ವಿದೇಶಿ ಮುಹೂರ್ತ!
ಬ್ಯಾಂಕಾಕ್ನಲ್ಲಿ ಸಿಕ್ಕ ಕಾಣೆಯಾದವರು
Team Udayavani, Aug 14, 2019, 3:01 AM IST
ಹಿರಿಯ ನಾಗರಿಕರ ಬದುಕು, ಕನಸುಗಳ ಬಗೆಗಿನ ಕಥಾ ಹಂದರ ಹೊಂದಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದ ಮುಹೂರ್ತ ಇತ್ತೀಚೆಗೆ ಬ್ಯಾಂಕಾಕ್ನಲ್ಲಿ ನೆರವೇರಿತು. “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ “ಶಕ್ತಿ’, “ದಿಲ್ವಾಲ’, “ಕೃಷ್ಣ ರುಕ್ಕು’, “ರ್ಯಾಂಬೋ 2′ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಅನಿಲ್ ಕುಮಾರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
“ಬಿಲ್ವ ಎಂಟರ್ಟೈನ್ಮೆಂಟ್’ ಬ್ಯಾನರ್ನಲ್ಲಿ ನವೀನ್ ಕುಮಾರ್ ಜಿ.ಆರ್ ಅವರು ನಿರ್ಮಿಸುತ್ತಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಸುಮಾರು 16 ದಿನಗಳ ಕಾಲ ಬ್ಯಾಂಕಾಕ್ನಲ್ಲೇ ನಡೆಯಲಿದ್ದು, ಈಗಾಗಲೇ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಸುಮಾರು 35 ಜನರ ತಂಡ ಬ್ಯಾಂಕಾಕ್ನಲ್ಲೇ ಬೀಡುಬಿಟ್ಟಿದೆ. ಇನ್ನು ಮೊದಲ ಹಂತದಲ್ಲಿ ಚಿತ್ರದ ಮಾತಿನ ಭಾಗ ಮತ್ತು ಒಂದು ಹಾಡಿನ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
“ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶಿವಕುಮಾರ್ ಬಿ.ಕೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಕಾರ್ಯವಿದೆ. ಸದ್ಯ ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ನಿರತವಾಗಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರತಂಡ ಇದೇ ವರ್ಷದ ಕೊನೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.