ಪಾಠಗಳ ಕಡೆಗೆ ಗಮನ ಹರಿಸಬೇಕಿತ್ತು. ಹಿಂದಿನ ಕ್ಲಾಸ್ಗಳ ನೋಟ್ಸ್ಗಳನ್ನು ಪಡೆದುಕೊಳ್ಳಬೇಕಿತ್ತು. ಹಾಗಾಗಿ ರೂಮ್ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಲಿಲ್ಲ. ಅದರಿಂದಲೇ ಅವತ್ತು ರಾತ್ರಿ ದೊಡ್ಡ ಸಮಸ್ಯೆ ಉಂಟಾಗಿದ್ದು.
ಸ್ವಲ್ಪ ದಿನ ಆದಮೇಲೆ ಇಂಟರ್ನಲ್ ಪರೀಕ್ಷೆ ಮುಗಿದ ಮೇಲೆ ಸ್ವಲ್ಪ ಹಗುರಾದ ಭಾವ. ನಾವು ನಾಲ್ಕು ಜನ ಪರಸ್ಪರ ಕತೆ ಹೇಳಿಕೊಂಡಿದ್ದಲ್ಲದೇ ಪಕ್ಕದ ರೂಮಲ್ಲಿದ್ದ ಉತ್ತರ ಭಾರತೀಯ ಮೆಡಿಕಲ್ ವಿದ್ಯಾರ್ಥಿಗಳನ್ನೂ ಪರಿಚಯ ಮಾಡಿಕೊಂಡಿದ್ದಾಯ್ತು. ಅವರ ಅರೆಬರೆ ಇಂಗ್ಲಿಷ್, ಹಿಂದಿ, ಗೊತ್ತಿಲ್ಲದ ಕನ್ನಡವನ್ನು ಕೇಳಿ ನಕ್ಕದ್ದಾಯ್ತು. ಆ ದಿನ ಭಾನುವಾರ ಎಲ್ಲರೂ ಲೇಟಾಗಿ ಎದ್ದಿದ್ದು ಮಧ್ಯಾಹ್ನವೂ ಚೆನ್ನಾಗಿ ನಿದ್ದೆ ಮಾಡಿ ರಾತ್ರಿ ಬೇಗ ನಿದ್ದೆ ಬರದೆ ಸುಮ್ಮನೆ ಹರಟೆ ಹೊಡೆಯುತ್ತಿದ್ದೆವು.
ಅಂಥಾ ರಾತ್ರಿ ಹೊತ್ತಲ್ಲಿ ನಮ್ಮಲ್ಲಿ ಒಬ್ಬಳ ಕಣ್ಣು ಮೇಲಿನ ಸೆಲ್ಫ್ನಲ್ಲಿದ್ದ ರಟ್ಟಿನ ಡಬ್ಬದ ಕಡೆ ಹೋಗಿತ್ತು. ಹೇಗಿದ್ರೂ ಈ ರೂಮ್ ಈಗ ನಮ್ಮದು. ಇಲ್ಲಿರೋ ಪ್ರಾಪರ್ಟಿ ಎಲ್ಲಾ ನಮ್ಮದೆ. ಅಲ್ಲಿ ಏನಿದೆ ಚೆಕ್ ಮಾಡೋಣ ಎನ್ನುತ್ತಾ ಒಬ್ಬಳು ಮೇಲಕ್ಕೆ ಹತ್ತಿಯೇಬಿಟ್ಟಳು. ಧೂಳು ಸರಿಯಾಗಿ ತೆಗೆಯದ ಒಂದು ಡ್ರಾಯಿಂಗ್ ಬೋರ್ಡ್ ಕೆಳಗೆ ಬಂತು. ಹಳೇ ಷರ್ಟುಗಳು, ಕ್ಲಿಪ್ಗ್ಳು, ಪೆನ್ ಸ್ಟಾಂಡ್ ಎಲ್ಲವನ್ನೂ ಹಳೇ ಪೇಪರ್ ಹಳೇಪಾತ್ರ ಹಾಡು ಹಾಡುತ್ತಾ ತೆಗೆದು ಕೆಳಕ್ಕೆ ಹಾಕುತ್ತಿರುವಾಗಲೇ ಮೇಲಿದ್ದವಳು ಕಿಟಾರನೆ ಕಿರುಚಿ ಮಂಚದ ಮೇಲಕ್ಕೆ ಜಿಗಿದು ಚೀರಾಡತೊಡಗಿದಳು.
ಉಳಿದವರಿಗೆ ಶಾಕ್. ಏನಾಯ್ತು ಏನಾಯ್ತು ಅನ್ನುತ್ತಾ ಹತ್ತಿರ ಹೋದೆವು. ಎದೆಬಡಿತ ಹೆಚ್ಚಾಗಿತ್ತು. ಭಯಗೊಂಡಿದ್ದವಳು ಕೈ ಜೋರಾಗಿ ಒದರ್ತಾ ಇದ್ದದ್ದು ನೋಡಿ ಚೇಳು ಕಚ್ಚಿರಬಹುದು, ಹಾವೇನಾದ್ರೂ ಇದ್ಯಾ ಅಂತಂದುಕೊಳ್ಳುತ್ತಿದ್ದರೆ ಅವಳು ಏನೂ ಹೇಳುತ್ತಲೇ ಇಲ್ಲ. ಥರಥರ ನಡುಗುತ್ತಿದ್ದಳು. ನಾನೇ ಸ್ವಲ್ಪ ಧೈರ್ಯ ತಂದುಕೊಂಡು ಮೇಲೇರಿ ರಟ್ಟಿನ ಪೆಟ್ಟಿಗೆಗೆ ಕೈ ಹಾಕಿದೆ. ಗಟ್ಟಿಯಾದದ್ದೇನೋ ಕೈಗೆ ಸಿಕ್ಕಿತು. ಹೇ ಹಾವೂ ಇಲ್ಲ, ಚೇಳೂ ಇಲ್ಲ ಅಂತ ಅದನ್ನು ಗಟ್ಟಿಯಾಗಿ ಹಿಡಿದು ಮೇಲಕ್ಕೆತ್ತಿದೆ.
ಅಮ್ಮಾ ಎಂದಿದ್ದೇ ಗೊತ್ತು ಕೈಯಲ್ಲಿದ್ದ ವಸ್ತು ಕೆಳಗೆ ಬಿತ್ತು. ಅಯ್ಯೋ ಮಾನವನ ತಲೆ ಬುರುಡೆ. ನಮ್ಮನ್ನೇ ನೋಡುತ್ತಿರುವಂತಿದ್ದ ಆ ಬುರುಡೆ ನೋಡಿ ಕಿರುಚುವಾಗಲೇ ಕರೆಂಟ್ ಹೋಗಿಬಿಟ್ಟಿತು. ತುಂಬಾ ಭಯದಿಂದ ಇದ್ದ ಎಲ್ಲಾ ದೇವರ ಹೆಸರು ಹೇಳುತ್ತಾ ಒಬ್ಬರನ್ನೊಬ್ಬರು ಹಿಡಿದುಕೊಂಡ ಕೂಡಲೇ ಪುಣ್ಯಕ್ಕೆ ಕರೆಂಟು ಬಂತು. ಒಮ್ಮೆಲೆ ಬಂದ ಬೆಳಕಲ್ಲಿ ಆ ಬುರುಡೆ ನಕ್ಕಂತೆ ಭಾಸವಾಗಿತ್ತು.
ಧಾರಾವಾಹಿ, ಸಿನಿಮಾಗಳಲ್ಲಿ ಮಂತ್ರವಾದಿಯ ಕೈಯಲ್ಲಿ ನೋಡುವುದಕ್ಕೂ ಇರಬಾರದ ಜಾಗದಲ್ಲಿ ನೈಜವಾಗಿ ನೋಡುವುದಕ್ಕೂ ಇರುವ ವ್ಯತ್ಯಾಸ ಅವತ್ತು ಸ್ಪಷ್ಟವಾಯಿತು. ನಮ್ಮ ಬೊಬ್ಬೆ ಕೇಳಿ ಪಕ್ಕದ ರೂಮಿನ ಅಮೃತಾ ದೀದಿ ಬಾಗಿಲು ಬಡಿಯುತ್ತಾ ವಾಟ್ ಹ್ಯಾಪೆನ್x ಓಪನ್ ದ ಡೋರ್ ಅಂದರು. ಮಧ್ಯರಾತ್ರಿ ಮೀರಿದ್ದರೂ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಅವರು ಓದುತ್ತಾ ಕೂತಿದ್ದವರು ಗಲಾಟೆ ಕೇಳಿ ಓಡಿ ಬಂದಿದ್ದರು. ನಾವು ಥರಗುಡುತ್ತಿದ್ದೆವು. ಗಂಟಲ ತೇವ ಆರಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಒಂದೇ ನೆಗೆತಕ್ಕೆ ರೂಮಿನಿಂದ ಹೊರಗೆ ಓಡಿದ್ವಿ. ಬಾಗಿಲು ದೂಡಿ ಒಳಗೆ ಹೋದ ಅವರು ಮಂಚದ ಮೇಲಿದ್ದ ತಲೆ ಬುರುಡೆ ನೋಡಿ ಏನಾಗಿರಬಹುದೆಂದು ಗ್ರಹಿಸಿದರು.
ನಿಮಗೂ ಗೊತ್ತಾಗಲಿ. ಆಗಿದ್ದಿಷ್ಟೇ. ನಾವಿದ್ದ ರೂಮಲ್ಲಿ ಹಿಂದೆ ಇದ್ದವರು ದಂತ ವೈದ್ಯಕೀಯ ವಿದ್ಯಾರ್ಥಿನಿಯರು. ಹಲ್ಲಿನ ಜೋಡಣೆ, ವಸಡುಗಳ ಅಭ್ಯಸಿಸಲು ಇದನ್ನು ಕಲೆಕ್ಟ್ ಮಾಡಿಟ್ಟುಕೊಂಡಿದ್ದರು. ಅದನ್ನು ಹೇಳಿ ನಕ್ಕು ಅವರು ಹೊರಟುಹೋದರು. ಆದರೆ ನಮಗೋ ಭಯಂಕರ ಭಯ. ಅವರೇ ಮಾಟಗಾತಿಯೇನೋ ಎಂಬಂಥಾ ಫೀಲಿಂಗಲ್ಲಿ ರಾತ್ರಿಯೆಲ್ಲಾ ದೇವರ ಧ್ಯಾನ ಮಾಡುತ್ತಾ ಲೈಟ್ ಆಫ್ ಮಾಡದೆ ಅರೆಬರೆ ನಿದ್ದೆ ಮಾಡಿದ್ವಿ. ನಿದ್ದೆ ಹತ್ತಿದ ಕೂಡಲೇ ಮತ್ತೆ ದಬದಬ ಬಾಗಿಲು ಬಡಿದ ಸದ್ದು. ಎದ್ದು ನೋಡಿದರೆ ಬೆಳಿಗ್ಗೆ ಆಗಿತ್ತು. ಹಿಂದೆ ಈ ರೂಮಲ್ಲಿದ್ದವರು ಬಂದು ಆ ಬಾಕ್ಸನ್ನೆಲ್ಲಾ ಎತ್ತಿಕೊಂಡು ಹೋದರು. ಅವತ್ತಿಂದ ಒಂದು ಗಣೇಶನ ಮೂರ್ತಿ ನಮ್ಮ ರೂಮಲ್ಲಿದೆ.
ಸಿಂಧು ಎಸ್ ಎಮ್
ಇಂಜಿನಿಯರಿಂಗ್ ವಿಭಾಗ,
ಶ್ರೀ ಮುರುಘರಾಜೇಂದ್ರ ಇಂಜಿನಿಯರಿಂಗ್ ಕಾಲೇಜ್,
ಚಿತ್ರದುರ್ಗ.