ಭೋಪಾಲ: ಬಿಜೆಪಿಯ ಮಾಜಿ ಚಿಂತಕ ಪ್ರಖರ ಬಲಪಂಥೀಯವಾದಿ ಗೋವಿಂದಾಚಾರ್ಯ ಪ್ರಕಾರ ಪ್ರಧಾನಮಂತ್ರಿಯಾಗುವ ಯೋಗ್ಯತೆಯಿರುವುದು ಹಿರಿಯ ನಾಯಕ ಎಲ್. ಕೆ. ಆಡ್ವಾಣಿ ಮತ್ತು ರಕ್ಷಣಾ ಸಚಿವ ಎ.ಕೆ.ಆಯಂಟನಿಗೆ. ಪ್ರಧಾನಮಂತ್ರಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅತ್ಯುತ್ತಮ ಗೃಹ ಸಚಿವರಾಗಬಲ್ಲರು ಎಂದು ಗೋವಿಂದಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.2014ರ ಸಾರ್ವತ್ರಿಕ ಚುನಾವಣೆ ಬಳಿಕ ಯಾರು ಪ್ರಧಾನಮಂತ್ರಿಯಾಗಬಹುದು ಎಂದು ಕೇಳಿದಾಗ ಎನ್ಡಿಎ ಗೆದ್ದರೆ ಆಡ್ವಾಣಿ ಮತ್ತು ಯುಪಿಎ ಗೆದ್ದರೆ ಆಯಂಟನಿ ಅತ್ಯುತ್ತಮ ಆಯ್ಕೆ ಎಂದರು. ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ ಗಾಂಧಿ ಯುವಜನ ಮತ್ತು ಕ್ರೀಡಾ ಸಚಿವರಾಗಲು ಯೋಗ್ಯ ಆಯ್ಕೆಯಾಗಬಹುದು ಎಂದಿದ್ದಾರೆ.ಎನ್ಡಿಎ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿಯನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡುವುದು ಅತ್ಯುತ್ತಮ ಆಯ್ಕೆ ಎಂದರು. ಪ್ರಸ್ತುತ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿರುವ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ರನ್ನು ಗೋವಿಂದಾಚಾರ್ಯ ಅನುಭವಿ ಮತ್ತು ಉತ್ತಮ ರಾಜಕಾರಣಿ ಎಂದು ಹೊಗಳಿದ್ದಾರೆ.ರಾಹುಲ್ ಮತ್ತು ಮೋದಿಗೆ ಪ್ರಧಾನಮಂತ್ರಿಯಾಗುವ ಯೋಗ್ಯತೆಯಿಲ್ಲ ಎಂದು ಗೋವಿಂದಾಚಾರ್ಯ ಕಳೆದ ವಾರ ಕೂಡ ಹೇಳಿದ್ದರು.