ಹಾಡಿನಲ್ಲಿ ಎಂಟ್ರಿಕೊಟ್ಟ ಕೌಟಿಲ್ಯ; ಕಿರುತೆರೆ ನಟ ಅರ್ಜುನ್ ರಮೇಶ್ ನಾಯಕ
Team Udayavani, Mar 3, 2022, 10:57 AM IST
ಕಿರುತೆರೆ ನಟ ಅರ್ಜುನ್ ರಮೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ “ಕೌಟಿಲ್ಯ’ ತೆರೆಗೆ ಬರಲು ತಯಾರಾಗುತ್ತಿದೆ. “ಶ್ರೀಕಲ್ಲೂರು ಆಂಜನೇಯ ಮೂವೀಸ್’ ಬ್ಯಾನರ್ನಲ್ಲಿ ವಿಜೇಂದ್ರ ಬಿ. ಎ ನಿರ್ಮಿಸುತ್ತಿರುವ “ಕೌಟಿಲ್ಯ’ ಚಿತ್ರ. ಚಿತ್ರಕ್ಕೆ ಪ್ರಭಾಕರ ಶೇರ್ಖಾನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ “ಕೌಟಿಲ್ಯ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಇ. ಕೃಷ್ಣಪ್ಪ, ಭಾ. ಮ ಹರೀಶ್, ನಟಿ ಬೃಂದಾ ಆಚಾರ್ಯ, ನಟರಾದ ದೀಕ್ಷಿತ್, ಪ್ರಶಾಂತ್ ಸಿದ್ಧಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರ ಸಮ್ಮುಖದಲ್ಲಿ “ಕೌಟಿಲ್ಯ’ನ ಹಾಡುಗಳು ಬಿಡುಗಡೆಯಾಯಿತು.
ಇದೇ ವೇಳೆ “ಕೌಟಿಲ್ಯ’ನ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಭಾಕರ ಶೇರ್ಖಾನೆ, “ಇದೊಂದು ಮಾಸ್ ಕಂಟೆಂಟ್ ಇರುವಂಥ ಸಿನಿಮಾ. ಇದರಲ್ಲಿ ಲವ್, ಆ್ಯಕ್ಷನ್, ಥ್ರಿಲ್ಲರ್, ಕಾಮಿಡಿ ಹೀಗೆ ಎಲ್ಲ ಥರದ ಎಂಟರ್ಟೈನ್ಮೆಂಟ್ ಅಂಶಗಳಿವೆ. ಹೀರೋ ತನ್ನ ಬುದ್ಧಿಶಕ್ತಿಯನ್ನು ಬಳಸಿ, ಏನೆಲ್ಲ ಮಾಡುತ್ತಾನೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ. ಸಿನಿಮಾದ ಸಬ್ಜೆಕ್ಟ್ ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಇಂಥದ್ದೊಂದು ಟೈಟಲ್ ಇಡಲಾಗಿದೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.
ನಿರ್ಮಾಪಕ ವಿಜೇಂದ್ರ ಬಿ. ಎ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಹೌಸಿಂಗ್ ಫೈನಾನ್ಸ್ ಕ್ಷೇತ್ರದಲ್ಲಿರುವ ವಿಜೇಂದ್ರ ಬಿ. ಎ ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. “ಸಿನಿಮಾದ ಕಥೆ ಇಷ್ಟವಾಗಿದ್ದರಿಂದ, ಈ ಸಿನಿಮಾ ಮಾಡಲು ಮುಂದಾದೆ. ಒಂದೊಳ್ಳೆಯ ಸದಭಿರುಚಿ ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆ ನಿರ್ಮಾಪಕರದ್ದು.
ಇದನ್ನೂ ಓದಿ:‘ಗತವೈಭವ’ ತೋರಿಸಲು ಸುನಿ ರೆಡಿ: ದುಷ್ಯಂತ್ ಗೆ ಹೀರೋ ಪಟ್ಟ
ಇನ್ನು “ಕೌಟಿಲ್ಯ’ ಚಿತ್ರದಲ್ಲಿ ನಾಯಕ ನಟ ಅರ್ಜುನ್ ರಮೇಶ್ ಮಾಸ್ ಆರ್ಕಿಟೆಕ್ಟ್ ಪಾತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಎರಡೂ ಥರದ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿ ಪ್ರಿಯಾಂಕಾ ಚಿಂಚೋಳಿ ಅವರದ್ದು ಹೀರೋ ಹಿಂದೆ ಬಿದ್ದು ಪೀಡಿಸುವ ಬೋಲ್ಡ್ ಪಾತ್ರವಂತೆ. ಉಳಿದಂತೆ ನೀನಾಸಂ ಅಶ್ವಥ್ ಮೊದಲಾದವರು “ಕೌಟಿಲ್ಯ’ನ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ನೌಶದ್ ಆಲಮ್ ಛಾಯಾಗ್ರಹಣ, ರಾಜ್ ಶಿವ ಸಂಕಲನವಿದೆ. “ಕೌಟಿಲ್ಯ’ನ ಹಾಡುಗಳಿಗೆ ಕಿರಣ ಕೃಷ್ಣಮೂರ್ತಿ ಸಂಗೀತ ಸಂಯೋಜಿಸುತ್ತಿದ್ದು, ಗೌಸ್ ಫೀರ್, ಅರ್ಜುನ ರಮೇಶ್ ಸಾಹಿತ್ಯವಿದೆ.
“ಕೌಟಿಲ್ಯ’ ಸಿನಿಮಾದ ಟೈಟಲಿಗೆ ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳೂ ವಿಲನ್ ಗಳೇ’ ಎಂಬ ಟ್ಯಾಗ್ಲೈನ್ ಇದ್ದು, ಅದು ಹೇಗೆ ಅಂಥ ಗೊತ್ತಾಗಬೇಕಾದ್ರೆ, ಸಿನಿಮಾ ನೋಡಬೇಕು. 2-3 ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತದೆ ಚಿತ್ರತಂಡ