ಬೆಂಗಳೂರು: ನಟಿ ಪೂಜಾಗಾಂಧಿ ಅವರ ನಿಶ್ಚಿತಾರ್ಥ ಮುರಿದುಬಿದ್ದಿದ್ದ ಸುದ್ದಿ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಉದ್ಯಮಿ ಆನಂದ್ಗೌಡ ಜತೆ ನಿಶ್ಚಿತಾರ್ಥ ನಡೆದು ತಿಂಗಳ ಬಳಿಕ ಕಿತ್ತುಹೋಗಿದ್ದ ಸಂಬಂಧವೀಗ ಪುನಃ ಶುರುವಾಗುವ ಲಕ್ಷಣಗಳು ಗೋಚರಿಸತೊಡಗಿವೆ. ಇದಕ್ಕೆ ಸಾಕ್ಷಿ ಪೂಜಾ ಮತ್ತು ಆನಂದ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು. ಇದರ ಜೊತೆಗೆ, ಪೂಜಾಳ ತಂದೆ ತನ್ನ ಮಗಳೊಂದಿಗೆ ಆನಂದ್ ಜತೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಮಾತುಕತೆಯನ್ನೂ ನಡೆಸಿದ್ದಾರೆನ್ನಲಾಗಿದೆ. ಅಲ್ಲಿಗೆ ಪೂಜಾ ಮತ್ತು ಆನಂದ್ ನಡುವಿನ ಮುನಿಸಿಗೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಹೈದ್ರಾಬಾದ್ನಲ್ಲಿ ಜೋಡಿ: ಪೂಜಾಗಾಂಧಿ ಅಭಿನಯದ 'ದಂಡುಪಾಳ್ಯ' ಚಿತ್ರ ಕನ್ನಡದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಂತರ ಅದು ತೆಲುಗಿಗೂ ಡಬ್ ಆಗಿತ್ತು. ಆ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಪೂಜಾ ಇತ್ತೀಚೆಗೆ ಹೈದರಾಬಾದ್ಗೆ ತೆರಳಿದ್ದರು. ಸಾಮಾನ್ಯವಾಗಿ ಅವರ ಜತೆ ತಾಯಿ ಬರುತ್ತಾರೆ ಎಂದು 'ದಂಡುಪಾಳ್ಯ' ಚಿತ್ರತಂಡ ಯೋಚಿಸಿತ್ತು. ಆದರೆ, ಪೂಜಾ ಜೊತೆ ಬಂದಿದ್ದು ಉದ್ಯಮಿ ಆನಂದ್ಗೌಡ. ಇದು ಚಿತ್ರತಂಡಕ್ಕೆ ಅಚ್ಚರಿ ತಂದಿದೆ. ಹೈದರಾಬಾದ್ನ ಪಂಚತಾರಾ ಹೋಟೆಲ್ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನಿಶ್ಚಿತಾರ್ಥ ಮುರಿದುಬಿದ್ದ ಬಳಿಕ ಆನಂದ್ಗೌಡ ಅವರು ಪೂಜಾಗಾಂಧಿ ಜತೆ ಪುನಃ ಮಾತನಾಡಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರು. ಇಬ್ಬರ ನಡುವೆ ಜಗಳ ನಡೆದಿದ್ದರೂ, ಅದಕ್ಕೆ ಕೆಲ ಸಣ್ಣಪುಟ್ಟ ಕಾರಣಗಳಷ್ಟೇ ಇದ್ದವು. ಅವುಗಳನ್ನು ಸರಿಪಡಿಸಿಕೊಂಡು ಮತ್ತೆ ಒಂದಾಗುವ ಪ್ರಯತ್ನಕ್ಕೆ ಆನಂದ್ಗೌಡ ಮುಂದಾಗಿದ್ದರು ಎನ್ನುವುದು ಅವರ ಕೆಲ ಆಪ್ತರ ಮಾತು. ಬೆಂಗಳೂರಲ್ಲಿ ಮಾತುಕತೆ: ಈ ನಡುವೆ, ಬುಧವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪೂಜಾ ಮತ್ತು ಆನಂದ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಆ ಭೇಟಿಗೆ ಪೂಜಾಳ ತಂದೆಯೇ ಮುಂದೆ ನಿಂತು ವ್ಯವಸ್ಥೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಲು ಪೂಜಾ ಗಾಂಧಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಆನಂದ್ ಕೂಡ ತಮ್ಮ ಮೊಬೈಲನ್ನು ನಾಟ್ ರೀಚಬಲ್ನಲ್ಲಿಟ್ಟಿದ್ದರು.