ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…
Team Udayavani, Jul 28, 2021, 6:20 AM IST
ತಂದೆಗೆ ತಕ್ಕ ಮಗ :
ಕರ್ನಾಟಕದ 23ನೇ ಮುಖಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಅವರ ತಂದೆ ಎಸ್.ಆರ್. ಬೊಮ್ಮಾಯಿ, ರಾಜ್ಯದ 11ನೇ ಸಿಎಂ ಆಗಿ 1988ರಿಂದ 1989ರವರೆಗೆ ಸೇವೆ ಸಲ್ಲಿಸಿದ್ದರು. ಇವರಂತೆಯೇ ದೇಶದಲ್ಲಿ ಪ್ರಸ್ತುತ ನಾಲ್ವರು ರಾಜಕೀಯ ನಾಯಕರು ತಮ್ಮ ತಂದೆಯವರ ರಾಜಕೀಯ ಹಾದಿಯನ್ನೇ ತುಳಿದು ವಿವಿಧ ರಾಜ್ಯಗಳ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದು, ಅವರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬಿಜು ಪಟ್ನಾಯಕ್ – ನವೀನ್ ಪಟ್ನಾಯಕ್ :
ಅಸ್ಸಾಂನ 3ನೇ ಸಿಎಂ ಆಗಿ 1963ರಲ್ಲಿ ಅಧಿಕಾರ ಸ್ವೀಕರಿಸಿದ್ದ ಬಿಜು ಪಟ್ನಾಯಕ್, ಅನಂತರ ಮತ್ತೆರಡು ಬಾರಿ ಸಿಎಂ ಆಗಿದ್ದರು. ಈಗ ಅವರ ಪುತ್ರ ನವೀನ್ ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿದ್ದು, 2000 ಇಸವಿಯಿಂದ ಅವರೇ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಕರುಣಾನಿಧಿ – ಸ್ಟಾಲಿನ್ :
ತಮಿಳುನಾಡಿನ 2ನೇ ಸಿಎಂ ಆಗಿ 1969ರಲ್ಲಿ ಅಧಿಕಾರ ಸ್ವೀಕರಿಸಿದ್ದ ಡಿಎಂಕೆ ನಾಯಕ ಎಂ. ಕರುಣಾನಿಧಿ, ಒಟ್ಟು 4 ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ, ಅಲ್ಲಿ ಪುನಃ ಡಿಎಂಕೆ ಅಧಿಕಾರಕ್ಕೆ ಬಂದಿದ್ದು, ಕರುಣಾನಿಧಿಯ ವರ ಪುತ್ರ ಸ್ಟಾಲಿನ್ ಸಿಎಂ ಆಗಿ ಮೇ 7 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ವೈಎಸ್ ರಾಜಶೇಖರ ರೆಡ್ಡಿ – ಜಗನ್ ರೆಡ್ಡಿ :
ಆಂಧ್ರಪ್ರದೇಶ ಕಾಂಗ್ರೆಸ್ನ ಪ್ರಬಲ ನಾಯಕರಾಗಿದ್ದ ವೈಎಸ್ ರಾಜಶೇಖರ ರೆಡ್ಡಿ, 2004ರಲ್ಲಿ ಆ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2009ರಲ್ಲಿ ಅವರ ಮರಣಾನಂತರ ಅವರ ಪುತ್ರ ಜಗನ್ ರೆಡ್ಡಿ, ತಮ್ಮ ನೂತನ ಪಕ್ಷ ವೈಎಸ್ಆರ್ ಕಾಂಗ್ರೆಸ್ನ ಮೂಲಕ 2019ರಲ್ಲಿ ಅಲ್ಲಿನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಆಡಳಿತ ನಡೆಸುತ್ತಿದ್ದಾರೆ.
ಶಿಬು-ಹೇಮಂತ್ ಸೊರೇನ್ :
ಝಾರ್ಖಂಡ್ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಶಿಬು ಸೊರೊನ್ 2009ರಲ್ಲಿ ಆ ರಾಜ್ಯದ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈಗ, ಅವರ ಪುತ್ರ ಹೇಮಂತ್ ಸೊರೇನ್ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾರೆ. ಆ ರಾಜ್ಯದ 5ನೇ ಮುಖ್ಯಮಂತ್ರಿಯಾಗಿ ಅವರು 2019ರಲ್ಲಿ ಅಧಿಕಾರ ಸ್ವೀಕರಿಸಿದ್ದರು.