ಹೊಸ ಪ್ರತಿಭೆಗಳ ‘ಪರ್ಯಾಯ’ ತೆರೆಗೆ ಸಿದ್ದ
Team Udayavani, Aug 13, 2023, 3:57 PM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಪರ್ಯಾಯ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಂಧ, ಕಿವುಡ ಮತ್ತು ಮೂಗ ಹೀಗೆ ಮೂವರು ಅಂಗವಿಕಲ ಸ್ನೇಹಿತರ ಜೀವನದಲ್ಲಿ ನಡೆಯುವ ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ “ಪರ್ಯಾಯ’ ಸಿನಿಮಾಕ್ಕೆ ರಮಾನಂದ ಮಿತ್ರ ನಿರ್ದೇಶನ ಮಾಡಿದ್ದಾರೆ.
“ಮಮತಾ ಕ್ರಿಯೇಶನ್ಸ್’ ಮೂಲಕ ಬೆಳಗಾವಿ ಮೂಲದ ರಾಜಕುಮಾರ್ ಹಾಗೂ ಇಂದುಮತಿ ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಮೊದಲ ಟೀಸರ್ ಮತ್ತು ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ಸಿನಿಮಾದ ನಿರ್ಮಾಪಕ ಮತ್ತು ನಟ ರಾಜಕುಮಾರ್, “ಮೂಲತಃ ನಾನೊಬ್ಬ ಕೃಷಿಕ. ಒಂದೊಳ್ಳೆ ಸಿನಿಮಾ ಮಾಡಬೇಕೆಂದು ಬಹಳ ದಿನಗಳಿಂದ ಆಸೆಯಿತ್ತು. ನಮ್ಮೂರಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಬೆಳಗಾವಿ ಜಿಲ್ಲೆಯ ಸುತ್ತಮುತ್ತ ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ’ ಎಂದು ವಿವರಿಸಿದರು.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ರಮಾನಂದ್ ಮಿತ್ರ, “ಪ್ರತಿಯೊಬ್ಬರೂ ಜೀವನದಲ್ಲಿ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೋಗುತ್ತೇವೆ. ಅದು ಸರಿಯಾಗಿರದಿದ್ರೆ ಏನಾಗುತ್ತೆ ಅನ್ನೋದೇ ಈ ಚಿತ್ರದ ಕಥೆ. ಮೂರು ಪಾತ್ರಗಳ ಮೂಲಕ ಮನುಷ್ಯನ ಆಸೆಯನ್ನು ತೋರಿಸಲಾಗಿದ್ದು, ಸಸ್ಪೆನ್ಸ್-ಥ್ರಿಲ್ಲರ್ ಕಥೆಯೂ ಸಿನಿಮಾದಲ್ಲಿದೆ. ಮೂವರು ಅಂಗವಿಕಲರು ತಮ್ಮ ಬದುಕು ಕಟ್ಟಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಾರೆ. ಅವರ ಜೀವನ ಮುಂದೆ ಏನೆಲ್ಲ ತಿರುವು ಪಡೆಯಲಿದೆ ಎಂಬುದನ್ನು ಈ ಸಿನಿಮಾದ ಮೂಲಕ ಹೇಳಿದ್ದೇವೆ. ಕಥೆಯಲ್ಲಿ ನಾಯಕಿಯ ಪಾತ್ರವಿಲ್ಲ, ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂದರು.
ಶ್ರವಣ ದೋಷ ವಿರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮುರಗೇಶ್ ಶಿವಪೂಜಿ, ಮೂಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಂಜನ್ ಕುಮಾರ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಎ. ಟಿ. ರವೀಶ್ ರಾಮ್ ಮಾತನಾಡಿ, “ಸಿನಿಮಾದಲ್ಲಿ ಹಾಡುಗಳಿದ್ದು, ಅಜಯ್ ವಾರಿಯರ್, ಮೆಹಬೂಬ್ ಸಾಬ್, ನದಿರಾ ಬಾನು, ಲೆಮನ್ ಪರಶುರಾಮ್ ಮೊದಲಾದ ಗಾಯಕರು ಗೀತೆಗಳಿಗೆ ಧ್ವನಿಯಾಗಿದ್ದಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…