ಅಡ್ವೆಂಚರ್ ಹೀರೋಗಾಗಿ ಮತ್ತಷ್ಟು ಕಾಯಬೇಕು.. ‘ವಿಕ್ರಾಂತ್ ರೋಣ’ನ ದರ್ಶನ ಸದ್ಯಕ್ಕಿಲ್ಲ
Team Udayavani, Jan 27, 2022, 5:06 PM IST
ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಫೆಬ್ರವರಿ 24ರಂದು ಬಿಡುಗಡೆಯಾಗಲು ಸಜ್ಜಾಗಿತ್ತು. ಆದರೆ ಇದೀಗ ನಿರ್ದೇಶಕ ಅನೂಪ್ ಭಂಡಾರಿ ಅವರು ಕಿಚ್ಚನ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ನೀಡಿದ್ದು, ವಿಕ್ರಾಂತ್ ರೋಣ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನೂಪ್ ಭಂಡಾರಿ, “ ನಮ್ಮ ಕನಸನ್ನು ಫೆ.24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗು ಅದಕ್ಕೆ ಸಂಬಂಧಿಸಿದ ನಿಯಾಮಾವಳಿಗಳು, ಪ್ರಪಂಚದಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲವಾಗಿಲ್ಲ. ನಿಮ್ಮ ಪ್ರೀತಿ ಮತ್ತು ತಾಳ್ಮೆಗೆ ಅಭಾರಿ. ಅದಕ್ಕೆ ಪ್ರತಿಯಾಗಿ ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎನ್ನುವ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.
ಜ್ಯಾಕ್ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಣದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಚಿತ್ರದಲ್ಲಿ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಟೆಸ್ಟ್ ನಾಯಕರಾಗಬಲ್ಲ ನಾಲ್ಕೈದು ಆಟಗಾರರು ಭಾರತ ತಂಡದಲ್ಲಿದ್ದಾರೆ: ಬ್ರೆಟ್ ಲೀ
ಒಟ್ಟು 10 ಭಾಷೆಗಳಲ್ಲಿ 3ಡಿ ಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕೋವಿಡ್ ಕಾರಣದಿಂದ ಸದ್ಯ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿದ್ದು, ಮುಂದಿನ ದಿನಾಂಕಕ್ಕೆ ರೋಣನ ಅಭಿಮಾನಿಗಳು ಕಾಯುತ್ತಿದ್ದಾರೆ.
#VikrantRona will meet you on a newer date.
Stay Safe! @KicchaSudeep @nirupbhandari @neethaofficial @Asli_Jacqueline @JackManjunath @Alankar_Pandian @shaliniartss @InvenioF @ZeeStudios_ @TSeries @LahariMusic @VikrantRona pic.twitter.com/8r3IpwWPz9— Anup Bhandari (@anupsbhandari) January 27, 2022