ಗುಟಕಾ ಎಂಬ ಹೊಗೆಯಿಲ್ಲದ ಬೆಂಕಿ
Team Udayavani, Jan 4, 2019, 12:30 AM IST
ಜಾಹಿರಾತುಗಳಿಂದಲೋ, ಗೆಳೆಯರ ಒತ್ತಾಯದಿಂದಲೋ, ಗುಟಕಾದ ಘಮ್ಮನೆಯ ವಾಸನೆಯಿಂದಲೋ, ವಾಹನ ಚಲಾಯಿಸುವಾಗ ನಿದ್ದೆ ಬರದಂತೆ ಕಾಪಾಡುವ ಅದ್ಭುತ ಸಾಧನ ಎಂದೋ ಶುರುವಾಗುವ ಗುಟಕಾ ಮೆಲ್ಲುವ ಚಟ ಎಂಬ ಪಿಡುಗಾಗುತ್ತದೆ. ಅದು ಮುಂದೆ ತಲುಪುವ ಮಟ್ಟ ನೋಡಿದರೆ ಗಾಬರಿಯಾಗುತ್ತದೆ.
ಪೂರ್ತಿ ತೆರೆಯಲು ಸಾಧ್ಯವಿಲ್ಲದ ತನ್ನ ಬಾಯಿಯ ಒಂದು ಕೊನೆಯನ್ನು ಸಣ್ಣಗೆ ಒಂದೆಡೆ ಹಿಗ್ಗಿಸಿ ನನ್ನನ್ನು ನೋಡಿ ಮುಗುಳ್ನಕ್ಕ. ನಾನು ಕೇಳಿದ ಪ್ರಶ್ನೆಯಿಂದಾಗಿ ಇವನೆಷ್ಟು ಅಜ್ಞಾನಿಎಂಬ ಭಾವ ಅವನ ಮುಖದಲ್ಲಿ ಮಿನುಗುತ್ತಿತ್ತು. ಆತ 16ರ ಯುವಕ. ಇನ್ನೂ ಮೀಸೆ ಸರಿಯಾಗಿ ಮೂಡಿರಲಿಲ್ಲ. ನನ್ನ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎರಡು ಚೀಟುಗಳನ್ನು ಹಲ್ಲಿನಿಂದ ಕಚ್ಚಿ ಹರಿದು, ಅವೆರಡನ್ನು ತನ್ನ ಅಂಗೈಯಲ್ಲಿ ಹಾಕಿ, ಕವರುಗಳನ್ನು ಅಲ್ಲೇ ಬಿಸಾಡಿ, ಅಂಗೈಯಲ್ಲಿರುವ ಪುಡಿಯನ್ನು ಕಣ್ಣಗಲಿಸಿ ತೃಪ್ತಿಯಿಂದ ನೋಡಿ, ಅವೆರಡನ್ನೂ ಹದವಾಗಿ ಮಿಶ್ರಣ ಮಾಡಿ, ಫಟ್ ಫಟ್ ಎಂದು ನಾಲ್ಕೆçದು ಬಾರಿ ಚಪ್ಪಾಳೆಯ ಹಾಗೆ ಬಡಿದು, ಬಾಯಲ್ಲಿ ನೀರೂರಿಸಿಕೊಂಡು ಪರಮಾನ್ನದಷ್ಟೇ ಶ್ರದ್ಧೆಯಿಂದ ಇನ್ನೇನು ಬಾಯಿಯೊಳಗೆ ಹಾಕಬೇಕು, ಆಗ ನಾ ಕೇಳಿ¨ªೆ…
ಇವೆರಡೂ ಚೀಟ ಕೂಡ್ಸಿದ್ರ ಮೊದಲಿನ ಗುಟಕಾದ ಹಂಗ ಆಗ್ತದೇನು?ಎಂದು.
ಆತ ನನ್ನೆಡೆಗೆ ನೋಡಿದ. ನಾನು ಅಲ್ಲಿಯ ವೈದ್ಯ ಎಂದಾತನಿಗೆ ಗೊತ್ತಿರಲಿಲ್ಲವೆನಿಸುತ್ತದೆ. ಗೊತ್ತಿದ್ದರೂ ವ್ಯತ್ಯಾಸವಾಗುತ್ತಿದ್ದಿಲ್ಲ, ಆ ಮಾತು ಬೇರೆ. ಸಣ್ಣಗೆ ಅರ್ಥಪೂರ್ಣವಾಗಿ ಮುಗುಳ್ನಕ್ಕ. ಅತ್ಯಂತ ಖುಷಿಯಿಂದ, ಅದ್ಭುತವಾದದ್ದೇನನ್ನೋ ತಾನು ಸಂಶೋಧನೆ ಮಾಡಿದ್ದೇನೆ ಎಂಬ ಭಾವದೊಂದಿಗೆ ಹೌದ್ರಿ… ಸೇಮ್ ಟು ಸೇಮ್ ಗುಟಕಾನ ಆಗ್ತದರಿ… ನಿಮಗೂ ಬೇಕೇನ್ರಿ ..? ಎಂದ. ನನಗೆ ದಿಗಿಲು. ಅಂದ್ರ, ಸರಕಾರದವರು ಬ್ಯಾನ್ ಮಾಡಿದ್ದರಿಂದ ಏನೂ ಅನಾನುಕೂಲ ಆಗಿಲ್ಲಲ..?!ಅಂದೆ.
ಹೆ.. ಹೆ.. ಒಟ್ಟ ಆಗಿಲ್ಲ ಬಿಡ್ರಿ..ಅದು ಹಂಗ ಬಂದ್ ಆಯ್ತು.. ತುಸು ದಿನಕ್ಕ ಇದು ಚಾಲೂ ಆಯ್ತು.. ಅಂದ…
ಆತನ ಮುಖದಲ್ಲಿ “ಮಸ್ತ’ ಆದ ಒಂದು ಭಾವ ಕಂಡಿತು. ಪೂರ್ತಿ ತೆಗೆಯಲಾಗದ ತನ್ನ ಬಾಯಿಯನು °ಒಂದು ಕೈಯಿಂದ ಜಗ್ಗಿ ಹಿಗ್ಗಿಸಿ ಇನ್ನೊಂದು ಕೈಯಲ್ಲಿರುವ ಗುಟಕಾವನ್ನು ಗಲ್ಲದ ಒಳಗಡೆ ತುರುಕಿಕೊಂಡ. ಕಣ್ಣುಗಳನ್ನು ಮುಚ್ಚಿ ಅದ್ಭುತವಾದದ್ದೇನೋ ದೊರೆಯಿತೆಂಬಂತೆ ಆಸ್ವಾದಿಸತೊಡಗಿದ.
ಸ್ಟಾರ್..ತಿಂನಿರಿ….ಮಸ್ತ …ಆಗಿರಿ….. ರಾಗವಾಗಿ ಯಾರೋ ನನ್ನ ಕಿವಿಯಲ್ಲಿ ಪಿಸುಗುಟ್ಟಿದಂತಾಯಿತು… ಈ ಯುವಕರ ಭಯಂಕರ ಚಟಕ್ಕೆ ತಲೆ ಧಿಮ್ಮೆನ್ನುತ್ತಿತ್ತು.
ಅದೇ ಗುಂಗಿನಲ್ಲಿ ಒಳಬಂದು ನನ್ನ ಚೇಂಬರ್ನಲ್ಲಿ ಕುಳಿತೆ. ನಮ್ಮ ಸಹಾಯಕ ನಾಳಿನ ಆಪರೇಷನ್ ಗಳ ಲಿಸ್ಟ್ ತಂದಿಟ್ಟ. ಐದು ಕೇಸ್ ಗಳು. ಒಬ್ಬೊಬ್ಬರನ್ನಾಗಿ ಒಳಗೆ ಬರಲು ಹೇಳಿದೆ. ಎಂತಹ ಶಸ್ತ್ರಚಿಕಿತ್ಸಾಪೂರ್ವ ಪರೀಕ್ಷೆಗಳನ್ನು ಮಾಡಿದ್ದರೂ ಶಸ್ತ್ರಚಿಕಿತ್ಸೆಗಿಂತ ಮೊದಲು ಎಲ್ಲ ರೋಗಿಗಳನ್ನು ಮತ್ತೂಮ್ಮೆ ನೋಡುವ ಪರಿಪಾಠವಿಟ್ಟುಕೊಂಡಿದ್ದೇನೆ. ಇಲ್ಲವೇ ಅನಾಹುತಗಳಾಗುವ ಸಂಭವವಿರುತ್ತದೆ. ಎಷ್ಟೋ ಸಲ, ಐದಾರು ತಿಂಗಳ ಹಿಂದೆ ಪರೀಕ್ಷೆಗೊಳಗಾದವರು ಬಂದು ಅಡ್ಮಿಟ್ ಆಗಿಬಿಟ್ಟಿರುತ್ತಾರೆ. ಆಗ ಮಾಡಿದ ಪರೀಕ್ಷೆಗಳು ಈಗ ಅಪ್ರಸ್ತುತವಾಗುತ್ತವೆ ಅಥವಾ ಆಗ ಇಲ್ಲದ ಅನೇಕ ರೋಗಗಳು ಈಗ ಬಂದು ಸಣ್ಣಗೆ ಮನೆ ಮಾಡಿರುತ್ತವೆ, ಯಾವ ಸಂಜ್ಞೆಯನ್ನೂ ನೀಡದೆ.
ಮೊದಲು ಇಬ್ಬರು ಮಹಿಳೆಯರು ಬಂದರು, ಎಂದಿನಂತೆ ವಿಧೇಯರಾಗಿ, ಕೈ ಮುಗಿದುಕೊಂಡು. ಮಹಿಳಾ ರೋಗಿಗಳು ಯಾವಾಗಲೂ “ಒಳ್ಳೆಯ’ ರೋಗಿಗಳು. ಯಾವುದೇ ಚಟ ಮಾಡುವುದಿಲ್ಲ, ನೈಸರ್ಗಿಕವಾಗಿ ಹೃದಯದ ಕಾಯಿಲೆಗಳು ಕಡಿಮೆ. ಮತ್ತೆ ಅವರ “ನೋವು ಸಹಿಸುವ ಶಕ್ತಿ’ ಅಪರಿಮಿತ. ಗರ್ಭಧಾರಣೆ ಎಂಬ ನೈಸರ್ಗಿಕ ರೋಗ ಮತ್ತು ಅದರ ಹಿಂದು ಮುಂದಿನ ಕಷ್ಟಗಳನ್ನೂ ಅವರು ತುಂಬ ಭಕ್ತಿಯಿಂದ ಸಹಿಸುತ್ತಾರೆ. ಮತ್ತವರಿಗದು ನಿಸರ್ಗದತ್ತವಾದ ವರ ಕೂಡ. ಅವರು ಗೊಣಗುವುದು, ಸುಮ್ಮನೆ ಕಿರಿ ಕಿರಿ ಮಾಡುವುದು ಕೂಡ ಕಡಿಮೆಯೇ. ಅದಕ್ಕೇ ಅವರನ್ನು ಭೂಮಿಗೆ ಹೊಲಿಸುತ್ತೇವೆ. ಗಂಡಸರೇನಿದ್ದರೂ ಆಕಾಶ. ಮೇಲೆ ತೇಲುವವರು, ಹಲವು ರೀತಿಯಲ್ಲಿ..!
ಆಮೇಲೆ ಬಂದದ್ದೇ ನಮ್ಮ ಹೀರೋ. ಜೊತೆಗೆ ಅವನ ಓರಗೆಯ ಒಬ್ಬ ಗೆಳೆಯ. ಬಾಯಿ ತುಂಬ ಗುಟಕಾ ತುಂಬಿಕೊಂಡು, ಮಾತಾಡಲು ಸಾಧ್ಯವಾಗದ ಹಾಗೆ ತುಟಿ ಬಿಗಿದುಕೊಂಡು ಒಳಗೆ ಪ್ರವೇಶಿಸಿದ. ನಾಳೆ ಆಪರೇಷನ್ ಗೆ ಒಳಗಾಗುವ ವ್ಯಕ್ತಿ ಇಷ್ಟೊಂದು ನಿರ್ಭಿಡೆಯಿಂದ, ಯಾವುದೇ ಭಯವಿಲ್ಲದೆ, ತನ್ನ ಆಪರೇಶನ್ ಮಾಡುವ ವೈದ್ಯನೆದುರಿಗೆ ಹೀಗೆ ಬಂದು ಠಳಾಯಿಸುವುದು, ನನಗೆ ಸಿಟ್ಟು ತರಿಸಿತು. ಆದರೂ ಬಯ್ಯುವ ಹಾಗಿಲ್ಲ. ರೋಗಿಗಳನ್ನು ಆದರದಿಂದ ಕಾಣಬೇಕೆಂದೂ, ಯಾವುದೇ ಕಾರಣಕ್ಕೂ ಅವರ ಮೇಲೆ ಸಿಟ್ಟಾಗಬಾರದೆಂದೂ ಪಾಠವಾಗಿರುತ್ತದಲ್ಲ, ನಾವು ವೈದ್ಯಕೀಯ ಕಲಿಯುವಾಗ! ಆದರೆ ಇಂಥ ರೋಗಿಗಳಿಗೆ ಯಾತರ ಪಾಠ? ತಂದೆ, ತಾಯಿ, ಸಮಾಜ ಅವರಿಗೆ ಕಲಿಸುವುದನ್ನು ಮರೆತು ದಶಕಗಳಾಗಿರಬೇಕು. ಕಲಿಸಬೇಕೆಂದರೂ ಕಲಿಯು ವವ ರಾರು?ನನಗೆ ಬಂದ ಸಿಟ್ಟನ್ನು ಅದುಮಿಟ್ಟು, ಶಾಂತವಾಗಿ, ಬಾಯಲ್ಲಿದ್ದುದನ್ನು ಉಗುಳಿ ಬರಲು ತಿಳಿಸಿದೆ. ಆತ ಉಗುಳಿ ಬೇಗನೆ ತಿರುಗಿ ಬಂದದ್ದನ್ನು ಗಮನಿಸಿದರೆ, ನನಗೆ ಖಾತ್ರಿಯಾಯಿತು, ಆತ ತನ್ನ ಬಾಯಲ್ಲಿಯ ಕೆಂಪು ಬಣ್ಣವನ್ನು ನಮ್ಮ ಆಸ್ಪತ್ರೆಯ ಮೂಲೆಗೆ ಪೇಂಟ್ ಮಾಡಲು ಬಳಸಿದನೆಂದು! ಬಹಳಷ್ಟು ಆಸ್ಪತ್ರೆಗಳ ಮೂಲೆಗಳು ಇಂಥವರಿಂದಲೇ ಬಣ್ಣ ಪಡೆದುಕೊಳ್ಳುತ್ತವೆ’. ಎಷ್ಟು ತಿಳಿಹೇಳಿದರೂ ಈ ಪೇಂಟಿಂಗ್ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಗೆಳೆಯನೊಬ್ಬ ಅಂತಹ ಮೂಲೆಗಳಲ್ಲಿ ದೇವರ ಫೋಟೋಗಳಿರುವ ಟೈಲ್ಸ… ಹಾಕಿಸಿ ಬೀಗಿದ, ತಾನು ಭಾರಿ ಯೋಜನೆ ಮಾಡಿದೆ, ಸನಾತನ ಭಾರತದಲ್ಲಿ ದೇವರಿಗೆ ಅದಾರು ಉಗುಳುತ್ತಾರೆ, ಎಂದು ! ಆದರೇನು, ಬಣ್ಣ ಬಳಿಯುವುದು’ ನಿಲ್ಲಲಿಲ್ಲ. ಅದು ಹೇಗೆ, ಎಂದು ತನ್ನ ಸಿಬ್ಬಂದಿಯನ್ನು ವಿಚಾರಿಸಿದರೆ, ಅವರ ದೇವರಿಗೆ ಇವರು, ಇವರ ದೇವರಿಗೆ ಅವರು’ ಉಗಿಯುತ್ತಾರೆಂದು ತಿಳಿಯಿತು..!! ನಮ್ಮವರು ಇರುವುದು ಹೀಗೇನೇ. ಅದಕ್ಕೇ ನಾನು ದೂಸರಾ ಮಾತಾಡದೇ ಅವನನ್ನು ಪರೀಕ್ಷಿಸತೊಡಗಿದೆ. ಅವನ ನಾಲಿಗೆ ನೋಡಲು,ಆಎನ್ನಲು ಹೇಳಿದರೆ, ಅರ್ಧ ಇಂಚಿಗಿಂತ ಸ್ವಲ್ಪ ಮಾತ್ರ ಹೆಚ್ಚಿಗೆ ತೆಗೆಯುವ ಬಾಯಿ. ಗಬ್ಬೆದ್ದ ನಾಲಿಗೆ, ಕಂದು ಬಣ್ಣದ ಹಲ್ಲುಗಳು. ಎಷ್ಟೋ ತಿಂಗಳುಗಳಿಂದ ತೊಳೆಯದ ಪಾಯಖಾನೆ’ಯಲ್ಲಿ ಇಣುಕಿದಂತಾಯಿತು. ನಾಳೆ ಆತನಿಗೆ ಅರಿವಿಳಿಕೆ ಕೊಡುವುದು ಹೇಗೆ ಎಂದು ಚಿಂತೆಯಾಯಿತು, ನನಗೆ. ಅರಿವಳಿಕೆ ನೀಡಬೇಕೆಂದರೆ ಬಾಯಿ ಪೂರ್ತಿ ತೆಗೆಯುವಂತಿರಬೇಕು. ಇಲ್ಲವಾದರೆ ಶ್ವಾಸನಾಳದೊಳಗೆ ನಳಿಕೆ ಸೇರಿಸುವುದು ಅಸಾಧ್ಯ. ನಾನು ಚಿಂತಿಸತೊಡಗಿದೆ. ಅವನು ಮಾತ್ರ ನಿರಾಳವಾಗಿದ್ದ. ಅವನ ಜೊತೆ ಬಂದ ಗೆಳೆಯನಿಗೆ ಇದರ ಬಗ್ಗೆ ತಿಳಿಹೇಳಬೇಕೆಂದು ಅವನೆಡೆಗೆ ತಿರುಗಿದೆ. ಇದ್ದ ಪರಿಸ್ಥಿತಿಯನ್ನೆಲ್ಲ ಅವನಿಗೆ ವಿವರಿಸಿ, ಆತನಿಗೆ ಅರಿವಳಿಕೆ ನೀಡುವುದು ಕಷ್ಟವಾಗಬಹುದು. ಈಗಲೇ ಬಾಯಿ ತೆಗೆಯಲು ಬರದಂತಿರುವ ಅವನಿಗೆ ಬಾಯಿಯ ಅಬುìದ ಕಾಡಬಹುದು,ಇತ್ಯಾದಿ ನಾನು ಹೇಳುತ್ತಲೇ ಹೋದೆ. ಅವನಿಂದ ಯಾವ ಉತ್ತರವೂ ಇಲ್ಲ. ಸ್ಥಿತಪ್ರಜ್ಞನಂತೆ ನನ್ನೆಡೆಗೆ ದಿಟ್ಟಿಸುತ್ತ ಕುಳಿತಿದ್ದ. ಕೊನೆಗೆ ನಾನು, ಯಾಕ ಸುಮ್ಮ ಕುಂತೀಯಪಾ, ಏನಾದರೂ ಮಾತಾಡಲಾ..
ಅಂದಾಗ ಸ್ವಲ್ಪ ಇರಿ, ಎನ್ನುವಂತೆ ನನ್ನೆಡೆಗೆ ಕೈ ಮಾಡಿ ಹೊರಗೆ ಹೋದ… ಹೌದು… ಅವನ ಬಾಯಲ್ಲೂ ಗುಟಕಾ….! ಗಾಬರಿಯಾಯಿತು ನನಗೆ. ನಮ್ಮ ಯುವಕರಿಗೆ ಏನಾಗಿದೆ? ಅವರಿಗೆ ಅಂಟಿದ ಗುಟಕಾ ತಿನ್ನುವ ಈ ಚಟವನ್ನು ಬಿಡಿಸಲು ಸಾಧ್ಯವೇ ಇಲ್ಲವೇ..? ಗುಟಕಾದಿಂದಾಗುವ ಅನಾಹುತಗಳ ಅರಿವಿದ್ದೂ ಸರಕಾರ, ಸಮಾಜ, ವೈದ್ಯರು ಏನೂ ಮಾಡದ ಸ್ಥಿತಿ ತಲುಪಿದ್ದೇವೆಯೇ?
ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ನಮ್ಮ ದೇಶದಲ್ಲಿ 1,20,000 ಜನ ತಂಬಾಕು ಸಂಬಂಧಿ ಕ್ಯಾನ್ಸìರ್ಗೆ ತುತ್ತಾಗುತ್ತಾರೆ. ಅದರಲ್ಲಿ 72,616 ಜನ ಮರಣವನ್ನಪ್ಪುತ್ತಾರೆ. ಇನ್ನೂ ಚಿಂತೆಯ ವಿಷಯವೆಂದರೆ ಇವರೆಲ್ಲ ಹದಿಹರೆಯದವರು ಅಥವಾ ಮಧ್ಯವಯಸ್ಕರು. ತಮ್ಮ ಕುಟುಂಬಕ್ಕೆ ಅನ್ನ ತರುವಂಥವರು. ಇಷ್ಟಿದ್ದೂ ತಂಬಾಕಿನ ಬಳಕೆಯಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಎರಡನೆಯ ಸ್ಥಾನ ಪಡೆದಿದೆ ಮತ್ತು ತಂಬಾಕು ಬೆಳೆಯುವಲ್ಲಿ ಜಗತ್ತಿನಲ್ಲಿಯೇ ಮೂರನೆಯ ಸ್ಥಾನ ಪಡೆದ ಹೆಗ್ಗಳಿಕೆ, ನಮ್ಮ ದೇಶಕ್ಕೆ! ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಂದಾಜಿನಂತೆ 2020 ರ ವೇಳೆಗೆ ಭಾರತದಲ್ಲಿ ತಂಬಾಕಿನಿಂದಾದ ಕ್ಯಾನ್ಸರ್ನಿಂದ ವಾರ್ಷಿಕ ಹದಿನೈದು ಲಕ್ಷ ಜನ ಮರಣಿಸಲಿ¨ªಾರೆ ಎಂದರೆ ತಂಬಾಕಿನ ದುಷ್ಪರಿಣಾಮಗಳ ಅಗಾಧತೆ ಮನವರಿಕೆಯಾದೀತು. ಭಾರತದಲ್ಲಿ 30 ರಿಂದ 40 ಪ್ರತಿಶತ ಕ್ಯಾನ್ಸರ್ಗಳು ತಂಬಾಕಿನಿಂದಲೇ ಬರುತ್ತವೆ. ಅಂದರೆ ತಂಬಾಕಿನ ನಿಷೇಧದಿಂದ ಅಷ್ಟು ಮಟ್ಟಿನ ಕ್ಯಾನ್ಸರ್ಗಳನ್ನು ತಡೆಗಟ್ಟಬಹುದು. ಅಡಿಕೆ, ಸುಣ್ಣ, ಕಾಚು ಅಲ್ಲದೆ ಇನ್ನೂ ಹಲವಾರು ವಿಚಿತ್ರ ವಸ್ತುಗಳನ್ನು ಮಿಶ್ರಣ ಮಾಡಿ ತಯಾರಿಸಲಾದ ಗುಟಕಾ ಎಂಬ ಭಯಂಕರ ವಸ್ತು ಇಂದಿನ ಯುವ ಜನಾಂಗದ ಸ್ಟೇಟಸ್ ಸಿಂಬಲ… ಆಗಿ ಪರಿವರ್ತಿತವಾಗಿದೆ. ಹೊಗೆಯಿಲ್ಲದ ತಂಬಾಕು ಆದ್ದರಿಂದ ಸಮಾಜದಲ್ಲಿ ಇದು ಅತೀ ಶೀಘ್ರವಾಗಿ ಸ್ವೀಕೃತವಾಗುತ್ತದೆ. ಗುಟ್ಕಾದಲ್ಲಿ ಸುಮಾರು ನಾಲ್ಕು ಸಾವಿರ ವಿಷಕಾರಿ ಪದಾರ್ಥಗಳಿದ್ದರೂ ಅದರಲ್ಲಿ ಸುಮಾರು ಇಪ್ಪತ್ತೆಂಟು ರಾಸಾಯನಿಕಗಳು ಕ್ಯಾನ್ಸರ್ ಕಾರಕವಾಗಿವೆಯೆಂಬುದು ಸಿದ್ಧವಾಗಿದೆ. ಅದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೂ ತಂಬಾಕು ಕಾರಣವಾಗುತ್ತದೆ.
ಊಂಚೆ ಲೋಗ್.. ಊಂಚಿ ಪಸಂದ್…
ಇದರಲ್ಲಿ ಪುರುಷತ್ವ ಹೆಚ್ಚು ಮಾಡುವ ಕೇಸರ್ ಇದೆ…
ಎನ್ನುವ ಜಾಹಿರಾತುಗಳಿಂದಲೋ, ಗೆಳೆಯರ ಒತ್ತಾಯ ದಿಂದಲೋ, ಗುಟಕಾದ ಘಮ್ಮನೆಯ ವಾಸನೆಯಿಂದಲೋ, ವಾಹನ ಚಲಾಯಿಸುವಾಗ ನಿದ್ದೆ ಬರದಂತೆ ಕಾಪಾಡುವ ಅದ್ಭುತ ಸಾಧನ ಎಂದೋ ಶುರುವಾಗುವ ಗುಟಕಾ ಮೆಲ್ಲುವ ಚಟ ಎಂಬ ಪಿಡುಗಾಗುತ್ತದೆ. ಅದು ಮುಂದೆ ತಲುಪುವ ಮಟ್ಟ ನೋಡಿದರೆ ಗಾಬರಿಯಾಗುತ್ತದೆ. ಬಾಯಿಯೊಳಗಿನ ಲೋಳೊ³ರೆ ಮೆತ್ತಗಿದ್ದದ್ದು ಬಿರುಸಾಗಿ, ಕೆಂಪಗಿದ್ದದ್ದು ಬಿಳಿಯಾಗಿ ಬಾಯಿ ತೆರೆಯಲು ಸಾಧ್ಯವಾಗದಷ್ಟು ಗಡುಸಾಗಿ ಬಾಯಲ್ಲಿ ಅನ್ನದ ತುತ್ತನ್ನಂತು ಬಿಡಿ ತನ್ನದೇ ಒಂದು ಬೆರಳನ್ನು ಕೂಡ ಹಾಕಿಕೊಳ್ಳುವುದು ಅಸಾಧ್ಯವಾ ಗುತ್ತದೆ. ತೆರೆಯಲು ಸಾಧ್ಯವಾಗದ ಈ ಬಾಯಿಯೊಳಗೆ ಪ್ರಯಾಸ ಪಟ್ಟು ಒತ್ತೂತ್ತಿ ತುಂಬುತ್ತಾರೆ. ಅನ್ನವನ್ನಲ್ಲ…. ಗುಟಕಾವನ್ನು..!!
ಹೀಗಾಗಿ ನಮ್ಮ ಸರಕಾರ ಇತ್ತೀಚಿಗೆ ಮಾಡಿದ ಘನಂದಾರಿ ಕೆಲಸ ಎಂದರೆ ಒಂದೆರಡು ದಿನ ದಿನಪತ್ರಿಕೆಗಳ ಹೆಡ್ಲೈನ್ನಲ್ಲಿ ಸುದ್ದಿ ಮಾಡಿದ್ದು ಹಾಗೂ ಟಿ.ವಿ.ಗಳ ಕೆಳಬದಿಯಲ್ಲಿ ಕೆಂಪಕ್ಷರಗಳ ಲೈನ್ನಲ್ಲಿ ಬ್ರೆಕಿಂಗ್ ನ್ಯೂಸ್ ಆದದ್ದು ಅಷ್ಟೇ….!! ಈಗಲೂ ಗುಟಕಾ ಸುಲಭವಾಗಿ ದೊರಕುತ್ತದೆ, ಸುಧಾರಿತ ಆವೃತ್ತಿಯಲ್ಲಿ. ಆದರೆ ಇನ್ನಷ್ಟು ಹೆಚ್ಚಿನ ದರದಲ್ಲಿ. ಕೊನೆಗೆ ಲಾಭವಾದದ್ದು ಅದನ್ನು ತಯಾರಿಸುವ ಕೆಟ್ಟ ಫ್ಯಾಕ್ಟರಿಗಳಿಗೆ. ಯಾಕೆಂದರೆ ಈಗ ಇನ್ನಷ್ಟು ಹೆಚ್ಚಿನ ಧಾರಣೆಗೆ ಅದನ್ನು ಮಾರಬಹುದು. ಮೂರು ದಶಕಗಳ ಹಿಂದೆ ಪ್ರಾರಂಭವಾದ ಗುಟ್ಕಾ ತಯಾರಿಸುವ ದಂಧೆ ಈಗ ಬೃಹತ್ ಉದ್ದಿಮೆಯಾಗಿ ಬೆಳೆದಿದೆ. ಕೋಟ್ಯಂತರ ರೂಪಾಯಿ ವರಮಾನ ತರುವ ಈ ಕಂಪನಿಗಳನ್ನು ನಿಷೇಧ ಮಾಡುವುದಿರಲಿ, ಅಡಿಕೆ ಬೆಳೆಗಾರರ ಕಲ್ಯಾಣದ ನೆಪವೊಡ್ಡಿ ಅವುಗಳನ್ನು ಇನ್ನಷ್ಟು ಪೋಷಿಸಲಾಗುತ್ತಿದೆ. ಮತ್ತೆ ವರ್ಷಕ್ಕೊಂದು ದಿನ ತಂಬಾಕುರಹಿತ ದಿನ ಆಚರಿಸಿ ಕೈತೊಳೆದುಕೊಳ್ಳಲಾಗುತ್ತದೆ.
ಅನೇಕ ವರ್ಷಗಳ ಹಿಂದೊಮ್ಮೆ ಬೀಗರೆದುರಿಗೆ, ತಾನು ಹೊದ್ದ ಕಾಶ್ಮೀರ ಶಾಲ್ನೊಳಗಿಂದ ಅಭಿಮಾನದಿಂದ, ಹೆಮ್ಮೆಯಿಂದ, ಆದರದಿಂದ, ಹಿಂದಿಯ ಹಿರಿಯ ನಟ ಅಶೋಕ ಕುಮಾರ್, ಅದ್ಭುತವಾದದ್ದೇನನ್ನೋ ತೆಗೆಯುವಂತೆ ಸಾವಕಾಶವಾಗಿ ಹೊರತೆಗೆದು ಶಮ್ಮಿ ಕಪೂರ್ನ ಎದುರಿಗೆ ಚಾಚಿದ ನೀಲಿ ಬಣ್ಣದ ಡಬ್ಬಿಯಲ್ಲಿ ತುಂಬಿದ ಪಾನ್ ಮಸಾಲಾ ಎಂಬ ಬೀಗರ ಉಪಚಾರ ಇಂದು ಭೂತವಾಗಿ ಬೆಳೆದು ಬಾಯಿಯ ಕ್ಯಾನ್ಸರ್ ಎಂಬ ರಾಕ್ಷಸ ವೃಕ್ಷ ಬೆಳೆಯಲು ಗೊಬ್ಬರವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅದನ್ನು ನಿರ್ಮೂಲನೆ ಮಾಡಲು ಹಲವಾರು ಕಾರಣಗಳ ನೆಪವೊಡ್ಡಿ ಸರಕಾರವಂತೂ ಮನಸ್ಸು ಮಾಡದು. ಆದರೆ ಇಡೀ ಸಮಾಜ ಮತ್ತು ಪಾಲಕರು ಮನಸ್ಸು ಮಾಡದಿದ್ದರೆ, ತೆರೆಯಲು ಸಾಧ್ಯವಾಗದ ಬಾಯಿಗಳು, ಕ್ಯಾನ್ಸರ್ನಿಂದಾಗಿ ಕಿರಿಯ ವಯಸ್ಸಿನಲ್ಲಿ ಸಾಯುವ ಯುವಕರು ಎಂಬುದು ನಿತ್ಯದ ಸುದ್ದಿಯಾಗುತ್ತವೆ. ಅವರ ಮರಣದಿಂದ ದುಡಿಯುವ ಹರೆಯದ ಕೈಗಳು ಇಲ್ಲದಂತಾಗಿ ವಿತ್ತ ವಿಪತ್ತು ಸಾಮಾನ್ಯವಾಗುತ್ತದೆ… ಎಚ್ಚೆತ್ತುಕೊಳ್ಳೋಣವೇ……??
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ