ಮುಂಬಯಿ : ಯುದ್ಧ-ಪೀಡಿತ ತಮ್ಮ ದೇಶದಲ್ಲಿ ಕ್ರಿಕೆಟ್ ಆಟದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಬೆಂಬಲವನ್ನು ಅಫ್ಘಾನ್ ಕ್ರಿಕೆಟ್ ಮಂಡಳಿ (ಎಸಿಬಿ) ಯ ಅಧಿಕಾರಿಗಳು ಪಡೆದಿದ್ದಾರೆ.ಈ ಸಂಬಂಧ ಬಿಸಿಸಿಐ ಅಧಿಕಾರಿಗಳ ಜತೆ ಸಭೆ ನಡೆಸಿದ ಎಸಿಬಿ ಅಧಿಕಾರಿಗಳು ಕೋಚಿಂಗ್, ಅಂಪಾಯರಿಂಗ್ ಮತ್ತು ಸ್ಕೋರಿಂಗ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸಿದರು.ಬಿಸಿಸಿಐಯ ಗೌರವ ಕಾರ್ಯದರ್ಶಿ ಸಂಜಯ್ ಜಗದಾಳೆ ಮತ್ತು ಆಟದ ಅಭಿವೃದ್ಧಿಯ ಜಿಎಂ ರತ್ನಾಕರ ಶೆಟ್ಟಿ ಅವರ ಜತೆ ನಾವು ಒಳ್ಳೆಯ ಸಭೆ ನಡೆಸಿದೆವು. ಈ ಸಭೆ ಆರಂಭಿಕ ಹಂತದಲ್ಲಿದೆ. ಬಿಸಿಸಿಐ ಜತೆ ಉತ್ತಮ ಸಂಬಂಧ ಸ್ಥಾಪಿಸಲು ನಾವು ಬಯಸಿದ್ದೇವೆ. ತಾಂತ್ರಿಕ ಸಿಬಂದಿ, ತರಬೇತುದಾರರು, ಅಂಪಾಯರ್, ಸ್ಕೋರರ್ ಮತ್ತು ವೀಡಿಯೋ ಪರೀಕ್ಷಕ ಮುಂತಾದ ವಿಷಯಗಳನ್ನು ಅಭಿವೃದ್ಧಿಪಡಿಸಲು ನಾವು ಬಿಸಿಸಿಐಯ ಬೆಂಬಲ ಬಯಸಿದ್ದೇವೆ ಎಂದು ಎಸಿಬಿಯ ಚೇರ್ಮನ್ ಮತ್ತು ಸಲಹಾ ಸಚಿವ ಶಹಜಾದ ಮಸೂದ್ ಹೇಳಿದ್ದಾರೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಭೆಯಲ್ಲಿ ಎಸಿಬಿಯ ಉನ್ನತ ನಿರ್ವಹಣೆ ಕಾರ್ಯಕ್ರಮ ವ್ಯವಸ್ಥಾಪಕ ಬಶೀರ್ ಸ್ಟಾನೇಝಾಯಿ ಉಪಸ್ಥಿತರಿದ್ದರು.ಈ ಹಿಂದಿನ ವಿಶ್ವಕಪ್ ತಂಡದಲ್ಲಿರುವವರ ವಯಸ್ಸು ಹೆಚ್ಚಾಗಿರುವ ಕಾರಣ ನಾವು ಹೊಸ ಅಂಡರ್ 19 ತಂಡವನ್ನು ಸಿದ್ಧಪಡಿಸಲು ಸಿದ್ಧತೆ ನಡೆಸುತ್ತಿದ್ದೇವೆ. ನಾವೀಗ 20 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ಸಂಬಂಧ ಕಾರ್ಯಗಳು ಸಾಗುತ್ತಿವೆ ಮತ್ತು ಮೇ 1ರಿಂದ 12ರ ವರೆಗೆ ಮಲೇಶ್ಯದಲ್ಲಿ ನಡೆಯುವ ಎಸಿಸಿ ಅಂಡರ್ 19 ಕಪ್ಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದವರು ಹೇಳಿದರು.ನಮ್ಮ ಬ್ಯಾಟಿಂಗ್ ದುರ್ಬಲವಾಗಿದೆ. ಆದರೆ ನಮ್ಮಲ್ಲಿ ಉತ್ತಮ ವೇಗದ ಬೌಲರ್ಗಳಿದ್ದಾರೆ ಮತ್ತು 400 ರನ್ ಗುರಿಯನ್ನು ಬೆಂಬತ್ತಿದ್ದೇವೆ. ನಮ್ಮಲ್ಲಿ ಸಾಮರ್ಥ್ಯವಿದೆ ಆದರೆ ಆತ್ಮವಿಶ್ವಾಸವಿಲ್ಲ. ದೀರ್ಘ ಸಮಯದವರೆಗೆ ಕ್ರೀಸ್ನಲ್ಲಿ ನಿಂತು ಒಳ್ಳೆಯ ಇನ್ನಿಂಗ್ಸ್ ಆಡಲು ನಮ್ಮ ಆಟಗಾರರಿಗೆ ಸಮರ್ಥ ತರಬೇತುದಾರರ ಅಗತ್ಯವಿದೆ ಎಂದು ಮಸೂದ್ ತಿಳಿಸಿದರು.ಅಫ್ಘಾನಿಸ್ಥಾನ ಬಡ ಮತ್ತು ಯುದ್ಧ-ಪೀಡಿತ ದೇಶವಾಗಿದೆ. ಇಂಗ್ಲಂಡ್ ತಂಡ ಅಯರ್ಲಂಡ್ ಮತ್ತು ಸ್ಕಾಟ್ಲಂಡ್ಗೆ ನೀಡುವಷ್ಟು ಬೆಂಬಲ ನಮಗೆ ಸಿಗುತ್ತಿಲ್ಲ. ಪ್ರತಿ ಬಾರಿ ಆಸ್ಟ್ರೇಲಿಯ ತಂಡವನ್ನು ಆಹ್ವಾನಿಸಿದಾಗ ಅವರು (ಇಂಗ್ಲಂಡ್ ಆನ್ ವೇಲ್ಸ್ ಕ್ರಿಕೆಟ್ ಮಂಡಳಿ) ಒಂದು ಅಥವಾ ಎರಡು ಏಕದಿನ ಪಂದ್ಯದ ಆತಿಥ್ಯವನ್ನು ಅಯರ್ಲಂಡ್ ಅಥವಾ ಸ್ಕಾಟ್ಲಂಡ್ಗೆ ನೀಡುತ್ತದೆ ಮತ್ತು ಇಂಗ್ಲಂಡ್ ಸಹ ಅಲ್ಲಿ ಆಡುತ್ತದೆ. ಆದರೆ ನಮಗೆ ಏಶ್ಯನ್ ಮಂಡಳಿ ಸದಸ್ಯರಿಂದ ಬಹಳಷ್ಟು ಬೆಂಬಲ ಸಿಗುತ್ತಿಲ್ಲ ಎಂದು ಮಸೂದ್ ವಿವರಿಸಿದರು.