ತೆರೆಗೆ ಬಂತು ನಮ್ಮ ಹೆಮ್ಮೆಯ ‘ಗಂಧದ ಗುಡಿ’: ಡ್ರೀಮ್ ಪ್ರಾಜೆಕ್ಟ್ ಅಶ್ವಿನಿ ಪುನೀತ್ ಮನದ ಮಾತು
Team Udayavani, Oct 28, 2022, 9:18 AM IST
ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ನಡುವೆಯೇ ಪುನೀತ್ ರಾಜಕುಮಾರ್ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿರುವ “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾ, ಇಂದು ತೆರೆ ಕಾಣುತ್ತಿದೆ. ಅಮೋಘ ವರ್ಷ ನಿರ್ದೇಶನದ ಈ ಚಿತ್ರ ವನ್ನು “ಪಿಆರ್ಕೆ’ ಸಂಸ್ಥೆ ನಿರ್ಮಿಸಿದೆ. ಪುನೀತ್ ಅಗಲಿಕೆಯ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಹೆಚ್ಚಾಗಿ ಮಾತನಾಡಿರದ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಸ್ವತಃ ಮುತುವರ್ಜಿ ವಹಿಸಿ “ಗಂಧದ ಗುಡಿ’ಯನ್ನು ತೆರೆಮೇಲೆ ತರುತ್ತಿದ್ದಾರೆ.
“ಗಂಧದ ಗುಡಿ’ ಬಿಡುಗಡೆಗೂ ಮುನ್ನ “ಪಿಆರ್ಕೆ’ ಯು-ಟ್ಯೂಬ್ ಚಾನೆಲ್ನಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಅಪ್ಪು ಕನಸು ಮತ್ತು “ಗಂಧದ ಗುಡಿ’ ತೆರೆಹಿಂದಿನ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಶೂಟಿಂಗ್ ಮಾಡಿದ್ದಲ್ಲ, ಕ್ಯಾಪ್ಚರ್ ಮಾಡಿದ್ದು..
ಹಿಂದಿನ ಎರಡೂ “ಗಂಧದ ಗುಡಿ’ಯನ್ನು ಅಪ್ಪಾಜಿ, ಶಿವಣ್ಣ ಮಾಡಿದ್ದರು. ಅದರಲ್ಲಿ ಒಂದು ಕಥೆಯಿತ್ತು. ಆದರೆ ಇದರಲ್ಲಿ ಹಾಗಿಲ್ಲ. ಇಲ್ಲಿ ಅಪ್ಪು ಅವರ ಜರ್ನಿಯಿದೆ. ಆರಂಭದಲ್ಲಿ ಈ ಪ್ರಾಜೆಕ್ಟ್ಗೆ ಏನು ಹೆಸರು ಕೊಡಬೇಕು ಅಂಥ ತುಂಬ ಚರ್ಚೆ ಮಾಡಿ, ಕೊನೆಗೆ ಈ “ಗಂಧದ ಗುಡಿ’ ಅಂಥ ಟೈಟಲ್ ಇಡಲಾಯಿತು. “ಗಂಧದ ಗುಡಿ’ಯನ್ನು ಶೂಟಿಂಗ್ ಮಾಡಿಲ್ಲ. ಅಪ್ಪು ಮೂಲಕ “ಗಂಧದ ಗುಡಿ’ಯನ್ನು ಕ್ಯಾಪ್ಚರ್ ಮಾಡಿದ್ದೇವೆ. ನನ್ನ ಮೂಲಕ “ಗಂಧದ ಗುಡಿ’ಯನ್ನು ಕನ್ನಡ ಜನರಿಗೆ ಇದನ್ನು ತೋರಿಸಬೇಕು ಅಂಥ ಅಪ್ಪು ಹೇಳುತ್ತಿದ್ದರು. ಇಲ್ಲಿ ಅವರೊಬ್ಬ ನಟನಾಗಿ ಕಾಣಿಸಿಕೊಂಡಿಲ್ಲ. ಅಲ್ಲೇನೂ ಮೇಕಪ್ ಇರಲಿಲ್ಲ. ಅವರು ಅವರಾಗಿಯೇ ಇದ್ದರು. ಪುನೀತ್ ರಾಜಕುಮಾರ್ ಅವರಾಗಿಯೇ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
ಮರೆಯಲಾರದ ಅನುಭವ ಕೊಟ್ಟ ಶೂಟಿಂಗ್
“ಗಂಧದ ಗುಡಿ’ಯನ್ನು ಬಂಡಿಪುರ, ನಾಗರಹೊಳೆ, ಗಾಜನೂರು, ನೇತ್ರಾಣಿ ಹೀಗೆ ಹಲವು ಕಡೆ ಶೂಟಿಂಗ್ ಮಾಡಲಾಗಿದೆ. ಕಾಳಿ ನದಿ ಹಿನ್ನೀರಿನ ಪ್ರದೇಶಗಳಲ್ಲಿ ಶೂಟಿಂಗ್ ಮಾಡುವಾಗ ಅಪ್ಪು, ಬೆಟ್ಟ ಹತ್ತಿ ಪೋನ್ ಮಾಡಿದ್ದರು. ಶೂಟಿಂಗ್ ನಡೆಯುತ್ತಿರುವಾಗ ನಾನೂ ಅಲ್ಲಿಗೆ ಹೋಗಿದ್ದೆ. ಅಪ್ಪು ಮತ್ತು ಟೀಮ್ ಜೊತೆ ಅಲ್ಲಿ ಟ್ರಕ್ಕಿಂಗ್ ಕೂಡ ಮಾಡಿದ್ದೆ. ಅದು ನನಗೆ ಒಂದು ಅದ್ಭುತ ಅನುಭವ ಕೊಟ್ಟ ಟ್ರಕ್ಕಿಂಗ್ ಆಗಿತ್ತು. ತುಂಬ ಖುಷಿಯಿಂದ ಅಪ್ಪು ಶೂಟಿಂಗ್ನಲ್ಲಿ ಭಾಗಿಯಾಗು¤ದ್ದರು. ಅದೆಲ್ಲವೂ ಮರೆಯಲಾರದಂಥದ್ದು.
ಗಂಧದ ಗುಡಿ’ ಬಗ್ಗೆ ಹೆಮ್ಮೆಯಿದೆ
ಒಂದು ಕಡೆ ಬೇಸರ ಮತ್ತೂಂದು ಕಡೆ ಖುಷಿ ಎರಡೂ ಕೊಟ್ಟ ಪ್ರಾಜೆಕ್ಟ್ “ಗಂಧದ ಗುಡಿ’. ಯಾವಾಗಲೂ ನಾವು ಟ್ರಾವೆಲ್ ಮಾಡುತ್ತಿದ್ದೆವು. ಟ್ರಾವೆಲ್ ಮಾಡುವಾಗಲೆಲ್ಲ, ನಮ್ಮ ರಾಜ್ಯದೊಳಗೆ ಇರುವ ಈ ಅದ್ಭುತಗಳನ್ನು ಜಗತ್ತಿಗೆ ಯಾಕೆ ಪರಿಚಯಿಸಬಾರದು ಅಂಥ ಅಂದುಕೊಳ್ಳುತ್ತಿದ್ದೆವು. ಈಗ ಅದನ್ನು ಪರಿಚಯಿಸುವ ಅವಕಾಶ ಬಂದಿದೆ. ಅಪ್ಪು ಅದರ ರಾಯಭಾರಿಯಾಗಿ ಅದನ್ನು ಜನರ ಮುಂದೆ ತಂದಿದ್ದಾರೆ. “ಗಂಧದ ಗುಡಿ’ ನನಗೆ ಹೆಮ್ಮೆ ಕೊಟ್ಟಿರುವ ಪ್ರಾಜೆಕ್ಟ್. “ಗಂಧದ ಗುಡಿ’ ಅಪ್ಪು ಕನಸಿನ ಪ್ರಾಜೆಕ್ಟ್. ಅದು ಜನರಿಗೆ ತಲುಪಬೇಕು, ಅಪ್ಪು ಕನಸು ನನಸಾಗಬೇಕು.
ತೃಪ್ತಿ ಕೊಟ್ಟ “ಪುನೀತ ಪರ್ವ’
“ಪುನೀತ ಪರ್ವ’ ವಿಶೇಷವಾಗಿ ಅಭಿಮಾನಿಗಳಿಗಾಗಿಯೇ ಮಾಡಿದ ಕಾರ್ಯಕ್ರಮ. ಅದನ್ನು ಎಲ್ಲ ಕಡೆ ಹೇಳಿದ್ದೇವೆ. ಅಭಿಮಾನಿಗಳ ಜೊತೆ ಇಡೀ ಉದ್ಯಮ ಬಂದಿತ್ತು. ಸುಮಾರು 1 ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಕನ್ನಡ ಚಿತ್ರರಂಗ ಮತ್ತು ಬೇರೆ ಬೇರೆ ಭಾಷೆಯ ಚಿತ್ರರಂಗಗಳ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರೂ ಬಂದು ತುಂಬ ಸಪೋರ್ಟ್ ಮಾಡಿದ್ದರು. ತುಂಬ ಯಶಸ್ವಿಯಾದ ಕಾರ್ಯಕ್ರಮವಾಯಿತು. ಅಪ್ಪು ಅವರ ಲಾಸ್ಟ್ ಇವೆಂಟ್ ಸಕ್ಸಸ್ ಆಯ್ತು ಎನ್ನುವ ತೃಪ್ತಿ ಕೂಡ ಕೊಟ್ಟಿತು. ಇಂಥದ್ದೊದು ಕಾರ್ಯಕ್ರಮ ಯಶಸ್ವಿ ಮಾಡಿದ ಅಭಿಮಾನಿಗಳಿಗೆ, ಚಿತ್ರರಂಗಕ್ಕೆ, ಸರ್ಕಾರಕ್ಕೆ ನಾನು ಮತ್ತು ನಮ್ಮ ಕುಟುಂಬ ಯಾವಾಗಲೂ ಚಿರಋಣಿಯಾಗಿರುತ್ತೇವೆ