ಮೂರು ಶತಮಾನಗಳಲ್ಲಿ ನಡೆದಾಡಿದ ಸಾಧಕ


Team Udayavani, Feb 28, 2020, 6:43 AM IST

ego-47

ದೆಹಲಿಯಲ್ಲಿ ಗುರು ಶ್ರದ್ಧಾನಂದರೊಂದಿಗೆ ಇದ್ದ ಸಮಯ. ಡಯರ್‌ನ ಸಿಡಿಗುಂಡುಗಳು ನೂರಿನ್ನೂರಲ್ಲ,
ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೇವಲ ಹದಿನೈದು ನಿಮಿಷದಲ್ಲಿ ಹೆಣವಾಗಿಸಿದವು. ರಕ್ತಸಿಕ್ತ ಮೈದಾನ. ಅಲ್ಲಿಗೆ ಭೇಟಿಕೊಟ್ಟ ಮಹಾತ್ಮಾ ಗಾಂಧಿ, “ಸುಧಾಕರ ವೇದಮಂತ್ರಗಳನ್ನು ಬಲ್ಲವನಾದ್ದರಿಂದ ಅವನೇ ಶಾಸ್ತ್ರೋಕ್ತವಾಗಿ ಈ ದೇಹಗಳಿಗೆ ಅಂತ್ಯಸಂಸ್ಕಾರ ಮಾಡಲಿ’ ಎಂದರು.

ಪಂಡಿತ ಸುಧಾಕರ ಚತುರ್ವೇದಿಯವರಿಗೆ ನೂರಿಪ್ಪತ್ತಕ್ಕೂ ಹೆಚ್ಚು ವಯಸ್ಸಾಗಿದೆ ಎಂಬುದೇನೋ ಗೊತ್ತಿತ್ತು. ಆದರೆ, ಅಚ್ಚರಿಯಾದದ್ದು ಅವರು ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸವಿದ್ದಾರೆ ಎಂದು ಗೆಳೆಯ ರಂಗಸ್ವಾಮಿ ಮೂಕನಹಳ್ಳಿಯವರು ಹೇಳಿದಾಗಲೇ. ಅವರನ್ನು ನೋಡಬೇಕು ಎಂದು ನಾವು ಮೂರ್ನಾಲ್ಕು ಮಂದಿ, ಮೊದಲೇ ತಿಳಿಸಿ, ಅವರ ಮನೆಯ ಕದ ತಟ್ಟಿದೆವು. ಹಿರಿಯರನ್ನು ಕಾಯಿಸಬಾರದು ಎಂದು, ನಿಗದಿಪಡಿಸಿದ್ದ ಸಮಯ ಕ್ಕೂ ಹತ್ತು ನಿಮಿಷದ ಮೊದಲೇ ಅವರ ಮನೆಯನ್ನು ತಲುಪಿದ್ದೆವು. ಆಗ ಅವರ ಮೊಮ್ಮಗಳು ಹೇಳಿದರು, “ಹತ್ತು ನಿಮಿಷ ಕಾಯಿರಿ. ಅವರು ಮುಖಕ್ಷೌರ ಮಾಡಿ ಕೊಳ್ಳುತ್ತಿದ್ದಾರೆ’.

ನೂರಿಪ್ಪತ್ತಮೂರು ವರ್ಷದ ಹಿರಿಯರು, ನಮ್ಮ ಸೋಮಾರಿತನಕ್ಕೆ ಸವಾಲು ಹಾಕುವಂತೆ, ನೀಟಾಗಿ ಶೇವ್‌ ಮಾಡಿಕೊಂಡು ಬಂದು ಎದುರುಗೊಂಡಾಗ ನಮಗೆ ಲಜ್ಜೆ, ಪುಳಕ, ವಿನೀತಭಾವ. ಅಷ್ಟೇ ಏನು? ಸುಧಾಕರ ಚತುರ್ವೇದಿಗಳು ಕೂರುವ ಕುರ್ಚಿಯ ಪಕ್ಕದ ಚಿಕ್ಕ ಸ್ಟೂಲಿನಲ್ಲಿ 600ಕ್ಕೂ ಹೆಚ್ಚು ಪುಟಗಳ ದೊಡ್ಡ ಗ್ರಂಥವೊಂದಿತ್ತು. ಮನ್ನಾರ್‌ ಕೃಷ್ಣರಾವ್‌ ಬರೆದ ಸರ್ದಾರ್‌ ಪಟೇಲ್‌ ಮೇಲಿನ ಉದ್ಗ†ಂಥವದು. ವಾರದ ಹಿಂದಷ್ಟೇ ಕೈ ಸೇರಿದ್ದ ಆ ಗ್ರಂಥದ ನೂರೈವತ್ತು ಪುಟಗಳನ್ನು ಚತುರ್ವೇದಿಯವರು ಓದಿಯಾಗಿತ್ತು.

ಸುಧಾಕರ ಚತುರ್ವೇದಿಗಳ ಬದುಕು ವಿಲಕ್ಷಣ. ವಿಚಿತ್ರ. ವಿಶಿಷ್ಟ. 20ನೇ ಶತಮಾನ ಶುರುವಾಗುವುದಕ್ಕೂ ಮೂರು ವರ್ಷ ಮೊದಲೇ, ರಾಮನವಮಿಯ ಶುಭದಿನದಂದು ಭೂಮಿಗೆ ಬಂದ ಜೀವವದು. ಹಿರೀಕರದು ತುಮಕೂರಿನ ಕ್ಯಾತ್ಸಂದ್ರವಾದರೂ ಈ ಮಗು ಹುಟ್ಟಿದ್ದು ಬೆಂಗಳೂರಲ್ಲಿ. ತಾಯಿ ಲಕ್ಷ್ಮಮ್ಮ, ತಂದೆ ಕೃಷ್ಣರಾಯರು. ಓದಿನಲ್ಲಿ ಚೂಟಿ, ಪ್ರತಿಭಾವಂತ. ಅದನ್ನು ಗುರುತಿಸಿದ ಹಿರಿಯರು ಕಳಿಸಿದ್ದು ಉತ್ತರಕ್ಕೆ. ಹದಿಮೂರರ ಬಾಲಕ ಹೀಗೆ, ಹೊರಟ ಹರಿದ್ವಾರಕ್ಕೆ. ಅಲ್ಲಿನ ಪ್ರಖ್ಯಾತ ಕಾಂಗಡಿ ಗುರುಕುಲದಲ್ಲಿ ಶಿಷ್ಯವೃತ್ತಿ. ಸ್ವಾಮಿ ಶ್ರದ್ಧಾನಂದರ ಶ್ರದ್ಧೆಯ ಶಿಷ್ಯನಾಗಿ ಉಪ-ವಾಸ. ಒಂದೆರಡು ವರ್ಷಗಳಲ್ಲ, ಅಖಂಡ ದಶಕದ ಸಂತಸ್ವರೂಪೀ ಬದುಕು. ನಾಲ್ಕು ವೇದಗಳಲ್ಲಿ ಪಾರಮ್ಯ. ಚತುರ್ವೇದಿ ಎಂಬುದು ಅಪ್ಪನಿಂದ ಬಂದ ಕುಲಸೂಚಕವಲ್ಲ; ಲಾಲ್‌ ಬಹದ್ದೂರ ಶಾಸ್ತ್ರಿಗಳಂತೆ ಅದು ಆರ್ಜಿತ ಪಟ್ಟ.

ಸ್ವಾತಂತ್ರ್ಯ ಹೋರಾಟಕ್ಕಿಳಿಯಲು ಪ್ರೇರಣೆ ಕೊಟ್ಟದ್ದು 1919ರಲ್ಲಿ ನಡೆದ ಜಲಿಯನ್‌ವಾಲಾಬಾಗ್‌ ಹತ್ಯಾಕಾಂಡ. ಹುಡುಗ ಸುಧಾಕರನಿಗೆ ಆಗಿನ್ನೂ 24ರ ಹರೆಯ. ದೆಹಲಿಯಲ್ಲಿ ಗುರು ಶ್ರದ್ಧಾನಂದರೊಂದಿಗೆ ಇದ್ದ ಸಮಯ. ಡಯರ್‌ನ ಸಿಡಿಗುಂಡುಗಳು ನೂರಿನ್ನೂರಲ್ಲ, ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೇವಲ ಹದಿನೈದು ನಿಮಿಷದಲ್ಲಿ ಹೆಣವಾಗಿಸಿದವು. ರಕ್ತಸಿಕ್ತ ಮೈದಾನ. ಅಲ್ಲಿಗೆ ಭೇಟಿಕೊಟ್ಟ ಮಹಾತ್ಮಾ ಗಾಂಧಿ, “ಸುಧಾಕರ ವೇದಮಂತ್ರಗಳನ್ನು ಬಲ್ಲವನಾದ್ದರಿಂದ ಅವನೇ ಶಾಸ್ತ್ರೋಕ್ತವಾಗಿ ಈ ದೇಹಗಳಿಗೆ ಅಂತ್ಯಸಂಸ್ಕಾರ ಮಾಡಲಿ’ ಎಂದರು. ಸಾವಿರಾರು ನತದೃಷ್ಟರ ಪಾರ್ಥಿವದೇಹಗಳಿಗೆ ಹೀಗೆ ಸುಧಾಕರ ಚತುರ್ವೇದಿಗಳ ಕೈಯಲ್ಲಿ, ನದಿದಂಡೆಯಲ್ಲಿ, ಸಂಸ್ಕಾರ ನಡೆಯಿತು.

ಅಲ್ಲಿಂದ ಮುಂದಕ್ಕೆ ಕರ್ನಾಟಕಿ ಚತುರ್ವೇದಿಗಳು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಧಾರೆಯನ್ನು ಕೂಡಿಕೊಂಡರು. ಗಾಂಧೀಜಿ ಬರೆದ ಪತ್ರಗಳನ್ನು ವೈಸರಾಯ್‌ಗಳಿಗೆ, ಗವರ್ನರ್‌ ಜನರಲ್‌ಗ‌ಳಿಗೆ ತಲುಪಿಸುವ ದೂತನ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದರು. ಚಿಕ್ಕ- ದೊಡ್ಡ ಹೋರಾಟಗಳೆಲ್ಲವೂ ಸೇರಿ ಬರೋಬ್ಬರಿ ಮೂವತ್ತಕ್ಕೂ ಹೆಚ್ಚು ಸಲ ಪರಂಗಿದಳದಿಂದ ಬಂಧನಕ್ಕೊಳಗಾದರು. ಚರಕ ತಿರುವಿದರು. ಖಾದಿ ಉಟ್ಟರು. ವಿದೇಶಿ ಉತ್ಪನ್ನಗಳನ್ನು ಸುಟ್ಟರು. ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯರಾದರು. ಲಾಹೋರ್‌ನಲ್ಲಿ ಚತುರ್ವೇದಿಗಳು ಕ್ರಾಂತಿಕಾರಿ ಭಗತ್‌ ಸಿಂಗನ ಗಣಿತದ ಮೇಷ್ಟ್ರಾಗಿದ್ದರು! “ಪಾಸಾಗಲು ಕೆಲವೇ ಕೆಲವು ಅಂಕಗಳು ಬೇಕು, ಅವನ್ನು ಕೊಟ್ಟುಬಿಡಿ’ ಎಂದು ಭಗತ್‌ ಕೇಳಿದಾಗ, “ಅದಂತೂ ಸಾಧ್ಯವಿಲ್ಲ, ಲಕ್ಷಣವಾಗಿ ನಪಾಸಾಗು’ ಎಂದು ಗದರಿದ್ದ ಖಡಕ್‌ ಮೇಷ್ಟ್ರು ಇವರು! ಸ್ವಾತಂತ್ರ್ಯ ಹೋರಾಟ, ಸತ್ಯಾಗ್ರಹ, ಕ್ವಿಟ್‌ ಇಂಡಿಯಾ, ಹರಿಜನೋದ್ಧಾರ, ದೇಗುಲ ಪ್ರವೇಶ, ಅಸ್ಪೃಶ್ಯತೆ ನಿವಾರಣೆ, ಲಾಟಿಯೇಟು, ಜೈಲೂಟ ಎಲ್ಲ ಕಳೆದು ದೇಶ ಸ್ವತಂತ್ರವಾಗುವ ಸಮಯಕ್ಕೆ ಚತುರ್ವೇದಿಗಳಿಗೆ ಭರ್ತಿ ಐವತ್ತು. ಇವೆಲ್ಲ ಗಡಿಬಿಡಿಯಲ್ಲಿ ಮದುವೆಯಾಗುವುದೇ ಮರೆತು ಹೋಯಿತು. “ಸ್ವಾತಂತ್ರ್ಯ ಬಂದ ಮೇಲೆ ಮದುವೆಯಾಗಲು ಹೊರಟರೆ, ಈ ಅಪರವಯಸ್ಕನನ್ನು ಕಟ್ಟಿಕೊಳ್ಳುವವರು ಯಾರು?’ - ಇದು ಚತುರ್ವೇದಿಗಳದ್ದೇ ನಗೆಚಟಾಕಿ. ಅದು ನಗುವೋ, ವಿಷಾದವೋ, ಅವರೊಬ್ಬರಿಗಷ್ಟೇ ಗೊತ್ತಿದ್ದ ಗುಟ್ಟು!

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನದಿಂದ ಚತುರ್ವೇದಿಗಳ ದಿಕ್ಕು ಬದಲಾಯಿತು. ಹಳೆಯದಕ್ಕೆ ಹೊರಳಿಕೊಂಡರು. ವೇದ- ವೇದಾಂತಗಳನ್ನು ಹರವಿಕೂತರು. ದಯಾನಂದ ಸರಸ್ವತಿಗಳು ವೇದಗಳಿಗೆ ಬರೆದಿದ್ದ ಉದ್ದಾಮ ಭಾಷ್ಯಗಳನ್ನೆಲ್ಲ ಕನ್ನಡಕ್ಕೆ ತರುವ, ಬೆಟ್ಟ ಅಗೆದು ದಾರಿ ಕೊರೆವಂಥ ಕಠಿಣೋದ್ಯೋಗದಲ್ಲಿ ಸ್ವ-ಇಚ್ಛೆಯಿಂದ ತೊಡಗಿಕೊಂಡರು. 20 ಸಂಪುಟಗಳಲ್ಲಿ 30,000 ಪುಟಗಳಲ್ಲಿ ಬಂದಿರುವ ಆ ಸಾಹಿತ್ಯಕ್ಕೆ ಮುದ್ರಿಸಿದ ಮುಖಬೆಲೆ 12,000 ರೂಪಾಯಿ ಎಂದರೆ ಕೆಲಸದ ಅಗಾಧತೆ, ಅಮೌಲ್ಯತೆ ಎಷ್ಟೆಂಬುದನ್ನು ನಾವು ಅಂದಾಜಿಸಬಹುದು. ವೈದಿಕರಿಂದ ಜಾತೀಯತೆ ಹುಟ್ಟಿತೆಂಬ ಎಡಬಿಡಂಗಿಗಳ ವಾದಕ್ಕೆ ಸಿಟ್ಟಾಗುತ್ತಿದ್ದ ಚತುರ್ವೇದಿಗಳು, ಹಾಗೆ ಜಾತೀಯತೆಯನ್ನು ಪುರಸ್ಕರಿಸಿದ ವೇದಮಂತ್ರವನ್ನು ಉಲ್ಲೇಖೀಸಿ ಎಂದು ಸವಾಲು ಹಾಕಿದ್ದವರು. ಸವಾಲು ಸ್ವೀಕರಿಸಲು ದಶಕಗಳೇ ಕಳೆದರೂ ಯಾರೂ ಮುಂದಾಗಲಿಲ್ಲವೆಂಬುದು ಬೇರೆ ವಿಚಾರ.

ಅಭಿಮನ್ಯುವಿನಂಥ ವೀರರನ್ನು ಹೆತ್ತ ಭಾರತಿ ನಿನ್ನಂಥ ನರಪೇತಲನನ್ನು ಹುಟ್ಟಿಸಿದ್ದು ಹೇಗೆ ಎಂದು ನಗೆಯಾಡಿದ್ದರಂತೆ ಗುರುಗಳಾದ ಸ್ವಾಮಿ ಶ್ರದ್ಧಾನಂದರು. ಗೇಲಿಯಲ್ಲ, ಶುದ್ಧ ಹಾಸ್ಯವಷ್ಟೆ. ಆದರೆ, ಸಾಧನೆಗೆ ಬೇಕಿರುವುದು ದೊಡ್ಡ ದೇಹವಲ್ಲ, ದೊಡ್ಡ ಸಂಕಲ್ಪಶಕ್ತಿ ಅಷ್ಟೆ- ಎಂಬುದನ್ನು ಹೇಳದೆ ತೋರಿಸಿಕೊಟ್ಟವರು ಚತುರ್ವೇದಿಗಳು. ಹಿತಮಿತ ಆಹಾರ, ರಾಜಕೀಯದಿಂದ ಬಲು ದೂರ. ಅಪಹಾಸ್ಯವಿಲ್ಲದ ಶುದ್ಧಾಂತಃಕರಣದ ನಗೆ. ಸದಾ ದೈಹಿಕ, ಬೌದ್ಧಿಕ ಚಟುವಟಿಕೆ. ವಾರಕ್ಕೊಂದು ಸಣ್ಣ ಹೋಮ, ಜ್ಞಾನಾರ್ಥಿಗಳಿಗೆ ಉಪನ್ಯಾಸ. ನಿಯಮ ತಪ್ಪದ ದಿನಚರಿ. ಇಷ್ಟಿದ್ದರೆ ನೂರೇನು, ನೂರಿಪ್ಪತ್ತನ್ನೂ ದಾಟಿ ಆರಾಮಾಗಿ ಮುನ್ನಡೆಯಬಹುದು ಎಂಬುದನ್ನು ತೋರಿಸಿಕೊಟ್ಟ ಚತುರ್ವೇದಿಗಳು ಈಗ ಪಯಣ ಮುಗಿಸಿ ಹೊರಟಿದ್ದಾರೆ. ಹೋಗಬಾರದಿತ್ತು ಎಂಬುದು ಸ್ವಾರ್ಥವಾದೀತು. ಇದ್ದಷ್ಟು ದಿನ ಲವಲವಿಕೆಯಿಂದ ಆರೋಗ್ಯಪೂರ್ಣರಾಗಿ ಓಡಾಡುತ್ತ, ಬದುಕಿದರೆ ಹೀಗೆ ಬದುಕಬೇಕೆಂಬ ಅಸೂಯೆಯನ್ನೂ, ಆಸೆಯನ್ನೂ ಹುಟ್ಟಿಸುವಂತೆ ಬಾಳಿಹೋದರಲ್ಲ? ಸಂತಸದಿಂದ ಕಳಿಸಿಕೊಡೋಣ. ಸಾಧ್ಯವಾದರೆ ನಾವೂ ಆ ದಾರಿಯಲ್ಲಿ ನಾಲ್ಕು ಬಾಲಹೆಜ್ಜೆಗಳನ್ನು ಊರೋಣ.

ಪರಿಶಿಷ್ಟರ ಮಕ್ಕಳನ್ನೇ ದತ್ತುಪಡೆದರು…
ಚತುರ್ವೇದಿಗಳು ವೇದಗಳಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಬರೆದಿಟ್ಟು, ಯಾರಾದರೂ ಪಾಲಿಸಲಿ ಎಂದು ಉಪೇಕ್ಷೆ ತಾಳಲಿಲ್ಲ. ಬರೆದದ್ದನ್ನು ತಾವೇ ಅನುಷ್ಠಾನಕ್ಕಿಳಿಸಲು ಪಣತೊಟ್ಟರು. ಹರಿಜನರ ಮಕ್ಕಳನ್ನೇ ದತ್ತುಪಡೆದರು. ಓದಿಸಿದರು, ಎಲ್ಲಿಯವರೆಗೆ? ಐಎಎಸ್‌ವರೆಗೆ! ನೂರಾರು ಅಂತರ್ಜಾತೀಯ ಮದುವೆಗಳು, ಸಾವಿರಾರು ಕೇರಿಗಳಲ್ಲಿ ಹರಿಜನರ ದೇಗುಲ ಪ್ರವೇಶ, ಅಸ್ಪೃಶ್ಯತೆಯ ನಿವಾರಣೆಗೆ ಅಹರ್ನಿಶಿ ಆಂದೋಲನ. ವೇದ ಕಲಿಯಬೇಕೆಂಬ ಅಪೇಕ್ಷೆಯಿದ್ದರೆ ಸಾಕು, ಅವರಿಗೆಲ್ಲ ವೇದಧಾರೆ. ಹೆಣ್ಣುಮಕ್ಕಳಿಗೂ ವೇದಾದ್ಯಯನ ಮುಕ್ತ. ಯಾವ ಘೋಷಣೆ ಇಲ್ಲದೆ, ವೇದಿಕೆಗಳ ಉದ್ದುದ್ದ ಭಾಷಣಗಳಿಲ್ಲದೆ, ಬಿಟ್ಟಿ-ತುಟ್ಟಿ ಪ್ರಚಾರಗಳಿಲ್ಲದೆ, ರಾಜಕೀಯ ಅಧಿಕಾರದಂಡವಿಲ್ಲದೆ ಇವೆಲ್ಲ ನಡೆದದ್ದು ಏಕವ್ಯಕ್ತಿ ಹೋರಾಟದಂತೆ. “ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ’ ಎಂದರು ಜಿಎಸ್‌ಎಸ್‌, ಸಿದ್ಧಗಂಗಾ ಶ್ರೀಗಳ ವಿಷಯದಲ್ಲಿ. ಸುಧಾಕರ ಚತುರ್ವೇದಿಗಳಿಗೆ ಗದ್ದುಗೆ, ಪೀಠ, ಮಠಗಳೂ ಇರಲಿಲ್ಲ. ಆದರೆ, ಸಮಾಜಸೇವೆಯ ವಿಷಯದಲ್ಲಿ ಅವರದು ಸಿದ್ಧಗಂಗೆಯ ತಪಸ್ವಿಗೆ ಕಿಂಚಿದೂನವಿಲ್ಲದ ಬದ್ಧತೆ.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.