ಚಿರುಗೆ ಅಮೃತಾ ನಾಯಕಿ
ಶಿವತೇಜಸ್ ನಿರ್ದೇಶನದ ಚಿತ್ರ
Team Udayavani, Apr 30, 2019, 3:00 AM IST
ಇತ್ತೀಚೆಗಷ್ಟೇ ಸೆಟ್ಟೇರಿದ ಚಿರಂಜೀವಿ ಸರ್ಜಾ ನಾಯಕರಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ “ಧೈರ್ಯಂ’ ಚಿತ್ರ ನಿರ್ದೇಶಿಸಿದ್ದ ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಆರಂಭದಲ್ಲಿ ಈ ಚಿತ್ರಕ್ಕೆ “ಭೈರವ’ ಎಂದು ಹೆಸರಿಡಲಾಗಿತ್ತು.
ಆದರೆ, ಈಗ ಆ ಟೈಟಲ್ ಸರಿಹೊಂದದ ಕಾರಣ, ಹೊಸ ಟೈಟಲ್ನ ಹುಡುಕಾಟದಲ್ಲಿದೆ. ಇನ್ನು ಈ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರಿದ್ದು, ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್ ಸದ್ಯಕ್ಕೆ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಇನ್ನೊಂದು ನಾಯಕಿಯ ಪಾತ್ರಕ್ಕೆ ಚಿತ್ರತಂಡ ಹುಡುಕಾಟ ನಡೆಸುತ್ತಿದೆ.
ಸದ್ಯ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇನ್ನು ಅಮೃತಾ ಅಯ್ಯಂಗಾರ್ ದೇವರಾಜಕುಮಾರ್ ನಿರ್ದೇಶನದ “ಅನುಷ್ಕ, ದುನಿಯಾ ಸೂರಿ ನಿರ್ದೇಶನದ “ಪಾಪ್ ಕಾರ್ನ್ ಮಂಕಿ ಟೈಗರ್’ ಸೇರಿದಂತೆ ಇನ್ನೂ ಹೆಸರಿಡದ ಎರಡ್ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಅನುಷ್ಕ’ ಪುನರ್ಜನ್ಮದ ಕಥೆಯಿರುವ ಮಹಿಳಾ ಪ್ರಧಾನ ಚಿತ್ರ. ಇಡೀ ಚಿತ್ರ ಅಮೃತಾ ಸುತ್ತ ನಡೆಯುತ್ತದೆಯಂತೆ. ಆ ಚಿತ್ರದಲ್ಲಿ ಅಮೃತಾ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಒಂದು ಶೇಡ್ನಲ್ಲಿ ಪೂರ್ವಜನ್ಮದ ಮಹಾರಾಣಿಯಾಗಿ ಮತ್ತೂಂದು ಶೇಡ್ನಲ್ಲಿ ಇಂದಿನ ಜನರೇಷನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕೆಟಗೆರಿಯ ಚಿತ್ರ.
ಇನ್ನು, “ಪಾಪ್ ಕಾರ್ನ್ ಮಂಕಿ ಟೈಗರ್’ ಅಮೃತಾ ಅವರ ಮೂರನೇ ಚಿತ್ರ. “ಬಹಳ ದಿನಗಳಿಂದ ದುನಿಯಾ ಸೂರಿ ಮತ್ತು ಧನಂಜಯ್ ಅವರ ಚಿತ್ರದಲ್ಲಿ ನಟಿಸಬೇಕೆಂಬ ಕನಸು ಈ ಚಿತ್ರದಲ್ಲಿ ನನಸಾಗಿದೆ. ಇದರಲ್ಲಿ ಧನಂಜಯ್ ಅವರ ಗರ್ಲ್ಫ್ರೆಂಡ್ ಆಗಿ ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುವ ಅಮೃತಾ ಸದ್ಯ ಚಿತ್ರರಂಗದಲ್ಲಿ ಬಿಝಿಯಾಗುತ್ತಿರುವುದು ಸುಳ್ಳಲ್ಲ.