ಬಳ್ಳಾರಿ ಹುಡುಗರ ಲವ್ಸ್ಟೋರಿ
ದುರಂತ ಪ್ರೀತಿ ಹಿಂದೆ ಹೊಸಬರು
Team Udayavani, Aug 6, 2019, 3:01 AM IST
ದಿನ ಕಳೆದಂತೆ ಕನ್ನಡದಲ್ಲಿ ಹೊಸಬರ ಆಗಮನ ಹೆಚ್ಚಾಗುತ್ತಲೇ ಇದೆ. ಆ ಸಾಲಿಗೆ ಈಗ “ಬಾರೋ ಬಾರೋ ಗೆಳೆಯ’ ಚಿತ್ರವೂ ಸೇರಿದೆ. ಹೌದು, ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಈ ಚಿತ್ರದ ವಿಶೇಷವೆಂದರೆ, ಬಹುತೇಕ ಬಳ್ಳಾರಿ ಮೂಲದ ಪ್ರತಿಭೆಳು ಸೇರಿ ಚಿತ್ರ ಮಾಡಿದ್ದಾರೆ. ಅದಕ್ಕೆ ಕಾರಣ, ಬಳ್ಳಾರಿ ಭಾಗದಲ್ಲಿ ತೆಲುಗಿನ ಪ್ರಭಾವ ಹೆಚ್ಚು. ಅಲ್ಲಿರುವ ಎಂಜಿನಿಯರಿಂಗ್ ಕನ್ನಡಿಗರು ಸೇರಿಕೊಂಡು ಕನ್ನಡ ಸಿನಿಮಾ ಮಾಡುವ ಯೋಚನೆ ಮಾಡಿದ್ದರಿಂದ ಈಗ ಅವರ “ಬಾರೋ ಬಾರೋ ಗೆಳೆಯ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಎಲ್ಲಾ ಅಂದುಕೊಂಡಂತೆ ನಡೆದರೆ ಆಗಸ್ಟ್ 23 ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಶ್ರೀಕಾಂತ್ ಆಚಾರ್ಯ ನಿರ್ದೇಶನ ಮಾಡಿದ್ದಾರೆ. ಕಥೆಯ ಜವಾಬ್ದಾರಿಯೂ ಅವರದೇ. ಇನ್ನು ಪ್ರೀತೇಶ್ ಕೊಠಾರಿ ಈ ಚಿತ್ರದ ನಿರ್ಮಾಪಕರು. ಇವರಿಗೆ ಇದು ಮೊದಲ ಅನುಭವ. ಇನ್ನು, ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಲವ್ಸ್ಟೋರಿ ಹೊಂದಿರುವ ಚಿತ್ರ. ಚಿತ್ರದ ನಾಯಕ, ನಾಯಕಿ ಸಂಭ್ರಮದಿಂದಲೇ ಪಯಣ ಬೆಳೆಸುತ್ತಾರೆ. ಅವರು ಅಂದುಕೊಂಡ ಸ್ಥಳಕ್ಕೆ ಹೋದಾಗ, ಅಲ್ಲೊಂದು ಘಟನೆ ನಡೆಯುತ್ತದೆ.
ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕಥೆ. ಇಲ್ಲಿ ನಿಷ್ಕಲ್ಮಶ ಪ್ರೀತಿ ಬಗ್ಗೆ ಸೂಕ್ಷ್ಮವಾಗಿ ಹೇಳಲಾಗಿದೆ ಎನ್ನುವ ನಿರ್ದೇಶಕರು, ಬಳ್ಳಾರಿ ಸುತ್ತಮುತ್ತಲ ತಾಣಗಳಲ್ಲೇ ಬಹುತೇಕ ಚಿತ್ರೀಕರಣ ಮಾಡಿದ್ದಾಗಿ ಹೇಳುತ್ತಾರೆ. ಚಿತ್ರಕ್ಕೆ ಶಿವಚಂದ್ರ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಇದು ಮೊದಲ ಅನುಭವ. ಹಾಗೆಯೇ, ಅಂಜು ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕನ ಗೆಳೆಯನಾಗಿ ಗಾಂಧಿರಾಮ್, ಪೂಜಾ ಇತರರು ನಟಿಸಿದ್ದಾರೆ. ಚಿತ್ರ ಆಗಸ್ಟ್ 23 ರಂದು ಬಿಡುಗಡೆಗೆ ಅಣಿಯಾಗುತ್ತಿದೆ. ಮಂಜು ಹೆದ್ದೂರು ಬಿಡುಗಡೆ ಕುರಿತಂತೆ ಸಲಹೆ, ಸೂಚನೆ ನೀಡುತ್ತಿದ್ದಾರೆ. ಅಂತೂ ಹೊಸಬರೇ ಮಾಡಿರುವ ಈ ಚಿತ್ರದ ಮೇಲೆ ಅವರಿಗೆ ಭರವಸೆ ಹೆಚ್ಚಾಗಿದೆ.